ಕರ್ನಾಟಕದಲ್ಲಿ ಮಳೆ ಮುನ್ಸೂಚನೆ; ಇಂದು ಕರಾವಳಿ ಸೇರಿ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, 11 ನದಿಗಳಲ್ಲಿ ಪ್ರವಾಹ, ಜನಜೀವನ ಅಸ್ತವ್ಯಸ್ತ
ಕರ್ನಾಟಕ ಹವಾಮಾನ ಜುಲೈ 20 (Karnataka Weather Today July 20 2024); ರಾಜ್ಯದ ಕರಾವಳಿ ಸೇರಿ 6 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು ರೆಡ್ ಅಲರ್ಟ್ ಘೋಷಣೆಯಾಗಿದೆ. ಅಘನಾಶಿನಿ, ಕಬಿನಿ, ಹಾರಂಗಿ ಸೇರಿ 11 ನದಿಗಳು ಹರಿಯುವ 16 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿವರ ಇಲ್ಲಿದೆ.

ಬೆಂಗಳೂರು:ಕರ್ನಾಟಕದಲ್ಲಿ ಮುಂಗಾರು ಮಳೆ ವ್ಯಾಪಕವಾಗಿದ್ದು, ಇಂದು (ಜುಲೈ 20) ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದೇ ರೀತಿ, ಭಾರಿ ಮಳೆ ಸುರಿಯುತ್ತಿರುವ ಹಾಸನದಲ್ಲಿ ಆರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದೆ.ಉಳಿದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಬಹುದು ಎಂದು ಮಳೆ ಮುನ್ಸೂಚನೆ ವರದಿ ಹೇಳಿದೆ.
ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಇಂದು ಜೋರಾದ ಗಾಳಿಯೊಂದಿಗೆ ಅತ್ಯಧಿಕ ಮಳೆ ಬೀಳಲಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ ಈ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಿಗೆ ನಾಳೆ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಕಾರಣಕ್ಕೆ ಆರೆಂಜ್ಅಲರ್ಟ್ ನೀಡಲಾಗಿದೆ. ಅದಾಗಿ ನಾಲ್ಕು ದಿನ ಯೆಲ್ಲೋ ಅರ್ಲಟ್ ಘೋಷಿಸಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಟ್ವೀಟ್ ಮಾಡಿದೆ.
ಕರ್ನಾಟಕ ಮಳೆ ಮುನ್ಸೂಚನೆ; ನಾಳೆಯಿಂದ ಮಳೆಯ ತೀವ್ರತೆ ಕಡಿಮೆ
ನಾಳೆಯಿಂದ ಮಳೆಯ ತೀವ್ರತೆ ಕಡಿಮೆಯಾಗಲಿದ್ದು, ನದಿಗಳ ಪ್ರವಾಹ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ. ಆದಾಗ್ಯೂ ಮುಂದಿನ 5 ದಿನ ಮಳೆ ಸುರಿಯುವುದು ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಹೇಳಿದೆ.
ನಂತರ ಮಳೆ ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದು, ಕರಾವಳಿ ಜಿಲ್ಲೆಗಳಿಗೆ ಜುಲೈ 22 ರಿಂದ 24 ರವರೆಗೆ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಜುಲೈ 21 ಮತ್ತು 22 ರಂದು ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಿಗೆ, ಜುಲೈ 20 ರಿಂದ 22 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಅದು ವಿವರಿಸಿದೆ.
ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡುಗಳಲ್ಲಿ ವ್ಯಾಪಕ ಮಳೆ
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಈ ಮೂರು ದಿನಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಅದಾಗಿ ಎರಡು ದಿನ ಸಾಧಾರಣ ಮಳೆ ಬೀಳಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಇದೇ ರೀತಿ, ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಮೈಸೂರು, ಮಂಡ್ಯ, ಕೋಲಾರ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ವಿಜಯನಗರ, ತುಮಕೂರು,ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಮುಂದಿನ ಐದು ದಿನಗಳ ಅವಧಿಯ ಪೈಕಿ ಇಂದು ಭಾರಿ ಹೆಚ್ಚಿನ ಪ್ರಮಾಣದ ಮಳೆ ಈ ಪ್ರದೇಶದ ಹಲವೆಡೆ ಬೀಳಬಹುದಾದ್ದರಿಂದ ಕೆಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಜುಲೈ 21, 22 ರಂದು ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಟ್ವೀಟ್ನಲ್ಲಿ ತಿಳಿಸಿದೆ.
ಕರ್ನಾಟಕದ 8 ನದಿ ತಟಗಳಲ್ಲಿ ಭಾರಿ ಪ್ರವಾಹ ಪರಿಸ್ಥಿತಿ, ಇನ್ನು 8 ನದಿ ತಟಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಪ್ರವಾಹ
ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಮುಂದುವರಿದಿದೆ. ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿನ್ನೆ (ಜುಲೈ 19) ಅಪರಾಹ್ನ 3 ಗಂಟೆಗೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 8 ನದಿಗಳಲ್ಲಿ ಗಂಭೀರ ಪ್ರವಾಹ ಪರಿಸ್ಥಿತಿ ಇದ್ದರೆ, ಇನ್ನು 8 ನದಿಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಪ್ರವಾಹ ಪರಿಸ್ಥಿತಿ ಇದೆ.
8 ನದಿ ತಟಗಳಲ್ಲಿ ಗಂಭೀರ ಪ್ರವಾಹ: ಉತ್ತರ ಕನ್ನಡದ ಅಘನಾಶಿನಿಯ ಸಂತೆಗುಳಿ ಭಾಗ, ಶಿವಮೊಗ್ಗದ ತುಂಗಾ ನದಿ ಮಹಿಷಿ, ಶಿವಮೊಗ್ಗ, ಹರಿಹರಪುರ (ಚಿಕ್ಕಮಗಳೂರು), ನೇತ್ರಾವತಿ ನದಿ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ, ಹಾರಂಗಿ ಕೊಡಗಿನ ಮುಕ್ಕೋಡ್ಲು, ಕಬಿನಿ ಮೈಸೂರಿನ ಹೊಮ್ಮರಗಳ್ಳಿ, ವಯನಾಡಿನ ಮುತಂಕೆರದಲ್ಲಿ ಗಂಭೀರ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದೆ.
8 ನದಿ ತಟಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಪ್ರವಾಹ: ಉಡುಪಿಯ ಸೀತಾ ನದಿ ಅವರ್ಶೆಯಲ್ಲಿ, ಸ್ವರ್ಣಾ ನದಿ ಎಣ್ಣೆಹೊಳೆಯಲ್ಲಿ, ಶಾಂಭವಿ ನದಿ ಸಣೂರಿನಲ್ಲಿ, ಗುರುಪುರ ಹೊಳೆ ದಕ್ಷಿಣಕನ್ನಡದ ಅಡ್ಡೂರು ಎಂಬಲ್ಲಿ, ಹೇಮಾವತಿ ನದಿ ಚಿಕ್ಕಮಗಳೂರಿನ ಬೆಟ್ಟದ ಮನೆ ಭಾಗದಲ್ಲಿ, ಕಾವೇರಿ ನದಿ ಕೊಡಗು ಜಿಲ್ಲೆಯ ನಾಪೋಕ್ಲು, ಮೈಸೂರು ಜಿಲ್ಲೆಯ ಚುಂಚನಕಟ್ಟೆ, ಚಾಮರಾಜನಗರದ ಕೊಳ್ಳೇಗಾಲದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಿಸಿದೆ.