Suspected Al Qaeda terrorist: ಬೆಂಗಳೂರಿನಲ್ಲಿ ಶಂಕಿತ ಆಲ್ಖೈದಾ ಉಗ್ರನ ಬಂಧಿಸಿದ ಎನ್ಐಎ ಅಧಿಕಾರಿಗಳು, ಐಸಿಸ್ ಸೇರುವ ಮುನ್ನ ಅರೆಸ್ಟ್
ಐಸಿಸ್ ಜತೆಗೆ ಈತ ನಂಟು ಹೊಂದಿರುವುದನ್ನು ಐಎಸ್ಡಿ ತಂಡವು ಪತ್ತೆಹಚ್ಚಿತ್ತು. ಈತನ ಚಲನವಲನಗಳ ಮೇಲೆ ನಿಗಾ ಇರಿಸಲಾಗಿತ್ತು.
ಬೆಂಗಳೂರು: ಉದ್ಯಾನನಗರಿಯ ತಣಿಸಂದ್ರದ ಮಂಜುನಾಥ್ ನಗರದಲ್ಲಿ ಉತ್ತರ ಪ್ರದೇಶ ಮೂಲಕದ ಟೆಕಿಯೊಬ್ಬನನ್ನು ಐಎಸ್ಡಿ ಮತ್ತು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಗಳು ಹೇಳಿವೆ. ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಈತ ಟೆಲಿಗ್ರಾಂ, ಡಾರ್ಕ್ನೆಟ್ ವೆಬ್ ಮೂಲಕ ಆಲ್ ಖೈದಾ ಗ್ರೂಪ್ಗಳಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ.
ಉತ್ತರ ಪ್ರದೇಶ ಮೂಲದ ಅರೀಫ್ ಅಲಿಯಾಸ್ ಮಹಮದ್ ಆರಿಫ್ನನ್ನು ಐಎಸ್ಡಿ ಮತ್ತು ಎನ್ಐಎ ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಐಸಿಸ್ ಜತೆಗೆ ಈತ ನಂಟು ಹೊಂದಿರುವುದನ್ನು ಐಎಸ್ಡಿ ತಂಡವು ಪತ್ತೆಹಚ್ಚಿತ್ತು. ಈತನ ಚಲನವಲನಗಳ ಮೇಲೆ ನಿಗಾ ಇರಿಸಲಾಗಿತ್ತು. ಈತ ಐಸಿಸ್ಗೆ ಸೇರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಅಲ್ಕೈದಾ ಸಂಘಟನೆ ಜತೆಗೆ ನಿರಂತರ ಸಂಪರ್ಕ ಹೊಂದಿದ್ದ ಈತನು ಸಿರಿಯಾ ಮೂಲಕ ಇರಾಕ್ಗೆ ಹೋಗಲು ಯತ್ನಿಸಿದ್ದ ಎಂದು ವರದಿಗಳು ತಿಳಿಸಿವೆ. ಆದರೆ, ಆ ಎರಡು ದೇಶಗಳಿಂದ ಈತನ ಪ್ರವೇಶಕ್ಕೆ ಸಮ್ಮತಿ ಸಿಕ್ಕಿರಲಿಲ್ಲ ಎನ್ನಲಾಗಿದೆ.
ಇದರಿಂದಾಗಿ ಈತ ಮುಂದಿನ ತಿಂಗಳು ಇರಾಕ್ ಮೂಲಕ ಸಿರಿಯಾ, ಅಪಘಾನಿಸ್ತಾನಕ್ಕೆ ಹೋಗಲು ಪ್ಲ್ಯಾನ್ ಮಾಡಿದ್ದ. ಇದಕ್ಕಾಗಿ ಫ್ಲೈಟ್ ಟಿಕೆಟ್ ಸಹ ಬುಕ್ಕಿಂಗ್ ಮಾಡಿದ್ದ ಎನ್ನಲಾಗಿದೆ.
ಈತ ವರ್ಕ್ ಫ್ರಮ್ ಹೋಮ್ ಟೆಕಿಯಾಗಿದ್ದು, ಮನೆಯಲ್ಲಿ ಕೆಲಸ ಮಾಡುತ್ತಲೇ ಆಲ್ ಖೈದಾ ಸಂಘಟನೆ ಜತೆ ಟೆಲಿಗ್ರಾಂ, ಡಾರ್ಕ್ ವೆಬ್ಗಳಲ್ಲಿ ನಂಟು ಇಟ್ಟುಕೊಂಡಿದ್ದ.
