Tumkur News: ತುಮಕೂರು ಹರಳೂರಿನ ಐತಿಹಾಸಿಕ ಶ್ರೀವೀರಭದ್ರ ಸ್ವಾಮಿಯ ಅದ್ದೂರಿ ರಥೋತ್ಸವ
ಈಗ ಎಲ್ಲೆಡೆ ಜಾತ್ರಾ ಸಮಯ. ತುಮಕೂರು ತಾಲ್ಲೂಕು ಹರಳೂರಿನ ವೀರಭದ್ರೇಶ್ವರ ರಥೋತ್ಸವವೂ ಸಡಗರದಿಂದ ನಡೆಯಿತು.(ವರದಿ: ಈಶ್ವರ್, ತುಮಕೂರು)

ತುಮಕೂರು: ತುಮಕೂರು ತಾಲೂಕಿನ ಐತಿಹಾಸಿಕ, 400 ವರ್ಷಗಳಿಗೂ ಹಳೆಯಾದ ಹರಳೂರು ಶ್ರೀವೀರಭದ್ರ ಸ್ವಾಮಿಯ ಅದ್ದೂರಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಏಪ್ರಿಲ್ 30 ರಿಂದ ಶ್ರೀವೀರಭದ್ರ ಸ್ವಾಮಿಯ ಜಾತ್ರಾ ಮಹೋತ್ಸವ ಆರಂಭವಾಗಿ ಎರಡು ದಿನ ಧಾರ್ಮಿಕ ವಿಧಿ ವಿಧಾನ ಮತ್ತು ಪೂಜಾ ಕೈಂಕರ್ಯದ ನಂತರ ಮೇ 02ರ ಗುರುವಾರ ಮಧ್ಯಾಹ್ನ ಶ್ರೀವೀರಭದ್ರ ಸ್ವಾಮಿಯ ರಥೋತ್ಸವ ಜರುಗಿತು. ಜಾತ್ರಾ ಮಹೋತ್ಸವದ ಉತ್ಸವ ಮೂರ್ತಿ, ಭಕ್ತರು ಸಡಗರೊಂದಿಗೆ ರಥೋತ್ಸವನ್ನು ಬಿಸಿಲ ನಡುವೆ ಎಳೆದಿದ್ದು ಅದ್ಭುತ ಹಾಗೂ ಮನೋಹರವಾಗಿತ್ತು.
ದೇಗುಲದ ಭವ್ಯ ಇತಿಹಾಸ
ಹರಳೂರಿನ ಶ್ರೀವೀರಭದ್ರ ಸ್ವಾಮಿಗೆ ಪುರಾತನ ಇತಿಹಾಸವಿದೆ, ಗೌತಮ ಮಹರ್ಷಿಗಳು ಪ್ರವಾಸದ ಸಂದರ್ಭದಲ್ಲಿ ಈ ಪ್ರದೇಶಕ್ಕೆ ಬಂದು ಇಷ್ಟಲಿಂಗ ಪೂಜೆಗೆ ಅಗತ್ಯವಿರುವ ಹೂವುಗಳನ್ನು ಹರಳೂರಿನಿಂದ ತೆಗೆದುಕೊಂಡು ಹೋಗುತ್ತಿದ್ದರೂ ಎಂದು ಪುರಾಣದ ಕಥೆಗಳು ಹೇಳುತ್ತವೆ. ಚೋಳರ ವಾಸ್ತುಶಿಲ್ಪ ಶೈಲಿಯಲ್ಲಿ ಪುರಾತನ ಶ್ರೀವೀರಭದ್ರ ಸ್ವಾಮಿ ದೇವಾಲಯ ನಿರ್ಮಾಣಗೊಂಡಿದ್ದು, ಇತ್ತೀಚಿಗೆ ಕೆಲ ಭಾಗ ಜೀರ್ಣೋದ್ಧಾರಗೊಂಡಿದೆ, ಶೈವ ಪರಂಪರೆ ಶ್ರೀವೀರಭದ್ರ ಸ್ವಾಮಿ ದೇವಾಲಯದಲ್ಲಿ ಶಿವನ ಜೊತೆಗೆ ಚನ್ನಕೇಶವ ಸ್ವಾಮಿಯ ಮೂರ್ತಿಗಳು ಈಗಲೂ ಭಕ್ತಿ ಭಾವದಿಂದಲೇ ಪೂಜಿಸಲ್ಪಡುತ್ತವೆ.
