ಕನ್ನಡ ಸುದ್ದಿ  /  Karnataka  /  Take A Look At Mysuru Old Soda Factories Brahmins Prasanna Cool Corner Phalamrutha Summer Cold Drinks Ice Creams Mgb

Mysuru Soda Factories: ಬ್ರಾಹ್ಮಿನ್ಸ್‌, ಫಲಾಮೃತ, ಪ್ರಸನ್ನ.. ಮೈಸೂರಿನ ಪುರಾತನ ಸೋಡಾ ಫ್ಯಾಕ್ಟರಿಗಳಲ್ಲೊಂದು ಸುತ್ತು

Mysuru Soda Factories: ಸಾಂಸ್ಕೃತಿಕ ನಗರ ಮೈಸೂರು ತನ್ನ ಪಾರಂಪರಿಕತೆಗೆ ಹೆಸರುವಾಸಿ. ಇಂದಿಗೂ ಮೈಸೂರಿನಲ್ಲಿ ಅತ್ಯಂತ ಹಳೆಯ ಕಟ್ಟಡಗಳು, ಅಂಗಡಿಗಳು, ಮನೆಗಳು ಹಾಗೂ ಇತರ ಸಂಪ್ರದಾಯಗಳನ್ನು ಹಾಗೇ ಉಳಿಸಿಕೊಂಡು ಬರಲಾಗಿದೆ. ಹಾಗೆ ಮೈಸೂರಿನಲ್ಲಿ ಹಲವಾರು ಹಳೆಯ ಹೋಟೆಲ್‌ಗಳು, ಜ್ಯೂಸ್‌ ಸೆಂಟರ್‌ಗಳು ಹಾಗೂ ಸೋಡಾ ಫ್ಯಾಕ್ಟರಿಗಳಿವೆ.

ಬ್ರಾಹ್ಮಿನ್ಸ್‌ ಸೋಡಾ ಫ್ಯಾಕ್ಟರಿ
ಬ್ರಾಹ್ಮಿನ್ಸ್‌ ಸೋಡಾ ಫ್ಯಾಕ್ಟರಿ

ಮೈಸೂರು: ಬಿಸಿಲು ಸುಡುತ್ತಿದೆ. ಈ ಬೇಸಿಗೆಯಲ್ಲಿ ಎಷ್ಟೋ ಜಿಲ್ಲೆಗಳು ದಾಖಲೆಯ ತಾಪಮಾನ ಕಂಡಿವೆ. ಈ ಬಿಸಿಲ ಬೇಗೆಯನ್ನು ಸಂಭಾಳಿಸಲು ಆಗಾಗ ಜ್ಯೂಸ್‌, ಐಸ್‌ಕ್ರೀಂ, ಸೋಡಾದಂತಹ ಪಾನೀಯಗಳನ್ನು ಸೇವಿಸುವುದು ಅವಶ್ಯಕ. ಈ ಸಮಯದಲ್ಲಿ ನೀವು ಮೈಸೂರಿನ ಈ ಐತಿಹಾಸಿಕ ಸೋಡಾ ಫ್ಯಾಕ್ಟರಿಗಳ (Mysuru Soda Factories) ಬಗ್ಗೆ ತಿಳಿಯಲೇಬೇಕು.

ಸಾಂಸ್ಕೃತಿಕ ನಗರ ಮೈಸೂರು ತನ್ನ ಪಾರಂಪರಿಕತೆಗೆ ಹೆಸರುವಾಸಿ. ಇಂದಿಗೂ ಮೈಸೂರಿನಲ್ಲಿ ಅತ್ಯಂತ ಹಳೆಯ ಕಟ್ಟಡಗಳು, ಅಂಗಡಿಗಳು, ಮನೆಗಳು ಹಾಗೂ ಇತರ ಸಂಪ್ರದಾಯಗಳನ್ನು ಹಾಗೇ ಉಳಿಸಿಕೊಂಡು ಬರಲಾಗಿದೆ. ಹಾಗೆ ಮೈಸೂರಿನಲ್ಲಿ ಹಲವಾರು ಹಳೆಯ ಹೋಟೆಲ್‌ಗಳು, ಜ್ಯೂಸ್‌ ಸೆಂಟರ್‌ಗಳು ಹಾಗೂ ಸೋಡಾ ಫ್ಯಾಕ್ಟರಿಗಳಿವೆ.

