ನನ್ನದಾಯ್ತು ನೀವೂ ರಾಜೀನಾಮೆ ಕೊಡಿ, ಇದು ರಾಜೀನಾಮೆ ಕೊಡುವ ರೀತಿಯೇ: ವಿಜಯಪುರ ಪಾಟೀಲದ್ವಯರ ನಿಲ್ಲದ ರಾಜಕೀಯ ಸವಾಲು ಸಮರ
ಕನ್ನಡ ಸುದ್ದಿ  /  ಕರ್ನಾಟಕ  /  ನನ್ನದಾಯ್ತು ನೀವೂ ರಾಜೀನಾಮೆ ಕೊಡಿ, ಇದು ರಾಜೀನಾಮೆ ಕೊಡುವ ರೀತಿಯೇ: ವಿಜಯಪುರ ಪಾಟೀಲದ್ವಯರ ನಿಲ್ಲದ ರಾಜಕೀಯ ಸವಾಲು ಸಮರ

ನನ್ನದಾಯ್ತು ನೀವೂ ರಾಜೀನಾಮೆ ಕೊಡಿ, ಇದು ರಾಜೀನಾಮೆ ಕೊಡುವ ರೀತಿಯೇ: ವಿಜಯಪುರ ಪಾಟೀಲದ್ವಯರ ನಿಲ್ಲದ ರಾಜಕೀಯ ಸವಾಲು ಸಮರ

ವಿಜಯಪುರದ ರಾಜಕಾರಣದಲ್ಲಿ ಪಾಟೀಲರದ್ದೇ ಆಟ. ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಇದು ಮೊದಲಿನಿಂದಲೂ ಇದೆ. ಈಗ ಸಚಿವ ಶಿವಾನಂದ ಪಾಟೀಲ್‌ ಹಾಗೂ ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನಡುವೆ ರಾಜೀನಾಮೆ ರಾಜಕೀಯ ಸವಾಲು ಜೋರಾಗಿದೆ.

ವಿಜಯಪುರದ ಶಿವಾನಂದ ಪಾಟೀಲ ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ್‌ ನಡುವೆ ನಿಲ್ಲದ ಮಾತಿನ ಸಮರ.
ವಿಜಯಪುರದ ಶಿವಾನಂದ ಪಾಟೀಲ ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ್‌ ನಡುವೆ ನಿಲ್ಲದ ಮಾತಿನ ಸಮರ.

ವಿಜಯಪುರ: ವಿಜಯಪುರ ರಾಜಕೀಯ ಹೊಡೆತ, ಮಾತಿನ ಏಟುಗಳಿಗೆ ಹೆಸರುವಾಸಿಯಾದ ಜಿಲ್ಲೆ. ಹಿಂದಿನಿಂದಲೂ ಇರುವ ಪಾಟೀಲರ ಪಾರುಪತ್ಯದ ಪರಂಪರೆ ಈಗಲೂ ಮುಂದುವರಿದಿದೆ. ಮೂರೂವರೆ ದಶಕದಿಂದಲೂ ಸಕ್ರಿಯ ರಾಜಕಾರಣದಲ್ಲಿರುವ ಕಾಂಗ್ರೆಸ್‌ನ ಹಾಲಿ ಸಚಿವ ಶಿವಾನಂದ ಪಾಟೀಲ್‌, ಮಾಜಿ ಸಚಿವ ಹಾಗೂ ಸದ್ಯ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ನಡುವೆ ಶಾಸಕ ಸ್ಥಾನದ ರಾಜೀನಾಮೆ ಸವಾಲ್‌ ಜವಾಬ್‌ ಜೋರಾಗಿದೆ. ಶಿವಾನಂದ ಪಾಟೀಲರು ಅಪ್ಪನಿಗೆ ಹುಟ್ಟಿದ್ದರೆ ಶುಕ್ರವಾರದೊಳಗೆ ರಾಜೀನಾಮೆ ಕೊಡಲಿ ಎಂದು ಯತ್ನಾಳ್‌ ಸವಾಲು ಹನಾಕಿದ್ದರು. ನಾನು ರಾಜೀನಾಮೆ ಕೊಟ್ಟಾಯ್ತು, ನೀವು ಯಾವಾಗ ಕೊಡ್ತೀರಿ ಹೇಳಿ ಎಂದು ಶಿವಾನಂದ ಪಾಟೀಲರು ಮರು ಸವಾಲು ಹಾಕಿ ಆಯಿತು. ಈಗ ಅದಕ್ಕೆ ತಿರುಗೇಟು ಕೊಟ್ಟಿರುವ ಯತ್ನಾಳ್‌ ಪಾಟೀಲರು, ರಾಜೀನಾಮೆ ಅಂಗೀಕಾರ ಆದರೆ ಕೊಡುವೆ ಎಂದು ನಾನು ಹೇಳಿದ್ದೆ. ಅವರು ಕೊಟ್ಟಿರುವ ರಾಜೀನಾಮೆ ರೀತಿಯೇ ಸರಿಯಿಲ್ಲ. ಇದೊಂದು ನಾಟಕ ಎಂದು ಹೇಳಿದ್ದಾರೆ. ಇದರ ನಡುವೆ ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಅವರು ರಾಜೀನಾಮೆ ಅಂಗೀಕರಿಸಿಲ್ಲ ಎಂದು ಹೇಳಿರುವುದು ಈ ಇಬ್ಬರ ಜಟಾಪಟಿ ಇನ್ನಷ್ಟು ದಿನ ಮುಂದುವರೆಯುವ ಮುನ್ಸೂಚನೆ ನೀಡಿದೆ.

