ಜನವರಿ 26ರಿಂದ 6 ದಿನಗಳ ಕಾಲ ಸುತ್ತೂರು ಜಾತ್ರಾ ಮಹೋತ್ಸವ; ಇಲ್ಲಿದೆ ಸಂಪೂರ್ಣ ಕಾರ್ಯಕ್ರಮಗಳ ವಿವರ
Suttur Jatra Mahotsava 2025: ಜನವರಿ 26ರಿಂದ ಜನವರಿ 31ರವರೆಗೆ 6 ದಿನಗಳ ಕಾಲ ಸುತ್ತೂರು ಜಾತ್ರಾ ಮಹೋತ್ಸವ ನಡೆಯಲಿದೆ. ಇಲ್ಲಿದೆ ಸಂಪೂರ್ಣ ಕಾರ್ಯಕ್ರಮಗಳ ವಿವರ.

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಕಪಿಲಾನದಿ ತೀರದಲ್ಲಿರುವ ಸುತ್ತೂರು ಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಜನವರಿ 26ರಿಂದ 31ರ ತನಕ 6 ದಿನಗಳ ಕಾಲ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಮೂಹಿಕ ವಿವಾಹ, ಹಾಲರವಿ ಉತ್ಸವ, ವೀರಭದ್ರೇಶ್ವರ ಕೊಂಡೋತ್ಸವ, ಶ್ರೀಮಹದೇಶ್ವರ ಕೊಂಡೋತ್ಸವ ಮತ್ತು ಲಕ್ಷ ದೀಪೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಜನವರಿ 26: ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಚಾಲನೆ
ಜನವರಿ 27: ಸಾಮೂಹಿಕ ವಿವಾಹ ಮತ್ತು ಹಾಲರವಿ ಉತ್ಸವ ಆಯೋಜನೆ
ಜನವರಿ 28: ರಥೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಕೊಂಡೋತ್ಸವ ನೆರವೇರಿಕೆ
ಜನವರಿ 29: ಶ್ರೀಮಹದೇಶ್ವರ ಕೊಂಡೋತ್ಸವ ಮತ್ತು ಲಕ್ಷ ದೀಪೋತ್ಸವ ಆಯೋಜನೆ
ಜನವರಿ 30: ತೆಪ್ಪೋತ್ಸವ
ಜನವರಿ 31: ಅನ್ನಬ್ರಹ್ಮೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ರಂಗೋಲಿ ಮತ್ತು ಸೋಬಾನೆ ಪದ ಸ್ಪರ್ಧೆಗಳು
ಜನವರಿ 26ರಂದು ಗ್ರಾಮೀಣ ಕಲೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಜನವರಿ 26 ರಿಂದ 3 ದಿನಗಳ ಕಾಲ ಸೋಬಾನೆ ಸ್ಪರ್ಧೆ ಆಯೋಜಿಸಲಾಗಿದೆ. ಸೋಬಾನೆ ಸ್ಪರ್ಧೆಯಲ್ಲಿ 150 ಕ್ಕೂ ಹೆಚ್ಚು ತಂಡಗಳು ಭಾಗಿಯಾಗಲಿವೆ.
ಭಜನಾ ಮೇಳ: ಈ ಬಾರಿ 31ನೇ ರಾಜ್ಯಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧೆಗಳು ಏರ್ಪಾಟು ಮಾಡಲಾಗಿದೆ. ರಾಜ್ಯ ಮತ್ತು ಹೊರ ರಾಜ್ಯಗಳ ಸುಮಾರು 800ಕ್ಕೂ ಹೆಚ್ಚು ಪುರುಷ, ಮಹಿಳಾ, ಮಕ್ಕಳ ತಂಡಗಳು ಭಾಗಿಯಾಗಲಿವೆ. ಒಟ್ಟು 7 ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗಕ್ಕೂ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುತ್ತದೆ.
ಸಾಮೂಹಿಕ ವಿವಾಹ
ಸಾಮೂಹಿಕ ವಿವಾಹದಲ್ಲಿ ಜಾತಿ-ಮತ ಭೇದವಿಲ್ಲದೆ ಸರ್ವ ಧರ್ಮಗಳ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಂತರ್ಜಾತಿಗಳ, ವಿಶೇಷ ಚೇತನರು ಹಾಗೂ ಹೊರ ರಾಜ್ಯಗಳ ವಧು-ವರರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ವಿವಾಹಗಳ ನೋಂದಣಿ ಮಾಡಿಕೊಂಡಿದ್ದು, ವಧುವಿಗೆ ಸೀರೆ, ಕುಪ್ಪಸ, ಮಾಂಗಲ್ಯ ಹಾಗು ಕಾಲುಂಗುರ, ವರನಿಗೆ ಪಂಚೆ, ವಲ್ಲಿ, ಶರ್ಟ್ಗಳನ್ನು ನೀಡಲಾಗುತ್ತದೆ. ಸಾಮೂಹಿಕ ವಿವಾಹ ವ್ಯವಸ್ಥೆಯಲ್ಲಿ ಈವರೆಗೆ 3200ಕ್ಕೂ ಹೆಚ್ಚು ಮಂದಿ ಸತಿಪತಿಗಳಾಗಿದ್ದಾರೆ. ವಧು-ವರರು ವಿವಾಹದ ದೃಢೀಕರಣ ಪತ್ರ, ನೋಂದಣಿ ಪತ್ರಗಳನ್ನು ಸಲ್ಲಿಸಿ, ಸರ್ಕಾರ ನೀಡುವ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಬಹುದಾಗಿದೆ.
ಇದರ ಜೊತೆಗೆ ವಸ್ತು ಪ್ರದರ್ಶನ, ಕೃಷಿ ಮೇಳ, ಕೃಷಿ ವಿಚಾರ ಸಂಕಿರಣ, ಚಿತ್ರಕಲಾ ಮತ್ತು ಗಾಳಿಪಟ ಸ್ಪರ್ಧೆಗಳು, ಚಿತ್ರ ಸಂತೆ, ಕುಸ್ತಿ ಪಂದ್ಯಾವಳಿ, ಆರೋಗ್ಯ ತಪಾಸಣಾ ಶಿಬಿರ, ದೋಣಿ ವಿಹಾರ, ಗ್ರಾಮೀಣ ಜನರಿಗೆ ದೇಸಿ ಆಟಗಳು, 54ನೇ ದನಗಳ ಪರಿಷೆ, ಕಪಿಲಾರತಿ, ಸಾಂಸ್ಕೃತಿಕ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸುತ್ತೂರು ಜಾತ್ರಾ ನಾಟಕೋತ್ಸವ, ಕಲಾತಂಡಗಳ ಪ್ರದರ್ಶನ, ಛಾಯಾಚಿತ್ರ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳು ಆಯೋಜನೆ ಮಾಡಲಾಗಿದೆ.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಮಹಾ ದಾಸೋಹಕ್ಕೆ ವ್ಯವಸ್ಥೆ
ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ಪ್ರತಿನಿತ್ಯವೂ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ವ್ಯವಸ್ಥೆ ಇರುತ್ತದೆ. ಒಟ್ಟು ಆರು ದಿನಗಳ ಪ್ರಸಾದ ತಯಾರಿಕೆಗಾಗಿ 1 ಸಾವಿರ ಕ್ವಿಂಟಲ್ ಅಕ್ಕಿ, 240 ಕ್ವಿಂಟಲ್ ತೊಗರಿಬೇಳೆ, 1500 ಕ್ಯಾನ್ ರಿಫೈನ್ಡ್ ಅಡುಗೆ ಎಣ್ಣೆ, 12 ಟನ್ ಬೆಲ್ಲ, 3500 ಕೆಜಿ ಕಾರದಪುಡಿ, 110 ಕ್ವಿಂಟಲ್ ಕಡ್ಲೆಹಿಟ್ಟು, 200 ಕ್ವಿಂಟಲ್ ಸಕ್ಕರೆ, 500 ಕೆಜಿ ನಂದಿನಿ ತುಪ್ಪ, ತಲಾ 800 ಕೆಜಿ ದ್ರಾತ, ಗೋಡಂಬಿ, 8000 ಸಾವಿರ ಲೀಟರ್ ಹಾಲು, 28000 ಲೀಟರ್ ಮೊಸರು, 25000 ತೆಂಗಿನಕಾಯಿ, 5000 ಕೆಜಿ ಉಪ್ಪಿನಕಾಯಿ ಬಳಕೆ ಮಾಡಿಕೊಳ್ಳಲಾಗುತ್ತದೆ.
ಸಾರಿಗೆ ಸಂಪರ್ಕ ಮತ್ತು ವಸತಿ ವ್ಯವಸ್ಥೆ
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ಶ್ರೀಸುತ್ತೂರು ಕ್ಷೇತ್ರಕ್ಕೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ದೂರದ ಊರುಗಳಿಂದ ಬರುವವರಿಗೆ ತಾತ್ಕಾಲಿಕ ಕುಟೀರಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಗಮನ ಸೆಳೆದ ಕೃಷಿ ಮೇಳ
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ತಂತ್ರಜ್ಞಾನಾಧಾರಿತ ಕೃಷಿಮೇಳ ಪ್ರಮುಖ ಆಕರ್ಷಣೆಯಾಗಿದೆ. ಕೃಷಿ ಮೇಳದಲ್ಲಿ ನೈಜ ಬೆಳೆಯ ಪ್ರಾತ್ಯಕ್ಷಿಕೆ ಗಮನ ಸೆಳೆಯುತ್ತಿದೆ. 5 ಎಕರೆ ಪ್ರದೇಶದಲ್ಲಿ 250ಕ್ಕೂ ಹೆಚ್ಚು ತರಕಾರಿ ಬೆಳೆಗಳು, ಸೊಪ್ಪು ಬೆಳೆಗಳು, ಹೂ ಬೆಳೆ, ವಿದೇಶಿ ಬೆಳೆ, ಮೇವು ಬೆಳೆಗಳು ಹಾಗೂ ಗೆಡ್ಡೆ-ಕೋಸು ಬೆಳೆಗಳ ಪ್ರಾತ್ಯಕ್ಷಿಕೆ ಅನಾವರಣ ಮಾಡಲಾಗಿದೆ.
ಜಾತ್ರಾ ಮಹೋತ್ಸವದಲ್ಲಿ ಗಣ್ಯಾತಿಗಣ್ಯರು ಭಾಗಿ
ಪೂಜ್ಯ ಮಠಾಧೀಶರು, ಧರ್ಮಗುರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರು, ಸಂಸದರು, ಶಾಸಕರು, ಗಣ್ಯರು, ಸಾಹಿತಿಗಳು, ಉದ್ಯಮಿಗಳು ಹಾಗೂ ಕಲಾವಿದರು ಭಾಗಿಯಾಗಲಿದ್ದಾರೆ. ಆರು ದಿನಗಳ ಜಾತ್ರಾ ಮಹೋತ್ಸವದಲ್ಲಿ ಸುಮಾರು 20 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
