Uttara Kannada News: ಮಲೆನಾಡಿನಲ್ಲಿ ಅಪರೂಪದ ಕಲ್ಲಂಗಡಿ ಕೃಷಿ; ಹಳದಿ ಬಣ್ಣದ ಥಾಯ್ಲೆಂಡ್ ಕಲ್ಲಂಗಡಿ ಬೆಳೆದು ಸೈ ಎನ್ನಿಸಿಕೊಂಡ ದಂಪತಿ
Thailand Watermelon: ಉತ್ತರ ಕನ್ನಡದ ಜಿಲ್ಲೆಯ ಯಲ್ಲಾಪುರದಲ್ಲಿ ಅಪರೂಪದ ಥಾಯ್ಲೆಂಡ್ ತಳಿಯ ಕಲ್ಲಂಗಡಿ ಹಣ್ಣನ್ನು ಬೆಳೆಯುವ ಮೂಲಕ ಸೈ ಎನ್ನಿಸಿಕೊಂಡಿದ್ದಾರೆ ಮಹಾಬಲೇಶ್ವರ ಭಟ್ ಮತ್ತು ಸೌಮ್ಯಾ ಭಟ್ ದಂಪತಿ. ಬೆಂಗಳೂರಿನ ಉದ್ಯೋಗ ತ್ಯಜಿಸಿ, ಹಳ್ಳಿಯಲ್ಲಿ ನೆಲೆಸಿ ಕೃಷಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಈ ದಂಪತಿ.
ಉತ್ತರ ಕನ್ನಡ: ಸಾಧಾರಣವಾಗಿ ಕರಾವಳಿ ಪ್ರದೇಶ, ಬಯಲುಸೀಮೆ ಮತ್ತು ಹಳೆ ಮೈಸೂರು ಭಾಗದಲ್ಲಿ ಕಲ್ಲಂಗಡಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಮಲೆನಾಡಿನ ಭಾಗದಲ್ಲಿ ಕಲ್ಲಂಗಡಿ ಬೆಳೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಿಲ್ಲ.
ಆದರೆ ಅಚ್ಚ ಮಲೆನಾಡಿನ ಪ್ರದೇಶವಾದ ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮದ ಬೊಕ್ಕಳಗುಡ್ಡೆಯ ಮಹಾಬಲೇಶ್ವರ ಭಟ್ ಮತ್ತು ಸೌಮ್ಯಾ ಭಟ್ ದಂಪತಿ ವಿಶೇಷವಾದ ಥಾಯ್ಲೆಂಡ್ ತಳಿಯ ಕಲ್ಲಂಗಡಿ ಹಣ್ಣನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಈ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಕೆಲವು ವರ್ಷಗಳ ಹಿಂದೆ ಊರಿಗೆ ಮರಳಿ ಕೃಷಿ ಕಾಯಕ ಕೈಗೊಂಡು ಸೈ ಎನ್ನಿಸಿಕೊಂಡಿದ್ದಾರೆ.
ಇಲ್ಲಿದೆ ಹಳದಿ ಕಲ್ಲಂಗಡಿ
ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಹಸಿರು ಬಣ್ಣದ ಹೊರಮೈ , ಕೆಂಪು ತಿರುಳು ಹೊಂದಿರುವ ಕಲ್ಲಂಗಡಿ ಹಣ್ಣು ನಮಗೆ ಕಾಣಸಿಗುತ್ತದೆ. ಆದರೆ ಬೊಕ್ಕಳಗುಡ್ಡೆಯ ಮಹಾಬಲೇಶ್ವರ ಭಟ್ಟರು ವಿವಿಧ ಬಣ್ಣಗಳ ಕಲ್ಲಂಗಡಿ ಹಣ್ಣುಗನ್ನು ಬೆಳೆದು ಗಮನ ಸೆಳೆದಿದ್ದಾರೆ.
