ಎಸ್‌ಎಸ್‌ಎಲ್‌ಸಿ ಟಾಪರ್ ಚಿತ್ರದುರ್ಗದ ನಂದನ್‌ಗೆ ಏರೋಸ್ಪೇಸ್ ಎಂಜಿನಿಯರ್ ಆಗಬೇಕೆಂಬ ಕನಸು, ನನಸು ಮಾಡೋದು ಹೇಗೆ, ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಎಸ್‌ಎಸ್‌ಎಲ್‌ಸಿ ಟಾಪರ್ ಚಿತ್ರದುರ್ಗದ ನಂದನ್‌ಗೆ ಏರೋಸ್ಪೇಸ್ ಎಂಜಿನಿಯರ್ ಆಗಬೇಕೆಂಬ ಕನಸು, ನನಸು ಮಾಡೋದು ಹೇಗೆ, ಇಲ್ಲಿದೆ ವಿವರ

ಎಸ್‌ಎಸ್‌ಎಲ್‌ಸಿ ಟಾಪರ್ ಚಿತ್ರದುರ್ಗದ ನಂದನ್‌ಗೆ ಏರೋಸ್ಪೇಸ್ ಎಂಜಿನಿಯರ್ ಆಗಬೇಕೆಂಬ ಕನಸು, ನನಸು ಮಾಡೋದು ಹೇಗೆ, ಇಲ್ಲಿದೆ ವಿವರ

ಏರೋಸ್ಪೇಸ್ ಎಂಜಿನಿಯರ್: ಎಸ್‌ಎಸ್‌ಎಲ್‌ಸಿ ಟಾಪರ್ ಚಿತ್ರದುರ್ಗದ ನಂದನ್‌ ಸುದ್ದಿಗಾರರ ಜತೆಗೆ ಮಾತನಾಡುತ್ತ ಮುಂದೆ ಏರೋಸ್ಪೇಸ್ ಎಂಜಿನಿಯರ್ ಆಗಬೇಕೆಂಬ ಕನಸು ಇದೆ ಎಂದು ಹೇಳಿದ್ದರು. ಆದರೆ ಈ ಕನಸು ನನಸು ಮಾಡುವುದಕ್ಕೆ ಮಾಡಬೇಕಾದ್ದೇನು? ಇಲ್ಲಿದೆ ಆ ವಿವರ.

ಎಸ್‌ಎಸ್‌ಎಲ್‌ಸಿ ಟಾಪರ್ ಚಿತ್ರದುರ್ಗದ ನಂದನ್‌ಗೆ ಏರೋಸ್ಪೇಸ್ ಎಂಜಿನಿಯರ್ ಆಗಬೇಕೆಂಬ ಕನಸು, ನನಸು ಮಾಡೋದು ಹೇಗೆ ಎಂಬ ವಿವರ ಈ ಬರಹದಲ್ಲಿದೆ.
ಎಸ್‌ಎಸ್‌ಎಲ್‌ಸಿ ಟಾಪರ್ ಚಿತ್ರದುರ್ಗದ ನಂದನ್‌ಗೆ ಏರೋಸ್ಪೇಸ್ ಎಂಜಿನಿಯರ್ ಆಗಬೇಕೆಂಬ ಕನಸು, ನನಸು ಮಾಡೋದು ಹೇಗೆ ಎಂಬ ವಿವರ ಈ ಬರಹದಲ್ಲಿದೆ.

ಏರೋಸ್ಪೇಸ್ ಎಂಜಿನಿಯರ್: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದ್ದು, 22 ವಿದ್ಯಾರ್ಥಿಗಳು ಪೂರ್ಣಾಂಕ ಅಂದರೆ 625ಕ್ಕೆ 625 ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮದೇ ಆದ ಕನಸುಗಳಿವೆ. ಕೆಲವು ವೈದ್ಯರಾಗಬೇಕು, ಇನ್ನು ಕೆಲವರು ಎಂಜಿನಿಯರ್ ಆಗಬೇಕು. ಹೀಗೆ ತಮ್ಮದೇ ಆದ ಕನಸುಗಳನ್ನು ನನಸು ಮಾಡುವ ಪ್ರಯತ್ನಕ್ಕೆ ಮುಂದಾಗಿದ್ಧಾರೆ. ಈ ಪೈಕಿ ಚಿತ್ರದುರ್ಗದ ಹಿರಿಯೂರು ರಾಷ್ಟ್ರೀಯ ಅಕಾಡೆಮಿ ಸ್ಕೂಲ್‌ನ ವಿದ್ಯಾರ್ಥಿ ನಂದನ್‌ ಸುದ್ದಿಗಾರರ ಜತೆಗೆ ಮಾತನಾಡುತ್ತ, ತನಗೆ ಏರೋಸ್ಪೇಸ್ ಎಂಜಿನಿಯರ್ ಆಗಬೇಕು ಎಂಬ ಕನಸನ್ನು ಹಂಚಿಕೊಂಡಿದ್ದರು. 10ನೇ ತರಗತಿ ಮುಗಿದಿದೆ. ಪಿಯುಸಿ ಅಥವಾ 11ನೇ ತರಗತಿಗೆ ಸೇರ್ಪಡೆಯಾಗುವ ಹೊತ್ತು. ಏರೋಸ್ಪೇಸ್ ಎಂಜಿನಿಯರ್ ಆಗಬೇಕೆಂದರೆ ಯಾವ ಕೋರ್ಸ್ ತೆಗೆದುಕೊರ್ಳಳಬೇಕು, ಯಾವ ವಿಷಯ ಓದಬೇಕು ಎಂಬಿತ್ಯಾದಿ ಕುತೂಹಲದ ಪ್ರಶ್ನೆಗಳು ಕಾಡುವುದು ಸಹಜ.

