ರೈತ ಯುವಕರು, ವಿಕಲಚೇತನರಿಗೆ ಕಂಕಣ ಭಾಗ್ಯ; ‘ಜೀವನ ಸಂಗಮ’ಕ್ಕೆ ಮುನ್ನುಡಿ ಬರೆದ ಉತ್ತರ ಕನ್ನಡ ಜಿಲ್ಲಾಡಳಿತ
Uttara Kannada: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು, ರೈತ ಯುವಕರು ಮತ್ತು ವಿಕಲ ಚೇತನರ ವಿವಾಹಕ್ಕೆ ಹೊಸ ಮುನ್ನುಡಿ ಬರೆದಿದೆ. (ವರದಿ: ಹರೀಶ ಮಾಂಬಾಡಿ)

ಕಾರವಾರ: ಇತ್ತೀಚೆಗೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ರೈತ ಯುವಕರೊಬ್ಬರು ತಮಗೆ ಮದುವೆಯಾಗಲು ಕನ್ಯೆ ಹುಡುಕಿಕೊಡುವಂತೆ ಅರ್ಜಿ ಸಲ್ಲಿಸಿರುವ ವಿಷಯ ವ್ಯಾಪಕ ಸುದ್ದಿಯಾಗಿತ್ತು. ಇದು ರೈತ ಯುವಕರು ವಿವಾಹವಾಗಲು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಾಜದ ಕಣ್ತರೆದಿತ್ತು. ಇದಕ್ಕೆ ಪರಿಹಾರವೆಂಬಂತೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲಾಡಳಿತದ ಮೂಲಕ ರೈತ ಯುವಕರು ಮಾತ್ರವಲ್ಲದೇ ವಿಕಲಚೇತನರು, ಹೆಚ್ಐವಿ ಪೀಡಿತರಿಗೆ ವಿವಾಹವಾಗಲು ಸೂಕ್ತ ವೇದಿಕೆ ಒದಗಿಸುವ ವಿನೂತನ ಪ್ರಯತ್ನಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಮುನ್ನುಡಿ ಬರೆದಿದೆ. ಉತ್ತರ ಕನ್ನಡದ ಹಿಂದಿನ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧಿಕಾರದಲ್ಲಿದ್ದ ವೇಳೆ ಈ ವೆಬ್ ಅಸ್ತಿತ್ವಕ್ಕೆ ತರಲಾಗಿತ್ತು.
ಉತ್ತರ ಕನ್ನಡ ಜಿಲ್ಲಾಡಳಿತದ ವೆಬ್ ಸೈಟ್ https://uttarakannada.nic.in/ನಲ್ಲಿ ಜೀವನ ಸಂಗಮ ಎಂಬ ಪೋರ್ಟಲ್ ಆರಂಭಿಸಿರುವ ಜಿಲ್ಲಾಡಳಿತ, ಜಿಲ್ಲೆಯಲ್ಲಿನ ಯುವ ರೈತರು, ವಿಕಲಚೇತನರು, ವಿಧವೆಯರಿಗೆ ಸೂಕ್ತ ಸಂಗಾತಿ ಆಯ್ಕೆಯನ್ನು ಪರಿಚಯಿಸಲು ಹಾಗೂ ಹೆಚ್ಐವಿ ಪೀಡಿತ ವ್ಯಕ್ತಿಗಳಿಗೆ ಅದೇ ಸಮುದಾಯದ ವ್ಯಕ್ತಿಯ ನಡುವೆ ವೈವಾಹಿಕ ಸಂಬಂಧಗಳನ್ನು ಬೆಸೆದು, ಅವರು ವಿವಾಹವಾಗಲು ವೇದಿಕೆ ಒದಗಿಸಲಿದೆ. ಈ ಮೂಲಕ ಅವರ ಬದುಕಿನಲ್ಲಿ ಸುಗಮ ರೀತಿಯಲ್ಲಿ ಅರ್ಥಪೂರ್ಣ ಸಂಬಂಧಗಳು ಏರ್ಪಡುವಂತೆ ಮಾಡಲು ಪ್ರಯತ್ನಿಸಿದೆ.
ಸುರಕ್ಷಿತ, ಗೌರವಾರ್ಹ ವಾತಾವರಣ ಖಾತ್ರಿ
ಈ ಜೀವನ ಸಂಗಮ ಪೋರ್ಟಲ್ಗೆ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ಬಳಕೆದಾರರಿಗೆ ಅವರ ವಿವಾಹ ಸಂಬಂಧಗಳಲ್ಲಿ ಸುರಕ್ಷಿತ ಮತ್ತು ಗೌರವಾನ್ವಿತ ವಾತಾವರಣವನ್ನು ಖಾತ್ರಿಪಡಿಸುವ ಜೊತೆಗೆ, ವ್ಯಕ್ತಿಯ ಹಿನ್ನೆಲೆಯನ್ನು ಲೆಕ್ಕಿಸದೆ, ಸಂಬಂಧಗಳನ್ನು ಬಯಸುವ ವ್ಯಕ್ತಿಗಳಿಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.
