ಕನ್ನಡ ಸುದ್ದಿ  /  Karnataka  /  'Water Museum' Inaugurated On The Occassion Of Puneet Rajkumar's Birthday

Water Museum: ಬೆಂಗಳೂರಿನ ಜಲಚರಿತ್ರೆ ಹೇಳುವ ಮ್ಯೂಸಿಯಂ ಲೋಕಾರ್ಪಣೆ, 6.81 ಕೋಟಿ ವೆಚ್ಚದ ವಿನೂತನ ನೀರು ವಸ್ತು ಸಂಗ್ರಹಾಲಯ

ಬೆಂಗಳೂರು ಮಹಾನಗರದ ಜನತೆಗೆ 1895ರಿಂದ ಇಲ್ಲಿಯವರೆಗೆ ನೀರು ಪೂರೈಸಲು ಕಾಲಕಾಲಕ್ಕೆ ಅಳವಡಿಸಿಕೊಂಡು ಬಂದಿರುವ ವ್ಯವಸ್ಥೆ ಮತ್ತು ತಂತ್ರಜ್ಞಾನಗಳನ್ನು ಸಮಗ್ರವಾಗಿ ಪ್ರದರ್ಶಿಸುವ ವಿನೂತನ ನೀರು ವಸ್ತು ಸಂಗ್ರಹಾಲಯ ಶುಕ್ರವಾರ ಲೋಕಾರ್ಪಣೆಗೊಂಡಿದೆ.

Water Museum: ಬೆಂಗಳೂರಿನ ಜಲಚರಿತ್ರೆ ಹೇಳುವ ಮ್ಯೂಸಿಯಂ ಲೋಕಾರ್ಪಣೆ, 6.81 ಕೋಟಿ ವೆಚ್ಚದ ವಿನೂತನ ನೀರು ವಸ್ತು ಸಂಗ್ರಹಾಲಯ
Water Museum: ಬೆಂಗಳೂರಿನ ಜಲಚರಿತ್ರೆ ಹೇಳುವ ಮ್ಯೂಸಿಯಂ ಲೋಕಾರ್ಪಣೆ, 6.81 ಕೋಟಿ ವೆಚ್ಚದ ವಿನೂತನ ನೀರು ವಸ್ತು ಸಂಗ್ರಹಾಲಯ

ಬೆಂಗಳೂರು: ಬೆಂಗಳೂರು ಬೆಳೆದಂತೆ ನೀರಿನ ಬೇಡಿಕೆ ಹೆಚ್ಚಾಗಿದೆ. ಮಹಾ ನಗರಕ್ಕೆ ನೀರು ಪೂರೈಸಲು ಅಳವಡಿಸಲಾದ ವ್ಯವಸ್ಥೆ ಮತ್ತು ತಂತ್ರಜ್ಞಾನಗಳ ಮಾಹಿತಿ ನೀಡುವ ವಿನೂತನ ನೀರು ವಸ್ತು ಸಂಗ್ರಹಾಲಯವು ಇದೀಗ ಬೆಂಗಳೂರಿನಲ್ಲಿ ನಿರ್ಮಾಣಗೊಂಡಿದೆ.

ಬೆಂಗಳೂರು ಮಹಾನಗರದ ಜನತೆಗೆ 1895ರಿಂದ ಇಲ್ಲಿಯವರೆಗೆ ನೀರು ಪೂರೈಸಲು ಕಾಲಕಾಲಕ್ಕೆ ಅಳವಡಿಸಿಕೊಂಡು ಬಂದಿರುವ ವ್ಯವಸ್ಥೆ ಮತ್ತು ತಂತ್ರಜ್ಞಾನಗಳನ್ನು ಸಮಗ್ರವಾಗಿ ಪ್ರದರ್ಶಿಸುವ ವಿನೂತನ ನೀರು ವಸ್ತು ಸಂಗ್ರಹಾಲಯ ಶುಕ್ರವಾರ ಲೋಕಾರ್ಪಣೆಗೊಂಡಿದೆ.

ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿರುವ ಜಲಮಂಡಲಿಯ ನೆಲ ಮಟ್ಟದ ನೀರು ಸಂಗ್ರಹಗಾರದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಈ ಮ್ಯೂಸಿಯಂಗೆ ಹಸಿರು ನಿಶಾನೆ ತೋರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಸಮಾಜದ ಬಗ್ಗೆ ಕಳಕಳಿ ಇಟ್ಟುಕೊಂಡಿದ್ದ ನಟ ಪುನೀತ್‌ ಅವರು ನಮಗೆಲ್ಲ ಸ್ಫೂರ್ತಿಯಾಗಬೇಕು. ಅವರ ಗೌರವಾರ್ಥವಾಗಿ ಅವರ ಹುಟ್ಟುಹಬ್ಬದಂದೇ ಈ ಮ್ಯೂಸಿಯಂ ಅನ್ನು ಸಮಾಜಕ್ಕೆ ಅರ್ಪಿಸಲಾಗಿದೆ" ಎಂದು ನೆನಪಿಸಿಕೊಂಡರು.

ಮ್ಯೂಸಿಯಂನ ವೈಶಿಷ್ಟ್ಯ

ಬೆಂಗಳೂರಿನಲ್ಲಿ ಕುಡಿಯುವ ನೀರು ಪೂರೈಕೆಗೆ ಈಗ 123 ವರ್ಷಗಳ ಇತಿಹಾಸವಿದೆ. ಗಮನಾರ್ಹ ಸಂಗತಿಯೆಂದರೆ, ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ನೆಲಮಟ್ಟದ ನೀರು ಸಂಗ್ರಹಾಗಾರದಿಂದಲೇ ಆಗ ಇಡೀ ನಗರಕ್ಕೆ ನೀರು ಪೂರೈಸಲಾಗುತ್ತಿತ್ತು. ನಂತರ ನಗರವು ಬೆಳೆದಂತೆ, ಉತ್ತರ ಭಾಗದ ಜನವಸತಿಗಳಿಗೂ ಇಲ್ಲಿಂದಲೇ ನೀರು ಹರಿದು ಹೋಗುತ್ತಿತ್ತು. ಆಗ ನೈಸರ್ಗಿಕವಾಗಿ ಮರಳನ್ನು ಬಳಸಿ, ದೊಡ್ಡ ಬಾವಿಗಳನ್ನು ತೋಡಿ, ನೀರಿನ ಶುದ್ಧೀಕರಣ ಆಗುವಂತೆ ನೋಡಿಕೊಳ್ಳಲಾಗುತ್ತಿತ್ತು. ನಂತರ ದೈತ್ಯ ಬೆಲ್ಟ್‌ಗಳು ಮತ್ತು ಇತರ ತಂತ್ರಜ್ಞಾನಾಧಾರಿತ ಸಾಧನಗಳು ಬರತೊಡಗಿದವು. ಇವೆಲ್ಲ ಇದ್ದ ಜಾಗವನ್ನೇ ಮ್ಯೂಸಿಯಂ ಆಗಿ‌ ಮಾಡಲಾಗಿದೆ. ಒಟ್ಟಿನಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ಅಸ್ತಿತ್ವಕ್ಕೆ ಬರುವ ಮೊದಲೂ ಇದ್ದ ನೀರು ಪೂರೈಕೆ ವ್ಯವಸ್ಥೆ, ನಂತರ ಕಾಲಕಾಲಕ್ಕೆ ಬಂದ ಯೋಜನೆಗಳ ಮಾದರಿಗಳು, ಆಧುನಿಕ ವ್ಯವಸ್ಥೆಗಳನ್ನು ಇಲ್ಲಿ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆ. ಈ ಮ್ಯೂಸಿಯಂಗೆ ಸಾರ್ವಜನಿಕರಿಗೂ ಪ್ರವೇಶಾವಕಾಶ ಇರಲಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆ, ಮಿತಬಳಕೆ ಕುರಿತು ಅರಿವು ಮೂಡಿಸಲು ಬಳಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ದೆಹಲಿಯಲ್ಲಿರುವ ಇಂಡಿಯಾ ಹ್ಯಾಬಿಟೆಟ್‌ ಸೆಂಟರ್‍‌ ರೀತಿಯಲ್ಲೇ ಮಲ್ಲೇಶ್ವರ ಇಂಟರ್‍‌ನ್ಯಾಷನಲ್‌ ಸೆಂಟರ್‍‌ ನಿರ್ಮಿಸಲಾಗುವುದು. ಇದಕ್ಕಾಗಿ ಬಿಬಿಎಂಪಿ 20 ಕೋಟಿ ರೂ. ಕೊಡಲಿದ್ದು, ಜಲಮಂಡಲಿಯು ಅಗತ್ಯವಾದ ಜಾಗವನ್ನು ಕೊಡಲಿದೆ. ಇದು ಯುವಜನರು ಸಮರ್ಪಕ ಚಿಂತನೆ ರೂಪಿಸಿಕೊಳ್ಳುವಂತಹ ತಾಣವಾಗಲಿದೆ ಎಂದು ಅವರು ಹೇಳಿದರು.