ಈ ಹಿಂದೆ ಈತ ಉಗ್ರ ಸಂಘಟನೆಯ ಪರವಾಗಿ ನಕಲಿ ಟ್ವಿಟ್ಟರ್ ಖಾತೆ ತೆರೆದು ಪೋಸ್ಟ್ ಮಾಡಿತ್ತ. ಟ್ವಿಟ್ಟರ್ ಸಂಸ್ಥೆಯು ಆ ಖಾತೆಯನ್ನು ಡಿಲೀಟ್ ಮಾಡಿತ್ತು.
ಈತ ಇನ್ನೆರಡು ದಿನಗಳಲ್ಲಿ ಮನೆ ಖಾಲಿ ಮಾಡಲು ಸಿದ್ಧನಾಗಿದ್ದ. ಮನೆ ಬಿಡುವುದಾಗಿ ರೂಂ ಓನರ್ಗೆ ತಿಳಿಸಿದ. ತನ್ನ ಪತ್ನಿ, ಇಬ್ಬರು ಮಕ್ಕಳನ್ನು ಉತ್ತರ ಪ್ರದೇಶದಲ್ಲಿ ಬಿಟ್ಟು ಉಗ್ರ ಸಂಘಟನೆಗೆ ಸೇರಲು ಮುಂದಾಗಿದ್ದ. ಅಂದಹಾಗೆ ಈತ ಒಂದೂವರೆ ವರ್ಷದ ಹಿಂದೆ ಬಾಡಿಗೆ ಮನೆಗೆ ಸೇರಿದ್ದ. ಅದಕ್ಕೂ ಮೊದಲು ಪಿಜಿಯಲ್ಲಿದ್ದುಕೊಂಡು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ.
ಇದೀಗ ಈತನನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಈತನೊಂದಿಗೆ ಆತನ ಪತ್ನಿ ಸಫಾಳನ್ನೂ ವಶಕ್ಕೆ ತೆಗೆದುಕೊಂಡಿರುವ ಎನ್ಐಎ ತಂಡ ವಿಚಾರಣೆ ನಡೆಸುತ್ತಿದೆ.
ಆರಂಭಿಕ ವಿಚಾರಣೆ ವೇಳೆಯಲ್ಲಿ ಆತ ಮತ್ತು ಆತನ ಪತ್ನಿ ಬಾಯಿ ಬಿಟ್ಟಿಲ್ಲ ಎನ್ನಲಾಗಿದೆ.
ಹೈದರಾಬಾದ್ನಲ್ಲಿ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದವರ ಬಂಧನ
ಇತ್ತೀಚಿಎಗೆ ಹೈದರಾಬಾದ್ನಲ್ಲಿ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ ಮೂವರನ್ನು ಎನ್ಐಎ ತಂಡ ಬಂಧಿಸಿತ್ತು.. ಅಬ್ದುಲ್ ಜಾಹೀದ್ ಸೇರಿದಂತೆ ಮೂವರನ್ನು ಬಂಧಿಸಿ ಯುಎಪಿಎ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿತ್ತು.
ಎನ್ಐಎಯು ಈ ಮೂವರ ವಿರುದ್ಧ ಕಳೆದ ತಿಂಗಳು ಅಂದರೆ ಜನವರಿ 25ರಂದು ಎಫ್ಐಆರ್ ದಾಖಲಿಸಿತ್ತು. ಇವರಲ್ಲಿ ಝಹೀದ್ ಎಂಬಾತ ಹೈದರಾಬಾದ್ನಲ್ಲಿ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಶಾಮೀಲಾಗಿದ್ದ. ಉಗ್ರ ಚಟುವಟಿಕೆಗಳಿಗೆ ಯುವಕರನ್ನು ಪ್ರೋತ್ಸಾಹಿಸುತ್ತಿದ್ದ ಎನ್ನಲಾಗಿದೆ. ಈ ಉಗ್ರರಿಗೆ ಪಾಕಿಸ್ತಾನದ ಲಿಂಕ್ ಇದೆ ಎನ್ನಲಾಗಿದ್ದು, ಈ ಕುರಿತು ಎನ್ಐಎ ತನಿಖೆ ನಡೆಸುತ್ತಿದೆ.
ಮೊಹಮ್ಮದ್ ಝಹೀದ್, ಮಾಝ್ ಹಸನ್ ಫಾರೂಕ್ ಮತ್ತು ಸಮಿದ್ದೀನ್ ಎಂಬ ಹೆಸರಿನ ಮೂವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAFA)ಯಡಿ ಬಂಧಿಸಲಾಗಿದೆ ಎಂದು ಎನ್ಐಎ ಮಾಹಿತಿ ನೀಡಿದೆ. ಇವರು ಅಕ್ಟೋಬರ್ 2022ರಲ್ಲಿ ಹೈದರಾಬಾದ್ನಲ್ಲಿ ಉಗ್ರ ದಾಳಿಗೆ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.