ಬೆಂಗಳೂರು ಸಮೀಪ 10000 ಎಕರೆ ಬಿಡದಿ ಟೌನ್‌ಶಿಪ್‌; ಮಾಜಿ ಪ್ರಧಾನಿ ದೇವೇಗೌಡರ ವಿರೋಧ ಏಕೆ, ಡಿಸಿಎಂ ಡಿಕೆ ಶಿವಕುಮಾರ್‌ ಸಮರ್ಥನೆ ಏನು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಸಮೀಪ 10000 ಎಕರೆ ಬಿಡದಿ ಟೌನ್‌ಶಿಪ್‌; ಮಾಜಿ ಪ್ರಧಾನಿ ದೇವೇಗೌಡರ ವಿರೋಧ ಏಕೆ, ಡಿಸಿಎಂ ಡಿಕೆ ಶಿವಕುಮಾರ್‌ ಸಮರ್ಥನೆ ಏನು

ಬೆಂಗಳೂರು ಸಮೀಪ 10000 ಎಕರೆ ಬಿಡದಿ ಟೌನ್‌ಶಿಪ್‌; ಮಾಜಿ ಪ್ರಧಾನಿ ದೇವೇಗೌಡರ ವಿರೋಧ ಏಕೆ, ಡಿಸಿಎಂ ಡಿಕೆ ಶಿವಕುಮಾರ್‌ ಸಮರ್ಥನೆ ಏನು

ಬೆಂಗಳೂರಿಗೆ ಹೊಂದಿಕೊಂಡಿರುವ ಬಿಡದಿ ಟೌನ್‌ಶಿಪ್ ಹೇಗಿರಲಿದೆ, 10 ಸಾವಿರ ಎಕರೆ ಭೂಮಿಯಲ್ಲಿ ಏನೆಲ್ಲಾ ಯೋಜನೆಗಳಿರಲಿವೆ, ಟೌನ್‌ ಶಿಪ್‌ ಗೆ ಮಾಜಿ ಪ್ರಧಾನಿ ದೇವೇಗೌಡರ ವಿರೋಧ ಏಕೆ? ಡಿಸಿಎಂ ಶಿವಕುಮಾರ್‌ ಅವರ ಸಮರ್ಥನೆ ಏನು? (ವರದಿ- ಎಚ್.‌ ಮಾರುತಿ, ಬೆಂಗಳೂರು)

ಬೆಂಗಳೂರು ಸಮೀಪ 10000 ಎಕರೆ ಬಿಡದಿ ಟೌನ್‌ಶಿಪ್‌ ಬರಲಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದರ ಬೆನ್ನಿಗೆ ನಿಂತರೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಸಮೀಪ 10000 ಎಕರೆ ಬಿಡದಿ ಟೌನ್‌ಶಿಪ್‌ ಬರಲಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದರ ಬೆನ್ನಿಗೆ ನಿಂತರೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. (ಸಾಂಕೇತಿಕ ಚಿತ್ರ)

ಗ್ರೇಟರ್‌ ಬೆಂಗಳೂರು ಟೌನ್‌ ಶಿಪ್‌ ಅಡಿಯಲ್ಲಿ ಬೆಂಗಳೂರಿಗೆ ಹೊಂದಿಕೊಂಡಿರುವ ಬಿಡದಿಯಲ್ಲಿ ಸುಮಾರು 10,000 ಎಕರೆ ಪ್ರದೇಶದಲ್ಲಿ ಟೌನ್ ಶಿಪ್‌ ಅಭಿವೃದದಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆ ಉಪ ಮುಖ್ಯಮಂತ್ರಿಗಳೂ ಆದ ಡಿ.ಕೆ.ಶಿವಕುಮಾರ್‌ ಅವರ ಕನಸಿನ ಕೂಸೂ ಹೌದು. ಅವರ ಕನಸಿನಂತೆ ಈ ಟೌನ್‌ ಶಿಪ್‌ ನಿರ್ಮಾಣವಾದರೆ ಅಭಿವೃದ್ದಿ ಮತ್ತು ಮೂಲಭೂತ ಸೌಕರ್ಯದಲ್ಲಿ ಈಗಿನ ಬೆಂಗಳೂರನ್ನೂ ಹಿಂದಿಕ್ಕುವುದರಲ್ಲಿ ಸಂಶಯವೇ ಇಲ್ಲ.

