ಬೇಸಿಗೆ ರಜೆಗೆ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಸಂಚಾರ ದಟ್ಟಣೆ ಎಂಬ ಸಜೆ; ಪ್ರಮುಖ ಫ್ಲೈ ಓವರ್‌ನಲ್ಲಿ ವಾಹನ ಸಾಲುಗಟ್ಟಿದ ಫೋಟೋ ವೈರಲ್‌
ಕನ್ನಡ ಸುದ್ದಿ  /  ಕರ್ನಾಟಕ  /  ಬೇಸಿಗೆ ರಜೆಗೆ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಸಂಚಾರ ದಟ್ಟಣೆ ಎಂಬ ಸಜೆ; ಪ್ರಮುಖ ಫ್ಲೈ ಓವರ್‌ನಲ್ಲಿ ವಾಹನ ಸಾಲುಗಟ್ಟಿದ ಫೋಟೋ ವೈರಲ್‌

ಬೇಸಿಗೆ ರಜೆಗೆ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಸಂಚಾರ ದಟ್ಟಣೆ ಎಂಬ ಸಜೆ; ಪ್ರಮುಖ ಫ್ಲೈ ಓವರ್‌ನಲ್ಲಿ ವಾಹನ ಸಾಲುಗಟ್ಟಿದ ಫೋಟೋ ವೈರಲ್‌

ಬೇಸಿಗೆ ರಜೆ ಜತೆಗೆ ಸತತ ಮೂರು ದಿನಗಳ ವಾರಾಂತ್ಯ ರಜೆಯಿಂದ ಪ್ರವಾಸಿ ತಾಣಗಳು ಮಾತ್ರವಲ್ಲ ಬೆಂಗಳೂರು ನಗರವೂ ಭರ್ತಿಯಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆಯ ಫೋಟೋ ಇದನ್ನು ಹೇಳುತ್ತದೆ.

ಬೆಂಗಳೂರಲ್ಲಿ ವೈರಲ್‌ ಆಗಿರುವ ಸಂಚಾರ ದಟ್ಟಣೆ ಫೋಟೋ
ಬೆಂಗಳೂರಲ್ಲಿ ವೈರಲ್‌ ಆಗಿರುವ ಸಂಚಾರ ದಟ್ಟಣೆ ಫೋಟೋ (S. kirankumar)

ಬೇಸಿಗೆ ರಜೆಯ ನಡುವೆ ಸಾಲು ಸಾಲು ವಾರಾಂತ್ಯ ರಜೆ. ಇದರಿಂದ ಎಲ್ಲಿ ನೋಡಿದರೂ ಜನವೋ ಜನ. ಪ್ರವಾಸಿಗರಿಂದ ಎಲ್ಲಾ ಪ್ರವಾಸಿ ತಾಣ, ಊರುಗಳು ತುಂಬಿವೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಈ ಬಾರಿ ರಜೆಯಲ್ಲಿ ಕಂಡು ಬಂದಿರುವ ಸಂಚಾರ ದಟ್ಟಣೆಯಂತೂ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ. ರಜೆಗಳು ಬಂದರೆ ಜನ ಊರುಗಳಿಗೆ ತೆರಳಿ ಬೆಂಗಳೂರಿನ ರಸ್ತೆಗಳು ಸಂಚಾರ ದಟ್ಟಣೆಯಿಂದ ಕೊಂಚವಾದರೂ ಮುಕ್ತವಾಗುತ್ತವೆ ಎನ್ನುವ ನಂಬಿಕೆ. ಆದರೆ ಈ ಬಾರಿ ಹಾಗಿಲ್ಲ. ರಜೆ ಇರುವ ಕಾರಣದಿಂದ ಬೆಂಗಳೂರಿನತ್ತಲೇ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಗುರುವಾರದಿಂದಲೇ ಜನ ಬೆಂಗಳೂರಿನತ್ತ ಆಗಮಿಸುವುದು ಸಾಮಾನ್ಯವಾಗಿದೆ. ಗುರುವಾರ ರಾತ್ರಿ ಹಲವು ಕಡೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಬೆಂಗಳೂರಿನಲ್ಲಿ ಈ ರೀತಿಯ ಸಂಚಾರ ದಟ್ಟಣೆಯ ಫೋಟೋ ಒಂದು ಭಾರೀ ವೈರಲ್‌ ಆಗಿದೆ.

