ಕನ್ನಡ ಸುದ್ದಿ  /  Karnataka  /  Will Some Sitting Mlas Not Get Bjp Tickets Cm Bommai Reaction

CM Bommai on BJP MLAs Tickets: ಕೆಲ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ಸಿಗಲ್ವಾ? ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ಹೀಗಿತ್ತು

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 65 ಸ್ಥಾನ ಸಿಗಬಹುದು ಎಂದು ಸಿಎಂ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ಮಾತನಾಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ಮಾತನಾಡಿದರು.

ಹುಬ್ಬಳ್ಳಿ(ಧಾರವಾಡ): ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದ್ದು, ರಾಜಕೀಯ ಪಕ್ಷಗಳು ಹಬ್ಬದ ಪ್ರಚಾರಕ್ಕೆ ಧುಮುಕಿದ್ದಾರೆ. ಯಾತ್ರೆ, ಸಭೆ, ಸಮಾವೇಶಗಳ ಮೂಲಕ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿವೆ.

ಇದರ ಜೊತೆ ಜೊತೆಗೆ ಆರೋಪ, ಪ್ರತ್ಯಾರೋಪಗಳು, ವಾಗ್ವಾದಗಳು, ತಮಗೆ ಎಷ್ಟು ಸ್ಥಾನ ಸಿಗಬಹುದು, ಬೇರೆ ಪಕ್ಷಗಳು ಎಷ್ಟು ಸೀಟುಗಳನ್ನು ಗೆಲ್ಲಬಹುದು ಎಂಬ ಭವಿಷ್ಯ, ಲೆಕ್ಕಾಚಾರಗಳು ಕೂಡ ನಡೆಯುತ್ತಿವೆ. ಇದರ ಜೊತೆಗೆ ಆಡಳಿತ ಪಕ್ಷ ಬಿಜೆಪಿಯಲ್ಲಿ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದು, ಇದಕ್ಕೆ ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ಹಾಲಿ ಶಾಸಕರಿಗೆ ಟಿಕೆಟ್ ತಪ್ಪಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಿಎಂ, ಹಾಗೇನಿಲ್ಲ, ಹಲವಾರು ಆಯಾಮಗಳಲ್ಲಿ ಸಮೀಕ್ಷೆ ಮಾಡಿ ಅದರ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತದೆ. ಒಂದೇ ಬಾರಿಗೆ ಟಿಕೆಟ್ ತಪ್ಪುತ್ತದೆ ಎಂದು ಹೇಳುವುದು, ಅಥವಾ ಎಲ್ಲರಿಗೂ ಸಿಗಲಿದೆ ಎನ್ನುವುದು ರಾಜಕಾರಣದಲ್ಲಿ ಸರಿಯಲ್ಲ ಎಂದಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 65 ಸ್ಥಾನ ಬರುತ್ತದೆ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿಂದು (ಮಾ.10, ಶುಕ್ರವಾರ) ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಜೆಪಿಗೆ 65 ಸ್ಥಾನ ಬರುತ್ತದೆ ಎಂದಿದ್ದು, ತಮ್ಮ ಪಕ್ಷಕ್ಕೆ ದೊರೆಯುವ ಸ್ಥಾನ 65 ಎಂದು ಬಹುಶಃ ಹೇಳುತ್ತಿದ್ದಾರೆ ಎಂದಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಗಟ್ಟಿಯಾದ ಸಂಘಟನೆ ಬೂತ್ ಮಟ್ಟದಲ್ಲಿದ್ದು ಅದೇ ನಮ್ಮ ಶಕ್ತಿ. ಚುನಾವಣೆ ಮೂರನೇ ಹಂತದ ಪ್ರಚಾರ ನಡೆಯುತ್ತಿದೆ. ಬೂತ್ ವಿಜಯ, ಬೂತ್ ಮಟ್ಟದ ವಿಜಯ ಸಂಕಲ್ಪ, ಈಗ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ಎಲ್ಲಾ ಜಿಲ್ಲೆಯಲ್ಲಿ ಮೋರ್ಚಾಗಳ ಸಮ್ಮೇಳನ ಆಗುತ್ತಿದೆ. ನನ್ನ ಪ್ರಕಾರ 224 ಕ್ಷೇತ್ರಗಳಲ್ಲಿ ಒಂದಿಲ್ಲೊಂದು ಸಂಘಟನಾತ್ಮಕ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿರುವ ಕೆಲಸ, ನರೇಂದ್ರ ಮೋದಿಯವರ ಕಾರ್ಯಕ್ರಮ, ನನ್ನ ಕೆಲಸಗಳೂ ಸೇರಿ ದೊಡ್ಡ ಪ್ರಮಾಣದ ಕೆಲಸ ಕೆಳ ಮಟ್ಟದಿಂದ ದೊರೆಯುತ್ತಿದೆ. ಕಳೆದ ಒಂದೂವರೆ ತಿಂಗಳಲ್ಲಿ ಅದ್ಭುತವಾದ ಬೆಂಬಲ ದೊರೆಯುತ್ತಿದ್ದು, ಸಂಪೂರ್ಣವಾದ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಸೇರುವ ವಿಶ್ವಾಸವಿದೆ

ಜನಾರ್ದನರೆಡ್ಡಿಯವರು ಬಿಜೆಪಿಗೆ ಪುನಃ ಸೇರ್ಪಡೆಯಾಗುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಇನ್ನೂ ತಮ್ಮ ತೀರ್ಮಾನವನ್ನು ಪ್ರಕಟ ಮಾಡಿಲ್ಲ. ಮೂರು ದಶಕಗಳಿಂದ ರಾಜಕಾರಣದಲ್ಲಿದ್ದಾರೆ. ಅವರ ನಿರ್ಣಯವನ್ನು ಅವರು ತೆಗೆದುಕೊಳ್ಳುತ್ತಾರೆ. ಅವರು ಮತ್ತು ಬಿಜೆಪಿಗೆ ಹಳೆ ಸಂಬಂಧವಿರುವುದು ಸತ್ಯ. ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಸುಮಲತಾ ಅಂಬರೀಷ್ ಅಂತಿಮ ನಿರ್ಧಾರ

ಸಂಸದೆ ಸುಮಾಲತಾ ಅವರು ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಿ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಈಗಾಗಲೇ ಹಲವಾರು ಸುತ್ತಿನ ಚರ್ಚೆಯಾಗಲಿದ್ದು ಅವರು ಅಂತಿಮ ನಿರ್ಧಾರ ಇಂದು ತೆಗೆದುಕೊಂಡು ಪ್ರಕಟಿಸಲಿದ್ದಾರೆ ಎಂದರು.

ಪಕ್ಷಾಂತರದ ಬಗ್ಗೆ ಊಹಾಪೋಹ

ಕೆಲವು ಊಹಾಪೋಹಗಳಿವೆ. ಚುನಾವಣೆ ಸಮಯದಲ್ಲಿ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಹೋಗಿಬರುವವರಿದ್ದಾರೆ. ಕಾದು ನೋಡೋಣ ಎಂದಷ್ಟೇ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಈ ತಿಂಗಳ ಕೊನೆಯ ವೇಳೆಗೆ ರಾಜ್ಯ ವಿಧಾನಸಭೆಗೆ ಚುನಾವಣೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.