ಶಬರಿಮಲೆಗೆ ಅರಣ್ಯ ಮಾರ್ಗದಲ್ಲಿ ಮೆಟ್ಟಲು ಹತ್ತಿ ದರ್ಶನ ಹೋಗುವುದಕ್ಕೆ ತಡೆ: ಪಾಸ್ ರದ್ದುಪಡಿಸಿದ ದೇವಸ್ಥಾನ ಮಂಡಳಿ
ಶಬರಿಮಲೆಗೆ ಅರಣ್ಯ ಮಾರ್ಗದ ಮೂಲಕ ಬರುತ್ತಿದ್ದ ಭಕ್ತರಿಗೆ ನೀಡುತ್ತಿದ್ದ ವಿಶೇಷ ಪಾಸ್ ವ್ಯವಸ್ಥೆಯನ್ನು ಆಡಳಿತ ಮಂಡಳಿ ತಾತ್ಕಾಲಿಕವಾಗಿ ರದ್ದುಪಡಿಸಿದೆ.
ತಿರುವನಂತಪುರಂ: ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ದರ್ಶನ ಹಾಗೂ ಮಕರ ಜ್ಯೋತಿ ದಿನ ಸಮೀಪಿಸುತ್ತಿರುವ ನಡುವೆಯೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ತಿರುವಾಂಕೂರು ದೇವಸ್ವಂ ಬೋರ್ಡ್ ಹೊಸ ಆದೇಶವೊಂದರನ್ನು ಜಾರಿಗೊಳಿಸಿದೆ. ಹೆಚ್ಚಿದ ಜನಸಂದಣಿಯಿಂದಾಗಿ ಅರಣ್ಯ ಮಾರ್ಗವನ್ನು ಬಳಸುವ ಶಬರಿಮಲೆ ಭಕ್ತರಿಗೆ ವಿಶೇಷ ಪಾಸ್ ನೀಡುವುದನ್ನು ತಿರುವಾಂಕೂರು ದೇವಸ್ವಂ ಮಂಡಳಿಯು ತಡೆ ನೀಡಿದೆ.
ಈ ಕ್ರಮವು ಶಬರಿಮಲೆಯ ಪಂಬಾದಲ್ಲಿ ದರ್ಶನಕ್ಕಾಗಿ ಭಕ್ತರು ಕಾಯುವ ಸಮಯವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಈ ಮಾರ್ಗದಲ್ಲಿ ದರ್ಶನಕ್ಕೆ ಆಗಮಿಸಲು ಈ ಹಿಂದೆ 5,000 ಪಾಸ್ಗಳು ಲಭ್ಯವಿದ್ದವು. ಆದರೆ ಈ ಮಾರ್ಗದಲ್ಲೂ ಮಿತಿಗಿಂತ ಹೆಚ್ಚು ಭಕ್ತರು ಆಗಮಿಸಿ ಮುಂದೆ ತೊಂದರೆಯಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಭಕ್ತರು ಸ್ಪಾಟ್ ಬುಕ್ಕಿಂಗ್ ಮೂಲಕವೇ ಆಗಮಿಸಬೇಕಾಗಿದೆ.
ತಿರುವಾಂಕೂರು ದೇವಸ್ವಂ ಬೋರ್ಡ್ ಅರಣ್ಯ ಮಾರ್ಗದ ಮೂಲಕ ಕಾಲ್ನಡಿಗೆಯಲ್ಲಿ ಬರುವ ಶಬರಿಮಲೆ ಭಕ್ತರಿಗೆ ವಿಶೇಷ ಪಾಸ್ಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಹೊಸ ವರ್ಷದ ದಿನವಾದ ಬುಧವಾರ ಘೋಷಿಸಿತು. ಮೂರು ದಿನಗಳ ವಿರಾಮದ ನಂತರ ಶಬರಿಮಲೆ ದೇಗುಲಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಇನ್ನೂ ಹೆಚ್ಚಲಿದೆ. ಮಕರ ಜ್ಯೋತಿಯ ವೇಳೆ ಬೆಟ್ಟದಲ್ಲೇ ಹಾಜರಿದ್ದು ದರ್ಶನ ಪಡೆಯಬೇಕು ಎನ್ನುವವರೂ ಅಧಿಕ.
ವರ್ಚುವಲ್ ಸರತಿ ವ್ಯವಸ್ಥೆ ಮತ್ತು ಸ್ಪಾಟ್ ಬುಕ್ಕಿಂಗ್ ಮೂಲಕ ಪಂಬಾ ಮೂಲಕ ಆಗಮಿಸುವ ಭಕ್ತರು ದರ್ಶನಕ್ಕಾಗಿ ದೀರ್ಘಾವಧಿ ಕಾಯುವ ಸಮಯವನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೇವಸ್ವಂ ಮಂಡಳಿ ಸದಸ್ಯ ಎ ಅಜಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಅರಣ್ಯ ಮಾರ್ಗದಲ್ಲಿ ಸಂಚರಿಸುವ 5,000 ಭಕ್ತರಿಗೆ ವಿಶೇಷ ಪಾಸ್ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅರಣ್ಯ ಮಾರ್ಗವಾಗಿ ಆಗಮಿಸುವ ಭಕ್ತರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಪಾಸ್ ನೀಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಮುಂದಿನ ಸೂಚನೆ ಬರುವವರೆಗೂ ವಿಶೇಷ ಪಾಸ್ಗಳನ್ನು ನೀಡದಿರಲು ಮಂಡಳಿ ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಭಾಗ