ಉಡುಪಿ ಜಿಲ್ಲೆಯಲ್ಲಿ ಸಾಲಬಾಧೆಯಿಂದ ಬಾವಿಗೆ ಹಾರಿದ ತಂದೆ ಆತ್ಮಹತ್ಯೆ; ರಕ್ಷಣೆಗೆ ಹೋದ ಮಗನೂ ಸಾವು, ಪತ್ನಿ ರಕ್ಷಣೆ
ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆ ವ್ಯಾಪ್ತಿ ತೆಕ್ಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಸಾಲದ ಬಾಧೆಯಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ರಕ್ಷಣೆಗೆ ಹೋದ ಮಗವೂ ಸಾವಿಗೀಡಾಗಿರುವ ಘಟನೆ ನಡೆದಿದೆ.ವರದಿ: ಹರೀಶ್ ಮಾಂಬಾಡಿ. ಮಂಗಳೂರು

ಉಡುಪಿ: ಒಂದೇ ಕುಟುಂಬದ ಮೂವರು ಬಾವಿಗೆ ಹಾರಿದ ಘಟನೆ ಉಡುಪಿ ಜಿಲ್ಲೆಯ ತೆಕ್ಕಟ್ಟೆ ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.ಅಗ್ನಿಶಾಮಕ ದಳ ಪೊಲೀಸರ ಹಾಗೂ ಸ್ಥಳೀಯರ ಕಾರ್ಯಚರಣೆಯಿಂದ ಶವವನ್ನು ಮೇಲೆತ್ತಲಾಗಿದೆ. ಮಾಧವ ದೇವಾಡಿಗ(56), ಹಾಗೂ ಅವರ ಮಗ ಪ್ರಸಾದ್ ದೇವಾಡಿಗ(22) ಮೃತಪಟ್ಟವರು. ತಾಯಿ ತಾರಾ ದೇವಾಡಿಗ ಅವರ ಸ್ಥಿತಿ ಗಂಭೀರವಾಗಿದ್ದು, ಕೋಟದ ಜೀವನ್ ಮಿತ್ರ ನಾಗರಾಜ್ ಅವರ ಆಂಬುಲೆನ್ಸ್ ಸಹಾಯದಿಂದ ತತ್ ಕ್ಷಣವೇ ಕೋಟೇಶ್ವರದ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪ್ಪ ಮಗ ಬಾವಿಗೆ ಹಾರಿದ್ದು ನೋಡಿ ತಾಯಿ ಕೂಡ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹೇಳಲಾಗಿದೆ.
ಕಂಚುಗಾರುಬೆಟ್ಟು ನಿವಾಸಿ, ತಾರಾ ದೇವಾಡಿಗ ಅವರ ಪರಿಸ್ಥಿತಿ ಗಂಭೀರವಾಗಿದ್ದು,ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಂದೆ ಮತ್ತು ಮಗ ಆತ್ಮಹತ್ಯೆಗೆ ಶರಣಾಗಿರುವುದನ್ನು ತಿಳಿದ ತಾಯಿ, ತಾರಾ ದೇವಾಡಿಗ ಅವರು ಬಾವಿಗೆ ಹಾರಿದ್ದಾರೆ ಎನ್ನಲಾಗಿದೆ.ಇವರ ಮನೆಯಲ್ಲಿ
ಡೆತ್ ನೋಟ್ ಸಿಕ್ಕಿದ್ದು, ಬಡ ಕುಟುಂಬಕ್ಕೆ ಸಾಲಬಾಧೆ ಕಾಡುತ್ತಿರುವುದರಿಂದ ಮರ್ಯಾದೆಗಾಗಿ ಅಂಜಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಕುಂದಾಪುರದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮೃತ ದೇಹವನ್ನು ಮೇಲಕ್ಕೆತ್ತಲಾಗಿದೆ. ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.