ಸೌದಿಯಲ್ಲೂ ಮಾತೃಭೂಮಿ ಪ್ರೇಮ: ಬಸ್ಸಿನಲ್ಲಿ ‘ಬೆದ್ರ’ ಹೆಸರು ಬರೆದ ಮೂಡುಬಿದರೆಯ ಮೊಹಮ್ಮದ್ ಆಲಿ
ಕನ್ನಡ ಸುದ್ದಿ  /  ಕರ್ನಾಟಕ  /  ಸೌದಿಯಲ್ಲೂ ಮಾತೃಭೂಮಿ ಪ್ರೇಮ: ಬಸ್ಸಿನಲ್ಲಿ ‘ಬೆದ್ರ’ ಹೆಸರು ಬರೆದ ಮೂಡುಬಿದರೆಯ ಮೊಹಮ್ಮದ್ ಆಲಿ

ಸೌದಿಯಲ್ಲೂ ಮಾತೃಭೂಮಿ ಪ್ರೇಮ: ಬಸ್ಸಿನಲ್ಲಿ ‘ಬೆದ್ರ’ ಹೆಸರು ಬರೆದ ಮೂಡುಬಿದರೆಯ ಮೊಹಮ್ಮದ್ ಆಲಿ

ಊರವರು ಎಲ್ಲಿ ಹೋದರೂ ತಮ್ಮತನವನ್ನು ಬಿಡುವುದಿಲ್ಲ ಎಂಬುದಕ್ಕೆ ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಓಡಾಡುವ ಬಸ್ ಸಾಕ್ಷಿಯಾಗಿದೆ. ಕನ್ನಡ ಲಿಪಿಯಲ್ಲಿ ಬೆದ್ರ ಎಂದು ಬರೆಯಲಾಗಿರುವ ಫೊಟೋ ಈಗ ವೈರಲ್ ಆಗುತ್ತಿದೆ.

ಸೌದಿ ಅರೇಬಿಯಾದ ಬಸ್‌ ಮೇಲೆ ಕನ್ನಡದ ಅಕ್ಷೆಗಳಲ್ಲಿ 'ಬೆದ್ರ' ಎಂದು ಬರೆಯಲಾಗಿದೆ.
ಸೌದಿ ಅರೇಬಿಯಾದ ಬಸ್‌ ಮೇಲೆ ಕನ್ನಡದ ಅಕ್ಷೆಗಳಲ್ಲಿ 'ಬೆದ್ರ' ಎಂದು ಬರೆಯಲಾಗಿದೆ.

ಮಂಗಳೂರು: ದಕ್ಷಿಣ ಕನ್ನಡದ ಪ್ರಮುಖ ಪಟ್ಟಣ ಮೂಡುಬಿದಿರೆ ಶಿಕ್ಷಣ ಸಂಸ್ಥೆಗಳಿಗೆ ಫೇಮಸ್. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಸರುವಾಸಿ ಎಂಬುದಷ್ಟೇ ನಮಗೆ ಗೊತ್ತು. ಆದರೆ ಮರುಭೂಮಿ ದೇಶಗಳಲ್ಲೂ ಇದರ ಹೆಸರು ರಾರಾಜಿಸುತ್ತಿರುವುದು ಗೊತ್ತಾ?

ಮೂಡುಬಿದಿರೆಯನ್ನು ದಕ್ಷಿಣ ಕನ್ನಡದಲ್ಲಿ ಶಾರ್ಟ್ ಆಗಿ 'ಬೆದ್ರ' ಎನ್ನುತ್ತಾರೆ. ತುಳುವಿನಲ್ಲಿ ಮಂಗಳೂರಿಗೆ ಕುಡ್ಲ, ಮೂಡುಬಿದಿರೆಗೆ ಬೆದ್ರ, ಕಾರ್ಕಳಕ್ಕೆ ಕಾರ್ಲ, ಉಪ್ಪಿನಂಗಡಿಗೆ ಉಬಾರ್ ಹೀಗೆ ಸ್ಥಳೀಯ ಸೊಗಡಿನ ಹೆಸರುಗಳಿವೆ. ಊರವರು ಎಲ್ಲಿ ಹೋದರೂ ತಮ್ಮತನವನ್ನು ಬಿಡುವುದಿಲ್ಲ ಎಂಬುದಕ್ಕೆ ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಓಡಾಡುವ ಬಸ್ ನೋಡಿದರೆ ಗೊತ್ತಾಗುತ್ತದೆ. ಕನ್ನಡ ಲಿಪಿಯಲ್ಲಿ ಬೆದ್ರ ಎಂದು ಬರೆಯಲಾಗಿರುವ ಈ ಹೆಸರಿನ ಫೊಟೋ ಈಗ ಭಾರಿ ವೈರಲ್ ಆಗುತ್ತಿದೆ.

ದೂರದ ಊರಿನ ಬಸ್ ಒಂದರಲ್ಲಿ ತುಳುನಾಡಿನ ಹೆಸರು ಹೇಗೆ ಬಂತು? ಅಲ್ಲಿ ಬಸ್ ಓಡಿಸುತ್ತಿರುವವರು ಮೂಡುಬಿದಿರೆ ತಾಲೂಕು ಕಲ್ಲಬೆಟ್ಟು ಪ್ರದೇಶದ ಮೊಹಮ್ಮದ್ ಆಲಿ. ಅವರು ತಮ್ಮ ಬಸ್ ಹಿಂಬದಿಯ ಗಾಜಿನಲ್ಲಿ ಬೆದ್ರ ಎಂದು ಬರೆದು ತಮ್ಮ ಹುಟ್ಟೂರ ಪ್ರೇಮವನ್ನು ಪ್ರಕಟಿಸಿದ್ದಾರೆ. ದೂರದ ಸೌದಿಯಲ್ಲಿದ್ದರೂ ಊರಲ್ಲಿರುವ ಫೀಲ್ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ತನ್ನ ಹುಟ್ಟೂರ ಪ್ರೀತಿಯನ್ನು ತಾನು ಕೆಲಸ ಮಾಡುತ್ತಿರುವ ಸೌದಿಯಲ್ಲಿ ಪಸರಿಸುತ್ತಿದ್ದಾರೆ. ಸೌದಿಯಲ್ಲಿ ಅವರು ಸ್ವಂತ ಬಸ್ ಹೊಂದಿದ್ದು, ಮಕ್ಕಾ, ಮೆದೀನಾದಂಥ ಪವಿತ್ರ ಕ್ಷೇತ್ರಗಳಿಗೆ ಯಾತ್ರಾರ್ಥಿಗಳನ್ನು ಬಾಡಿಗೆಗೆ ಕರೆದುಕೊಂಡು ಹೋಗುತ್ತಾರೆ. ಉಳಿದ ಸಮಯದಲ್ಲಿ ಇತರ ಕೆಲಸಗಳಿಗೆ ಬಸ್ ಬಳಕೆಯಾಗುತ್ತದೆ.

ಹಲವು ವರ್ಷಗಳಿಂದ ಸೌದಿಯಲ್ಲಿ ಕೆಲಸ ಮಾಡುತ್ತಿರುವ ಮೊಹಮ್ಮದ್ ಆಲಿ ಅವರಿಗೆ ತಾನು ಕೆಲಸ ಮಾಡುತ್ತಿರುವ ಸೌದಿಯ ಜುಬೈಲ್‌ನಲ್ಲಿ ಮೂಡುಬಿದಿರೆ ಸ್ನೇಹಿತರಿರುವುದು ಕಂಡುಬಂತು. ಹೀಗಾಗಿ ಹುಟ್ಟೂರಿನ ಪ್ರೀತಿ, ಅಭಿಮಾನದಿಂದ ಬಸ್ ಹಿಂಬದಿಯ ಗಾಜಿನಲ್ಲಿ ಬೆದ್ರ ಎಂದು ಬರೆದು ಅಭಿಮಾನ ವ್ಯಕ್ತಪಡಿಸಿದರು.

ಡಿ.ಎಂ.ಘನಶ್ಯಾಮ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸಂಪಾದಕ. ಊರು ಸುತ್ತುವುದು, ಜನರ ಒಡನಾಟ, ಪುಸ್ತಕಗಳನ್ನು ಓದುವುದು ಇಷ್ಟ. ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಪ್ರಜಾವಾಣಿ ದಿನಪತ್ರಿಕೆಗಳ ವಿವಿಧ ವಿಭಾಗಗಳು ಹಾಗೂ ಟಿವಿ9 ಜಾಲತಾಣದಲ್ಲಿ ಒಟ್ಟು 20 ವರ್ಷ ಕಾರ್ಯನಿರ್ವಹಿಸಿದ ಅನುಭವ. ಫೀಚರ್ ರೈಟಿಂಗ್ ಇಷ್ಟದ ಪ್ರಕಾರ. ಆರ್ಥಿಕ ವಿದ್ಯಮಾನ, ಕದನ ಕಥನ, ಅಧ್ಯಾತ್ಮ, ಗ್ರಾಮೀಣ ಅಭಿವೃದ್ಧಿ ಕುರಿತು ಆಸ್ಥೆಯಿಂದ ಬರೆಯುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸ್ವಂತ ಊರು. ಸಮಾಜದಲ್ಲಿ ಒಳಿತಿನ ಕನಸು, ಆಕಾಂಕ್ಷೆ, ಮೌಲ್ಯ ಬಿತ್ತುವುದೇ ಪತ್ರಿಕೋದ್ಯಮದ ಮೂಲ ಉದ್ದೇಶ ಎಂದು ನಂಬಿದವರು. ಇಮೇಲ್: dm.ghanashyam@htdigital.in