ಯತ್ನಾಳ್‌ ಸವಾಲು

ಪಂಚಮಸಾಲಿ ಸಮುದಾಯದ ನಾಯಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಶಿವಾನಂದಪಾಟೀಲ ಅವರ ನಡುವೆ ರಾಜಕೀಯ ಸಂಘರ್ಷ ಮೊದಲಿನಿಂದಲೂ ಇದೆ. ಇಬ್ಬರೂ ಭಿನ್ನ ಪಕ್ಷಗಳಿಂದ ಗೆದ್ದು ಶಾಸಕ, ಸಚಿವರಾದವರು. ಶಿವಾನಂದ ಪಾಟೀಲ್‌ ಮೂರು ಪಕ್ಷದಿಂದಲೂ ಶಾಸಕರಾಗಿ ಈಗ ಎರಡನೇ ಬಾರಿ ಸಚಿವರಾಗಿದ್ದಾರೆ. ಬಸನಗೌಡ ಪಾಟೀಲ್‌ ಯತ್ನಾಳ್‌ ಬಿಜೆಪಿ ಹಾಗೂ ಪಕ್ಷೇತರವಾಗಿ ಗೆದ್ದವರು. ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು. ಯತ್ನಾಳ್‌ ಫೈರ್‌ ಬ್ರಾಂಡ್‌ ಎಂದು ಹೆಸರಾದರೆ, ಶಿವಾನಂದ ಪಾಟೀಲರು ಮೌನ ರಾಜಕಾರಣ ಕರಗತ ಮಾಡಿಕೊಂಡವರು.

ಕೆಲವು ದಿನಗಳ ಹಿಂದೆ ಯತ್ನಾಳ್‌ ಸವಾಲು ಹಾಕಿ, ಶಿವಾನಂದ ಪಾಟೀಲರು ಶಾಸಕ ಸ್ಥಾನಕ್ಕೆ ಶುಕ್ರವಾರದೊಳಗೆ ರಾಜೀನಾಮೆ ನೀಡಿ ಅಂಗೀಕಾರವಾದರೆ ನಾನೂ ರಾಜೀನಾಮೆ ನೀಡುವೆ. ಇಬ್ಬರೂ ಪಕ್ಷೇತರವಾಗಿ ಸ್ಪರ್ಧಿಸೋಣ ಎಂದು ಸವಾಲು ಹಾಕಿದ್ದರು.

ಇದಕ್ಕೆ ಉತ್ತರ ಎನ್ನುವಂತೆ ಸಚಿವ ಶಿವಾನಂದ ಪಾಟೀಲರು ಶುಕ್ರವಾರವೇ ಬೆಂಗಳೂರಿನಲ್ಲಿ ಸ್ಪೀಕರ್‌ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ್ದರು. ಯತ್ನಾಳ್‌ ಅವರು ರಾಜೀನಾಮೆ ಕೊಟ್ಟು ಅದು ಅಂಗೀಕಾರವಾದರೆ ನನ್ನ ರಾಜೀನಾಮೆಯನ್ನು ಅಂಗೀಕಾರ ಮಾಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದರು.

ಏಟು ಎದಿರೇಟು

ರಾಜೀನಾಮೆ ಬಳಿಕ ಮಾತನಾಡಿದ ಶಿವಾನಂದ ಪಾಟೀಲ್‌, ನನ್ನ ಸ್ವಾಭಿಮಾನಕ್ಕ ಧಕ್ಕೆ ಬರುವ ರೀತಿ ಯತ್ನಾಳರು ಮಾತನಾಡಿದ್ದಾರೆ. ಈಗ ರಾಜೀನಾಮೆ ನೀಡಿರುವೆ. ಅವರು ಶಾಸಕ ಸ್ಥಾನಕ್ಕೆ ಯಾವಾಗ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಿ ಎಂದು ಪ್ರಶ್ನಿಸಿದ್ದರು.