6.81 ಕೋಟಿ ರೂ. ವೆಚ್ಚದಲ್ಲಿ ಈಗ ನಿರ್ಮಿಸಿರುವ ಮ್ಯೂಸಿಯಂನಲ್ಲಿ ಬೆಂಗಳೂರು ನಗರದ ನೀರು ಪೂರೈಕೆ ಸೌಲಭ್ಯದ ಇತಿಹಾಸವನ್ನು ಮೆಲುಕುಹಾಕುವಂತಿದೆ. ಮುಖ್ಯವಾಗಿ ವಿದ್ಯಾರ್ಥಿಗಳು, ರೈತರು, ಇಂಜಿನಿಯರುಗಳು ಮತ್ತು ಸಾರ್ವಜನಿಕರಿಗೆ ನೀರಿನ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಲು ಇದು ನೆರವಾಗಲಿದೆ ಎಂದು ಅವರು ನುಡಿದರು.

ನೀರಿನ ವೈಜ್ಞಾನಿಕ ನಿರ್ವಹಣೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಅತ್ಯಗತ್ಯವಾಗಿದೆ. ಮುಖ್ಯವಾಗಿ ನಮ್ಮಲ್ಲಿ ನೀರಿನ ಪೋಲು ವಿಪರೀತವಾಗಿದೆ. ಇದನ್ನು ತಡೆಗಟ್ಟಲು ಮಲ್ಲೇಶ್ವರ ಕ್ಷೇತ್ರದಲ್ಲಿ 70 ವರ್ಷಗಳಷ್ಟು ಹಳೆಯ ಕೊಳವೆಗಳನ್ನು ತೆಗೆದುಹಾಕಿ, ಹೊಸ ಕೊಳವೆಗಳನ್ನು ಅಳವಡಿಸಲಾಗಿದೆ. ಕೇವಲ ಸಿ.ಎನ್‌.ಆರ್‍‌.ರಾವ್‌ ವೃತ್ತದಿಂದ ಯಶವಂತಪುರದ ವೃತ್ತದ ನಡುವೆ ಆಗುತ್ತಿದ್ದ 40 ಎಂಎಲ್‌ಡಿ ನೀರಿನ ಸೋರಿಕೆಯನ್ನು ನಿಲ್ಲಿಸಲಾಗಿದೆ ಎಂದು ಅವರು ಉದಾಹರಣೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಲಿ ಅಧ್ಯಕ್ಷ ಜಯರಾಂ, ಸ್ಟಾರ್ಟಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.