ಬೆಂಗಳೂರಿನ ಎಸ್.‌ಕಿರಣ್‌ಕುಮಾರ್‌ ಎಂಬುವವರು ಎಕ್ಸ್‌ನಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದಾರೆ. ಅದು ಕಿ.ಮಿ. ಉದ್ದದಲ್ಲಿ ನಿಂತಿರುವ ವಾಹನಗಳು, ಫ್ಲೈಓವರ್‌, ಬೆಳಕಿನ ನೋಟವೂ ಒಳಗೊಂಡಂತೆ ಫೋಟೋ ಗಮನ ಸೆಳೆಯುತ್ತದೆ. ಗುರುವಾರ ಸಂಜೆ ಬೆಂಗಳೂರಿನ ಕೆಆರ್‌ಪುರಂ ಫ್ಲೈ ಓವರ್‌ ಹಾಗೂ ಕೆಳ ಭಾಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವ ಚಿತ್ರವಿದು. ಬೆಂಗಳೂರಿನ ಯಾವ ಭಾಗ ಇದು ಊಹೆ ಮಾಡಿ ಎಂದು ಕಿರಣ್‌ಕುಮಾರ್‌ ಒಂದು ಸಾಲಿನ ಒಕ್ಕಣೆ ಹಾಕಿದ್ದಾರೆ. ಈ ಫೋಟೋವಂತೂ ಭಾರೀ ವೈರಲ್‌ ಆಗಿದೆ. 82 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿ. ಒಂದು ಸಾವಿರಕ್ಕೂ ಅಧಿಕ ಮಂದಿ ಪ್ರತಿಕ್ರಿಯಿಸಿದ್ದಾರೆ.

ಇದು ಬೆಂಗಳೂರು. ಕೆಆರ್‌ಪುರಂ. ಇಲ್ಲಿನ ಫ್ಲೈಓವರ್‌ ನಿರ್ಮಾಣವೇ ಸರಿಯಾಗಿಲ್ಲ. ಸಂಚಾರ ದಟ್ಟಣೆಗೆ ಇದು ಹೇಳಿ ಮಾಡಿಸಿದಂತಿದೆ. ಬೆಂಗಳೂರು ಎಂದರೆ ಯಾವಾಗಲೂ ಹೀಗೆಯೇ. ರಜೆ ಬಂದರೆ ಇದನ್ನೆಲ್ಲಾ ಅನುಭವಿಸಬೇಕು ಎಂದು ಹಲವರು ಈ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ್ದಾರೆ.

ಹಿರಿಯ ಪತ್ರಕರ್ತ ಬಿ.ಎಂ.ಹನೀಫ್‌ ಅವರು ಫೇಸ್‌ಬುಕ್‌ನಲ್ಲಿ ಇದೇ ಕುರಿತು ಪೋಸ್ಟ್‌ ಒಂದನ್ನು ಹಾಕಿದ್ದಾರೆ.

ನಾಲ್ಕು ದಿನ ಸರ್ಕಾರಕ್ಕೆ ರಜೆ ಇತ್ತು. ಸಾಮಾನ್ಯವಾಗಿ ಹೀಗೆ ಸಾಲು ರಜೆಗಳು ಬಂದರೆ ಬೆಂಗಳೂರಿನ ನಿವಾಸಿಗಳು ನಿಟ್ಟುಸಿರು ಬಿಡ್ತಾರೆ. ಏಕೆಂದರೆ ಆ ನಾಲ್ಕು ದಿನಗಳ ಕಾಲ ಬೆಂಗಳೂರಿನ ರಸ್ತೆಗಳಲ್ಲಿ ನೆಮ್ಮದಿಯಿಂದ ಬೈಕು, ಕಾರು, ಬಸ್ ಗಳಲ್ಲಿ ಓಡಾಡಬಹುದು.