ಇವರು ಬೆಳೆದ ಥಾಯ್ಲೆಂಡ್ ತಳಿಯ ಕಲ್ಲಂಗಡಿ ಹಣ್ಣು ಹಲವು ವಿಶೇಷತೆಗಳನ್ನು ಹೊಂದಿದೆ. ಆಕರ್ಷಕ ಹಳದಿ ಬಣ್ಣದ ಕಲ್ಲಂಗಡಿ ಹಣ್ಣುಗಳನ್ನು ಇವರು ಬೆಳೆದಿದ್ದಾರೆ. ತಿನ್ನಲು ರುಚಿಕರವಾದ ಈ ಹಣ್ಣು ಭಾರೀ ಬೇಡಿಕೆಯನ್ನೂ ಹೊಂದಿದ್ದು, ಹೆಚ್ಚು ದಿನ ಬಾಳಿಕೆ ಬರುತ್ತದೆ. ಎರಡು ಎಕರೆ ತಮ್ಮ ಜಮೀನಿನಲ್ಲಿ ಇವರು ಬೇಸಿಗೆಯ ಸಂದರ್ಭದಲ್ಲಿ ಎರಡು ಹಂತದಲ್ಲಿ ಸುಮಾರು 25 ಟನ್ ನಷ್ಟು ಕಲ್ಲಂಗಡಿ ಬೆಳೆಯುತ್ತಾರೆ. ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವ ಇವರು ಬೆಳೆಗೆ ಜೀವಾಮೃತ, ಸೆಗಣಿ ಮತ್ತು ಕೋಳಿ ಗೊಬ್ಬರ ಬಳಸುತ್ತಾರೆ. ಹಸಿರು ಬಣ್ಣದ ಹಳದಿ ತಿರುಳಿನ ಕಲ್ಲಂಗಡಿ ಹಣ್ಣುಗಳನ್ನೂ ಬೆಳೆಯುತ್ತಾರೆ.
ಮನೆಯಲ್ಲೇ ಮಾರ್ಕೆಟಿಂಗ್
ಮಹಾಬಲೇಶ್ವರ ಭಟ್ಟರು ಬೆಳೆದ ಥಾಯ್ಲೆಂಡ್ ಕಲ್ಲಂಗಡಿ ಹಣ್ಣುಗಳನ್ನು ಮನೆಯಲ್ಲೇ ಮಾರಾಟ ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಬೇಡಿಕೆಗೆ ತಕ್ಕಂತೆ ಗೋವಾ,ಕೇರಳ ರಾಜ್ಯಗಳಿಗೂ ಕಳಿಸುತ್ತಾರೆ. ಬೇಡಿಕೆ ಬಂದಾಗ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಾರೆ. ಇವರ ಕಲ್ಲಂಗಡಿ ಕೃಷಿಗೆ ಪತ್ನಿ ಸೌಮ್ಯಾ ಸಾಥ್ ನೀಡುತ್ತಿದ್ದು, ನೆಲ ಹದ ಗೊಳಿಸುವ ಕಾರ್ಯದಿಂದ ಹಣ್ಣು ಕೊಯ್ಲಿನ ವರೆಗೆ ಇವರೇ ಕೆಲಸ ನಿರ್ವಹಿಸುತ್ತಾರೆ. ನೀರಾವರಿಗಾಗಿ ಆಧುನಿಕ ಪದ್ಧತಿಯ ಡ್ರಿಪ್ ಮತ್ತು ಮಲ್ಚಿಂಗ್ ವ್ಯವಸ್ಥೆ ಮಾಡಿದ್ದು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗಿದೆ.
ವಿಶೇಷ ವರದಿ: ಜಿ.ಎನ್.ಭಟ್ ತಟ್ಟಿಗದ್ದೆ ಯಲ್ಲಾಪುರ
ಇದನ್ನೂ ಓದಿ
Mangalore Jackfruit Mela: ಮಂಗಳೂರಿನಲ್ಲಿ ಎರಡು ದಿನಗಳ ಹಲಸು ಮೇಳ; ಬಗೆ ಬಗೆಯ ಹಲಸಿನ ಖಾದ್ಯಗಳಿಗಾಗಿ ಜನ ಕಾತುರ
ಮಳೆಗಾಲ ಬಂದಾಗ ಹಲಸಿನ ಘಮಘಮ ಇನ್ನಷ್ಟು ಜಾಸ್ತಿಯಾಗುತ್ತದೆ. ಮುಂಗಾರು ಆರಂಭದ ಹೊತ್ತಿನಲ್ಲೇ ಮಂಗಳೂರಲ್ಲಿ ಎರಡು ಹಲಸಿನ ಮೇಳಗಳು ಆಯೋಜನೆಯಾಗಿವೆ. ಇವುಗಳ ವಿವರ ಇಲ್ಲಿದೆ.
ಮಂಗಳೂರು: ಕರಾವಳಿ, ಮಲೆನಾಡುಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಸಂದರ್ಭ ಮನೆಯಲ್ಲಿರುವ ಸಂಪನ್ಮೂಲಗಳೇ ಆಹಾರ. ಸ್ಟಾಕ್ ಮಾಡಿಟ್ಟುಕೊಂಡ ಹಲಸಿನ ಖಾದ್ಯಗಳೆಲ್ಲವೂ ಹೊರಗೆ ಬರುತ್ತದೆ.