ಕನ್ನಡ ಸುದ್ದಿ  /  Karnataka  /  Where Has Modi's Humility Towards Yeddyurappa Gone For So Long? Dk Shivakumar Questions

DK Shivakumar: ಯಡಿಯೂರಪ್ಪರಿಗೆ ಮೋದಿ ತೋರಿದ ನಮ್ರತೆ ಇಷ್ಟು ದಿನ ಎಲ್ಲಿ ಹೋಗಿತ್ತು? ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಿದ್ಯಾಕೆ?

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತೋರಿದ ನಮ್ರತೆ ಇಷ್ಟು ದಿನ ಎಲ್ಲಿ ಹೋಗಿತ್ತು? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್‌ (ಸಂಗ್ರಹ ಚಿತ್ರ)
ಡಿಕೆ ಶಿವಕುಮಾರ್‌ (ಸಂಗ್ರಹ ಚಿತ್ರ) (PTI)

ಬೆಂಗಳೂರು: ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಗಳು, ಅವರನ್ನು ನಾವು ಗೌರವಿಸುತ್ತೇವೆ. ಆದರೆ ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಅವರಿಗೆ ಕೊಟ್ಟ ನೋವು, ವಿಧಾನಸೌಧದಿಂದ ರಾಜ್ಯಪಾಲರ ಮನೆವರೆಗೂ ಕಣ್ಣೀರು ಹಾಕಿಕೊಂಡು ಹೋಗಿ ರಾಜೀನಾಮೆ ನೀಡಿದ್ದರ ಬಗ್ಗೆ ಮೋದಿ ಅವರು ಮಾತನಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

"ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತೋರಿದ ನಮ್ರತೆ ಇಷ್ಟು ದಿನ ಎಲ್ಲಿ ಹೋಗಿತ್ತು? ಅವರ ಕಣ್ಣಲ್ಲಿ ನೀರು ಹಾಕಿಸಿ ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾಕೆ ಎಂಬುದರ ಬಗ್ಗೆ ಪ್ರಧಾನಮಂತ್ರಿಗಳು ಸ್ಪಷ್ಟನೆ ನೀಡಲಿ’ ಎಂದು ಅವರು ಪ್ರಶ್ನಿಸಿದ್ದಾರೆ.

"ಯಡಿಯೂರಪ್ಪ, ಅವರ ಕುಟುಂಬ ಸದಸ್ಯರು, ಆಪ್ತರ ಮೇಲೆ ಇಡಿ ದಾಳಿ ನೋಟೀಸ್ ನೀಡಿರುವ ಬಗ್ಗೆ, ಅವರನ್ನು ತನಿಖಾಧಿಕಾರಿಗಳು ಎಷ್ಟು ಬಾರಿ ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ ಎಂಬುದರ ಬಗ್ಗೆ ಮೋದಿ ಅವರು ವಿವರಣೆ ನೀಡಬೇಕುʼʼ ಎಂದರು.

ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ನಡೆಸಿ 104 ಸೀಟು ಪಡೆದ ನಂತರ ಅಧಿಕಾರದಿಂದ ಯಾಕೆ ಇಳಿಸಿದರು? ಚುನಾವಣೆ ಮಾಡಲು ಅವರು ಬೇಕಾಗಿತ್ತು, ಆಪರೇಷನ್ ಕಮಲ ಮಾಡಲು ಅವರು ಬೇಕಾಗಿತ್ತು, ಆದರೆ ಅಧಿಕಾರವನ್ನು ಯಾಕೆ ಕಸಿದುಕೊಂಡರು? ಅವರನ್ನು ನಾಯಕತ್ವದಿಂದ ತೆಗೆದ ನಂತರ ಪಕ್ಷಕ್ಕೆ ಅಭದ್ರತೆ ಎಂದುರಾಗಿದೆ. ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬ ಮಾಡಲು ಮುಂದಾದಾಗ ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಅವರ ಕಾಲದಲ್ಲಿ ಮಾಡಿದ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದಾರೆ ಸಂತೋಷ. ಆದರೆ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರಿಗೆ ತೋರಿದ ನಮ್ರತೆ ಇಷ್ಟು ದಿನ ಎಲ್ಲಿಗೆ ಹೋಗಿತ್ತು? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎಂದು ಅಧಿಕೃತವಾಗಿ ಘೋಷಿಸಿ, ಅವರಿಗೆ ಜವಾಬ್ದಾರಿ ನೀಡಲಿ. ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಲಿ. ಆಗ ಅವರ ನಮ್ರತೆಯನ್ನು ಜನ ನಂಬುತ್ತಾರೆ. ಅದನ್ನು ಬಿಟ್ಟು ರಾಜಕಾರಣದಲ್ಲಿ ನಾಟಕೀಯ ಸಿಂಪತಿಯನ್ನು ಜನ ಒಪ್ಪುವುದಿಲ್ಲ ಎಂದರು.

