Bharat jodo yatra: ಇಂದು ಬೆಳಗ್ಗೆ 6.30ಕ್ಕೆ ಭಾರತ ಐಕ್ಯತಾ ಯಾತ್ರೆ ಮತ್ತೆ ಆರಂಭ; ಇವತ್ತಿನ ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ
ಆಯುಧ ಪೂಜೆ ಹಾಗೂ ವಿಜಯ ದಶಮಿ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಬಿಡುವು ನೀಡಲಾಗಿದ್ದ ಕಾಂಗ್ರೆಸ್ ನ ಐಕ್ಯತಾ ಯಾತ್ರೆ ಇಂದು ಬೆಳಗ್ಗೆ 6.30ಕ್ಕೆ ಪಾಂಡವಪುರದಿಂದ ಆರಂಭವಾಗಲಿದೆ.
ಪಾಂಡವಪುರ (ಮಂಡ್ಯ): ಆಯುಧ ಪೂಜೆ ಹಾಗೂ ವಿಜಯ ದಶಮಿ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಬಿಡುವು ಪಡೆದಿದ್ದ ಕಾಂಗ್ರೆಸ್ ನ ಐಕ್ಯತಾ ಯಾತ್ರೆ ಇಂದು ಬೆಳಗ್ಗೆ 6.30ಕ್ಕೆ ಪಾಂಡವಪುರದಿಂದ ಆರಂಭವಾಗಲಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ ಐಕ್ಯತಾ ಯಾತ್ರೆ 7ನೇ ದಿನವಾಗಿದ್ದು, ಇಂದಿನ ಯಾತ್ರೆಯ ಮಾಹಿತಿಯನ್ನ ನೋಡುವುದಾದರೆ,
- ಬೆಳಗ್ಗೆ 6.30ಕ್ಕೆ ಪಾಂಡವಪುರ ಬೆಳ್ಳಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪಾದಯಾತ್ರೆ ಆರಂಭವಾಗುತ್ತದೆ.
- ಬೆಳಗ್ಗೆ 11 ಗಂಟೆಗೆ ಬೆಳಗಿನ ವಿರಾಮ ಖಾರಧ್ಯ ಕೆರೆ ಎದುರು ಮಧ್ಯಾಹ್ನದ ಭೋಜನ
- ಸಂಜೆ 4 ಗಂಟೆಗೆ ಚೌಡೇನಹಳ್ಳಿ ಗೇಟ್ ಬಳಿಯ ಖಾರಾಧ್ಯ ಕೆರೆಯಿಂದ ಮತ್ತೆ ಪಾದಯಾತ್ರೆ ಆರಂಭ
- ಸಂಜೆ 7 ಗಂಟೆಗೆ ಮಂಡ್ಯದ ಬ್ರಹ್ಮದೇವರ ಗ್ರಾಮದಲ್ಲಿ ಸಂಜೆ ವಿರಾಮ ಜೊತೆಗೆ ರಾತ್ರಿ ವಿಸ್ಡಮ್ ಶಾಲೆಯಲ್ಲಿ ವಿಶ್ರಾಂತಿ
ಇಷ್ಟು ಇಂದಿನ ಭಾರತ್ ಜೋಡೋ ಯಾತ್ರೆಯ ಪ್ರಮುಖ ಮಾಹಿತಿ. ಇದರ ನಡುವೆ ವಿರಾಮದ ಸಂದರ್ಭದಲ್ಲಿ ಮಹಿಳೆಯರು, ಯುವಕರು ಸೇರಿದಂತೆ ವಿವಿಧ ವರ್ಗಗಳ ಜನರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದು, ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 7 ರಂದು ಆರಂಭವಾಗಿದ್ದ ಯಾತ್ರೆ ನಾಳೆಗೆ ಒಂದು ತಿಂಗಳು ಪೂರೈಸಲಿದೆ. ಈ ಯಾತ್ರೆ ತಮಿಳುನಾಡಿನಲ್ಲಿ 62 ಕಿ.ಮೀ, ಕೇರಳದಲ್ಲಿ 355 ಕಿ.ಮೀ ಕ್ರಮಿಸಿ ಈಗ ಕರ್ನಾಟಕ ಪ್ರವೇಶಿಸಿದ್ದು, ಮುಂದಿನ ಕೆಲ ದಿನಗಳ ಕಾಲ 511 ಕಿ.ಮೀ ಕ್ರಮಿಸಲು ಪಾದಯಾತ್ರೆ ಆರಂಭವಾಗಿದೆ.
