Forest News: ಕಾಡಾನೆಗಳು ಬಂದಿದ್ದರೆ ಪಂಚಾಯಿತಿಗಳ ಜತೆಗೆ ಡಿಸಿ, ಎಸ್ಪಿಗೂ ನಿಖರ ಮಾಹಿತಿ ಕೊಡಬೇಕು: ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು
Forest News: ಕರ್ನಾಟಕದಲ್ಲಿ ಬೇಸಿಗೆ ಬರುತ್ತಿರುವುದರಿಂದ ಕಾಡಾನೆಗಳನ್ನು ನೀರು ಆಹಾರ ಅರಸಿ ನಾಡಿನತ್ತ ಬರುವ ಸಾಧ್ಯತೆಯಿರುವುದರಿಂದ ಸಂಘಟಿತವಾಗಿ ಸಮಸ್ಯೆ ಎದುರಿಸುವಂತೆ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Forest News: ಕರ್ನಾಟಕದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಹಲವು ಜಿಲ್ಲೆಗಳಲ್ಲಿ ಕಾಡಾನೆಗಳ ಹಿಂಡು ನುಗ್ಗಿ ದಾಂದಲೆ ಮಾಡುತ್ತಿವೆ. ಕಳೆದ ವಾರ ಒಂದೇ ದಿನ ಕಾಡಾನೆ ದಾಳಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮೂವರು ಮೃತಪಟ್ಟ ನಂತರ ಕರ್ನಾಟಕ ಅರಣ್ಯ ಇಲಾಖೆಯೂ ಆನೆಗಳ ನಿರ್ವಹಣೆಗೆ ನಿಖರ ಹಾಗೂ ಸಂಘಟಿತ ಚಟುವಟಿಕೆ ರೂಪಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ. ಕಾಡಾನೆಗಳ ಸಮಸ್ಯೆ ಇರುವ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಯಾ ಗ್ರಾಮ ಪಂಚಾಯಿತಿಗಳಿಗೆ ಸಕಾಲಿಕವಾಗಿ ಆನೆಗಳು ಸಂಚರಿಸಬಹುದಾದ ಮಾಹಿತಿಯನ್ನು ಒದಗಿಸಿ ಅದು ಜನರಿಗೆ ಕೂಡಲೇ ತಲುಪುವಂತೆ ಮಾಡಬೇಕು. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಡಿಸಿಎಫ್ ಮೂಲಕ ಮಾಹಿತಿ ಒದಗಿಸಿ ನಿರ್ವಹಣೆಗೆ ಸಹಕಾರ ಪಡೆಯಬೇಕು ಎಂದು ಸೂಚಿಸಲಾಗಿದೆ.
ಮೈಸೂರು, ಕೊಡಗು, ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮೂವರು ಮೃತಪಟ್ಟು ಅಲ್ಲಲ್ಲಿ ಆನೆಗಳು ದಾಳಿ ಮಾಡಿರುವ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಕಾಡಾನೆಗಳನ್ನು ನಿಯಂತ್ರಿಸುವ ಹಾಗೂ ಹಿಮ್ಮೆಟ್ಟಿಸುವ ಕುರಿತು ಸೂಚನೆಗಳನ್ನು ನೀಡಲಾಗಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಸಭೆ, ಎಲ್ಲ ಜಿಲ್ಲೆಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ತುರ್ತು ವರ್ಚುವಲ್ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
- ಬೆಂಗಳೂರು, ಕಾಡಿನಂಚಿನ ಗ್ರಾಮಗಳಿಗೆ ನುಗ್ಗಿ ಜೀವಹಾನಿ, ಬೆಳೆ ಹಾನಿ ಮಾಡುವ ಆನೆಗಳ ಸಂಚಾರದ ಬಗ್ಗೆ ನಿಗಾ ಇಟ್ಟು, ಸಕಾಲಿಕ (ರಿಯಲ್ ಟೈಮ್) ಮಾಹಿತಿಯನ್ನು ಸ್ಥಳಿಯ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪಂಚಾಯ್ತಿಗಳ ಅಧ್ಯಕ್ಷರು, ಕಾರ್ಯದರ್ಶಿ, ಪಿಡಿಒ ಮತ್ತು ಗ್ರಾಮದ ಮುಖ್ಯಸ್ಥರಿಗೆ ನೀಡುವ ಮೂಲಕ ಜೀವಹಾನಿ ತಡೆಯಬೇಕು.
- ಪ್ರಸ್ತುತ ದೇಶೀಯವಾಗಿ ಅಭಿವೃದ್ಧಿಪಡಿಸಿದ ರೇಡಿಯೋ ಕಾಲರ್ ಕೂಡ ಲಭ್ಯವಿದ್ದು, ಗುಂಪಿನಲ್ಲಿರುವ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, ಥರ್ಮಲ್ ಕ್ಯಾಮರಾ ಬಳಸಿ ಆನೆಗಳ ಚಲನವಲನದ ಬಗ್ಗೆ ನಿಗಾ ಇಟ್ಟು, ಮಾಹಿತಿಯನ್ನು ಬಲ್ಕ್ ಎಸ್.ಎಂ.ಎಸ್. ಮೂಲಕ ಸಕಾಲಿಕವಾಗಿ ನೀಡುವ ವ್ಯವಸ್ಥೆ ಮಾಡಬೇಕು.
- ಆನೆಗಳು ನೀರು ಮತ್ತು ಆಹಾರ ಅರಸಿ ಊರಿಗೆ ಬರುತ್ತಿದ್ದು, ಕಾಡಿನಲ್ಲೇ ಆನೆಗಳಿಗೆ ಆಹಾರ ಲಭಿಸುವಂತೆ ಮಾಡಲು ಮತ್ತು ಸ್ಥಳೀಯರಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕು.
