Blast in Mangalore Auto Rickshaw: ಮಂಗಳೂರು ಆಟೋ ರಿಕ್ಷಾದಲ್ಲಿ ನಿಗೂಢಸ್ಫೋಟ , ಚಾಲಕ, ಪ್ರಯಾಣಿಕನಿಗೆ ಗಾಯ, ಹೆಚ್ಚಿದ ಆತಂಕ
ಇಂದು ಸಂಜೆ ಮಂಗಳೂರಿನ ನಾಗುರಿಯಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ.
ಮಂಗಳೂರು: ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಇಂದು ನಿಗೂಢ ಸ್ಪೋಟವೊಂದು ಸಂಭವಿಸಿದ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದು ಸಂಜೆ ಮಂಗಳೂರಿನ ನಾಗುರಿಯಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ.
ನಿಗೂಢ ಸ್ಫೋಟದಿಂದ ರಿಕ್ಷಾ ಚಾಲಕ ಮತ್ತು ಪ್ರಯಾಣಿಕನಿಗೆ ಗಾಯಗಳಾಗಿವೆ. ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಲ್ಲಿ ಬ್ಯಾಗ್ ಇತ್ತು ಎನ್ನಲಾಗಿದೆ. ಆದರೆ, ಈ ಸ್ಪೋಟಕ್ಕೂ ಬ್ಯಾಗ್ಗೂ ಸಂಬಂಧವಿದೆಯೇ ಎನ್ನುವುದೂ ಇನ್ನೂ ತಿಳಿದಿಲ್ಲ.
ಆಟೋ ರಿಕ್ಷಾದಲ್ಲಿ ಅಡುಗೆ ಪ್ರೆಶರ್ ಕುಕ್ಕರ್ ಅವಶೇಷಗಳು ಕಂಡುಬಂದಿವೆ. ಕುಕ್ಕರ್ನಲ್ಲಿ ಸ್ಪೋಟಕ ಸಾಗಿಸುತ್ತಿದ್ದಿರಬಹುದೇ ಎಂಬ ಗುಮಾನಿಯೂ ವ್ಯಕ್ತವಾಗಿದೆ. ಇಂತಹ ಹಲವು ಅನುಮಾನಗಳಿಂದ ಜನರು ಆತಂಕಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಹಾಗೂ ವಿಧಿವಿಜ್ಞಾನ ತಜ್ಞರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಮಾಹಿತಿ ನೀಡಿರುವ ಶಶಿಕುಮಾರ್ ಅವರು, ಪ್ರಯಾಣಿಕನನ್ನು ಕರೆದೊಯ್ಯುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿದೆ. ಪ್ರಯಾಣಿಕನ ಬಳಿಕ ಬ್ಯಾಗ್ ಇತ್ತು. ಈ ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಆಟೋ ರಿಕ್ಷಾದಲ್ಲಿ ನಡೆದ ಸ್ಫೋಟದಿಂದಾಗಿ ಆಟೋ ಚಾಲಕ ಹಾಗೂ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಂಕನಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ಆಟೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಬಳಿಕ ಸ್ಫೋಟಗೊಂಡಿರುವುದಾಗಿ ವರದಿಗಳು ತಿಳಿಸಿವೆ.
" ಬ್ಯಾಗ್ ಹಿಡಿದುಕೊಂಡ ವ್ಯಕ್ತಿಗೆ ಬೆಂಕಿ ತಗುಲಿದ್ದು, ಬೆಂಕಿ ತಗುಲಿದ ಸಂದರ್ಭ ಅಟೋ ಒಳಭಾಗ ಸುಟ್ಟು ಹೋಗಿದೆ. ಪ್ರಯಾಣಿಕ ಹಾಗೂ ಅಟೋ ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಇದು ತಾಂತ್ರಿಕ ತೊಂದರೆಯಿಂದ ಉಂಟಾದ ಬೆಂಕಿಯೋ, ಪ್ರಯಾಣಿಕನ ಬ್ಯಾಗ್ನಲ್ಲಿದ್ದ ವಸ್ತುವಿನಿಂದ ಉಂಟಾದ ಬೆಂಕಿಯೋ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಷ್ಟೇ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.