ಸುಮಾರು 400 ವರ್ಷಗಳಿಗೂ ಹೆಚ್ಚು ಕಾಲದಿಂದ ಇಲ್ಲಿ ಪ್ರತಿವರ್ಷ ಒಂದು ವಾರಗಳ ಕಾಲ ಜಾತ್ರಾ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ, ಸದರಿ ಜಾತ್ರೆಗೆ ಸಿದ್ದಗಂಗೆಯ ಲಿಂಗೈಕ್ಯ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಪ್ರತಿವರ್ಷ ಚಾಲನೆ ನೀಡುತ್ತಿದ್ದರು, ಇದರ ನೆನಪಿಗಾಗಿ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಜಾತ್ರಾ ಸಂದರ್ಭದಲ್ಲಿ ಶಿವಕುಮಾರ ಸ್ವಾಮೀಜಿಗಳ ಉತ್ಸವ ಸಹ ಕಳೆದ ಎರಡು ವರ್ಷಗಳಿಂದ ಜಾತ್ರೆಯ ಮುನ್ನದಿನ ನಡೆಸಲಾಗುತ್ತದೆ.
ಜಾತ್ರಾ ವಿಶೇಷ ಏನು
ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಮತ್ತು ಅತಿಯಾದ ತಾಪಮಾನವಿದ್ದು, ಇದರ ನಿವಾರಣೆಗಾಗಿ ಶ್ರೀವೀರಭದ್ರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳಲಾಯಿತು, ಜಾತ್ರೆಗೆ ಬರುವ ಎಲ್ಲಾ ಭಕ್ತರಿಗೆ ದಾಸೋಹದ ಜೊತೆಗೆ, ನಗರಗಳಿಂದ ಬಂದು ಹೋಗಲು ವಾಹನದ ವ್ಯವಸ್ಥೆ ಸಹ ಕೆಎಸ್ಆರ್ಟಿಸಿ ಸಹಯೋಗದಲ್ಲಿ ಮಾಡಲಾಗಿತ್ತು, ಜಾತ್ರೆ ಸಮಯವಲ್ಲದೆ ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರತಿದಿನವೂ ದಾಸೋಹ ನೀಡಲಾಗುತ್ತದೆ, ಶಿವಕುಮಾರ ಸ್ವಾಮೀಜಿ ಆರಂಭಿಸಿರುವ ದಾಸೋಹ ಎಂದಿಗೂ ನಿಲ್ಲುವುದಿಲ್ಲ, ನಿರಂತರವಾಗಿ ನಡೆದುಕೊಂಡು ಹೋಗಲಿದೆ ಎಂಬುದಕ್ಕೆ ಇಲ್ಲಿನ ದಾಸೋಹವೇ ಸಾಕ್ಷಿ.
ರಥೋತ್ಸವದ ವೇಳೆ ಶ್ರೀವೀರಭದ್ರ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್.ಶಂಕರಯ್ಯ, ಕಾರ್ಯದರ್ಶಿ ಹೆಚ್.ಎಸ್.ಉಮಾಶಂಕರ್, ಶ್ರೀವೀರಭದ್ರಸ್ವಾಮಿ ದಾಸೋಹ ಟ್ರಸ್ಟ್ನ ಅಧ್ಯಕ್ಷ ಕುಮಾರಯ್ಯ.ಹೆಚ್.ಕೆ, ಕಾರ್ಯದರ್ಶಿ ರುದ್ರೇಶ್, ಮಲ್ಲಿಕಾರ್ಜುನ್, ಹರಳೂರು ಶಿವಕುಮಾರ್ ಸೇರಿದಂತೆ ಪದಾಧಿಕಾರಿಗಳು, ಹರಳೂರು ಗ್ರಾಮಸ್ಥರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಏನೇನು ಕಾರ್ಯಕ್ರಮ
ರಥೋತ್ಸವದ ನಂತರವೂ ಜಾತ್ರಾ ಮಹೋತ್ಸವ ಮುಂದುವರೆಯಲಿದ್ದು, ಮೇ 03ರ ಶುಕ್ರವಾರ ರಾತ್ರಿ ನಂದಿ ವಾಹನ ಸೇವೆ ಜರುಗಲಿದೆ, ಸಂಜೆ 6.30ಕ್ಕೆ ಜೀ ಕನ್ನಡ ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ.
ಮೇ 04ರ ಶನಿವಾರ ಸಂಜೆ 7 ಗಂಟೆಗೆ ಶ್ರೀವೀರಭದ್ರ ಸ್ವಾಮಿಗೆ ಬೆಲ್ಲದ ಆರತಿ ಸೇವೆ, ರಾತ್ರಿ 10 ಗಂಟೆಗೆ ಅಕ್ಕಿ ಪೂಜಾ ಅಲಂಕಾರ, ಪಲ್ಲಕ್ಕಿ ಉತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಜರುಗಲಿದೆ, ಮೇ 05ರ ಭಾನುವಾರ ತಿರುಮಣಿ ಉತ್ಸವ, ಮೇ 06 ರಂದು ಓಕಳಿ ಮೆರವಣಿಗೆ ಜರಗಲಿದೆ, ಹರಳೂರು ಜಂಗಮ ಮಠದ ಶ್ರೀಚನ್ನಬಸವ ಸ್ವಾಮಿಗಳ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್ಯ ಜರುಗಲಿವೆ.
( ವರದಿ: ಈಶ್ವರ್ ತುಮಕೂರು)
