ನನ್ನನ್ನೂ ಗುಂಡಿಕ್ಕಿ ಕೊಲ್ಲುವಂತೆ ಹೇಳಿದೆ: ಕಾಶ್ಮೀರದ ಭಯೋತ್ಪಾದಕ ದಾಳಿಯಲ್ಲಿ ಪತಿಯ ಹತ್ಯೆ ಸ್ಥಿತಿ ವಿವರಿಸಿದ ಶಿವಮೊಗ್ಗ ಮಹಿಳೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದು. ಅಲ್ಲಿನ ಘಟನೆಯನ್ನು ಅವರ ಪತ್ನಿ ಪಲ್ಲವಿ ವಿವರಿಸಿದ್ದಾರೆ.

ಬೆಂಗಳೂರು: ಕುಟುಂಬದವರೊಂದಿಗೆ ಪ್ರವಾಸ ಬಂದು ರೆಸಾರ್ಟ್ನಲ್ಲಿ ಊಟಕ್ಕೆಂದು ಬಂದಿದ್ದೆವು. ಏಕಾಏಕಿ ಯಾರೂ ನುಗ್ಗಿ ಗುಂಡಿನ ದಾಳಿ ಮಾಡಿದರು. ನಾವು ಇದು ಭದ್ರತಾ ಅಭ್ಯಾಸ ಇರಬೇಕು ಎಂದುಕೊಂಡಿದ್ದೆವು. ಆದರೆ ಅಲ್ಲಿ ಆಗಿದ್ದೇ ಬೇರೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಮ್ಮ ಮೇಲೆ ದಾಳಿ ಮಾಡಿದರು. ಹಿಂದೂಗಳು ಎಂದು ನಮ್ಮ ಮೇಲೆಯೂ ದಾಳಿ ಮಾಡಲು ಮುಂದಾದರು. ನನ್ನ ಪತಿಯ ಮೇಲೆ ಗುಂಡು ಹಾರಿಸಿದರು. ಅಲ್ಲಲ್ಲಿ ಕುಳಿತಿದ್ದವರ ಮೇಲೆ ಕೆಲವೇ ಕ್ಷಣಗಳಲ್ಲಿ ದಾಳಿಯಾಗಿ ನೆಲಕ್ಕುರುಳಿಸಿ ಪರಾರಿಯಾದರು. ಆಗ ನನ್ನನ್ನು ಗುಂಡಿಕ್ಕಿ ಕೊಂದು ಹಾಕಿ ಬಿಡಿ ಎಂದು ಅಲ್ಲಿದ್ದ ಉಗ್ರರಿಗೆ ದಿಟ್ಟವಾಗಿಯೇ ಹೇಳಿದೆ. ನಿಜಕ್ಕೂ ಇದೊಂದು ಘೋರ ದುರಂತ.
ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥರಾವ್ ಅವರನ್ನು ಕಳೆದುಕೊಂಡ ಅವರ ಪತ್ನಿ ಪಲ್ಲವಿ ಅವರು ಕಾಶ್ಮೀರದ ಫಹಲಗಾಂವ್ನಲ್ಲಿ ನಡೆದ ಘಟನೆಯನ್ನು ವಿವರಿಸುತ್ತಲೇ ಕಣ್ಣೀರಾಗಿದ್ದು ಹೀಗೆ. ಅಲ್ಲಿನ ಘಟನೆಯನ್ನು ಮಾಧ್ಯಮಗಳಿಗೆ ಅವರು ಬಿಡಿಸಿಟ್ಟರು. ಅವರನ್ನೂ ಈಗ ಫಹಲ್ಗಾಂವ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದ, ಆಘಾತದಿಂದ ಅವರು ಹೊರಗೆ ಬಂದಿಲ್ಲ.
ಘಟನೆಯನ್ನು ವಿವರಿಸುತ್ತಾ ಹೋದ ಪಲ್ಲವಿ "ನಾವು ಏಪ್ರಿಲ್ 19 ರಂದು ಪ್ರವಾಸಕ್ಕಾಗಿ ಕಾಶ್ಮೀರಕ್ಕೆ ಬಂದಿದ್ದೇವೆ. ಇದು ಅಂತಹ ಸುಂದರವಾದ ಸ್ಥಳವಾಗಿತ್ತು. ನಾವು ಅದರ ಪ್ರತಿಯೊಂದು ತಾಣ ಹಾಗೂ ಕ್ಷಣವನ್ನು ಅನ್ನು ಆನಂದಿಸುತ್ತಿದ್ದೆವು. ನನ್ನ ಮಗನಿಗೆ ಹಸಿವಾಯಿತು, ಆದ್ದರಿಂದ ಮಂಜುನಾಥ್ ಅವನಿಗೆ ಕೆಲವು ತಿಂಡಿಗಳನ್ನು ಖರೀದಿಸಲು ಹೋದರು. ಆಗ ನಮಗೆ ಗುಂಡಿನ ಸದ್ದು ಕೇಳಿಸಿತು. ಮೊದಲಿಗೆ, ಇದು ಭದ್ರತಾ ಅಭ್ಯಾಸ ಎಂದು ನಾನು ಭಾವಿಸಿದೆ. ಬಹುಶಃ ಪೊಲೀಸರು ಒಂದು ರೀತಿಯ ಫೈರಿಂಗ್ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ನಾವು ಭಾವಿಸಿದ್ದೆವು. ಆದರೆ ನಂತರ ನಾನು ನನ್ನ ಗಂಡನನ್ನು ನೋಡಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನಿಜಕ್ಕೂ ನನಗೆ ನಂಬಲಾಗಲಿಲ್ಲ ಎಂದು ಕಣ್ಣೀರು ಹಾಕಿದರು.