ಆದರೆ ಈ ಸಲ ಹಾಗಾಗಿಲ್ಲ. ರಜೆಗೆಂದು ಲಕ್ಷಾಂತರ ಜನರು ಬೆಂಗಳೂರಿನಿಂದ ತಮ್ಮ ಊರುಗಳಿಗೆ ತಾತ್ಕಾಲಿಕ ಪಲಾಯನ ಮಾಡಿದ್ದೇನೋ ನಿಜ. ಆದರೆ ಬೆಂಗಳೂರಿನ ಬಹುತೇಕ ರಸ್ತೆಗಳು ವಾಹನಗಳಿಂದ ಓವರ್ ಲೋಡ್ ಆಗಿ ಟ್ರಾಫಿಕ್ ಜಾಮ್ ನಲ್ಲಿ ಜನ ಹೈರಾಣಾದರು.

ಇದ್ಯಾಕೆ ಹೀಗೆ..? ಎಂದು ಕೇಳಿದಾಗ ಗೆಳೆಯರೊಬ್ಬರು ಹೇಳಿದ್ದು- ರಜಾ ಬೇರೆ ಜಿಲ್ಲೆಯವರಿಗೂ ಸಿಕ್ಕಿದೆಯಲ್ವ... ಅವರೆಲ್ಲರೂ ರಜಾ ಕಳೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಬೆಂಗಳೂರಿಗೆ ಧಾವಿಸಿ ಬಂದಿದ್ದಾರೆ!

ಒಟ್ಟಾರೆ ಫಜೀತಿ ಮಾರ್ರೆ. ದಿನಾ ಬೆಳಿಗ್ಗೆ ಮತ್ತು ಮುಸ್ಸಂಜೆ ಟ್ರಾಫಿಕ್ ಜಾಮ್ ನಲ್ಲಿ ಒಟ್ಟು ಸುಮಾರು ಮೂರು ಗಂಟೆಗಳ ಕಾಲ ಶಾಪಗ್ರಸ್ತರಂತೆ ತೂಕಡಿಸುವ ಕರ್ಮ. (ಅಂದ ಹಾಗೆ ನನ್ನ ಕಚೇರಿಗೆ ಮೆಟ್ರೊ ಕನೆಕ್ಷನ್ ಇಲ್ಲ)

ಒಮ್ಮೊಮ್ಮೆ ಅನ್ಸುತ್ತೆ- ಯಾಕಾಗಿ ಬೆಂಗಳೂರಿನಲ್ಲಿ ಬದುಕುತ್ತಿದ್ದೀವೋ..ಅಂತ. ಮೆಟ್ರೊದವರು ಟಿಕೆಟ್ ದರ ಡಬಲ್ ಮಾಡಿದ ಬಳಿಕ ಬೆಂಗಳೂರಿನ ರಸ್ತೆಗಳು ಇನ್ನಷ್ಟು ನರಕವಾಗಿವೆ ಎಂದು ಹನೀಫ್‌ ಬರೆಯುತ್ತಾರೆ.

ಇದಕ್ಕೆ ಹಲವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ನಾ ಒಂದೆರಡುವಾರ ಬೆಂಗಳೂರಲ್ಲಿದ್ದೆ. ಟ್ರಾಫಿಕ್ ನಲ್ಲಿ ಸಿಕ್ಕೊಂಡು ಯಾವಾಗ ಮನೆ ಸೇರ್ತಿನೋ ಅಂತ ಚಡಪಡಿಸ್ತಿದ್ದೆ. ಮೆಟ್ರೋ ಕಾಮಗಾರಿಯಿಂದಾಗಿ ಮತ್ತಷ್ಟು ಕೆ.ಆರ.ಪುರಂ ಮಾರ್ಗ ನರಕವಾಗಿದೆ. ನಮ್ ದಿಲ್ಲಿಯೇ ಪರವಾಗಿಲ್ಲ ಅನಿಸ್ತು ಎಂದು ರಾಯನುಕ ನಿಡಗುಂದಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬೆಂಗಳೂರೆಂಬ ಮಾಯೆಗೆ ಸಿಲುಕಿದಾಗ ಇವೆಲ್ಲಾ ಮಾಮೂಲು ಎಂದು ರಮೇಶ್‌ಗೌಡ ಹೇಳಿದರೆ, ಎಲ್ಲರಿಗೂ ಬೆಂಗಳೂರು ಇಷ್ಟ ಎಂದು ಸುಧಾಕರ ಬನ್ನಂಜೆ ಪ್ರತಿಕ್ರಿಯಿಸಿದ್ದಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.