Vijayapura News: ವರವಾಗದ ಕೃಷ್ಣ ಭಾಗ್ಯ!; ಕೇವಲ 2 ರೂಪಾಯಿಗೆ ಮಾರಾಟವಾಗ್ತಿದ್ದ ಸಸಿಗಳೀಗ 25 ರೂಪಾಯಿ, ಸಸಿಗೂ ತಟ್ಟಿತು ಬೆಲೆ ಏರಿಕೆ ಬಿಸಿ
ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ರೈತರಿಗೆ ಸರ್ಕಾರದ ಕೃಷ್ಣ ಭಾಗ್ಯ ಯೋಜನೆ ಕೈ ಹಿಡಿಯುತ್ತಿಲ್ಲ. ಈ ಮೊದಲು ಕೇವಲ 2 ರೂಪಾಯಿಗೆ ಸಿಗುತ್ತಿದ್ದ ಸಸಿಗಳಿಗೆ ಇದೀಗ ಬರೋಬ್ಬರಿ 25 ರೂ. ನೀಡಬೇಕಾದ ಸ್ಥಿತಿ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
Vijayapura News: ಅರಣ್ಯ ಇಲಾಖೆಯಿಂದ ಅತೀ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದ್ದ ಸಸಿಗಳ ಬೆಲೆ ಹತ್ತಾರು ಪಟ್ಟು ಹೆಚ್ಚಾಗಿದ್ದು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಸರ್ಕಾರದಿಂದ ದೊರಕದ ರಿಯಾಯ್ತಿ, ಉತ್ಪಾದನಾ ವೆಚ್ಚ ಅಧಿಕ ಮೊದಲಾದ ಕಾರಣಗಳಿಂದಾಗಿ ಸಸಿಗಳ ಬೆಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರತಿ ವರ್ಷವೂ ಕೃಷ್ಣ ಭಾಗ್ಯ ಜಲನಿಗಮದ (Krishna Bhagya Jala Nigam Ltd) ಅರಣ್ಯ ಇಲಾಖೆಯ ಸಾರಥ್ಯದಲ್ಲಿ ಅತಿ ಕಡಿಮೆ ಬೆಲೆಗೆ ಸಸಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ರೈತ ಹಾಗೂ ಗ್ರಾಹಕರಿಗೂ ಸಹ ಈ ಕಡಿಮೆ ದರ ಯಾವ ರೀತಿಯ ಹೊರೆಯೂ ಆಗಿರಲಿಲ್ಲ.
ಕೆಬಿಜೆಎನ್ಎಲ್ (KBJNL) ವ್ಯಾಪ್ತಿಯ ಐದು ನರ್ಸರಿಗಳಲ್ಲಿ 10 ಲಕ್ಷ ಸಸಿಗಳನ್ನು ಬೆಳೆಸಿ ರೈತರಿಗೆ ಸಸಿಗಳ ಗಾತ್ರಕ್ಕನುಗುಣವಾಗಿ 1 ರೂ.ನಿಂದ ಅಬ್ಬಬ್ಬಾ ಎಂದರೂ 10 ರೂ.ವರೆಗೆ ಮಾರಾಟ ಮಾಡಲಾಗುತ್ತಿತ್ತು, ಆದರೆ ಈ ಬಾರಿ ಈ ಪ್ರಮಾಣ ಅಧಿಕವಾಗಿದ್ದು, ಎರಡು ಅಥವಾ ಮೂರು ರೂ. ಇದ್ದ ಸಸಿಗಳ ಬೆಲೆ ಗಗನಚುಂಬಿಯಾಗಿ 25 ರೂ. ನಿಂದ 30 ರೂ.ಗೆ ತಲುಪಿದರೆ, ಇನ್ನಷ್ಟೂ ದೊಡ್ಡ ಸಸಿಗಳ ಬೆಲೆ 60 ರೂ.ನಿಂದ 70 ರೂ.ಗಳಿಗೆ ಮಾರಾಟವಾಗುತ್ತಿರುವುದು ಸಸಿ ಖರೀದಿ ಗ್ರಾಹಕರಿಗೆ ಬಿಸಿ ತಟ್ಟಿದಂತಾಗಿದೆ.
ಇದನ್ನೂ ಓದಿ: ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್ ಮುಸುಕಿನ ಗುದ್ದಾಟ; ಇಬ್ಬರ ಪೈಕಿ ಯಾರ ಮುಡಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಭಾಗ್ಯ?
ಸಸಿಗಳ ಉತ್ಪಾದನಾ ವೆಚ್ಚಕ್ಕೆ ಶೇ.80 ರಿಂದ ಶೇ.90 ರವರೆಗೆ ಸರ್ಕಾರ ಮೊದಲು ರಿಯಾಯಿತಿ ನೀಡುತ್ತಿತ್ತು. ಆದರೆ ಈಗ ಶೇ 40 ರಿಂದ ಶೇ 50 ಕ್ಕೆ ಸೀಮಿತಗೊಳಿಸಲಾಗಿದೆ, ಹೀಗಾಗಿ ಉತ್ಪಾದನಾ ವೆಚ್ಚ ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ ಎಂಬ ಮಾತು ಅಧಿಕಾರಿಗಳ ವಲಯದಲ್ಲಿ ಕೇಳಿ ಬರುತ್ತಿದೆ.
ಕೃಷಿ, ತೋಟಗಾರಿಕೆ ಬೆಳೆಗಳ ಸಸಿಗಳ ಕನಿಷ್ಠ ಬೆಲೆ (8*12 ಗಾತ್ರದ) 28 ರೂ ದಿಂದ 35 ರೂಗೆ ನಿಗದಿಯಾಗಲಿದೆ. ಮೊದಲು ಈ ಸಸಿಗಳ ಬೆಲೆ 3 ರೂ ದಿಂದ 5 ರೂ ಇತ್ತು. ಇನ್ನೂ 10*16 ಗಾತ್ರದ ದೊಡ್ಡ ಸಸಿಗಳ ಬೆಲೆ 60 ರಿಂದ 70 ರೂವರೆಗೆ ನಿಗದಿಯಾಗಲಿದೆ. ಕಳೆದ ಬಾರಿ 1 ರೂ ಬೆಲೆ ಹೊಂದಿದ ಅಲಂಕಾರಿಕ ಸಸಿಗಳ ಚಿಕ್ಕ ಗಾತ್ರದ 5*8 ಸಸಿಗಳ ಬೆಲೆ ಈಗ 12 ರೂ ಗೆ ತಲುಪಿದೆ. 6*9 ಗಾತ್ರದ ಸಸಿಗಳ ಬೆಲೆ 15 ರೂ, 10*7 ಗಾತ್ರದ ಬೆಲೆ 30 ರೂ, ವರೆಗೆ ನಿಗದಿಯಾಗುವ ಸಾಧ್ಯತೆ ಇದೆ ಎಂದು ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಇನ್ನೂ ಗ್ರಾಫ್ಟೆಡ್ (ಕಸಿ ಮಾಡಿದ) ಸಸಿಗಳ ಬೆಲೆ ಕನಿಷ್ಠ 45 ರೂ ಗೆ ಏರಿಕೆಯಾಗಲಿದೆ, ಆದರೆ ದರ ನಿಗದಿ ಇನ್ನೂ ಅಂತಿಮಗೊಂಡಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಆಮೆಗತಿಯಲ್ಲಿ ಸಾಗುತ್ತಿದೆ ವೆಲೋಡ್ರೋಮ್, ವಿಜಯಪುರದ ಸೈಕ್ಲಿಸ್ಟ್ಗಳ ಕನಸು ನನಸಾಗುವುದೆಂದು?
