ಬೆಂಗಳೂರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್, ಆರ್ವಿ ಎಂಜಿನಿಯರಿಂಗ್ ಕಾಲೇಜ್ಗೆ ಹುಸಿ ಬಾಂಬ್ ಬೆದರಿಕೆ ಇಮೇಲ್
ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜು ಸೇರಿ ಎರಡು ಶಿಕ್ಷಣ ಸಂಸ್ಥೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ನಿನ್ನೆ ರವಾನೆಯಾಗಿದೆ. ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂದು ದೃಢಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ಮತ್ತು ಆರ್ವಿ ಎಂಜಿಯರಿಂಗ್ ಕಾಲೇಜ್ಗೆ ಬಾಂಬ್ ಬೆದರಿಕೆ ಇಮೇಲ್ ರವಾನೆಯಾಗಿತ್ತು. ವಿಷಯ ತಿಳಿದ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ಎರಡೂ ಸಂಸ್ಥೆಗಳಲ್ಲಿ ಪರಿಶೀಲನೆ ನಡೆಸಿ ಅದು ಹುಸಿ ಬಾಂಬ್ ಬೆದರಿಕೆ ಎಂಬುದನ್ನು ಖಾತರಿಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್, ಆರ್ವಿ ಎಂಜಿನಿಯರಿಂಗ್ ಕಾಲೇಜ್ಗೆ ಹುಸಿಬಾಂಬ್ ಬೆದರಿಕೆ
ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜು ಸೇರಿ ಎರಡು ಶಿಕ್ಷಣ ಸಂಸ್ಥೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ನಿನ್ನೆ ರವಾನೆಯಾಗಿದೆ. ಆರ್ವಿ ಎಂಜಿನಿಯರಿಂಗ್ ಕಾಲೇಜು ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ಗೆ ಬಾಂಬ್ ಬೆದರಿಕೆ ಇಮೇಲ್ ಬಂದ ಕೂಡಲೇ ಪೊಲೀಸರಿಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ತಂಡದೊಂದಿಗೆ ಆಗಮಿಸಿದ ಪೊಲೀಸರು, ಕಾಲೇಜಿನ ವಿದ್ಯಾರ್ಥಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಅಲ್ಲಿಂದ ಹೊರ ಕಳುಹಿಸಿದ್ದು, ಬಳಿಕ ಕಾಲೇಜು ಪೂರ್ತಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ಬಾಂಬ್ಗಾಗಿ ಶೋಧ ನಡೆಸಿದೆ. ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಬಾಂಬ್ ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಬಾಂಬ್ ಬೆದರಿಕೆ ಇಮೇಲ್ ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 21ಕ್ಕೆ ಇಮೇಲ್ ರವಾನೆ
ಆರ್ವಿ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಅದರಲ್ಲಿ, ಆರ್ವಿ ಕಾಲೇಜಿಗೆ ಏಪ್ರಿಲ್ 21 ರಂದು ರಾತ್ರಿ 9.13 ಮತ್ತು 9.31ಕ್ಕೆ ಎರಡು ಇಮೇಲ್ಗಳು ಬಂದಿದ್ದವು. ನಿಮ್ಮ ಕಾಲೇಜಿನಲ್ಲಿ ಬಾಂಬ್ ಸ್ಫೋಟ. ನಿಮ್ಮ ವಿದ್ಯಾರ್ಥಿಗಳು ಹಾಗೂ ಪ್ರಾಂಶುಪಾಲರ ಜೀವ ಉಳಿಸಿ ಎಂಬ ಸಾಲುಗಳಿದ್ದವು. ರಜಪೂತ್ ಸಿಂದಾರ್ (sindaarrajput@gmail.com) ಎಂಬ ಇಮೇಲ್ ಕಳುಹಿಸಿದ್ದಾಗಿ ಹೇಳಲಾಗಿದೆ.
