ಕರ್ನಾಟಕ ಪಿಯುಸಿ ಫಲಿತಾಂಶ; ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ಜ್ಞಾನವಿ ಎಂ ಪ್ರಥಮ, ವಿದ್ಯಾನಿಧಿ ಪಿಯು ಕಾಲೇಜಿನಲ್ಲಿ ಸಂಭ್ರಮ
ಕರ್ನಾಟಕ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ಜ್ಞಾನವಿ ಎಂ ಪ್ರಥಮ ಪಡೆದಿದ್ದಾರೆ. ವಿದ್ಯಾನಿಧಿ ಪಿಯು ಕಾಲೇಜಿನಲ್ಲಿ ಸಂಭ್ರಮ ನೆಲೆಸಿದ್ದು, ಜ್ಞಾನವಿಯನ್ನು ಅಭಿನಂದಿಸಿದ್ದಾರೆ. ತುಮಕೂರಿನ ಪತ್ರಕರ್ತರ ಮಕ್ಕಳು ಕೂಡ ಉತ್ತಮ ಸಾಧನೆ ಮಾಡಿದ್ದಾರೆ. (ವರದಿ - ಈಶ್ವರ್, ತುಮಕೂರು)

ತುಮಕೂರು: ಕರ್ನಾಟಕದಲ್ಲಿ ಮಾ. 1 ರಿಂದ 22ರ ವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬುಧವಾರ (ಏಪ್ರಿಲ್ 10) ಪ್ರಕಟವಾಗಿದ್ದು, ನಗರದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜ್ಞಾನವಿ ಎಂ. ಅವರು 597 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ನಗರದ ವಿದ್ಯಾನಿಧಿ ಪಿಯು ಕಾಲೇಜಿನ ವಿದ್ಯಾರ್ಥಿ ಜ್ಞಾನವಿ ಎಂ. ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 597 ಅಂಕ ಗಳಿಸುವ ಮೂಲಕ ಇಡೀ ರಾಜ್ಯದಲ್ಲೇ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜು, ತುಮಕೂರು ಜಿಲ್ಲೆ ಹಾಗೂ ತಂದೆ-ತಾಯಿಗೆ ಕೀರ್ತಿ ತಂದಿದ್ದಾರೆ.
ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿನಿ ಜ್ಞಾನವಿ ಎಂ. ಅವರ ತಂದೆ ಮಂಜುನಾಥ್ ಹಾಗೂ ತಾಯಿ ಮಂಜುಳಾ ದಂಪತಿ ಎಡೆಯೂರು ಸಮೀಪದ ಹಾಗೂ ಮಂಡ್ಯ ಜಿಲ್ಲೆಯ ಬೀಚನಹಳ್ಳಿ ಗ್ರಾಮದವರಾಗಿದ್ದು, ಹೋಟೆಲ್ ನಡೆಸಿಕೊಂಡು ಮಗಳನ್ನು ಹಾಸ್ಟೆಲ್ನಲ್ಲಿ ಬಿಟ್ಟು ವ್ಯಾಸಂಗ ಮಾಡಿಸುತ್ತಿದ್ದರು.
ಲೆಕ್ಕ ಪರಿಶೋಧಕಿಯಾಗುವ ಕನಸು ಹೊಂದಿರುವ ಜ್ಞಾನವಿ ಮೊಬೈಲ್ ಬಳಸುತ್ತಿರಲಿಲ್ಲ
ವಿದ್ಯಾನಿಧಿ ಹಾಸ್ಟೆಲ್ನಲ್ಲಿದ್ದು ಓದುತ್ತಿದ್ದ ಜ್ಞಾನವಿ ಎಂ. ಅವರು ಭವಿಷ್ಯದಲ್ಲಿ ಸಿಎ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದು, ನನ್ನ ಇವತ್ತಿನ ಯಶಸ್ಸಿಗೆ ತಂದೆ-ತಾಯಿ, ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯ ಬೆಂಬಲ, ಸಹಕಾರ ಪ್ರಮುಖವಾಗಿದೆ ಎಂದರು.