ನಮ್ಮ ಸುತ್ತಲಿನ ಜನರು ಕಿರುಚುತ್ತಲೇ ರಕ್ಷಣೆಗಾಗಿ ಓಡಲು ಪ್ರಾರಂಭಿಸಿದರು, 'ಭಾಗೋ ಭಾಗೋ ಎನ್ನುವ ಶಬ್ದ, ನಮ್ಮ ಕಡೆಯವರನ್ನು ಉಳಿಸಿಕೊಡಿ ಎನ್ನುವ ಆಕ್ರಂದನ ಕೇಳಿ ಬರುತ್ತಿತ್ತು. ಅಲ್ಲಿ ಏನಾಗುತ್ತಿದೆ ಎಂದು ನನಗೆ ನಂಬಲು ಸಾಧ್ಯವಾಗಲಿಲ್ಲ. ಆಗ ಅಲ್ಲಿಯೇ ಇದ್ದವರನ್ನು ನೋಡಿ ನನ್ನನ್ನೂ ಗುಂಡಿಕ್ಕಿ ಕೊಲ್ಲುವಂತೆ ಅವರಿಗೆ ಹೇಳಿದೆ. ಅವರಲ್ಲಿ ಒಬ್ಬರು ಮೋದಿ ಜಿ ಕೋ ಬತಾವೋ (ಹೋಗಿ ಮೋದಿಗೆ ಹೇಳಿ)' ಎಂದು ಉತ್ತರಿಸಿದರು. ಈ ನೋವನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ ಎಂದರು ಪಲ್ಲವಿ.
ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ
ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಅಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ಕುಟುಂಬಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಸಮನ್ವಯಗೊಳಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಅನೇಕ ತಂಡಗಳನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ದಾಳಿಯಲ್ಲಿ ಕರ್ನಾಟಕದ ಪ್ರವಾಸಿಗರು ಗಾಯಗೊಂಡಿದ್ದಾರೆ ಎಂದು ವರದಿಯಾದ ನಂತರ ಸಿಎಂ ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಫಹಲ್ಗಾಂವ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ಆಘಾತಕಾರಿ ಘಟನೆಗೆ ಬಲಿಯಾದವರಲ್ಲಿ ಜಮ್ಮು ಮತ್ತು ಕಾಶ್ಮೀರದ ಕನ್ನಡಿಗರು ಸೇರಿದ್ದಾರೆ. ಸುದ್ದಿ ತಿಳಿದ ಕೂಡಲೇ ನಾನು ತುರ್ತು ಸಭೆ ಕರೆದು ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದೆ.
"ನಾನು ದೆಹಲಿಯ ರೆಸಿಡೆಂಟ್ ಕಮಿಷನರ್ ಅವರೊಂದಿಗೂ ಮಾತನಾಡಿದ್ದೇನೆ. ನನ್ನ ನಿರ್ದೇಶನವನ್ನು ಅನುಸರಿಸಿ, ಹಿರಿಯ ಅಧಿಕಾರಿಗಳ ಒಂದು ಮತ್ತು ಪೊಲೀಸ್ ಸಿಬ್ಬಂದಿಯ ಎರಡು ತಂಡಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗಿದೆ. ಆಯುಕ್ತ ಚೇತನ್ ನೇತೃತ್ವದ ಕ್ರೀಡಾ ಇಲಾಖೆಯ ತಂಡವೂ ತೆರಳುತ್ತಿದೆ. ನಾವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲಾಗುವುದು. ದಯವಿಟ್ಟು ಭರವಸೆ ನೀಡಿ, ಕರ್ನಾಟಕ ಸರ್ಕಾರವು ಸಂತ್ರಸ್ತರೊಂದಿಗೆ ದೃಢವಾಗಿ ನಿಲ್ಲುತ್ತದೆ" ಎಂದು ಅವರು ಹೇಳಿದರು.