ಕರ್ನಾಟಕ ಚಿತ್ರಕಲಾ ಪರಿಷತ್ಗೂ ಇದೇ ರೀತಿ ಇಮೇಲ್ ಹೋಗಿವೆ. ಮಂಗಳವಾರ ಬೆಳಿಗ್ಗೆ 11 ಗಂಟೆ ಈ ಬಾಂಬ್ ಬೆದರಿಕೆ ಇಮೇಲ್ ಬಗ್ಗೆ ದೂರು ಬಂತು. ನಿಯತವಾಗಿ ಇಮೇಲ್ ಪರಿಶೀಲಿಸುವಂತೆ ಮಂಗಳವಾರ ಬೆಳಿಗ್ಗೆ ಇಮೇಲ್ ಪರಿಶೀಲಿಸುತ್ತಿದ್ದಾಗ ಈ ಬೆದರಿಕೆ ಇಮೇಲ್ ಗಮನಸೆಳೆದ ಕಾರಣ ಕೂಡಲೇ ಅವರು ಪೊಲೀಸರಿಗೆ ವಿಷಯ ತಲುಪಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫೋನ್ ಕರೆ ಬಂದ ಕೂಡಲೇ, ಬಾಂಬ್ ನಿಷ್ಕ್ರಿಯ ತಂಡ ಹಾಗೂ ಸ್ನಿಫರ್ ನಾಯಿಗಳನ್ನು ಕರೆದುಕೊಂಡು ಈ ಎರಡೂ ಶಿಕ್ಷಣ ಸಂಸ್ಥೆಗಳಿಗೆ ತೆರಳಲಾಗಿದೆ. ಅಲ್ಲಿ ಎಲ್ಲರನ್ನೂ ಹೊರಗೆ ಸುರಕ್ಷಿತವಾಗಿ ಕಳುಹಿಸಿದ ಬಳಿಕ ಇಂಚು ಇಂಚು ಪರಿಶೀಲನೆ ನಡೆಸಿ ಬಾಂಬ್ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡೆವು ಎಂದು ಪೊಲೀಸ್ ಮೂಲಗಳು ವಿವರಿಸಿದವು.
ಇಂಥದ್ದೇ ಘಟನೆ ಹಿಂದೆಯೂ ಆಗಿತ್ತು
ಬೆಂಗಳೂರಿನ ಕೆಂಪೆಗೌಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಕ್ಕೆ ಫೆಬ್ರವರಿಯಲ್ಲಿ ಬಾಂಬ್ ಬೆದರಿಕೆಯ ಇಮೇಲ್ ರವಾನೆಯಾಗಿತ್ತು. ಈ ಬೆದರಿಕೆಯು ನಗರದಲ್ಲಿ ಏರೋ ಇಂಡಿಯಾ 2025 ಸಂದರ್ಭದಲ್ಲಿ ಬಂದ ಕಾರಣ ಭದ್ರತಾ ಕಳವಳಗಳಿಗೆ ಕಾರಣವಾಗಿತ್ತು.
mahanteshs6699@proton.me ಎಂಬ ಇಮೇಲ್ ಐಡಿಯಿಂದ ಬೆದರಿಕೆ ಇಮೇಲ್ ರವಾನೆಯಾಗಿತ್ತು. ಬೆಂಗಳೂರು, ಚೆನ್ನೈ, ಕೇರಳದ ವಿಮಾನ ನಿಲ್ದಾಣಗಳಿಗೆ ಡ್ರೋನ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿತ್ತು. ಕರ್ನಾಟಕ ಮಾಜಿ ಮುಖ್ಯಮಂತ್ರಿ ಮತ್ತು ಪ್ರಸ್ತುತ ಸಂಸತ್ ಸದಸ್ಯ ಬಸವರಾಜ ಬೊಮ್ಮಾಯಿ ಅವರನ್ನು ಉದ್ದೇಶಿಸಿ ರವಾನಿಸಿದ್ದ ಪತ್ರದಲ್ಲಿ, "ಬಸವರಾಜ ಬೊಮ್ಮಾಯಿ ಅವರಿಂದ ನನ್ನ ಪತ್ರಕ್ಕೆ ನಾನು ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇನೆ. ಅದು ಬರದೇ ಇದ್ದರೆ, ಬೆಂಗಳೂರು, ಚೆನ್ನೈ ಅಥವಾ ಕೇರಳ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವಿಮಾನಗಳ ಮೇಲೆ ಡ್ರೋನ್ ದಾಳಿ ನಡೆಯಲಿದೆ" ಎಂದು ಉಲ್ಲೇಖಿಸಲಾಗಿತ್ತು.