ಈ ಪೋರ್ಟಲ್ ಸೇವೆ ಪಡೆಯಲು ಬಳಕೆದಾರರು ಯಾವುದೇ ನೋಂದಣಿ ಶುಲ್ಕ ಅಥವಾ ಇತರೇ ಯಾವುದೇ ಶುಲ್ಕಗಳಿಲ್ಲದೆ ನೋಂದಾಯಿಸಿಕೊಳ್ಳಬಹುದು. ಇದು ಆರ್ಥಿಕವಾಗಿ ಹಿಂದುಳಿದ ವರ್ಗದವರನ್ನೂ ಒಳಗೊಂಡಂತೆ ಎಲ್ಲಾ ವ್ಯಕ್ತಿಗಳಿಗೂ ನೆರವು ಒದಗಿಸಲಿದ್ದು, ಶಿಕ್ಷಣದ ಕೊರತೆ ಮತ್ತು ಬೇರೆ ಯಾವುದೇ ಉದ್ಯೋಗವಿಲ್ಲದ ಕಾರಣ ಸೂಕ್ತ ಜೀವನ ಸಂಗಾತಿಯನ್ನು ಪಡೆಯದ ರೈತ ಯುವಕರಿಗೆ ಜೀವನ ಸಂಗಾತಿಯನ್ನು ಪಡೆಯಲು ಈ ಪೋರ್ಟಲ್ ಉತ್ತಮ ವೇದಿಕೆಯನ್ನು ಒದಗಿಸುತ್ತದೆ.
ಗೌಪ್ಯತೆ ಕಾಪಾಡುವುದು ಹಾಗೂ ನೈಜತೆ ಖಚಿತಪಡಿಸಿಕೊಂಡ ಬಳಿಕವೇ ಕ್ರಮ
ಈ ಪೋರ್ಟಲ್ ಎಲ್ಲಾ ಬಳಕೆದಾರರಿಗೆ ಅತ್ಯಂತ ಸುರಕ್ಷಿತ ಪೋರ್ಟಲ್ ಆಗಿದೆ. ಹೊಂದಾಣಿಕೆಯ ಪ್ರಕ್ರಿಯೆಯಲ್ಲಿ ಅವರ ಗೌಪ್ಯತೆ ಮತ್ತು ಘನತೆಗೆ ಆದ್ಯತೆ ನೀಡಲಾಗಿದೆ. ವಿವಾಹವಾಗಲು ಸಲ್ಲಿಸುವ ಅರ್ಜಿಗಳನ್ನು ಮತ್ತು ಪ್ರೊಫೈಲ್ಗಳನ್ನು ವ್ಯಕ್ತಿಯು ವಾಸವಾಗಿರುವ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಸೇರಿದಂತೆ ಉತ್ತರ ಕನ್ನಡ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳು ಪರಿಶೀಲಿಸಲಿದ್ದು, ಅರ್ಜಿದಾರರ ಪ್ರೊಫೈಲ್ಗಳಲ್ಲಿನ ನೈಜತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸುತ್ತಾರೆ.
ವಿವಾಹವಾಗಲು ಅರ್ಜಿ ಸಲ್ಲಿಸುವ ವ್ಯಕ್ತಿಯ ಹಿನ್ನಲೆ, ವಾಸಸ್ಥಳ, ಉದ್ಯೋಗ, ಕೌಟುಂಬಿಕ ಪರಿಸ್ಥಿತಿ, ಆತನ ಆದಾಯ, ಮಾನಸಿಕ ಮತ್ತು ದೈಹಿಕ ಆರೋಗ್ಯ ಸ್ಥಿತಿಗತಿ ಬಗ್ಗೆ ಜಿಲ್ಲೆಯ ವಿವಿಧ ಅಧಿಕಾರಿಗಳು ಖುದ್ದು ಸ್ಥಳ ಭೇಟಿ ಪರಿಶೀಲನೆ ನಡೆಸಲಿದ್ದು, ಅರ್ಹ ವ್ಯಕ್ತಿಗಳಿಗೆ ಮಾತ್ರ ಹೊಂದಾಣಿಕೆಯ ಮುಂದಿನ ಪ್ರಕ್ರಿಯೆಯಲ್ಲಿ ಮುಂದುವರೆಯಲು ಅವಕಾಶ ನೀಡಲಾಗುವುದು.