ಏರೋಸ್ಪೇಸ್ ಎಂಜಿನಿಯರ್ ಆಗುವುದು ಹೇಗೆ?

ಏರೋಸ್ಪೇಸ್ ಎಂಜಿನಿಯರಿಂಗ್ ಎಂಬುದು ವಿಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರ. 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿ ದ್ವಿತೀಯ ಪಿಯುಸಿಯಲ್ಲಿ ಅಥವಾ ಸಿಬಿಎಸ್‌ಇ, ಐಎಸ್‌ಸಿಯ 10 ಮತ್ತು 12ನೇ ತರಗತಿಯಲ್ಲಿ ವಿಜ್ಞಾನ ವಿಭಾಗ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ)ಕ್ಕೆ ಸೇರ್ಪಡೆಯಾಗಬೇಕು. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸ್ಕೋರ್ ಮಾಡಿ ಬಳಿಕ ಬಿಇ / ಬಿಟೆಕ್ ಪದವಿ ವ್ಯಾಸಂಗವನ್ನು ಏರೋಸ್ಪೇಸ್ ಎಂಜಿನಿಯರಿಂಗ್ ವಿಷಯದಲ್ಲೇ ಮಾಡಬೇಕು. ಹಾಗೆ ಮಾಡಿದರೆ ಏರೋಸ್ಪೇಸ್ ಎಂಜಿನಿಯರ್ ಆಗೋದಕ್ಕೆ ಬುನಾದಿ ಹಾಕಿದಂತಾಗುತ್ತದೆ.

ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಬಿಇ/ ಬಿಟೆಕ್ ವ್ಯಾಸಂಗ ಮಾಡಬೇಕಾದರೆ ಇದಕ್ಕೆ ಪ್ರವೇಶ ಗಿಟ್ಟಿಸಿಕೊಳ್ಳುವುದಕ್ಕೆ ಜೆಇಇ (ಮೇನ್ಸ್ ಮತ್ತು ಅಡ್ವಾನ್ಸ್ಡ್) ಮುಂತಾದ ಪ್ರವೇಶ ಪರೀಕ್ಷೆ ಬರೆಯಬೇಕು. ಇದೇ ವೇಳೆ, ವಿದ್ಯಾರ್ಥಿ ಬಿಇ/ಬಿಟೆಕ್ ಪದವಿ ವ್ಯಾಸಂಗದ ಬಳಿಕ ಎಂಇ ಅಥವಾ ಎಂಟೆಕ್ ಪದವಿಯನ್ನೂ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲೇ ಮಾಡಬಹುದು. ಬಿಇ/ ಬಿಟೆಕ್ ವ್ಯಾಸಂಗಕ್ಕೆ ಐಐಟಿಗಳು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಾಗಿವೆ.

10 ಮತ್ತು 12ನೇ ತರಗತಿ ನಂತರ ಮುಂದೇನು ಎಂಬ ಗೊಂದಲವೇ?

