Vijayanagar News: ಎಸ್ಎಸ್ಎಲ್ಸಿ ಫಲಿತಾಂಶ ಕುಸಿತ, ವಿಜಯನಗರ ಡಿಡಿಪಿಐ, ಬಿಇಒ ಸಸ್ಪೆಂಡ್
SSLC Results effect ವಿಜಯನಗರ ಜಿಲ್ಲೆ ಎಸ್ಎಸ್ಎಲ್ಸಿ ಫಲಿತಾಂಶಕ್ಕೆ ಆಕ್ರೋಶ ಹೊರ ಹಾಕಿದ ಸಿಎಂ ಸಿದ್ದರಾಮಯ್ಯ ಡಿಡಿಪಿಐ ಹಾಗೂ ಬಿಇಒ ಅಮಾನತಿಗೆ ಸೂಚಿಸಿದರು.

ವಿಜಯನಗರ: ಎಸ್ಎಸ್ಎಲ್ಸಿ ಫಲಿತಾಂಶ ಕುಸಿತದ ಜತೆಗೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಶೈಕ್ಷಣಿಕವಾಗಿ ಜಿಲ್ಲೆ 10 ನೇ ಸ್ಥಾನದಿಂದ 27 ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಸಿಕ್ಕಾಪಟ್ಟೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ ಅವರು ವಿಜಯನಗರ ಜಿಲ್ಲೆ ಡಿಡಿಪಿಐ ಯುವರಾಜನಾಯ್ಕ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಯನ್ನು ಅಮಾನತುಪಡಿಸುವಂತೆ ಸೂಚನೆ ನೀಡಿದರು. ವಿಜಯನಗರದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದಾಗ ಬಂದ ಉತ್ತರದಿಂದ ಕೆರಳಿದ ಸಿಎಂ ಸಭೆ ಮಧ್ಯದಲ್ಲೇ ದೂರವಾಣಿ ಮೂಲಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ಕುಮಾರ್ ಸಿಂಗ್ ಅವರನ್ನು ಸಂಪರ್ಕಿಸಿ ಅಮಾನತ್ತಿಗೆ ಆದೇಶಿಸಿದರು.
ಎಸ್ಎಸ್ಎಸ್ಸಿ ಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಿಲಿತಾಂಶ ಪ್ರಮಾಣ ಕುಸಿದಿರುವುದಕ್ಕೆನೀವೇ ಕಾರಣ. ನಿಮ್ಮ ಬಿಇಒ ಗಳು, ಶಿಕ್ಷಕರ ಪ್ರಯತ್ನ ಏನು? ಯಾವ ದಿಕ್ಕಿನಲ್ಲಿದೆ? ಈ ಕಳಪಡೆ ಸಾಧನೆಗೆ ನಿಮ್ಮ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ನೀವೇ ಹೇಳಿ ಎಂದು ಸಿಎಂ ಡಿಡಿಪಿಐ ಗೆ ಪ್ರಶ್ನಿಸಿದರು. ಈ ಬಾರಿ ಶೇ ರಷ್ಟು20 ಗ್ರೇಸ್ ಅಂಕಗಳನ್ನು ಕೊಟ್ಟರೂ ಈ ಮಟ್ಟಕ್ಕೆ ಕುಸಿದಿದ್ದೀರಿ ಎಂದರೆ ನಿಮ್ಮ ಒಟ್ಟು ಸಾಧನೆ ಬಗ್ಗೆ ನಿಮಗೆ ಸಮಾಧಾನ ಇದೆಯೇ.ಇದಕ್ಕೆ ನಿಮ್ಮನ್ನು ಏಕೆ ಹೊಣೆ ಮಾಡಬಾರದು. 10 ರಿಂದ 27 ನೇ ಸ್ಥಾನಕ್ಕೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಜಾರಿರುವಾಗ ನಿಮಗೆ ನಾಚಿಕೆ ಆಗಬೇಕಲ್ವಾ ಎಂದು ಸಿಇಒ ಅವರನ್ನು ಪ್ರಶ್ನಿಸಿದರು.
ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಅವರಿಗೆ ಸಭೆ ಮಧ್ಯದಲ್ಲೇ ದೂರವಾಣಿ ಮೂಲಕ ಸಂಪರ್ಕಿಸಿದ ಸಿಎಂ, ಜಿಲ್ಲೆಯ ಕಳಪೆ ಸಾಧನೆ ಬಗ್ಗೆ ಪ್ರಶ್ನಿಸಿ, ಡಿಡಿಪಿಐ ಮತ್ತು ಬಿಇಒ ಇಬ್ಬರನ್ನೂ ತಕ್ಷಣದಿಂದ ಅಮಾನತ್ತಿನಲ್ಲಿ ಇಡಬೇಕು. ಸಿಇಒ ಅವರಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಿ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಬಗ್ಗೆ ಗಂಭೀರವಾಗಿ ಯೋಜನೆಗಳನ್ನು ರೂಪಿಸುವಂತೆ ಸೂಚಿಸಿದರು. ಡಿಡಿಪಿಐ ಅವರನ್ನು ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು ಸಭೆಯಿಂದ ಹೊರಗೆ ನಡೆಯುವಂತೆ ಸೂಚಿಸಿದರು.