ಈ ಸೇವೆಯು ಎಲ್ಲಾ ಧರ್ಮಗಳ ವ್ಯಕ್ತಿಗಳಿಗೂ ಮುಕ್ತವಾಗಿದ್ದು, ಸಾರ್ವಜನಿಕರು ತಮ್ಮ ಧಾರ್ಮಿಕ ಅದ್ಯತೆಗಳನ್ನು ಮ್ಯಾಚ್ಮೇಕಿಂಗ್ಗೆ ನಿರ್ದಿಷ್ಟಪಡಿಸಲು ಅವಕಾಶ ನೀಡುವುದರ ಜೊತೆಗೆ, ತಮ್ಮದೇ ಆದ ಜಾತಿಯೊಳಗೆ ಹೊಂದಾಣಿಕೆಗಳನ್ನು ಆಯ್ಕೆ ಮಾಡಬಹುದು ಅಥವಾ ಅಂತರ-ಜಾತಿ ಆಯ್ಕೆಗಳನ್ನು ಆಯ್ಕೆ ಮಾಡಿಕೊಂಡು, ವೈಯಕ್ತಿಕ ಆದ್ಯತೆಗಳ ಆಧಾರದ ಮೇಲೆ ತಮಗೆ ಇಚ್ಚಿಸುವ ಹೊಂದಾಣಿಕೆಯನ್ನು ಆಯ್ಕೆ ಮಾಡಬಹುದು.
ಈ ಪೋರ್ಟಲ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಸಂಪೂರ್ಣ ಬದ್ಧವಾಗಿದ್ದು, ಎಲ್ಲಾ ಡೇಟಾವನ್ನು ಗೌಪ್ಯವಾಗಿ ಇರಿಸಿ, ವಿವಾಹ ಹೊಂದಾಣಿಕೆಯ ಉದ್ದೇಶಕ್ಕೆ ಮಾತ್ರ ಮಾಹಿತಿಯನ್ನು ಬಳಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಅರ್ಹ ಯುವಕ ಯುವತಿಯರಿಗೆ ಮಾತ್ರ ಈ ವಿವಾಹ ಹೊಂದಾಣಿಕೆಗೆ ವೇದಿಕೆ ಒದಗಿಸಲಿದ್ದು, ಜಿಲ್ಲೆಯ ನಿವಾಸಿಗಳಿಗೆ ಮಾತ್ರ ಇದರ ನೆರವು ದೊರೆಯಲಿದೆ.
ಜಿಲ್ಲಾಧಿಕಾರಿ ಹೇಳಿದ್ದೇನು?
ಜಿಲ್ಲೆಯಲ್ಲಿ ಸೂಕ್ತ ಸಂಗಾತಿ ದೊರೆಯದೇ ಒಂಟಿಯಾಗಿ ಕೊರಗುತ್ತಿರುವ ಯುವ ರೈತರು, ವಿಕಲಚೇತನರು, ಹೆಚ್ಐವಿ ಪೀಡಿತರಿಗೆ ಸೂಕ್ತ ಜೀವನ ಸಂಗಾತಿಯನ್ನು ಒದಗಿಸುವ ಉದ್ದೇಶದಿಂದ ಜಿಲ್ಲಾಡಳಿತದಿಂದ ಜೀವನ ಸಂಗಮ ಪೋರ್ಟ್ಲ್ ತೆರೆಯಲಾಗಿದೆ. ಇಲ್ಲಿ ಅರ್ಜಿ ಸಲ್ಲಿಸುವವರಿಗೆ ಸೂಕ್ತ ಸಂಗಾತಿ ಆಯ್ಕೆ ಮಾಡಿಕೊಡಲಾಗುವುದು. ಅಂತರ್ಜಾತಿ ವಿವಾಹವಾಗುವವರಿಗೆ ಮತ್ತು ವಿಕಲಚೇತನರನ್ನು ವಿವಾಹವಾಗುವವರಿಗೆ ಸರ್ಕಾರದಿಂದ ದೊರೆಯುವ ಪ್ರೋತ್ಸಾಹ ಧನ ಸೇರಿದಂತೆ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು. 10 ಕ್ಕಿಂತ ಹೆಚ್ಚು ಜೋಡಿಗಳು ಒಪ್ಪಿಗೆ ನೀಡಿದಲ್ಲಿ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ಸಾಮೂಹಿಕ ವಿವಾಹ ಏರ್ಪಡಿಸುವ ಚಿಂತನೆ ಇದೆ. ಜಿಲ್ಲೆಯ ಅನಾಥಾಶ್ರಮಗಳಲ್ಲಿನ ಯುವತಿಯರಿಗೂ ಸಹ ಈ ಪೋರ್ಟಲ್ ಮೂಲಕ ಸೂಕ್ತ ಜೀವನ ಸಂಗಾತಿ ಒದಗಿಸಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ.
(ವರದಿ: ಹರೀಶ ಮಾಂಬಾಡಿ)
ಇದನ್ನೂ ಓದಿ: Mangalore Fish Mela: ಮಂಗಳೂರಿನ ಪಿಲಿಕುಳದಲ್ಲಿ ಜುಲೈ 21ರಂದು ಮತ್ಸ್ಯೋತ್ಸವ, ಮೀನು ಮಾರಾಟ,ಏನುಂಟು ವಿಶೇಷ
