Karnataka Nature Guide: ನಿಮಗೂ ಕರ್ನಾಟಕದಲ್ಲಿ ನೇಚರ್‌ ಗೈಡ್‌ ಆಗುವ ಆಸೆ ಇದೆಯಾ; ಅರಣ್ಯ ಇಲಾಖೆ ನೀಡಲಿದೆ ತರಬೇತಿ, ಉದ್ಯೋಗಾವಕಾಶ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Nature Guide: ನಿಮಗೂ ಕರ್ನಾಟಕದಲ್ಲಿ ನೇಚರ್‌ ಗೈಡ್‌ ಆಗುವ ಆಸೆ ಇದೆಯಾ; ಅರಣ್ಯ ಇಲಾಖೆ ನೀಡಲಿದೆ ತರಬೇತಿ, ಉದ್ಯೋಗಾವಕಾಶ

Karnataka Nature Guide: ನಿಮಗೂ ಕರ್ನಾಟಕದಲ್ಲಿ ನೇಚರ್‌ ಗೈಡ್‌ ಆಗುವ ಆಸೆ ಇದೆಯಾ; ಅರಣ್ಯ ಇಲಾಖೆ ನೀಡಲಿದೆ ತರಬೇತಿ, ಉದ್ಯೋಗಾವಕಾಶ

Karnataka Nature Guide: ಕರ್ನಾಟಕದಲ್ಲಿ ಪರಿಸರ ಪ್ರವಾಸೋದ್ಯಮ ಉತ್ತೇಜಿಸಿ ಸ್ಥಳೀಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯಿಂದ ನೇಚರ್‌ ಗೈಡ್‌ ಚಟುವಟಿಕೆ ರೂಪಿಸಲಾಗಿದೆ.

ನೇಚರ್‌ ಗೈಡ್‌ ಆಸಕ್ತಿಯದ್ದರೆ ಅರಣ್ಯ ಇಲಾಖೆ ತರಬೇತಿಯೊಂದಿಗೆ ಅವಕಾಶ ಕಲ್ಪಿಸಲಿದೆ.
ನೇಚರ್‌ ಗೈಡ್‌ ಆಸಕ್ತಿಯದ್ದರೆ ಅರಣ್ಯ ಇಲಾಖೆ ತರಬೇತಿಯೊಂದಿಗೆ ಅವಕಾಶ ಕಲ್ಪಿಸಲಿದೆ.

Karnataka Nature Guide:ಅಪರಿಚಿತ ಹಾದಿಗಳನ್ನು ಅನ್ವೇಷಿಸಲು ಬಯಸುವಿರಾ? ಕರ್ನಾಟಕದ ಬೆಟ್ಟಗಳು, ಕಾಡುಗಳು ಮತ್ತು ಹುಲ್ಲುಗಾವಲುಗಳ ಪಕ್ಷಿಗಳು, ಸಸ್ಯಗಳು, ಶಿಲೀಂಧ್ರಗಳು, ಸಸ್ತನಿಗಳು ಮತ್ತು ಚಿಟ್ಟೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ? ನಿಮಗೆ ಚಾರಣ್ಯದಲ್ಲಿ ಆಸಕ್ತಿಯಿದೆಯೇ, ಈಗಾಗಲೇ ಚಾರಣ ಮಾಡಿದ ಅನುಭವವೂ ನಿಮಗಿದೆಯೇ, ಕರ್ನಾಟಕ ಅರಣ್ಯ ಇಲಾಖೆಯು ಅಧಿಕೃತ ಚಾರಣಕ್ಕಾಗಿ ನೇಚರ್‌ಗೈಡ್‌ಗಳನ್ನು ನೇಮಿಸಲು ಮುಂದಾಗಿದೆ. ಈಗಾಗಲೇ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಯಿಂದಲೇ ತರಬೇತಿಯನ್ನು ನಡೆಸಿ ನೇಚರ್‌ಗೈಡ್‌ಗಳನ್ನು ನೇಮಕ ಮಾಡಲಾಗಿದೆ. ಆಸಕ್ತಿ ಇರುವವರು ಆಯಾ ಪ್ರದೇಶಗಳಲ್ಲಿಯೇ ಇರುವ ಪರಿಸರ ಪ್ರವಾಸೋದ್ಯಮ ಚಟುವಟಿಕೆಯ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಹಂತ ಹಂತವಾಗಿ ಇದು ಜಾರಿಗೆ ಬರಲಿದೆ.

