Karnataka Monsoon: ಜೂನ್ 2ನೇ ವಾರದಲ್ಲಿ ಕರ್ನಾಟಕಕ್ಕೆ ಆಗಮಿಸಲಿದೆ ಮುಂಗಾರು ಮಳೆ
ಜೂನ್ ಮೊದಲ ವಾರದಲ್ಲಿ ಕೇರಳದಲ್ಲಿ ಮುಂಗಾರು ಆರಂಭವಾಗಲಿದ್ದು, ಬೇಸಿಗೆ ಅಂತ್ಯವಾಗಲಿದೆ. ಜೂನ್ 4 ರಂದು ಕೇರಳ ಪ್ರವೇಶಿಸಿದ ಒಂದು ವಾರದ ಬಳಿಕ, ಅಂದರೆ ಜೂನ್ ಎರಡನೇ ವಾರದಲ್ಲಿ ಕರ್ನಾಟಕದಲ್ಲಿ ಮುಂಗಾರು ಮಳೆ (Karnataka Monsoon) ಬೀಳಲಿದೆ.
ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು (Monsoon) ಮಳೆ ಸ್ವಲ್ಪ ವಿಳಂಬವಾಗಿ ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ವಾಡಿಕೆಯಂತೆ ದೇವರ ನಾಡು ಕೇರಳ ರಾಜ್ಯಕ್ಕೆ ಮೊದಲು ಮುಂಗಾರು (Kerala Monsoon) ಪ್ರವೇಶವಾಗುತ್ತದೆ. ಜೂನ್ ಮೊದಲ ವಾರದಲ್ಲಿ ಕೇರಳದಲ್ಲಿ ಮುಂಗಾರು ಆರಂಭವಾಗಲಿದ್ದು, ಬೇಸಿಗೆ ಅಂತ್ಯವಾಗಲಿದೆ. ಜೂನ್ 4 ರಂದು ಕೇರಳ ಪ್ರವೇಶಿಸಿದ ಒಂದು ವಾರದ ಬಳಿಕ, ಅಂದರೆ ಜೂನ್ ಎರಡನೇ ವಾರದಲ್ಲಿ ಕರ್ನಾಟಕದಲ್ಲಿ ಮುಂಗಾರು ಮಳೆ (Karnataka Monsoon) ಬೀಳಲಿದೆ. ಹವಾಮಾನ ವೈಪರೀತ್ಯದಿಂದ ಮುಂಗಾರು ಪ್ರವೇಶ ವಿಳಂಬವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ವರ್ಷ ನಾಲ್ಕು ದಿನ ತಡವಾಗಿ ಮುಂಗಾರು ಮಾರುತಗಳು ಕೇರಳಕ್ಕೆ ಪ್ರವೇಶಿಸಲಿದ್ದು, ಇದರಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆಯ ಆರಂಭ ಒಂದು ವಾರ ಏರುಪೇರಾಗಲಿದೆ. ಕೇರಳ ನಂತರ ಹಂತ ಹಂತವಾಗಿ ದೇಶದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆ ಸುರಿಯಲಿದೆ. ಮುಂಗಾರು ಅವಧಿಯಲ್ಲಿ ಸುರಿಯುವ ಮಳೆಯು ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ.
ಭಾರತದ ಕೃಷಿ ಸಚಿವಾಲಯದ ಪ್ರಕಾರ, ಭಾರತದ ಕೃಷಿ ಪ್ರದೇಶದ ಶೇಕಡಾ 51 ರಷ್ಟು ಉತ್ಪಾದನೆಯ ಶೇಕಡಾ 40ರಷ್ಟು ಭಾಗ ಮಳೆ ಆಧಾರಿತವಾಗಿದೆ. ಈ ವರ್ಷದ ಆರ್ಥಿಕ ಸಮೀಕ್ಷೆಯ ಪ್ರಕಾರ ಭಾರತದ ಜನಸಂಖ್ಯೆಯ ಶೇ.47 ರಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಮಾನ್ಸೂನ್ ಹಾಗೂ ಗ್ರಾಮೀಣ ಆರ್ಥಿಕತೆ ನೇರ ಸಂಬಂಧ ಹೊಂದಿದೆ.
ಕರ್ನಾಟಕದಲ್ಲಿ 2 ದಿನ ಮಳೆ
ರಾಜ್ಯದ ದಕ್ಷಿಣ ಒಳನಾಡಿನ ಹಲೆವೆಡೆ ಇಂದು (ಮೇ 17) ಮತ್ತು ನಾಳೆ (ಮೇ 18) ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಎರಡು ದಿನ ಮಳೆಯಾಗಲಿದೆ. ಕರಾವಳಿ ಮತ್ತು ಉತ್ತರ ಒಳನಾಡಲ್ಲಿ ಒಣಹವೆ ಮುಂದುವರೆಯಲಿದೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಸಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ನಗರದಲ್ಲಿ ಶುಭ್ರ ಆಕಾಶವಿರಲಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೋಖಾ ಚಂಡಮಾರುತದ ಪ್ರಭಾವದಿಂದ ದೇಶದ ವಿವಿಧ ರಾಜ್ಯಗಳಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಕರ್ನಾಟಕದಲ್ಲಿಯೂ ಕೆಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಿತ್ತು.
ಬಿಸಿಲನಾಡು ಕಲಬುರಗಿಯಲ್ಲಿ ಬಿಸಿಲಿನ ಛಳಕ್ಕೆ ಜನರು ತತ್ತರಿಸಿದ್ದಾರೆ. ಇದೇ ಸಮಯದಲ್ಲಿ ಮುಂದಿನ ಮೂರು ದಿನ ಇದೇ ರೀತಿ ಬಿಸಿಲು, ಬಿಸಿಗಾಳಿ ಇರುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಬಿಸಿಲಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು? ಏನು ಮಾಡಬಾರದು? ಎಂಬ ಸಲಹೆಯೂ ಇಲ್ಲಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