Muddebihal Accident: ಮುದ್ದೆಬಿಹಾಳದಲ್ಲಿ ಭೀಕರ ಅಪಘಾತ; ಅತ್ತೆ-ಅಳಿಯ ಸಾವು, ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕ
ಮುದ್ದೇಬಿಹಾಳ ಹೊರವಲಯದಲ್ಲಿ ಎರಡು ಬೈಕ್ಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅತ್ತೆ, ಆಳಿಯ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಮಕ್ಕಳು ಗಂಭೀಕರವಾಗಿ ಗಾಯಗೊಂಡಿದ್ದಾರೆ.
ಮುದ್ದೇಬಿಹಾಳ (ವಿಜಯಪುರ): ಮುದ್ದೇಬಿಹಾಳದ ಹೊರವಲಯದಲ್ಲಿ ಭೀಕರ ಅಪಘಾತ (Muddebihal Accident) ಸಂಭವಿಸಿದೆ. ಭಾರಿ ವಾಹನವೊಂದು ಎರಡು ಬೈಕಗಳಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದ ಚಕ್ರದಡಿ ಸಿಲುಕಿದ ಅತ್ತೆ ಹಾಗೂ ಅಳಿಯ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಇನ್ನೋರ್ವ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುದ್ದೇಬಿಹಾಳ ಪಟ್ಟಣದ ಹೊರವಲಯದ ತಂಗಡಗಿಯಲ್ಲಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಮಹಿಳೆಯ ದೇಹ ಛಿದ್ರವಾಗಿದೆ.
ಮೃತರನ್ನು ಹೆದ್ದಾರಿ ಪಕ್ಕದಲ್ಲೇ ಇರುವ ಮುದ್ನಾಳ ಗ್ರಾಮದ ಶರಣಮ್ಮ ಕಂಬಳಿ (55) ಮತ್ತು ಅಳಿಯ ನಾಗೇಶ ಶಿವಪೂರ (35) ಎಂದು ಗುರ್ತಿಸಲಾಗಿದೆ. ನಾಗೇಶ ಅವರ ಮಕ್ಕಳ ಕೃತಿಕಾ (10) ಮತ್ತು ಭೂಮಿಕಾ (8) ಅವರಿಗೆ ಗಂಭಿರಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡಿರುವ ಇನ್ನೋರ್ವ ಬೈಕ್ ಸವಾರನನ್ನು ಸುಧೀರ ಬೇನಾಳ ಎನ್ನಲಾಗಿದೆ.
ಅತ್ತೆ ಮತ್ತು ಅಳಿಯ ಇಬ್ಬರೂ ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿ ಎದುರು ಇರುವ ಮಿನಿ ಕಾಯಿಪಲ್ಯೆ ಮಾರ್ಕೆಟ್ನಲ್ಲಿ ತರಕಾರಿ ಮಾರುವ ಕೆಲಸ ಮಾಡುತ್ತಿದ್ದು, ರಾತ್ರಿ ದಿನದ ವ್ಯಾಪಾರ ಮುಗಿಸಿಕೊಂಡು ಮಕ್ಕಳ ಸಮೇತ ಊರಿಗೆ ಬೈಕಿನಲ್ಲಿ ಹೋಗುವಾಗ ಈ ದುರಂತ ಸಂಭವಿಸಿದೆ.
ಕೇವಲ ಒಂದು ಕಿಮಿ ಅಂತರ ಕ್ರಮಿಸಿದ್ದರೆ ಇವರು ಸುರಕ್ಷಿತವಾಗಿ ಮನೆ ಸೇರುತ್ತಿದ್ದರು. ಆದರೆ ಜವರಾಯ ಲಾರಿಯ ರೂಪದಲ್ಲಿ ಇವರ ಮೇಲೆರಗಿ ಪ್ರಾಣವನ್ನೇ ಕಸಿದದ್ದೂ ಅಲ್ಲದೆ ಮಕ್ಕಳನ್ನೂ ತಂದೆ ಇಲ್ಲದ ತಬ್ಬಲಿಯನ್ನಾಗಿ ಮಾಡಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಮೃತರ ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ.
ಅಪಘಾತದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ನೇಬಗೇರಿ ಗ್ರಾಮದ ಬಳಿ ಲಾರಿಯನ್ನು ಚಾಲಕನ ಸಮೇತ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.