ನಾನು ಓದುವಾಗ ಮೊಬೈಲ್ ಬಳಕೆಗೆ ಮಾಡುತ್ತಿರಲಿಲ್ಲ, ಮೊಬೈಲ್ನಿಂದ ದೂರವಿದ್ದು ಓದುತ್ತಿದ್ದೆ, ಹಾಗೆಯೇ ನಮ್ಮ ಹಾಸ್ಟೆಲ್ನಲ್ಲೂ ಸಹ ಮೊಬೈಲ್ ಬಳಕೆಗೆ ಅವಕಾಶ ಇರಲಿಲ್ಲ, ಇದು ಸಹ ಈ ಮಟ್ಟದ ಸಾಧನೆಗೆ ಕಾರಣವಾಯಿತು ಎಂದು ವಿದ್ಯಾರ್ಥಿನಿ ಜ್ಞಾನವಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಸಿಎ ಆಗುವ ಇಂಗಿತ ಹೊಂದಿರುವ ನಾನು ಈಗಾಗಲೇ ವಿದ್ಯಾವಾಹಿನಿ ಕಾಲೇಜಿನಲ್ಲಿ ಸಿಎ ಮತ್ತು ಬಿಕಾಂ ಓದಲು ದಾಖಲಾಗಿದ್ದೇನೆ ಎಂದು ಹೇಳಿದರು.
ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ಕುಮಾರ್ ಮಾತನಾಡಿ, ವಿದ್ಯಾನಿಧಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದೆ. ಜ್ಞಾನವಿ ಎಂ. ಅವರು 600ಕ್ಕೆ 597 ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದರು.
8 ವಿದ್ಯಾರ್ಥಿಗಳು ಸಹ ರಾಜ್ಯಕ್ಕೆ ಟಾಪರ್ಗಳು
ವಾಣಿಜ್ಯ ವಿಭಾಗದಲ್ಲಿ ಜ್ಞಾನವಿ 597, ದೀಪಶ್ರೀ 594, ತುಂಗಾ 593, ಮನಮೋಹನ್ 592, ಗಗನಶ್ರೀ 591, ಅನನ್ಯ ಜೆ.ಟಿ.591, ಮೋನಿಶಾ 590, ಸಾಕ್ಷಿ 590, ಕುಮುದ 589, ಮಾರುತಿ ಭುವನ್ 588, ವಿಜ್ಞಾನ ವಿಭಾಗದಲ್ಲಿ ನಿತ್ಯ ಕೆ.ಆರ್. 586, ಶಾಶ್ವತ್ 586, ತನುಷ್ ಆರಾಧ್ಯ 585, ನಿಸರ್ಗ ಎ.ಎಂ. 584, ಲತಾ ಆರ್. 584 ಅಂಕ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ನಮ್ಮ ಕಾಲೇಜಿನ ವಿದ್ಯಾರ್ಥಿ ಅತ್ಯುನ್ನತ ಸಾಧನೆ ಮಾಡಲು ಆಡಳಿತ ಮಂಡಳಿ ಹಾಗೂ ಉಪನ್ಯಾಸಕರ ಶ್ರಮ ಅಪಾರವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಜ್ಞಾನವಿ ಎಂ. ಸೇರಿದಂತೆ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಅಧ್ಯಕ್ಷ ಕೆ.ಬಿ. ಜಯಣ್ಣ, ಕಾರ್ಯದರ್ಶಿ ಪ್ರದೀಪ್ಕುಮಾರ್ ಹಾಗೂ ಪ್ರಾಂಶುಪಾಲರಾದ ಸಿದ್ದೇಶ್ವರಸ್ವಾಮಿ ಅವರು ಸಿಹಿ ತಿನಿಸಿ, ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.
ಪತ್ರಕರ್ತರ ಮಕ್ಕಳ ಸಾಧನೆ
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ವಿಜಯ ಕರ್ನಾಟಕ ವರದಿಗಾರ ದಯಾನಂದ್ ಅವರ ಮಗ ಗುಣಸಾಗರ್ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 600 ಅಂಕಗಳಿಗೆ 597 ಅಂಕಗಳನ್ನು ಪಡೆದು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ, ಮೂಲಕ ತಂದೆ ತಾಯಿ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಇನ್ನು ತುಮಕೂರುವಾರ್ತೆ ದಿನಪತ್ರಿಕೆಯ ವರದಿಗಾರ ಕುಮಾರಸ್ವಾಮಿ ಎ.ಆರ್ ಅವರ ಮಗ ಭುವನ್ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 581 ಅಂಕಗ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಅದೇ ರೀತಿ ನಮ್ಮ ಕರ್ನಾಟಕ ಟಿವಿ ವರದಿಗಾರ ಪ್ರಕಾಶ್ ಅವರ ಮಗಳು ಕುಮಾರಿ ಶರಣ್ಯ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 509 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿರುತ್ತಾರೆ.
(ವರದಿ - ಈಶ್ವರ್, ತುಮಕೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
