Bharat Mata Mandir: ಅಮರಗಿರಿಯ ಭಾರತ್ ಮಾತಾ ಮಂದಿರ ಉದ್ಘಾಟಿಸಿದ ಅಮಿತ್ ಶಾ
ಇಂದು ಪುತ್ತೂರಿಗೆ ಆಗಮಿಸಿರುವ ಕೇಂದ್ರ ಸಚಿವ ಅಮಿತ್ ಶಾ ಅವರು ತಾಲೂಕಿನ ಅಮರಗಿರಿಯಲ್ಲಿನ ಭಾರತ ಮಾತಾ ಮಂದಿರವಾದ ಶ್ರೀ ಭಾರತಿ ಅಮರಜ್ಯೋತಿ ಮಂದಿರವನ್ನು ಉದ್ಘಾಟಿಸಿದ್ದಾರೆ.
ದಕ್ಷಿಣ ಕನ್ನಡ: ಇಂದು ಪುತ್ತೂರಿಗೆ ಆಗಮಿಸಿರುವ ಕೇಂದ್ರ ಸಚಿವ ಅಮಿತ್ ಶಾ ಅವರು ತಾಲೂಕಿನ ಅಮರಗಿರಿಯಲ್ಲಿನ ಭಾರತ ಮಾತಾ ಮಂದಿರವಾದ ಶ್ರೀ ಭಾರತಿ ಅಮರಜ್ಯೋತಿ ಮಂದಿರವನ್ನು ಉದ್ಘಾಟಿಸಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪುತ್ತೂರು ತಾಲೂಕಿನ ಈಶ್ವರಮಂಗಲದ ಹನುಮಗಿರಿಗೆ ಆಗಮಿಸಿದ ಅಮಿತ್ ಶಾ, ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಬಳಿಕ ಈ ದೇವಾಲಯದ ಸಮೀಪವೇ ನಿರ್ಮಿಸಲಾಗಿರುವ ಭಾರತ ಮಾತಾ ಮಂದಿರವನ್ನು ಉದ್ಘಾಸಿಟಿದರು.
ಪುತ್ತೂರು ಹಾಗೂ ಈಶ್ವರಮಂಗಲದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇಂದು ಯಾವುದೇ ರೋಡ್ಶೋ ಇಲ್ಲ. ಸುರಕ್ಷತೆಯ ದೃಷ್ಟಿಯಿಂದ ರೋಡ್ ಶೋ ನಡೆಸಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ರೋಡ್ ಶೋ ನಡೆಯುವ ಮಾರ್ಗಮಧ್ಯೆ ಪದವಿನಂಗಡಿ ಬಳಿ ಕೊರಗಜ್ಜನ ಕೋಲ ನಡೆಯುತ್ತಿದೆ. ಈ ಕಾರಣಕ್ಕೆ ಅಮಿತ್ ಶಾ ರೋಡ್ ಶೋ ಕಾರ್ಯಕ್ರಮ ರದ್ದು ಮಾಡಲಾಗಿದೆ ಎನ್ನಲಾಗಿದೆ.
ಈಶ್ವರಮಂಗಲದಿಂದ ನೇರವಾಗಿ ಪುತ್ತೂರಿಗೆ ಹೆಲಿಕಾಪ್ಟರ್ ಮೂಲಕವೇ ಅಮಿತ್ ಶಾ ತೆರಳಿದ್ದಾರೆ. ಅಮಿತ್ ಶಾ ಜೊತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಹೆಲಿಕಾಪ್ಟರ್ ಹತ್ತಿದ್ದಾರೆ.
ಅಮಿತ್ ಶಾ ಅವರ ಜತೆಗೆ ಎಸ್ಪಿಜಿ ಭದ್ರತಾ ಸಿಬ್ಬಂದಿಗಳು ಇದ್ದಾರೆ. ದಕ್ಷಿಣ ಕನ್ನಡಕ್ಕೆ ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ರಾಜ್ಯದ ನಾನಾ ಭಾಗದ 1,600 ಪೊಲೀಸ್ರನ್ನು ಈಗಾಗಲೇ ದಕ್ಷಿಣ ಕನ್ನಡ ಡ್ಯೂಟಿಗೆ ಹಾಕಲಾಗಿದೆ. 7 ಮಂದಿ ಎಸ್ಪಿ, 22 ಮಂದಿ ಡಿವೈಎಸ್ಪಿ, 38 ಮಂದಿ ಇನ್ಸ್ಪೆಕ್ಟರ್, 80ಕ್ಕೂ ಅಧಿಕ ಪಿಎಸ್ಐಗಳನ್ನು ನಿಯೋಜಿಸಲಾಗಿದೆ. ಹನುಮಗಿರಿ, ಮೊಟ್ಟೆತ್ತಡ್ಕ ಹೆಲಿಪ್ಯಾಡ್, ತೆಂಕಿಲ ಸಮಾವೇಶ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇಂದು ರಾತ್ರಿ ಆರೂವರೆಯಿಂದ ಎಂಟು ಗಂಟೆಯವರೆಗೆ ಬಿಜೆಪಿ ಮುಖಂಡರ ಜತೆ ಮಂಗಳೂರಿನಲ್ಲಿ ಅಮಿತ್ ಶಾ ಚರ್ಚೆ ನಡೆಸಲಿದ್ದಾರೆ. ಬಳಿಕ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸ್ಸಾಗಲಿದ್ದಾರೆ.
ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 275 ರ ಮಾಣಿ- ಮೈಸೂರು ಹೆದ್ದಾರಿಯಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5.30 ವರೆಗೆ ವಾಹನ ಸಂಚಾರ ನಿಷೇಧ ಹಾಕಲಾಗಿದೆ. ಬೊಳುವಾರಿನ ಲಿನೆಟ್ ವೃತ್ತದಿಂದ ಮುಕ್ರಂಪಾಡಿವರೆಗಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ವಿಧಿಸಿ ಪುತ್ತೂರು ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮಂಗಳೂರಿನಿಂದ ಮಡಿಕೇರಿ ಹೋಗುವ ವಾಹನಗಳು ಲಿನೆಟ್ ವೃತ್ತ- ಬೊಳುವಾರು ವೃತ್ತ-ದರ್ಬೆ- ಪುರುಷರಕಟ್ಟೆ-ಪಂಜಳ ಮಾರ್ಗವಾಗಿ ಪರ್ಪುಂಜ ತಲುಪಬೇಕೆಂದು ಸೂಚಿಸಲಾಗಿದೆ. ಮಡಿಕೇರಿ ಕಡೆಯಿಂದ ಬರುವ ವಾಹನಗಳು ಪರ್ಪುಂಜ ಮೂಲಕ ಪಂಜಳ-ಪುರುಷರಕಟ್ಟೆ-ದರ್ಬೆ-ಬೊಳುವಾರು ಜಂಕ್ಷನ್ ಮೂಲಕ ಲಿನೆಟ್ ವೃತ್ತ ತಲುಪಬೇಕೆಂದು ಸೂಚಿಸಲಾಗಿದೆ.
ಭಾರತ ಮಾತೆಯ ಎರಡನೇ ಮಂದಿರ
ಈಶ್ವರಮಂಗಲದಲ್ಲಿ ನಿರ್ಮಾಣಗೊಂಡಿರುವ ಭಾರತ ಮಾತೆಯ ಮಂದಿರವು ಭಾರತದ ಎರಡನೇಯ ಭಾರತ ಮಾತೆಯ ಮಂದಿರ ಎನ್ನುವುದು ವಿಶೇಷ. ಈಗಾಗಲೇ ಕನ್ಯಾಕುಮಾರಿಯಲ್ಲಿ ಭಾರತ ಮಾತಾ ಮಂದಿರವಿದೆ. ಧರ್ಮಶ್ರೀ ಪ್ರತಿಷ್ಠಾನವು ಈ ಮಂದಿರ ನಿರ್ಮಿಸಿದೆ. ಭಾರತ ಮಾತೆಯ ವಿಗ್ರಹ, ಜೈ ಜವಾನ್- ಜೈ ಕಿಸಾನ್ ಘೋಷಣೆಗೆ ಪೂರಕವಾಗಿ ಯೋಧ ಹಾಗೂ ರೈತನ ಪ್ರತಿಮೆ, ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ಚಳವಳಿ ಮಾಡಿದ ವೀರರ ಚಿತ್ರಗಳು ಇಲ್ಲಿವೆ. ಮಂದಿರದ ಹೊರಗೆ ತ್ರಿವರ್ಣಧ್ವಜವಿಡಿದ ಯೋಧನ ಪ್ರತಿಮೆಯಿದೆ. ಇಲ್ಲಿಗೆ ಆಗಮಿಸಿದವರಲ್ಲಿ ದೇಶಭಕ್ತಿ, ಭಾರತದ ಕುರಿತು ಜಾಗೃತಿ ಉಂಟಾಗುವಂತೆ ಈ ಭಾರತ ಮಾತಾ ಮಂದಿರ ನಿರ್ಮಿಸಲಾಗಿದೆ.