ಸದ್ಯ ಭಾರತದ ಉದ್ದಗಲಕ್ಕೂ 10 ಮತ್ತು 12ನೇ ತರಗತಿ ಫಲಿತಾಂಶ ಬಂದು, ವಿದ್ಯಾರ್ಥಿಗಳ ಪೈಕಿ ಬಹುತೇಕರು 10 ಮತ್ತು 12ನೇ ತರಗತಿ ನಂತರ ಮುಂದೇನು ಎಂಬ ದೊಡ್ಡ ಪ್ರಶ್ನೆಯೊಂದಿಗೆ ಭವಿಷ್ಯದ ಬಗ್ಗೆ ಚಿಂತಿತರಾಗಿರುತ್ತಾರೆ. ವಿದ್ಯಾರ್ಥಿಗಳಿಗಿಂತ ಪಾಲಕರಿಗೇ ಹೆಚ್ಚು ಚಿಂತೆ. ಆದಾಗ್ಯೂ, ಕೆಲವರು ಈಗಾಗಲೇ ತಾವೇನಾಗಬೇಕು ಎಂಬುದನ್ನು ನಿರ್ಧರಿಸಿರುತ್ತಾರೆ. ಪಿಯುಸಿ ಅಥವಾ 11 ಮತ್ತು 12ನೇ ತರಗತಿಯಲ್ಲಿ ಯಾವ ವಿಷಯ ಓದಿದರೆ ಮುಂದೆ ಯಾವೆಲ್ಲ ರೀತಿ ಉದ್ಯೋಗಾವಕಾಶ ಸಿಗಬಹುದು ಎಂಬ ಕುತೂಹಲ.

ಇನ್ನೊಂದೆಡೆ, ಮಾತೆತ್ತಿದರೆ ಎಂಬಿಬಿಎಸ್, ಬಿಎಎಂಎಸ್‌, ಎಂಜಿನಿಯರಿಂಗ್ ಎಂಬ ಮಾತುಗಳು ಪದೇಪದೆ ಕಿವಿಗೆ ಬೀಳುತ್ತಿರುತ್ತವೆ. ಹಾಗಾದರೆ, ಉದ್ಯೋಗಾವಕಾಶ ಅಂದರೆ ಇಷ್ಟೇನಾ, ಈ ಮೂರು ಕ್ಷೇತ್ರ ಬಿಟ್ಟರೆ ಬೇರೆ ಉದ್ಯೋಗವೇ ಇಲ್ಲವೇ? ಎಂಬ ಕಳವಳವೂ ಅನೇಕರಲ್ಲಿದೆ. ಅಂತಹ ಕಳವಳ ಇನ್ನು ಬೇಕಾಗಿಲ್ಲ. 10ನೇ ತರಗತಿ ಅಥವಾ 12ನೇ ತರಗತಿ ನಂತರ ಮುಂದೇನು ಎಂಬ ಸಂದೇಹ ನಿವಾರಣೆಗಾಗಿ ಸೆಂಟ್ರಲ್ ಬೋರ್ಡ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಇದಕ್ಕಾಗಿಯೇ ಪೇರೆಂಟ್ಸ್ ಹ್ಯಾಂಡ್‌ಬುಕ್ ಕೆರಿಯರ್ಸ್ 2025 (Parents Handbook Careers 2025) ಅನ್ನು ಬಿಡುಗಡೆ ಮಾಡಿದೆ.

ಈ ಕೆರಿಯರ್ ಗೈಡ್ ಅಥವಾ ಪೇರೆಂಟ್ಸ್ ಹ್ಯಾಂಡ್‌ಬುಕ್ ಕೆರಿಯರ್ಸ್ 2025 ಪಿಡಿಎಫ್‌ ರೂಪದಲ್ಲಿದ್ದು, ಅದನ್ನೊಮ್ಮೆ ಗಮನಿಸಿದರೆ ಸಾಕು. ಹಲವು ಸಂದೇಹಗಳು ಪರಿಹಾರವಾಗಲಿವೆ. 22 ವಿಭಾಗಗಳಲ್ಲಿ ಕಲಿಕೆ ಮುಂದುವರಿಸುವುದಕ್ಕೆ ಇರುವ ಶಿಕ್ಷಣ ಸಂಸ್ಥೆಗಳು, ಯಾವ ವಿಷಯ ಕಲಿತರೆ ಯಾವ ರೀತಿ ಉದ್ಯೋಗ ಮಾಡಬಹುದು ಎಂಬಿತ್ಯಾದಿ ವಿವರಗಳು ಕೆರಿಯರ್ ಗೈಡ್‌ನಲ್ಲಿದೆ. ಕೆರಿಯರ್ ಗೈಡೆನ್ಸ್‌ಗೆ ಎಲ್ಲೋ ಹುಡುಕಬೇಕಾಗಿಲ್ಲ, ಈ ಕೆರಿಯರ್ ಗೈಡ್ ಡೌನ್‌ಲೋಡ್ ಮಾಡಿ ಜತೆಗಿಟ್ಟುಕೊಂಡರೆ ಸಾಕು.

ಮತ್ತಿನ್ನೇಕೆ ತಡ ಈಗಲೇ ಸಿಬಿಎಸ್‌ಇ ಪ್ರಕಟಿಸಿರುವ ಕೆರಿಯರ್ ಗೈಡ್ ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಿ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.