Vijayapura news: ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ಗುಳೆ ಹೊರಟ ವಿಜಯಪುರ ಜಿಲ್ಲೆ ಜನ; ಮಕ್ಕಳಿಗಿಲ್ಲ ಶಿಕ್ಷಣ, ಯುವಕರಿಗೆ ಹೆಣ್ಣು ಕೊಡ್ತಿಲ್ಲ!
ಬರ ಪೀಡಿತ ಜಿಲ್ಲೆ ಅಂತಾನೇ ಪ್ರಖ್ಯಾತಿ ಪಡೆದುಕೊಂಡ ಜಿಲ್ಲೆ ವಿಜಯಪುರ. ಈ ಜಿಲ್ಲೆಯ ಬಹುತೇಕ ತಾಂಡಾ ನಿವಾಸಿಗಳು ಹೊಟ್ಟೆ ಪಾಡಿಗಾಗಿ ಅನ್ಯ ರಾಜ್ಯಗಳಿಗೆ ಗುಳೆ ಹೋಗುವುದು ಸಾಮಾನ್ಯ. ಅದೆಷ್ಟೋ ಜನರು ಮಕ್ಕಳನ್ನು ಸಹ ತಮ್ಮೊಟ್ಟಿಗೆ ಕರೆದುಕೊಂಡು ಹೋಗುವುದರಿಂದ ಅವರೂ ಇದೀಗ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
Vijayapura News: ವಿಜಯಪುರ ಜಿಲ್ಲೆ (Vijayapura district) ಬರ ಪೀಡಿತ ಜಿಲ್ಲೆ ಅಂತಾನೇ ಹಣೆ ಪಟ್ಟಿ ಕಟ್ಟಿಕೊಂಡಿದೆ. ಜಿಲ್ಲೆಯ ಬಹುತೇಕ ತಾಂಡಾ ಸೇರಿದಂತೆ ಗ್ರಾಮದ ಜನರು ಸಹಿತ ಉದ್ಯೋಗ ಅರಸಿ ಅನ್ಯ ರಾಜ್ಯಗಳಿಗೆ ಗುಳೆ ಹೋಗುವುದು ಇಲ್ಲಿ ಸರ್ವೇ ಸಾಮಾನ್ಯ. ಒಮ್ಮೆ ಉದ್ಯೋಗ ಅರಸಿ ಅನ್ಯ ರಾಜ್ಯಗಳಿಗೆ ಗುಳೆ ಹೋದರೆ, ಕಡಿಮೆ ಎಂದರು ಏಳೆಂಟು ತಿಂಗಳುಗಳ ಕಾಲ ಇವರು ಮರಳಿ ತಮ್ಮ ತಾಂಡಾಗಳಿಗೆ ಬರುವುದಿಲ್ಲ. ಅದರಲ್ಲೂ ತಾಲೂಕಿನ ಮದಬಾವಿ ತಾಂಡಾ 1 ಹಾಗೂ 2 ರಲ್ಲಿ ಹೆಚ್ಚಿನ ಜನರು ಈಗಾಗಲೇ ಉದ್ಯೋಗ ಅರಸಿ ಅನ್ಯ ರಾಜ್ಯಗಳಿಗೆ ಗುಳೆ ಹೋಗಿದ್ದಾರೆ.
ಇನ್ನೂ ಇವರು ಗುಳೆ ಹೋಗುವ ಸಂದರ್ಭದಲ್ಲಿ ಇಡೀ ಕುಟುಂಬ ಸಮೇತವಾಗಿ ಹೋಗುತ್ತಾರೆ, ಮನೆಯಲ್ಲಿ ವಯೋವೃದ್ದ ತಂದೆ ತಾಯಿ ಇದ್ದರೆ, ಅವರ ಬಳಿ ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಮಕ್ಕಳ ಶಿಕ್ಷಣದ ಉದ್ದೇಶದಿಂದ ಬಿಟ್ಟು ಹೋಗುತ್ತಾರೆ. ಮನೆಯಲ್ಲಿ ಯಾರೂ ನೋಡಿಕೊಳ್ಳುವವರು ಇರದೇ ಇದ್ದರೆ ಮಕ್ಕಳನ್ನೂ ಜತೆಗೆ ಕರೆದುಕೊಂಡು ಹೋಗುತ್ತಾರೆ, ಇದರಿಂದಾಗಿ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗುವುದು ತಾಂಡಾಗಳಲ್ಲಿ ಸಾಮಾನ್ಯವಾಗಿದೆ.
ಹೆಣ್ಣು ಕೊಡಲು ನಿರಾಕರಣೆ
ಇನ್ನು ಇಂತಹ ಕುಗ್ರಾಮಕ್ಕೆ ಹೆಣ್ಣು ಕೊಡದಿರಲು ಹೆಣ್ಣು ಹೆತ್ತವರು ನಿರ್ಧರಿಸಿದ್ದಾರೆ ಎನ್ನಲಾಗುತ್ತದೆ. ಹೀಗಾಗಿ ಈ ತಾಂಡಾದಲ್ಲಿನ ಯುವಕರ ಪರಸ್ಥಿತಿಯು ಹೇಳತೀರದಾಗಿದೆ. ಗುಳೇ ಹೋಗುವ ಹಳ್ಳಿಗೆ ಹಾಗೂ ಶಿಕ್ಷಣ ವಂಚಿತ ಯುವಕರಿಗೆ ತಮ್ಮ ಮಕ್ಕಳನ್ನು ನೀಡುವುದಿಲ್ಲ ಎನ್ನುತ್ತಿದ್ದಾರೆ. ಇದು ಒಂದು ಕಡೆಯಾದ್ರೆ ಗಂಡು ಮಕ್ಕಳನ್ನು ಹೆತ್ತ ಈ ಊರಿನ ಪೋಷಕರ ಅಳಲು ಇನ್ನೊಂದು ಕಡೆ. ತಮ್ಮ ಮಕ್ಕಳಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ, ಹೇಗಾದ್ರೂ ಮಾಡಿ ಮಕ್ಕಳಿಗೆ ಮದುವೆ ಮಾಡಿಸಬೇಕು ಎನ್ನುವ ಚಿಂತೆಯಲ್ಲಿಯೇ ಕಾಲ ದೂಡುತ್ತಿದ್ದಾರೆ.
ಇನ್ನು ಇಂತಹ ಗುಳೆ ಹೋಗುವ ಪದ್ದತಿಯನ್ನು ತಪ್ಪಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ ಉದ್ಯೋಗವನ್ನು ಕೊಡುತ್ತಾರೆ. ಆದರೆ ಆ ಉದ್ಯೋಗಗಳು ಎಷ್ಟರ ಮಟ್ಟಿಗೆ ತಾಂಡಾ ಜನರಿಗೆ ಮುಟ್ಟುತ್ತಿವೆ ಎಂಬುದು ಸಹಿತ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಈ ಕುರಿತು ಮುತುವರ್ಜಿ ವಹಿಸಿ ಗುಳೆ ಹೋಗುವುದನ್ನು ತಪ್ಪಿಸಿ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಸೃಷ್ಟೀ ಮಾಡುವ ಕೆಲಸ ಮಾಡಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹ.
ಮಕ್ಕಳ ಮದುವಿ ಮಾಡಾಕ್ ಆಗ್ವಲ್ದರೀ...
"ನಮ್ಮ ಮಕ್ಕಳಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ, ಹೇಗಾದ್ರೂ ಮಾಡಿ ಮಕ್ಕಳಿಗೆ ಮದುವೆ ಮಾಡಿಸಬೇಕು ಎನ್ನುವ ಚಿಂತೆಯಲ್ಲಿಯೇ ಕಾಲ ದೂಡುವಂತಾಗಿದೆʼ ಎಂದು ಮದಬಾವಿ ಗ್ರಾಮದ ಸವಿತಾ ಅನಿಸಿಕೆ ತಿಳಿಸಿದರೆ, ಗುಳೆ ಹೋಗುವ ಸಂದರ್ಭದಲ್ಲಿ ಇಡೀ ಕುಟುಂಬ ಸಮೇತವಾಗಿ ಹೋಗುತ್ತೇವೆ. ಮನೆಯಲ್ಲಿ ವಯೋವೃದ್ದ ತಂದೆ ತಾಯಿ ಇದ್ದರೆ, ಅವರ ಬಳಿ ಮಕ್ಕಳನ್ನು ಬಿಟ್ಟು ಹೋಗುತ್ತೇವೆ. ಕೆಲವರು ಮಕ್ಕಳ ಶಿಕ್ಷಣದ ಉದ್ದೇಶದಿಂದ ಬಿಟ್ಟು ಹೋಗುತ್ತಾರೆ. ಮನೆಯಲ್ಲಿ ಯಾರೂ ನೋಡಿಕೊಳ್ಳುವವರು ಇರದೇ ಇದ್ದಂತಹ ಸಂದರ್ಭದಲ್ಲಿ ಮಕ್ಕಳನ್ನು ಸಹಿತ ಕರೆದುಕೊಂಡು ಹೋಗುತ್ತಾರೆ. ಇದರಿಂದಾಗಿ ಮಕ್ಕಳು ಸಹಿತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂಬುದು ತಾಂಡಾ ನಿವಾಸಿ ಕಮಲಬಾಯಿ ಮಾತು.