ವಿನೂತನ ಟೌನ್‌ ಶಿಪ್ ಯೋಜನೆಯಿಂದ ಈ ಭೂ ಭಾಗ ಆಧುನಿಕ ಮತ್ತು ಮಾದರಿ ನಗರವಾಗಿ ರೂಪುಗೊಳ್ಳಲಿದೆ. ಯೋಜನಾ ಬದ್ಧವಾಗಿ ರಚಿಸಲಾಗಿರುವ ದೆಹಲಿ ಚಂಡೀಗಡ ಮೊದಲಾದ ಅತ್ಯುತ್ತಮ ನಗರಗಳ ಅಧ್ಯಯನ ನಡೆಸಿ ಗ್ರೇಟರ್‌ ಬೆಂಗಳೂರು ವಿನ್ಯಾಸ ಮಾಡಲಾಗುತ್ತದೆ. ಗ್ರೇಟರ್‌ ಬೆಂಗಳೂರು ನಗರಾಭಿವೃದ್ಧಿಯಲ್ಲಿ ದೇಶಕ್ಕೆ ಒಂದು ಬೆಂಚ್‌ ಮಾರ್ಕ್‌ ಹಾಕಿಕೊಡಲಿದೆ ಎಂದು ಡಿಕೆ ಶಿವಕುಮಾರ್‌ ಹೇಳುತ್ತಾರೆ.

ಗ್ರೇಟರ್‌ ಬೆಂಗಳೂರಿಗೆ ಸೇರುವ ಗ್ರಾಮಗಳು

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಡದಿ ಹೋಬಳಿಗೆ ಸೇರಿರುವ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳ ಸುಮಾರು 10 ಸಾವಿರ ಎಕರೆ ಜಮೀನನ್ನು ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಟೌನ್‌ ಶಿಪ್‌ ನಿರ್ಮಾಣ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿದೆ. ಈ ಯೋಜನೆಗೆ ಅಳ್ಳಾಲಸಂದ್ರ, ಕಂಚುಗಾರನಹಳ್ಳಿ ಕಾವಲ್, ಕಂಚುಗಾರನಹಳ್ಳಿ, ಗೊಲ್ಲರಪಾಳ್ಯ, ಕೆಂಪಯ್ಯನಪಾಳ್ಯ, ಬನ್ನಿಗೆರೆ, ಬೈರಮಂಗಲ, ಮಂಡಲಹಳ್ಳಿ, ಹೊಸೂರು ಮತ್ತು ವಡೇರಹಳ್ಳಿ ಗ್ರಾಮಗಳ ಭೂಮಿ ಸೇರಿದೆ.

ಉದ್ದೇಶಿತ ಟೌನ್‌ಶಿಪ್‌ ಯೋಜನೆಯಲ್ಲಿ 2,742 ಎಕರೆ ಪ್ರದೇಶದಲ್ಲಿ ಎಕಾನಾಮಿಕ್ ಕಾರಿಡಾರ್ ರಚನೆಯಾಗಲಿದೆ. 37 ಕಿ.ಮೀ. ಯಷ್ಟು ಎಕಾನಾಮಿಕ್ ಕಾರಿಡಾರ್‌ ಇರಲಿದೆ. ನೈಸ್‌ ರಸ್ತೆ, ಎನ್‌ಹೆಚ್‌ 204, ಎನ್‌ಹೆಚ್‌ 275 ಮತ್ತು ಎಸ್‌ಟಿಟಿಆರ್ ಸಂಪರ್ಕಿಸುವಂತೆ ಟೌನ್‌ ಶಿಪ್‌ ನಿರ್ಮಾಣವಾಗಲಿದೆ.

ಬೆಂಗಳೂರು ನಗರದ ವಿಸ್ತರಣೆಯ ಭಾಗವಾಗಿ 2031ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್‌ಡಿಎ ಈ ಯೋಜನೆ ರೂಪಿಸಿದೆ. ಅಭಿವೃದ್ಧಿ ಕಾರ್ಯಗಳ ಜತೆಗೆ ಮೂಲ ಸೌಕರ್ಯಗಳನ್ನೂ ಕಲ್ಪಿಸಲಾಗುತ್ತದೆ. ಜ.30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಡದಿ ಮತ್ತು ಹಾರೋಹಳ್ಳಿ ನಡುವೆ ಸ್ಯಾಟಲೈಟ್ ಟೌನ್‌ಶಿಪ್ ನಿರ್ಮಾಣ ಮಾಡಲು ಒಪ್ಪಿಗೆ ದೊರೆತಿತ್ತು.

ವಿರೋಧ ಏಕೆ?

ಬಿಡದಿ ಯೋಜನೆಯನ್ನು ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪತ್ರ ಬರೆಡಿದ್ದಾರೆ. ರಾಮನಗರ ಜಿಲ್ಲೆಯ ರಾಮನಗರ ಮತ್ತು ಕನಕಪುರ ತಾಲ್ಲೂಕುಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರ ಕೈಗಾರಿಕಾಭಿವೃದ್ಧಿಗಾಗಿ ಸಾವಿರಾರು ಎಕರೆ ರೈತರ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕಾಭಿವೃದ್ಧಿ ಪ್ರದೇಶವನ್ನು ಸ್ಥಾಪಿಸಿದೆ.

