ಉಯಿಲು ಪತ್ರ ನಿಖರವಾಗಿರಲಿ, ವ್ಯಾಜ್ಯಮುಕ್ತ ವಿಲ್ಗೆ ತಂತ್ರಜ್ಞಾನ ಬಳಸಿ; ಸರ್ಕಾರದ ಗಮನಸೆಳೆಯಲು ಕರ್ನಾಟಕ ಹೈಕೋರ್ಟ್ ಹೇಳಿದ 4 ಅಂಶಗಳಿವು
Karnataka High Court: ಉಯಿಲು ಪತ್ರ ವ್ಯಾಜ್ಯ ಹೆಚ್ಚಾಗುತ್ತಿರುವ ಕಾರಣ ಮತ್ತು ಉಯಿಲು ಬರೆಯಿಸಿದವರ ಆಸೆ ಈಡೇರಿಸುವ ನ್ಯಾಯಯುತ ಅವಶ್ಯಕತೆ ಹೆಚ್ಚಾಗಿದೆ. ಹೀಗಾಗಿ, ಉಯಿಲು ಪತ್ರ ನಿಖರವಾಗಿರಲಿ, ವ್ಯಾಜ್ಯಮುಕ್ತ ವಿಲ್ಗೆ ತಂತ್ರಜ್ಞಾನ ಬಳಸಿ ಎಂದು ಸರ್ಕಾರದ ಗಮನಸೆಳೆಯಲು ಕರ್ನಾಟಕ ಹೈಕೋರ್ಟ್ ಹೇಳಿದ 4 ಅಂಶಗಳ ವಿವರ ಇಲ್ಲಿದೆ.
Karnataka High Court: ಉಯಿಲು ಪತ್ರ ವ್ಯಾಜ್ಯ ಪ್ರಮಾಣ ಹೆಚ್ಚುತ್ತಿರುವ ಕಾರಣ, ಅದು ನಿಖರವಾಗಿರುವಂತೆ ನೋಡಿಕೊಳ್ಳಬೇಕಾದ್ದು ಮುಖ್ಯ. ನಿತ್ಯ ಬದುಕಿನ ಬಳಕೆಯಲ್ಲಿರುವ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳಬೇಕಾದ ಅವಶ್ಯಕತೆ ಇಂದಿನ ತುರ್ತು ಅಗತ್ಯ. ಇದರಿಂದ ಉಯಿಲು ಬರೆದವರ ಉದ್ದೇಶ ಯಾವುದೇ ವ್ಯಾಜ್ಯವಿಲ್ಲದೇ ಅನುಷ್ಠಾನಗೊಳ್ಳುವುದು ಸಾಧ್ಯ. ಇದೇ ವಿಚಾರವನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಉಯಿಲು ಪತ್ರ ವ್ಯಾಜ್ಯದ ವಿಚಾರಣೆ ಸಂದರ್ಭದಲ್ಲಿ ಬಹಳ ಸ್ಪಷ್ಟವಾಗಿ ವಿವರಿಸಿದೆ ಎಂದು ದ ಹಿಂದೂ ವರದಿ ಮಾಡಿದೆ. ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ವಿಲ್ ಬರೆಯುವಾಗ ಯಾರು ವಿಲ್ ಮಾಡಿಸುತ್ತಾರೋ ಅವರ ಹೇಳಿಕೆಯ ವಿಡಿಯೋ ರೆಕಾರ್ಡ್ ಮಾಡಿಸಿಕೊಳ್ಳಬೇಕು. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸಾಕ್ಷಿಗಳನ್ನು ದೃಢೀಕರಿಸಬೇಕು. ಹಾಗೆ ಮಾಡುವುದರಿಂದ ಅದರ ಅನುಷ್ಠಾನದಲ್ಲಿ ಯಾವುದೇ ಗೊಂದಲ ಉಂಟಾಗದು. ಉಯಿಲು ಪತ್ರ ಒಂದು ನಂಬಲರ್ಹ ಮತ್ತು ಅನುಷ್ಠಾನ ಯೋಗ್ಯ ದಾಖಲೆಯಾಗಿ ಪರಿಗಣಿಸಲ್ಪಡುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ವ್ಯಾಜ್ಯಮುಕ್ತ ವಿಲ್ಗೆ ತಂತ್ರಜ್ಞಾನ ಬಳಕೆ ಸೂಕ್ತ; ಕರ್ನಾಟಕ ಹೈಕೋರ್ಟ್ ಹೇಳಿದ 4 ಅಂಶಗಳು
1) ವಿಲ್ ದಾಖಲಿಸುವಾಗ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಯಾರು ವಿಲ್ ಮಾಡಿಸುತ್ತಾರೋ ಅವರ ವಿಡಿಯೋ ಹೇಳಿಕೆ ದಾಖಲಿಸಬೇಕು.
2) ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಈಗ ಕಂಪ್ಯೂಟರ್ ಸಿಸ್ಟಮ್ ಮತ್ತು ವೆಬ್ ಕ್ಯಾಮೆರಾ ಇರುವ ಕಾರಣ ವಿಲ್ ಮಾಡಿಸುವವರು ಮತ್ತು ಸಾಕ್ಷಿಗಳನ್ನು ದೃಢೀಕರಿಸುವ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳಬೇಕು. ಅದಕ್ಕೆ ಅನುವು ಮಾಡಿಕೊಡುವಂತೆ ಕಾನೂನಿನಲ್ಲಿ ಸೂಕ್ತ ನಿಬಂಧನೆ ಸೇರಿಸಬೇಕು.
3) ಉಯಿಲು ಪತ್ರದ ವ್ಯಾಜ್ಯ ಎದುರಾದ ಸಂದರ್ಭದಲ್ಲಿ ಇಂತಹ ವಿಡಿಯೋ ಸಾಕ್ಷಿಗಳು ಪುರಾವೆಗಳಾಗಬೇಕು. ಅದಕ್ಕೆ ಬೇಕಾದ ಗೌಪ್ಯತೆಯನ್ನು ಕಾಪಾಡಬೇಕು. ಈ ವಿಡಿಯೋ ಹೇಳಿಕೆ ಸಂಗ್ರಹಿಸಿ ಸುರಕ್ಷಿತವಾಗಿ ಇಟ್ಟುಕೊಳ್ಳುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಈ ಬಗ್ಗೆ ಗಮನಹರಿಸಬೇಕು.
4) ಬ್ರಿಟಿಷ್ ಆಡಳಿತ ಕಾಲದಲ್ಲಿ ಭಾರತೀಯ ಉತ್ತರಾಧಿಕಾರ ಕಾಯಿದೆ 1925 ಮತ್ತು ಭಾರತೀಯ ಪುರಾವೆ ಕಾಯಿದೆ 1872 ರ ಮೂಲಕ ಉಯಿಲು ಮತ್ತು ಸಾಕ್ಷ್ಯ ಪರಿಚಯಿಸಲ್ಪಟ್ಟಿದೆ. ಇತ್ತೀಚೆಗೆ ಬದಲಾದ ಭಾರತೀಯ ಸಾಕ್ಷ್ಯ ಅಧಿನಿಯಮ 2023ರಲ್ಲಿ ಹಳೆಯ ಕಾಯ್ದೆಯ ಯಾವುದೇ ಅಂಶವೂ ಬದಲಾಗಿಲ್ಲ ಅಥವಾ ಪರಿಷ್ಕರಿಸಲ್ಪಟ್ಟಿಲ್ಲ.
ಬಳ್ಳಾರಿ ಕುಡುತಿನಿ ಗ್ರಾಮಸ್ಥರೊಬ್ಬರ ಉಯಿಲು ಪತ್ರ ವ್ಯಾಜ್ಯ
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠವು, ಬಳ್ಳಾರಿ ಕುಡುತಿನಿ ಗ್ರಾಮದ 62 ವರ್ಷದ ಇಂದಿರಮ್ಮ ಮತ್ತು ಇತರರು ಸಲ್ಲಿಸಿದ್ದ ಉಯಿಲು ಪತ್ರ ವ್ಯಾಜ್ಯದ ವಿಚಾರಣೆ ನಡೆಸುತ್ತಿದ್ದ ವೇಳೆ ಈ ಅಂಶಗಳನ್ನು ಉಲ್ಲೇಖಿತು. “ಉಯಿಲು ಪತ್ರಕ್ಕೆ ಸಾಕ್ಷಿ ಸಹಿ ಹಾಕಿ ದೃಢೀಕರಿಸುವ ಸಂದರ್ಭದಲ್ಲಿ ಏನಾಯಿತು ಎಂಬುದನ್ನು ವಿವರಿಸುವ ಸ್ಥಿತಿಯಲ್ಲಿ ಈಗ ಸಾಕ್ಷಿ ಇಲ್ಲದೇ ಇರಬಹುದು. ಕೆಲವೊಮ್ಮೆ ಸಾಕ್ಷಿಯು ವಿಲ್ ಬರೆಸಿದವನಿಗೂ ಮೊದಲೇ ವಿಧಿವಶನಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ವಿಭಿನ್ನ ರೀತಿಯ ಕಾನೂನು ಪುರಾವೆ ಒದಗಿಸಿದರೂ, ಅವು ಅತ್ಯುತ್ತಮ ಸಾಕ್ಷಿ ಅಲ್ಲ ಎಂಬುದು ವಾಸ್ತವ ಸತ್ಯ” ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
ಅಸ್ತಿತ್ವದಲ್ಲಿರುವ ಕಾನೂನು ಪ್ರಕಾರ, ನುರಿತ ಮತ್ತು ತರಬೇತಿ ಪಡೆದ ವಕೀಲರಿಂದ ಅಡ್ಡ ಪರೀಕ್ಷೆಯನ್ನು ತಡೆದುಕೊಳ್ಳುವ ದೃಢೀಕರಿಸುವ ಸಾಕ್ಷಿಯ ಸಾಮರ್ಥ್ಯದ ಮೇಲೆ ಉಯಿಲಿನ ಪುರಾವೆ ಮತ್ತು ವಿಲ್ ಬರೆಯಿಸಿದವನ ಕೊನೆಯ ಆಸೆಯನ್ನು ಪೂರೈಸುವುದು ಸಂಪೂರ್ಣವಾಗಿ ಅವಲಂಬಿತವಾಗಿದೆ ಎಂಬುದರ ಕಡೆಗೆ ನ್ಯಾಯಾಲಯವು ಗಮನಸೆಳೆದಿದೆ. ಅಂತಹ ಸನ್ನಿವೇಶದಲ್ಲಿ, ನಿಜವಾದ ಉಯಿಲು ಆಗಿದ್ದರೂ ಸಹ ಸಾಕ್ಷಿಯು ಎಡವಬಹುದು. ಇದು ಉಯಿಲಿಗೆ ಮಾನ್ಯತೆ ನೀಡದಿರಲು ಕಾರಣವಾಗುತ್ತದೆ. ಹಾಗಾಗಬಾರದು. ಉಯಿಲು ಬರೆಯಿಸಿದವನ ಆಸೆ ಈಡೇರಬೇಕು. ಅದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯ ಇದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ಹೇಳಿದ್ದಾಗಿ ವರದಿ ವಿವರಿಸಿದೆ.