- ಗ್ರಾಮಸ್ಥರು ಮತ್ತು ಅರಣ್ಯ ಸಿಬ್ಬಂದಿಯ ನಡುವೆ ಡಿಜಿಟಲ್ ಸಂಪರ್ಕ ವೃದ್ಧಿಸಲು ಸೂಚಿಸಿದ ಸಚಿವರು, ಆನೆಗಳು ಊರಿನ ಬಳಿ ಕಾಣಿಸಿಕೊಂಡಾಗ ತ್ವರಿತವಾಗಿ ಸ್ಪಂದಿಸುವಂತೆ ನೋಡಿಕೊಳ್ಳಬೇಕು.
- ಆನೆಗಳ ಉಪಟಳ ಹೆಚ್ಚಿರುವ ಪ್ರದೇಶಗಳಲ್ಲಿ ತ್ವರಿತವಾಗಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಟೆಂಟಕಲ್ ಫೆನ್ಸಿಂಗ್, ಆನೆ ಕಂದಕ ಮತ್ತು ಸೌರಬೇಲಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕು.
- ಕೊಡಗಿನ ವಿರಾಜಪೇಟೆ ಸಹಿತ ಹಲವು ಭಾಗಗಳಲ್ಲಿ ಪುಂಡಾನೆಗಳು ಪದೇ ಪದೇ ಜನರ ಮೇಲೆ ದಾಳಿ ಮಾಡುತ್ತಿದ್ದು, ಇಂತಹ ಆನೆಗಳಿಗೆ ಅರವಳಿಕೆ ನೀಡಿ ಸೆರೆ ಹಿಡಿಯಲು ತುರ್ತು ಕ್ರಮ ಕೈಗೊಳ್ಳಬೇಕು.
- 2022-23ರ ಸಾಲಿನಲ್ಲಿ ರಾಜ್ಯದಲ್ಲಿ ಆನೆಯಿಂದ 32 ಜನರು ಸಾವಿಗೀಡಾಗಿದ್ದರೆ, 2023-24ರಲ್ಲಿ 48 ಸಾವು ಸಂಭವಿಸಿದೆ, ಈ ವರ್ಷ ಇಲ್ಲಿಯವರೆಗೆ 30 ಜೀವಹಾನಿ ಆಗಿದೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಜುಲೈನಲ್ಲಿ ಹೆಚ್ಚಿನ ಸಾವು ಸಂಭವಿಸುತ್ತಿದೆ ಇದಕ್ಕೆ ಕಾರಣವೇನು ಎಂಬ ಬಗ್ಗೆ ಅಧ್ಯಯನ ನಡೆಸಬೇಕು.
ಕರ್ನಾಟಕದಲ್ಲಿ ಆನೆಯಿಂದಾಗುವ ಸಾವು ಕಡಿಮೆ
ಬೆಂಗಳೂರು, ಫೆ.೧೪: ಆನೆಗಳ ಸಂಖ್ಯೆ ಮತ್ತು ಆನೆಗಳಿಂದ ಸಂಭವಿಸುವ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ ಒಡಿಶಾ, ಪಶ್ವಿಮ ಬಂಗಾಳ, ಜಾರ್ಖಂಡ್, ಛತ್ತೀಸ್ ಗಢ, ಅಸ್ಸಾಂ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸಾವಿನ ಸಂಖ್ಯೆ ಅತ್ಯಲ್ಪ ಎಂದು ಅರಣ್ಯ ಸಚಿವರಿಗೆತಿಳಿಸಲಾಯಿತು.
ಫೆ.13ರಂದು ಒಂದೆ ದಿನ ಆನೆಗಳಿಂದ ರಾಜ್ಯದಲ್ಲಿ 3 ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವರ ನೀಡಿದ ಅಧಿಕಾರಿಗಳು, 2019-24ರ ನಡುವಿನ 5 ವರ್ಷಗಳ ಅವಧಿಯಲ್ಲಿ 6359 ಆನೆಗಳಿರುವ ಕರ್ನಾಟಕದಲ್ಲಿ 160 ಸಾವು ಸಂಭವಿಸಿದೆ, ಆದರೆ ಛತ್ತೀಸಗಢದಲ್ಲಿ ಇರುವುದೇ 247 ಆನೆ ಆದರೆ, ಅಲ್ಲಿ ಆನೆಗಳಿಂದ ಇದೇ 4 ವರ್ಷದ ಅವಧಿಯಲ್ಲಿ 313 ಸಾವು ಸಂಭವಿಸಿದೆ ಎಂದು ತಿಳಿಸಿದರು.
ಒಡಿಶಾದಲ್ಲಿ 1976 ಆನೆಗಳಿದ್ದು ಅಲ್ಲಿ 2019-23ರ ಅವಧಿಯಲ್ಲಿ 624 ಜನರು ಮೃತಪಟ್ಟಿದ್ದರೆ, 700 ಆನೆ ಇರುವ ಪಶ್ಚಿಮ ಬಂಗಾಳದಲ್ಲಿ 436 ಸಾವು ಸಂಭವಿಸಿದೆ. 2761 ಆನೆಗಳಿರುವ ತಮಿಳುನಾಡಿನಲ್ಲಿ ಇದೆ ಅವಧಿಯಲ್ಲಿ 256 ಮಂದಿ ಸಾವಿಗೀಡಾಗಿದ್ದರೆ, 1793 ಆನೆಗಳಿರುವ ಕೇರಳದಲ್ಲಿ 124 ಜನರು ಮೃತಪಟ್ಟಿದ್ದಾರೆ ಎಂಬ ಅಂಕಿ ಅಂಶ ನೀಡಿದರು.