ಉಂಟು ವಿಪುಲ ಅವಕಾಶ

ಕರ್ನಾಟಕದಲ್ಲಿ ಪರಿಸರ ಪ್ರವಾಸೋದ್ಯಮ ವಿಪುಲವಾಗಿ ಬೆಳೆದಿದೆ. ಮಲೆನಾಡು, ಹಳೆ ಮೈಸೂರು, ಪಶ್ಚಿಮಘಟ್ಟ ಸಾಲಿನ ಜಿಲ್ಲೆಗಳು, ಬೆಂಗಳೂರು ಭಾಗದ ಜಿಲ್ಲೆಗಳೂ ಒಳಗೊಂಡಂತೆ ಅಲ್ಲಲ್ಲಿ ಬೆಟ್ಟ ಗುಡ್ಡಗಳಲ್ಲಿ ಚಾರಣವನ್ನು ಅರಣ್ಯ ಇಲಾಖೆ ಏರ್ಪಡಿಸುತ್ತಾ ಬರುತ್ತಿದೆ. ವನ್ಯಜೀವಿ ಹಾಗೂ ಚಾರಣಗಳಲ್ಲಿ ಆಸಕ್ತಿಯುಳ್ಳವರಿಗೆ ತರಬೇತಿಯನ್ನು ಅರಣ್ಯ ಇಲಾಖೆ ಹಾಗು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯಿಂದ ನೀಡಲಾಗುತ್ತಿದೆ. ಐದಾರು ದಿನಗಳ ತರಬೇತಿ ಪಡೆದವರಿಗೆ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯು ಆಯಾ ಜಿಲ್ಲೆಯ ಅವಕಾಶ ಇರುವ ತಾಣಗಳಲ್ಲಿ ನೇಚರ್‌ಗೈಡ್‌ಗಳನ್ನು ನೇಮಿಸುತ್ತಿದೆ.

ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಚಾಮರಾಜನಗರ, ಮೈಸೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೋಲಾರ, ತುಮಕೂರು, ಚಿತ್ರದುರ್ಗ ಸಹಿತ ಹಲವು ಜಿಲ್ಲೆಗಳಲ್ಲಿ ಇದಕ್ಕೆ ವಿಪುಲ ಅವಕಾಶಗಳಿವೆ. ಅರಣ್ಯ ಇಲಾಖೆಯೇ ಮಾರ್ಗಗಳನ್ನು ರೂಪಿಸಿ ಪರಿಸರ ಪ್ರವಾಸೋದ್ಯಮ ಚಟುವಟಿಕೆಯನ್ನೂ ನಡೆಸುತ್ತಿದೆ. ನೇಚರ್‌ಗೈಡ್‌ಗಳಿದ್ದರೆ ಚಾರಣದ ಮಹತ್ವವೂ ತಿಳಿಯಲಿದೆ ಎನ್ನುವುದು ಅರಣ್ಯ ಇಲಾಖೆಯ ವಾದ.

ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಮಾಕಳಿದುರ್ಗವು ಕೂಡ ಆಕರ್ಷಣೀಯ ಸ್ಥಳವೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ಕಂದಗಿರಿ ಪರ್ವತ ಕೋಟೆ ಇದೆ. ಕೋಲಾರದಲ್ಲಿ ಅಂತರಗಂಗೆ, ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಸಾವನದುರ್ಗ ಚಾರಣ ಕೂಡ ಇದೆ. ಬೆಂಗಳೂರು ಸಮೀಪದಲ್ಲಿಯೇ ಬಿದರಕಟ್ಟೆ ಚಾರಣವು ಕೆಂಪೇಗೌಡ ಟ್ರೀ ಪಾರ್ಕ್‌ನಿಂದ ಪ್ರಾರಂಭವಾಗುತ್ತದೆ. ತುಮಕೂರಿನ ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟದಲ್ಲೂ ಚಾರಣ ಉಂಟು. ಬೆಂಗಳೂರಿನಿಂದ 100.00 ಕಿಮೀ ದೂರದಲ್ಲಿ ಕಲ್ಲಿನ ಬೆಟ್ಟಗಳು, ದೇವಾಲಯಗಳು ಮತ್ತು ಗುಹೆಗಳಿಂದ ಆವೃತವಾಗಿದೆ. ಇದನ್ನು ಸುತ್ತಿ ಬರುವುದೇ ಚೇತೋಹಾರಿ. ತುಮಕೂರು ಜಿಲ್ಲೆಯ ದೇವರಾಯನ ದುರ್ಗ ಹಾಗೂ ವಾಲಗಧರೆ ಬೆಟ್ಟಕ್ಕೆ ಚಾರಣವಿದೆ. ಇಲ್ಲೆಲ್ಲಾ ನೇಚರ್‌ಗೈಡ್‌ ಚಟುವಟಿಕೆ ರೂಪಿಸುವ ಉದ್ದೇಶವನ್ನು ಹೊಂದಲಾಗಿದೆ.

ಕೋಲಾರ ಜಿಲ್ಲೆಯ ಅಂತರಗಂಗೆ ಬೆಟ್ಟದಲ್ಲಿ ಇಂತಹ ಚಾರಣದ ಚಟುವಟಿಕೆಗಳನ್ನು ನಾಲ್ಕು ತಿಂಗಳ ಹಿಂದೆಯೇ ನಡೆಸಿ ನೇಚರ್‌ಗೈಡ್‌ಗಳನ್ನು ನೇಮಿಸಲಾಗಿದೆ. ಇದೇ ರೀತಿ ಬೇರೆ ಕಡೆಯೂ ನೇಮಕ ಮಾಡಲಾಗಿದೆ.

ನಿಮ್ಮ ಭಾಗದಲ್ಲೂ ಇಂತಹ ಚಟುವಟಿಕೆ ಇದ್ದರೆ ಸಮೀಪದ ಅರಣ್ಯ ಇಲಾಖೆಗೆ ತೆರಳಿ ಮಾಹಿತಿ ಪಡೆಯಬಹುದು.

ಉದ್ದೇಶವಾದರೂ ಏನು

ಸಾಮಾನ್ಯವಾಗಿ ಜನರಲ್ಲಿ ಮತ್ತು ವಿಶೇಷವಾಗಿ ಮಕ್ಕಳು ಮತ್ತು ಯುವಕರಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು. ಕರ್ನಾಟಕ ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸುವುದು. ಪರಿಸರ ಪ್ರವಾಸೋದ್ಯಮದಲ್ಲಿ ಸ್ಥಳೀಯ ಸಮುದಾಯದ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಮತ್ತು ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಮತ್ತು ಆರ್ಥಿಕ ಪ್ರಯೋಜನಗಳನ್ನು ಒದಗಿಸುವುದು. ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳ ಸಂಘಟಿತ ಅಭಿವೃದ್ಧಿಗಾಗಿ ನೀತಿಗಳು, ಕಾನೂನುಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ಸಹಾಯ ಮಾಡುವುದು. ಪರಿಸರ ಪ್ರವಾಸೋದ್ಯಮ ಪ್ರದೇಶಗಳಲ್ಲಿ ಸಂಶೋಧನೆ ಮತ್ತು ಪರಿಣಾಮ-ಅಧ್ಯಯನಗಳನ್ನು ನಡೆಸುವುದು. ಪರಿಸರ ಪ್ರವಾಸೋದ್ಯಮವನ್ನು ಅರಣ್ಯ ಇಲಾಖೆಯ ಮುಂಚೂಣಿಯ ಬಳಕೆಯಲ್ಲದ ಚಟುವಟಿಕೆಯಾಗಿ ಉತ್ತೇಜಿಸುವುದು. ಪರಿಸರ ಪ್ರವಾಸೋದ್ಯಮ ನಿರ್ವಾಹಕರು ಅನುಸರಿಸಬೇಕಾದ ಉತ್ತಮ ಅಭ್ಯಾಸಗಳನ್ನು ಅಭಿವೃದ್ಧಿಪಡಿಸುವುದು. ಪರಿಸರ ಪ್ರವಾಸೋದ್ಯಮ ನಿರ್ವಾಹಕರ ಪ್ರಮಾಣೀಕರಣವನ್ನು ಪ್ರಮಾಣೀಕರಿಸಲು ಮತ್ತು ನಿರ್ವಹಿಸಲು ಸಹಕಾರಿ. ಪ್ರಕೃತಿ ಮಾರ್ಗದರ್ಶಿಗಳಿಗೆ ತರಬೇತಿ ನೀಡಲು ಮತ್ತು ಪ್ರಮಾಣೀಕರಿಸಲು. ಪ್ರಕೃತಿ ಶಿಕ್ಷಣ ಮತ್ತು ಪರಿಸರ ಪ್ರವಾಸೋದ್ಯಮ ಉತ್ತೇಜನಕ್ಕೆ ಅಗತ್ಯವಿರುವ ಸಾಹಿತ್ಯ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಸಾಮಗ್ರಿಗಳನ್ನು ತಯಾರಿಸಲು ಈ ಕ್ರಮ ಸಹಕಾರಿ.

ವನ್ಯಜೀವಿಗಳ ಸಂರಕ್ಷಣೆಯ ಕಾರಣಕ್ಕಾಗಿ ಸಾರ್ವಜನಿಕ ಮತ್ತು ಖಾಸಗಿ ನಿರ್ವಾಹಕರ ನಡುವಿನ ಸಂಪರ್ಕವನ್ನು ಸುಲಭಗೊಳಿಸುವುದು. ರಾಷ್ಟ್ರೀಯ/ಅಂತರರಾಷ್ಟ್ರೀಯ ಸಂಸ್ಥೆಗಳು, ತಜ್ಞರು ಮತ್ತು ಧನಸಹಾಯ ಏಜೆನ್ಸಿಗಳೊಂದಿಗೆ ಸಮನ್ವಯಗೊಳಿಸಲು ಮತ್ತು ಸಂಪರ್ಕ ಸಾಧಿಸಲು ಮತ್ತು ಭಾರತ ಸರ್ಕಾರ, ರಾಜ್ಯ ಸರ್ಕಾರ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಧನಸಹಾಯ ಸಂಸ್ಥೆಗಳು ಇತ್ಯಾದಿಗಳಿಂದ ಕೊಡುಗೆ ಮತ್ತು ಹಣವನ್ನು ಸ್ವೀಕರಿಸಲು ಪೂರಕ. ಉದ್ಯಾನವನಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಿರ್ವಹಿಸಲು ಮತ್ತು ಸುಗಮಗೊಳಿಸಲು. ಟ್ರೆಕ್ಕಿಂಗ್ ಟ್ರೇಲ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು "ರಕ್ಷಿತ ಪ್ರದೇಶಗಳಲ್ಲಿ" ವನ್ಯಜೀವಿ ಸಫಾರಿಗಳನ್ನು ನಿರ್ವಹಿಸಲು. ಕಾನೂನು ಅನುಮತಿಸುವ ಎಲ್ಲೆಲ್ಲಿ ಪರಿಸರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು (PPP) ಉತ್ತೇಜಿಸಲು ಇದು ಸಹಕಾರಿ ಎಂದು ಪರಿಸರ ಪ್ರವಾಸೋದ್ಯಮ ಮಂಡಳಿ ಪಟ್ಟಿ ಮಾಡಿಕೊಂಡಿದೆ.

ಕೋಲಾರದಲ್ಲಿ ಅಂತರಗಂಗೆಯಲ್ಲಿ ಪರಿಸರ ಪ್ರವಾಸೋದ್ಯಮವಿದೆ. ಇಲ್ಲಿ ನೇಚರ್‌ಗೈಡ್‌ಗಳನ್ನು ನೇಮಿಸಲಾಗಿದೆ. ಅವರಿಗೆ ತರಬೇತಿ ನೀಡಿ ಚಾರಣಕ್ಕೆ ಬರುವವರಿಂದ ಸಂಗ್ರಹಿಸುವ ಮೊತ್ತದಲ್ಲೇ ಗೈಡ್‌ಗಳಿಗೂ ವೇತನ ರೂಪದಲ್ಲಿ ನೀಡಲಾಗುತ್ತದೆ ಎನ್ನುವುದು ಐಎಫ್‌ಎಸ್‌ ಅಧಿಕಾರಿ ಏಡುಕೊಂಡಲ ನೀಡುವ ವಿವರಣೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.