ವೀರೇಂದ್ರ ಪಾಟೀಲ್ ಹಾಗೂ ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್ ಅಪಮಾನ ಮಾಡಿತ್ತು ಎಂಬ ಬಿಜೆಪಿ ಆಪಾದನೆ ಕುರಿತ ಪ್ರಶ್ನೆಗೆ ಡಿಕೆ ಶಿವಕುಮಾರ್‌ ಹೀಗಂದರು.

‘ನಾನು ಅವರ ಕಾಲದಲ್ಲಿ ಶಾಸಕನಾಗಿದ್ದೆ. ವೀರೇಂದ್ರ ಪಾಟೀಲ್ ಅವರ ಆರೋಗ್ಯ ಏನಾಗಿತ್ತು ಎಂದು ನನಗೆ ಗೊತ್ತಿದೆ. ನಾನು ರಾಜೀವ್ ಗಾಂಧಿ ಅವರ ಜತೆ ಆಸ್ಪತ್ರೆಗೆ ಹೋಗಿದ್ದೆ. ಅವರ ಆರೋಗ್ಯ ಪರಿಸ್ಥಿತಿ ವಿಚಾರಿಸಿದರು. ಅವರು ಚೇತರಿಸಿಕೊಳ್ಳುವ ಪರಿಸ್ಥಿತಿ ಇರಲಿಲ್ಲ. ಹೀಗಾಗಿ ಚರ್ಚೆ ಮಾಡಿ, ವಿರೇಂದ್ರ ಪಾಟೀಲ್ ಅವರನ್ನು ಬದಲಿಸುವ ತೀರ್ಮಾನ ಮಾಡಲಾಯಿತು. ಇಂದಿರಾ ಗಾಂಧಿ ಅವರ ವಿರುದ್ಧ ಸ್ಪರ್ಧೆ ಮಾಡಿದವರನ್ನು ಪಕ್ಷಕ್ಕೆ ವಾಪಸ್ ಕರೆತಂದು ಲೋಕಸಭೆಗೆ ನಿಲ್ಲಿಸಿ, ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಿರುವ ಇತಿಹಾಸ, ಹೃದಯ ಶ್ರೀಮಂತಿಕೆ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷಕ್ಕಿದೆ. ನಿಜಲಿಂಗಪ್ಪ ಅವರ ಸ್ಮಾರಕ ವಿಚಾರ. ನಿಜಲಿಂಗಪ್ಪ ಅವರನ್ನು ಭೇಟಿ ಮಾಡಲು ಸೋನಿಯಾ ಗಾಂಧಿ ಹಾಗೂ ಎಸ್.ಎಂ ಕೃಷ್ಣ ಅವರು ಹೋಗಿದ್ದರು. ನಿಜಲಿಂಗಪ್ಪ ಅವರಿಗೆ ಗೌರವ ನೀಡಲು ಅವರ ಅಳಿಯನನ್ನು ಎಂಎಲ್ಸಿ ಮಾಡಿದ್ದರು. ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್ ಇತಿಹಾಸ. ನಾವು ಬಿಜೆಪಿಯವರಂತೆ ನಾಟಕೀಯ ಸಿಂಪತಿ ವ್ಯಕ್ತ ಪಡಿಸುವುದಿಲ್ಲ’ ಎಂದು ಹೇಳಿದ್ದಾರೆ.

ಲಿಂಗಾಯತರ ಮತ ಕೈತಪ್ಪುತ್ತಿದೆ ಎಂದು ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರಾ ಎಂದು ಕೇಳಿದಾಗ, ‘ಈ ವಿಚಾರವಾಗಿ ನಾನು ಮಾತನಾಡುವುದಿಲ್ಲ. ನಾನು ಜಾತಿ ಆಧಾರದ ಮೇಲೆ ಹೇಳಿಕೆ ನೀಡುವುದಿಲ್ಲ. ಯಾವ ಮತದಾರನೂ ದಡ್ಡನಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ತೀರ್ಮಾನ ಕೈಗೊಳ್ಳಲಿದ್ದಾರೆ. ಬಿಜೆಪಿ ಎಷ್ಟು ನಾಯಕರನ್ನು ಬಳಸಿ ಬಿಸಾಡಿದೆ ಎಂಬುದು ಜನರಿಗೆ ಗೊತ್ತಿದೆ. ಈಗ ಆ ಬಗ್ಗೆ ಮಾತನಾಡುವುದಿಲ್ಲ’ ಎಂದರು.

ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ಮೋದಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು 40% ಕಮಿಷನ್ ದೂರು ನೀಡಿದ ಕೆಂಪಣ್ಣ ಅವರಿಗೆ ಯಾಕೆ ಉತ್ತರ ನೀಡುತ್ತಿಲ್ಲ? ಪಿಎಸ್ಐ ಹಗರಣ, ನೇಮಕಾತಿ ಅಕ್ರಮ ಯಾರಿಂದ ಆಗುತ್ತಿದೆ? ಸ್ಕಿಲ್ ಇಂಡಿಯಾ ಕಿಲ್ ಇಂಡಿಯಾ ಆಗಿದೆ. ಇದೆಲ್ಲದರ ಬಗ್ಗೆ ನಾವು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ನಂತರ ಈ ವಿಚಾರವಾಗಿ ಮಾತನಾಡುತ್ತೇವೆ. ಈ ಹಗರಣಗಳ ಬಗ್ಗೆ ಮೋದಿ ಅವರಿಗೆ ಮಾಹಿತಿ ಇಲ್ಲವೇ? ಬಿಜೆಪಿ ಸರ್ಕಾರ ರಾಜ್ಯವನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿದೆ. ದೇಶದಲ್ಲಿ ರಾಜ್ಯವನ್ನು ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದೆ. ಈ ಬಗ್ಗೆ ಅವರು ಮಾತನಾಡುತ್ತಿಲ್ಲ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿದರು. ಆದರೆ ಶಿವಮೊಗ್ಗಕ್ಕೆ ಬಂಡವಾಳ ಹೂಡಿಕೆ ಮಾಡಲು ಯಾರೂ ಬರುತ್ತಿಲ್ಲ ಎಂದು ಯಾಕೆ ಹೇಳುತ್ತಿಲ್ಲ? ಈ ಬಗ್ಗೆ ಪ್ರಧಾನಮಂತ್ರಿಗಳು, ಅಮಿತ್ ಶಾ ಅವರು ಯಾಕೆ ಮಾತನಾಡುತ್ತಿಲ್ಲ. ಬಿಜೆಪಿ ಎಂಎಲ್ಸಿ ಆಯನೂರು ಮಂಜುನಾಥ್ ಅವರ ಪೋಸ್ಟರ್ ವಿಚಾರವಾಗಿ ಮುಖ್ಯಮಂತ್ರಿಗಳು ಯಾಕೆ ಮಾತನಾಡುತ್ತಿಲ್ಲ? ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎಂದವರು ಈಗ ಪ್ರಧಾನಿಗಳ ನೇತೃತ್ವದಲ್ಲಿ ಚುನಾವಣೆ ಎಂದು ಹೇಳುತ್ತಿರುವುದು ಯಾಕೆ? ಬಿಜೆಪಿ ಮುಕ್ತ ಕರ್ನಾಟಕ ನಿರ್ಮಾಣದ ದಿನಗಳು ಸನಿಹದಲ್ಲಿದೆ’ ಎಂದರು.

ಕಾಂಗ್ರೆಸ್ ರಾಷ್ಟ್ರೀಯ ನಾಯಕರು ರಾಜ್ಯ ಪ್ರವಾಸ ಯಾವಾಗ ಮಾಡುತ್ತಾರೆ ಎಂದು ಕೇಳಿದ ಪ್ರಶ್ನೆಗೆ, ‘ಸಮಯ ಬಂದಾಗ ಅವರು ಬರುತ್ತಾರೆ. ಯಾರು ಯಾವಾಗ ಬರಬೇಕು ಎಂದು ತೀರ್ಮಾನಿಸಿದ ನಂತರ ಬರುತ್ತಾರೆ. ನಾವು ನಮ್ಮದೇ ಆದ ರೀತಿಯಲ್ಲಿ ಅವರನ್ನು ಕರೆಸಿ ಪ್ರಚಾರ ಸಭೆ ಮಾಡಿಸುತ್ತೇವೆ. ಅನೇಕ ಮಾಜಿ ಮಂತ್ರಿಗಳು, ಕೇಂದ್ರ ನಾಯಕರು ಪ್ರತಿ ಜಿಲ್ಲೆಗೂ ಬಂದು ಕೆಲಸ ಮಾಡುತ್ತಿದ್ದಾರೆ’ ಎಂದರು.

IPL_Entry_Point