ಸೆ.7ರಂದು ಈ ಯಾತ್ರೆ ಕನ್ಯಾಕುಮಾರಿಯಲ್ಲಿ ಆರಂಭವಾಗಿದ್ದು, ಎರಡು ದಿನ ಮುಂಚಿತವಾಗಿ ಸೆ.5ರಂದು ರಾಹುಲ್ ಗಾಂಧಿ ಅವರು ಅಹಮದಾಬಾದಿನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿಂದ ಕನ್ಯಾಕುಮಾರಿಗೆ ತೆರೆಳಿ ವಿವೇಕಾನಂದ ಸ್ಮಾರಕ, ಗಾಂಧಿ ಮಂಟಪ, ಕಾಮರಾಜ ಮಂಟಪಕ್ಕೆ ಭೇಟಿ ಬಳಿಕ ಯಾತ್ರೆ ಆರಂಭಿಸಿದ್ದರು.
ಯಾತ್ರೆಯಲ್ಲಿ ಭಾಗಿಯಾಗಿರುವವರ ಪೈಕಿ 1/3 ರಷ್ಟು ಯಾತ್ರಿಗಳು ಮಹಿಳೆಯರು, ಈ ನಡಿಗೆದಾರರ ಸರಾಸರಿ ವಯೋಮಾನ 38 ವರ್ಷ. ರಾಹುಲ್ ಗಾಂಧಿ ಅವರು ಈ ಯಾತ್ರೆಯ ಪ್ರಮುಖ ನೇತೃತ್ವ ವಹಿಸಿದ್ದು, ಇದುವರೆಗೂ ದಿನನಿತ್ಯ ಸರಾಸರಿ 21 ಕಿ.ಮೀ ದೂರದಷ್ಟು ಸಾಗುತ್ತಿದೆ.
ಭಾರತ ಐಕ್ಯತಾ ಯಾತ್ರೆ ನಡೆಸಲು ಪ್ರಮುಖ ಕಾರಣ ಎಂದರೆ, ಮೋದಿ ಅವರ ನಾಯಕತ್ವದಲ್ಲಿ ಅವರ ಸಿದ್ಧಾಂತ, ಆಡಳಿತದಲ್ಲಿ ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿದೆ. ಬೆಲೆ ಏರಿಕೆ, ಆರ್ಥಿಕ ಅಸಮಾನತೆ, ಜಿಎಸ್ಟಿಗಳಿಂದ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿರುವುದು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಇನ್ನು ಮೋದಿ ಅವರ ನಾಯಕತ್ವದಲ್ಲಿ ಸಾಮಾಜಿಕ ಧೃವೀಕರಣ ಹೆಚ್ಚುತ್ತಿದ್ದು, ಜಾತಿ, ಧರ್ಮ, ಭಾಷೆ, ಆಹಾರ, ಉಡುಗೆ ವಿಚಾರದಲ್ಲಿ ಸಮಾಜ ಒಡೆಯಲಾಗುತ್ತಿದೆ. ಕೇವಲ ಚುನಾವಣೆ ಗೆಲ್ಲಲು ಇವುಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಕರ್ನಾಟಕ ತಾಜಾ ಉದಾಹರಣೆ. ಇನ್ನು ಮೋದಿ ಆಡಳಿತದಲ್ಲಿ ರಾಜಕೀಯ ಅಧಿಕಾರ ಕೇಂದ್ರೀಕರಣಗೊಳ್ಳುತ್ತಿದ್ದು, ಸಂವಿಧಾನ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ. ಸಂವಿಧಾನಿಕ ಸಂಸ್ಥೆಗಳು ದುರ್ಬಲಗೊಂಡಿದ್ದು, ಎಲ್ಲ ಆಡಳಿತ ಶಕ್ತಿಕೇಂದ್ರಗಳ ಓರ್ವ ವ್ಯಕ್ತಿ ನಿಯಂತ್ರಣದಲ್ಲಿದೆ. ಅವರು ಸರ್ವಜ್ಞಾನಿ, ಸ್ವರ್ವವ್ಯಾಪಿ, ಸರ್ವಶಕ್ತಿಮಾನವನಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾರತ್ ಯೋಜೋ ಯಾತ್ರೆಯನ್ನು ಬಿಜೆಪಿ ಟೀಕಿಸಿದೆ. ಇದೇ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಟ್ವಿಟರ್ ಖಾತೆಗಳ ಮೂಲಕ ವಾಕ್ಸಮರ ನಡೆಸುತ್ತಿವೆ.
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.