ದಶಲಕ್ಷ ಸಸಿಯಿಂದ ಕೇವಲ ಪಂಚಲಕ್ಷ ಸಸಿ
ಕಳೆದ ವರ್ಷ 10 ಲಕ್ಷ ಸಸಿಗಳನ್ನು ಬೆಳೆಸಿದ್ದ ಇಲಾಖೆ ಈ ಬಾರಿ ಪಂಚ ಲಕ್ಷ ಸಸಿಗೆ ಸೀಮಿತಗೊಂಡಿದೆ. ದರ ಏರಿಕೆ ಹಾಗೂ ಸಸಿ ಬೆಳೆಸಲು ಅನುಮತಿ ತಡವಾಗಿ ದೊರೆತ ಕಾರಣದಿಂದಾಗಿ ಈ ಬಾರಿಯ ಸಸಿ ವಿತರಣೆಯ ಗುರಿಯಲ್ಲಿ ಹಿನ್ನೆಡೆಯಾಗಿದೆ. ಸದ್ಯ ಐದು ನರ್ಸರಿಗಳಲ್ಲಿ ಬೆಳೆಸಿರುವ ಸಸಿಗಳ ಗುಣಮಟ್ಟ, ಲೆಕ್ಕ ಸೇರಿದಂತೆ ಪರಿಶೀಲನಾ ಕಾರ್ಯ ನಡೆದಿದೆ. ಮಾರಾಟಕ್ಕೆ ಹಾಗೂ ಹೆಚ್ಚು ರಿಯಾಯಿತಿ ನೀಡುವಂತೆ ಅನುಮತಿ ಕೋರಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲಿಯೇ ದರ ಹಾಗೂ ವಿತರಣೆಯ ದಿನಾಂಕ ನಿಗದಿಗೊಳಿಸಿ ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ ಆರ್.ಎಸ್.ನಾಗಶೆಟ್ಟಿ ಮಾಹಿತಿ ನೀಡಿದರು.
ಗೊಂದಲಕ್ಕೆ ಇತೀಶ್ರೀ.....
ಅವೈಜ್ಞಾನಿಕ ವಿತರಣಾ ಕ್ರಮದಿಂದ ಪ್ರತಿ ವರ್ಷ ಸಸಿಗಳ ಹಂಚಿಕೆ ಗೊಂದಲದ ಗೂಡಾಗುತ್ತದೆ. ಪ್ರತಿ ವರ್ಷ ಹಿಂದಿನ ದಿನ ರಾತ್ರಿಯಿಡಿ ಸರದಿಯಲ್ಲಿ ರೈತರು ಮಲಗಿ ಪಾಳೆ ಹಚ್ಚುತ್ತಾರೆ. ಒಂದು ವಾರಗಳ ಕಾಲ ಆಲಮಟ್ಟಿಯಲ್ಲಿ ಸಸಿಗಳ ದೊಡ್ಡ ಸಂತೆಯೇ ಆಗುತ್ತದೆ. ಗೊಂದಲ, ಗದ್ದಲ, ನಾನಾ ವಾಗ್ವಾದಗಳಿಗೆ ಕಾರಣವಾಗುತ್ತದೆ. ಈ ಗೊಂದಲ ಪರಿಹರಿಸಲು ಈ ಬಾರಿಯಾದರೂ ವ್ಯವಸ್ಥಿತ, ವೈಜ್ಞಾನಿಕ ಹಾಗೂ ಪಾರದರ್ಶಕ ಕ್ರಮ ಅನುಸರಿಸಬೇಕು, ಆನ್ಲೈನ್ ನಲ್ಲಿ ಬುಕ್ಕಿಂಗ್ ಗೆ ಅವಕಾಶ ನೀಡಬೇಕು, ಇಲ್ಲವೇ ವಾರದ ಮೊದಲೇ ಟೋಕನ್ ನೀಡಿ ಈ ಗೊಂದಲ ಬಗೆಹರಿಸಬೇಕು, ಕೆಬಿಜೆಎನ್ಎಲ್ ಹಿರಿಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಒತ್ತಾಸೆ.