ರಾಮನಗರ ಜಿಲ್ಲೆ ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂದಂತೆ ಇದ್ದು, ಹಲವಾರು ಉದ್ಯಮಗಳು, ಕೈಗಾರಿಕೆಗಳು ಸ್ಥಾಪನೆಯಾಗಿವೆ. ಉಳಿದ ಕೃಷಿ ಭೂಮಿಯಲ್ಲಿ ರೈತರು ತಮ್ಮ ಜೀವನ ನಿರ್ವಹಣೆಗೆ ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ ನಡೆಸುತ್ತಿದ್ದಾರೆ. ಬಹುಪಾಲು ರೈತರು ಅತೀ ಸಣ್ಣ ಮತ್ತು ಸಣ್ಣ ಹಿಡುವಳಿದಾರರಾಗಿದ್ದು ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ರೈತರು ತಮ್ಮ ಜಮೀನಿನಲ್ಲಿ ಮತ್ತು ಜಮೀನಿನ ಸುತ್ತ ಲಕ್ಷಾಂತರ ಮರ ಗಿಡಗಳನ್ನು ಬೆಳೆಸಿದ್ದಾರೆ. ಇಂತಹ ಪ್ರದೇಶವನ್ನು ಟೌನ್‌ ಶಿಪ್ ಯೋಜನೆಗೆ ಸ್ವಾಧೀನಪಡಿಸಿಕೊಂಡರೆ ಪರಿಸರಕ್ಕೆ ಅಪಾರ ಹಾನಿ ಉಂಟಾಗುತ್ತದೆ ಎಂದು ಎಚ್‌ ಡಿ ದೇವೇಗೌಡ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಡಿಕೆ ಶಿವಕುಮಾರ್ ಸಮರ್ಥನೆ

ಬಿಡದಿ ಸೇರಿದಂತೆ 7 ಬೆಂಗಳೂರು ಸುತ್ತಮುತ್ತ ಟೌನ್‌ ಶಿಪ್‌ ಯೋಜನೆಗೆ ಭೂಮಿ ಸ್ವಾದೀನಕ್ಕೆ ಮುಂದಾಗಿದ್ದು, 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ. ಅವರೇ ಈ ಯೋಜನೆಯ ಪಿತಾಮಹ. ಇದೀಗ ಅವರ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಟೌನ್‌ ಶಿಪ್‌ ಯೋಜನೆಯನ್ನು ವಿರೋಧಿಸುತ್ತಿರುವುದು ಏಕೆ ಎಂದು ಶಿವಕುಮಾರ್‌ ಪ್ರಶ್ನಿಸಿದ್ದಾರೆ. ಈ ಯೋಜನೆಗಾಗಿ ಡಿಎಲ್‌ ಎಫ್‌ ಕಂಪನಿಯಿಂದ 300 ಕೋಟಿ ರೂ. ಹಣವನ್ನು ಸರ್ಕಾರಕ್ಕೆ ಕಟ್ಟಿಸಿಕೊಂಡಿದ್ದರು. ನಂತರ ಬಂದ ಬಿಜೆಪಿ ಸರ್ಕಾರ ಈ ಯೋಜನೆ ಅಸಾಧ್ಯ ಎಂದು ಹಣವನ್ನು ಮರಳಿಸಿತು ಎನ್ನವುದನ್ನು ಅವರು ನೆನಪಿಸಿದ್ದಾರೆ.

ಸರ್ಕಾರ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಉಳಿಸಿಕೊಳ್ಳಲಿದೆ. ಪ್ರತಿ ಬಾರಿ ಡಿನೋಟಿಫೈ ಮಾಡಿದಾಗ ಭ್ರಷಾಚಾರದ ಆರೋಪ ಕೇಳಿ ಬರುತ್ತದೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರೇ ಡಿನೋಟಿಫೈ ಮಾಡಬಹುದಾಗಿತ್ತು. ಅವರು ಮಾಡಲಿಲ್ಲ ಏಕೆ ಎಂದೂ ಪ್ರಶ್ನಿಸಿದ್ದಾರೆ.

ಈ ಯೋಜನೆಯಿಂದ ರೈತರಿಗೆ ತೊಂದರೆಯಾಗುವುದಿಲ್ಲ. ರೈತರಿಗೆ ಹಣ ಇಲ್ಲವೇ ಅಭಿವೃದ್ಧಿ ಪಡಿಸಿದ ಭೂಮಿಯನ್ನು ನೀಡಲಾಗುತ್ತದೆ. ಅವರ ಕಾಳಜಿ ಸಮಸ್ಯೆಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳಲಿದೆ ಮತ್ತು ಪರಿಹರಿಸಲಿದೆ ಎಂದು ಡಿಕೆ ಶಿವಕುಮಾರ್‌ ಭರವಸೆ ನೀಡಿದ್ದಾರೆ.

(ವರದಿ- ಎಚ್‌.ಮಾರುತಿ, ಬೆಂಗಳೂರು)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.