ಈ ಮಟ್ಟದ ಫಲಿತಾಂಶದ ಕಾರಣಕ್ಕಾಗಿ ಸಂಬಂಧಪಟ್ಟವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ಪ್ರತಿ ತಿಂಗಳ ಸಭೆಗಳ ಸಭೆಗಳಲ್ಲಿ ಏನು ಸೂಚನೆ ನೀಡಿದ್ದೀರಿ ಎಂದು ಸಿಇಒ ಮತ್ತು ಜಿಲ್ಲಾಧಿಕಾರಿಗೆ ಪ್ರಶ್ನಿಸಿದರು.
ಶಿಕ್ಷಣ ವ್ಯವಸ್ಥೆ ಅತ್ಯಂತ ಕೆಟ್ಟಿದೆ. ಇದನ್ನು ಸರಿಯಾಗಿ ಸುಧಾರಿಸದಿದ್ದರೆ ಸಮಾಜಕ್ಕೆ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ. ಮಕ್ಕಳ ಭವಿಷ್ಯ ಏನಾಗಬೇಕು? ಇದರಲ್ಲಿ ಮಕ್ಕಳ ತಪ್ಪಿಲ್ಲ. ಡಿಡಿಪಿಐ, ಬಿಇಒ ಮತ್ತು ಶಿಕ್ಷಕ ಸಮೂಹ ಇದರ ಹೊಣೆ ಹೊರಬೇಕಲ್ಲವೇ ಎಂದು ಸಿಎಂ ಹೇಳಿದರು.
ಹಾಸ್ಟೆಲ್ಗಳಿಗೆ ಹೋಗಿ
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಿಗೆ ಎಷ್ಟು ಬಾರಿ ಭೇಟಿ ನೀಡಿದ್ದೀರಿ? ಶೈಕ್ಷಣಿಕ ವಾತಾವರಣ ಮತ್ತು ಊಟ, ವ್ಯವಸ್ಥೆಯ ಗುಣಮಟ್ಟವನ್ನು ಎಷ್ಟು ಬಾರಿ ಪರಿಶೀಲಿಸಿದ್ದೀರಿ? ರಾಜ್ಯ ಸರಾಸರಿಗೆ ಹೋಲಿಸಿದರೆ ಜಿಲ್ಲೆಯ ಹಾಸ್ಟೆಲ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕಡಿಮೆ ಆಗಿದ್ದು ಏಕೆ ? ಯಾವ ವಿಷಯಗಳಲ್ಲಿ ದುರ್ಬಲ ಇದೆ ಆ ವಿಷಯಗಳಲ್ಲಿ ಪ್ರತ್ಯೇಕ ಕೋಚಿಂಗ್ ವ್ಯವಸ್ಥೆ ಮಾಡಿದ್ದೀರಿ? ಎಷ್ಟು ಮಂದಿ ವಿದ್ಯಾರ್ಥಿಗಳು ರಾತ್ರಿ ಹಾಸ್ಟೆಲ್ಗಳಲ್ಲೇ ಉಳಿಯುತ್ತಾರೆ? ಎಂದು ಪ್ರಶ್ನಿಸಿ ಯಾವ ಯಾವ ಅಧಿಕಾರಿ ಯಾವ ಯಾವ ಹಾಸ್ಟೆಲ್ ಗಳಲ್ಲಿ ಭೇಟಿ ನೀಡಿದ್ದೀರಿ ? ಭೇಟಿ ನೀಡಿದ್ದರೂ ಇನ್ನೂ ಸಮಸ್ಯೆಗಳು ಏಕೆ ಉಳಿದಿವೆ ಎಂದು ಪ್ರಶ್ನಿಸಿದರು.
ಎಸ್ಟಿ ಹಾಸ್ಟೆಲ್, ಕ್ರೈಸ್ ಹಾಸ್ಟೆಲ್ಗಳಲ್ಲಿ ಅಗತ್ಯ ನಾಗರಿಕ ಸೌಲತ್ತುಗಳನ್ನು ಒದಗಿಸದ ಕಾರಣಕ್ಕೆ ಸಮಾಜ ಕಲ್ಯಾಣ ಇಲಾಖೆಯ ಡಿಡಿ ಮಂಜುನಾಥ್ ಅವರಿಗೆ ಲೋಕಾಯುಕ್ತ ದಿಂದ ನೋಟಿಸ್ ನೀಡಿರುವ ಪ್ರಕರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಈ ಲೋಪಕ್ಕೆ ರಾಜ್ಯ ಮಟ್ಟದಲ್ಲೇ ಟೆಂಡರ್ ನೀಡುವುದರಿಂದ ಈ ಸಮಸ್ಯೆ ಆಗುತ್ತಿದೆ, ಜಿಲ್ಲೆಗಳಿಗೆ ಸರಬರಾಜು ಆಗುವಾಗ ಲೇಟಾಗುತ್ತಿದೆ ಎನ್ನುವ ಉತ್ತರ ಅಧಿಕಾರಿಗಳಿಂದ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಜಿಲ್ಲಾ ಮಟ್ಟದಲ್ಲೇ ಟೆಂಡರ್ ಕರೆದು ಸರಬರಾಜು ಮಾಡಲು ಅವಕಾಶ ಮಾಡಿಕೊಡುವ ಬಗ್ಗೆ ಪರಿಶೀಲನೆ ನಡೆಸಲು ಸಿಎಂ ಸೂಚಿಸಿದರು.