ಬ್ರಾಹ್ಮಿನ್ಸ್‌ ಸೋಡಾ ಫ್ಯಾಕ್ಟರಿ:

1934ರಲ್ಲಿ ಲ್ಯಾನ್ಸ್‌ಡೌನ್‌ ಕಟ್ಟಡದ ಬಳಿ ಆರಂಭವಾದ ಈ ಸೋಡಾ ಫ್ಯಾಕ್ಟರಿಗೆ ಈಗ ಭರ್ತಿ 90 ವರ್ಷ. ಆಗಿನ ಕಾಲದಲ್ಲಿ ಈ ಅಂಗಡಿ ನಡೆಸಲು ಜರ್ಮನಿಯಿಂದ ಸೋಡಾ ಮೇಕಿಂಗ್‌ ಯಂತ್ರಗಳನ್ನು ತರಿಸಿಕೊಳ್ಳಲಾಗಿತ್ತಂತೆ. ಕಾಲಾನಂತರ ಈ ಅಂಗಡಿ ಪ್ರಭಾ ಚಿತ್ರಮಂದಿರದ ಬಳಿ ಸ್ಥಳಾಂತರಗೊಂಡಿತು. ಆಗಿನಿಂದಲೂ ಈ ಅಂಗಡಿ ಇಲ್ಲೇ ಇದೆ. ಇಲ್ಲಿ ಸಿಗುವ ಗಡ್‌ಬಡ್‌, ಸೊಗದೆ ಬೇರು ಜ್ಯೂಸ್‌, ಆರೆಂಜ್‌ ಸೋಡಾ ಬಹಳ ಫೇಮಸ್‌. ಈಗಲೂ ಅಂಗಡಿ ಅಷ್ಟೇ ಚಿಕ್ಕದಾಗಿದೆ. ಹಳೆಯ ಪೀಠೋಪಕರಣಗಳನ್ನೇ ಹೊಂದಿರುವ ಈ ಅಂಗಡಿಗೆ ಈಗಲೂ ಅಷ್ಟೇ ಜನರು ಬರುತ್ತಾರೆ. ಒಮ್ಮೆ ಇಲ್ಲಿ ಬಂದರೆ ಸಮಯ ಒಂದಷ್ಟು ದಶಕಗಳ ಹಿಂದೆ ಹೋದಂತೆ ಅನಿಸುವುದು ಮಾತ್ರ ಸುಳ್ಳಲ್ಲ.

ಶ್ರೀ ಪ್ರಸನ್ನ ಕೂಲ್‌ ಕಾರ್ನರ್‌
ಶ್ರೀ ಪ್ರಸನ್ನ ಕೂಲ್‌ ಕಾರ್ನರ್‌

ಶ್ರೀ ಪ್ರಸನ್ನ ಕೂಲ್‌ ಕಾರ್ನರ್‌ (ಸೋಡಾ ಫ್ಯಾಕ್ಟರಿ):

ಅಗ್ರಹಾರ ವೃತ್ತದ ಬಳಿ ಇರುವ ಈ ಸೋಡಾ ಫ್ಯಾಕ್ಟರಿ ಆರಂಭವಾದದ್ದು 1953 ರಲ್ಲಿ. ಈಗ ಇದಕ್ಕೆ 70 ವರ್ಷಗಳು ತುಂಬಿವೆ. ಈಗ ಒಂದೇ ಕುಟುಂಬದ ನಾಲ್ಕನೆಯ ಪೀಳಿಗೆ ಈ ಅಂಗಡಿಯನ್ನು ನಡೆಸುತ್ತಿದೆ. ಇಲ್ಲೂ ಸಹ ಸೊಗದೆ ಬೇರಿನ ಸೋಡಾ/ಜ್ಯೂಸ್‌ ಬಹಳ ಫೇಮಸ್.‌ ಜೊತೆಗೆ ರೋಸ್‌ ಮಿಲ್ಕ್‌, ಲೈಮ್‌ ಸೋಡಾ ಮತ್ತಿತರ ಪಾನೀಯಗಳು ಸಹ ಹೆಸರುವಾಸಿ. ಈಗಲೂ ಯಾವುದೇ ರಾಸಾಯನಿಕ ಅಥವಾ ಕೃತಕ ಫ್ಲೇವರ್‌ಗಳನ್ನು ಬಳಸದೆ ಪಾನೀಯಗಳನ್ನು ತಯಾರಿಸುವ ಕಾರಣ ಬಹಳಷ್ಟು ಜನರು ಇಲ್ಲಿಗೆ ಬರುತ್ತಾರೆ.

ಫಲಾಮೃತ:

ಲ್ಯಾನ್ಸ್‌ಡೌನ್‌ ಕಟ್ಟಡದಲ್ಲಿದ್ದ ಫಲಾಮೃತ ಅಂಗಡಿ ಮುಚ್ಚಿ ದಶಕವಾಗಿದೆ. ಆದರೂ ಇಂದಿಗೂ ಮೈಸೂರಿಗರ ಮನಸ್ಸಿನಲ್ಲಿ ಇದು ಅಚ್ಚಳಿಯದೆ ಉಳಿದಿದೆ. ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಗುಂಡಪ್ಪ ಎಂಬುವವರು ಈ ಅಂಗಡಿ ನಡೆಸುತ್ತಿದ್ದರಂತೆ. ಒಮ್ಮೆ ಗಾಂಧೀಜಿಯವರು ಖಾದಿ ಗ್ರಾಮೋದ್ಯೋಗ ಮಳಿಗೆ ಉದ್ಘಾಟನೆಗೆ ಇಲ್ಲಿಗೆ ಬಂದಿದ್ದಾಗ ಈ ಅಂಗಡಿಯ ಸೊಗದೆ ಬೇರಿನ ಜ್ಯೂಸ್‌ ಸವಿದಿದ್ದರಂತೆ. ಆದರೆ ಕಾಲಾನಂತರ ಲ್ಯಾನ್ಸ್‌ಡೌನ್‌ ಕಟ್ಟಡದಲ್ಲಿನ ಅಂಗಡಿಗಳನ್ನು ಸ್ಥಳಾಂತರಿಸಿದಾಗ ಈ ಅಂಗಡಿ ಮುಚ್ಚಿಹೋಯ್ತು. ಆದರೆ ಇಂದಿಗೂ ಜನರು ಇಲ್ಲಿನ ಗಡ್‌ಬಡ್‌, ಫ್ರೂಟ್‌ ಸಲಾಡ್‌ಗಳನ್ನು ನೆನಪ್ಸಿಕೊಳ್ಳುತ್ತಾರೆ. ʻನಮ್ಮ ಮಕ್ಕಳು ಫಲಾಮೃತದಲ್ಲಿ ಐಸ್‌ಕ್ರೀಂ ಕೊಡಿಸಿದರೆ ಮಾತ್ರ ಸಿಟಿಗೆ ಬರುತ್ತೇವೆʼ ಎಂದು ಪೀಡಿಸುತ್ತಿದ್ದರುʼ ಎಂದು ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ.

ವರದಿ: ಧಾತ್ರಿ ಭಾರದ್ವಾಜ್‌

ವಿಭಾಗ