ಬಸನಗೌಡ ಪಾಟೀಲ್ ಯತ್ನಾಳ್ ಹಾಕಿದ ಸವಾಲು ಸ್ವೀಕರಿಸಿದ್ದೇನೆ. ಅದರಂತೆ, ವಿಧಾನ ಸಭೆಯ ಸಭಾಧ್ಯಕ್ಷರಿಗೆ ರಾಜೀನಾಮೆಯನ್ನೂ ಸಲ್ಲಿಸಿದ್ದೇನೆ.ಇದೊಂದು ಸತ್ವ ಪರೀಕ್ಷೆ ಆಗಿಯೇ ಬಿಡಲಿ. ಇದು ಕೇವಲ ನನ್ನ ಅಸ್ತಿತ್ವದ ಪ್ರಶ್ನೆಯಲ್ಲ. ನಮ್ಮ ಬಸವನ ಬಾಗೇವಾಡಿ ಮತಕ್ಷೇತ್ರದ ಮಹಾಜನತೆಯ ಸ್ವಾಭಿಮಾನದ ಪ್ರಶ್ನೆ.ನಾನು ಇವತ್ತು ಈ ನಿರ್ಧಾರ ಮಾಡಿರದಿದ್ದರೆ ಅದು ನನ್ನ ಮತದಾರರಿಗೆ ಮಾಡುವ ಅವಮಾನವಾಗುತ್ತಿತ್ತು. ಹೀಗಾಗಿ ಯತ್ನಾಳ್ ಅವರು ಹಾಕಿದ ಸವಾಲು ಸ್ವೀಕರಿಸಿ, ನನ್ನ ಶಾಸಕ ಸ್ಥಾ‌ನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ.ನೀವು ಯಾವಾಗ ರಾಜೀನಾಮೆ ಸಲ್ಲಿಸುತ್ತೀರಿ ಎಂದು ಕೇಳಿದ್ದರು.

ಇದಕ್ಕೆ ಮಂಗಳೂರಿನಲ್ಲಿ ತಿರುಗೇಟು ನೀಡಿದ ಯತ್ನಾಳ್‌,ರಾಜೀನಾಮೆ ಅಂಗೀಕಾರ ಆಗೋದಿಲ್ಲ ಅಂತ ಗೊತ್ತಿದ್ದರೂ ಪುಕ್ಕಟೆ ಪ್ರಚಾರಕ್ಕೆ ರಾಜೀನಾಮೆ ಕೊಟ್ಟು ರಾಜೀನಾಮೆಯನ್ನು ತಿರಸ್ಕೃತವಾಗುವಂತ ಪ್ರಭೃತಿಗಳು ಇದ್ದಾರೆ ಎಂಬುದೇ ಸೋಜಿಗದ ಸಂಗತಿ. ಶಾಸಕರು ರಾಜೀನಾಮೆ ಕೊಡುವುದಕ್ಕೆ ರೀತಿ ರಿವಾಜು ಇರುತ್ತೆ ಎಂಬುದು ಇವರಿಗೆ ಗೊತ್ತಿಲ್ಲವೇ.

ಇವರು ರಾಜೀನಾಮೆ ಕೊಡುವುದು, ಸಭಾಧ್ಯಕ್ಷರು ತಿರಸ್ಕರಿಸುವ ಬೃಹನ್ನಾಟಕ ಸಂಪನ್ನವಾಯಿತು. ಸಭಾಧ್ಯಕ್ಷರಾದ ಖಾದರ್ ಅವರು ಈ ರೀತಿಯಾದ ರಾಜೀನಾಮೆ ಸ್ವೀಕೃತವಾಗುವುದಿಲ್ಲ ಎಂಬುದನ್ನು ಅವರಿಗೆ ತಿಳಿಸಬೇಕಾಗಿತ್ತು.

ಸಚಿವ ಸಂಪುಟದ ಹಿರಿಯ ಸಚಿವರೊಬ್ಬರು ಈ ರೀತಿಯಾದ ರಾಜಕೀಯ ನಾಟಕವಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ರಾಜೀನಾಮೆ ಸರಿಯಾದ ವಿಧಾನದಲ್ಲಿಲ್ಲ ಎಂದು ಸ್ವೀಕರಿಸುವ ವೇಳೆಯಲ್ಲೇ ಖಾದರ್ ಅವರು ಹೇಳಬೇಕಾಗಿತ್ತು. ನೀವು ಮಾಡುತ್ತಿರುವ ನಾಟಕವನ್ನು ಪ್ರಜ್ಞಾವಂತ ಮತದಾರರು, ಕ್ಷೇತ್ರದ ಜನತೆ ಗಮನಿಸಿ ನಿಮಗೆ ಛೀಮಾರಿ ಹಾಕುತ್ತಿದ್ದಾರೆ ಎಂಬುದನ್ನು ಮರೆಯದಿರಿ. ಇವರಿಗೆ ನಿಜಕ್ಕೂ ತಾಕತ್ತಿದ್ದರೆ ಸರಿಯಾದ ರೀತಿಯಲ್ಲಿ ರಾಜೀನಾಮೆ ಕೊಟ್ಟು ಅಸಲಿ ಹೋರಾಟಕ್ಕೆ ಸಜ್ಜಾಗಲಿ ಎಂದು ಹೇಳಿದ್ದಾರೆ.

ರಾಜೀನಾಮೆಯನ್ನು ಸ್ಪೀಕರ್‌ ಖಾದರ್‌ ಅವರು ಅಂಗೀಕಾರ ಮಾಡದೇ ಇರುವುದರಿಂದ ಇಬ್ಬರ ನಡುವಿನ ಜಟಾಪಟಿ ಇನ್ನೂ ಮುಂದುವರೆಯುವ ಲಕ್ಷಣಗಳಂತೂ ಇವೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.