ಕನ್ನಡ ಸುದ್ದಿ  /  Karnataka  /  World Famous Mysore Dussehra Jambu Savari Information On Today S Events

Mysore jambu savari 2022: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗನೆ; ಇಂದಿನ ಕಾರ್ಯಕ್ರಮಗಳ ಮಾಹಿತಿ

ಶರನ್ನವರಾತ್ರಿಯ 10ನೇ ದಿನವಾದ ಇಂದು ಅರಮನೆಯಲ್ಲಿ ಸಾಂಪ್ರದಾಯಿಕ ವಿಜಯದಶಮಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಳಗ್ಗೆ 9.45 ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಸು ಆನೆ ಅರಮನೆ ಬಾಗಿಲಿಗೆ ಬಂದಾಗ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.

ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗನೆ
ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗನೆ

ಮೈಸೂರು: ಶರನ್ನವರಾತ್ರಿಯ 10ನೇ ದಿನವಾದ ಇಂದು ಅರಮನೆಯಲ್ಲಿ ಸಾಂಪ್ರದಾಯಿಕ ವಿಜಯದಶಮಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಳಗ್ಗೆ 9.45 ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಸು ಆನೆ ಅರಮನೆ ಬಾಗಿಲಿಗೆ ಬಂದಾಗ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.

ಬೆಳಗ್ಗೆ 10.15 ಕ್ಕೆ ಕಲ್ಯಾಣ ಮಂಟಪದಲ್ಲಿ ಪೂಜೆ ಹಾಗೂ ವಜ್ರಮುಷ್ಠಿ ಕಾಳಗ ನಡೆಯಲಿದ್ದು, ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯ ಯಾತ್ರೆಯನ್ನು ಮಾಡಿ ನಂತರ ಭುವನೇಶ್ವರಿ ದೇವಸ್ಥಾನದ ಆವರಣದಲ್ಲಿರುವ ಬನ್ನಿ ಮರಕ್ಕೆ ಶಮಿ ಪೂಜೆ ಸಲ್ಲಿಸುತ್ತಾರೆ. ಜಂಬೂ ಸವಾರಿ ನಡೆಯಲು ಕ್ಷಣಗಣನೆ ಆರಂಭವಾಗಿದೆ. ವಿಜಯದಶಮಿಯ ಶುಭ ಮಹೂರ್ತದಲ್ಲಿ ಮೈಸೂರಿನಲ್ಲಿ ದಸರಾ ಜಂಬೂ ಸವಾರಿ ನಡೆಯಲಿದೆ.

ಮಧ್ಯಾಹ್ನ 2.36ರಿಂದ 2.50 ಗಂಟೆಯೊಳಗೆ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಗಜಪಡೆಯ ಅರ್ಜುನ ನಿಶಾನೆ ಆನೆಯಾಗಿ ದಸರಾ ಮೆರವಣಿಗೆಯನ್ನು ಮುನ್ನಡೆಸಲಿದ್ದಾನೆ.

ನಂದಿ ಧ್ವಜಕ್ಕೆ ಪೂಜೆ; ಏನಿದರ ವಿಶೇಷತೆ?

ಅರಮನೆಯ ಮುಂಭಾಗದ ಬಲ ರಾಮ ಗೇಟ್​​​ನ ಸಮೀಪ ಇರುವ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಜಂಬೂ ಸವಾರಿಯ ದಿನ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಮುನ್ನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ದಸರಾ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ‌33 ಅಡಿ ಎತ್ತರವಿರುವ 125 ಕೆ.ಜಿ ತೂಕವಿರುವ ನಂದಿ ಕಂಬದಲ್ಲಿ 10 ವರ್ಣಗಳ ಧ್ವಜವಿದೆ. ಇದರ ಮೇಲೆ ಪಂಚ ಕಳಶವಿದೆ.

ಉಡಿಗಾಲ ಮಹದೇವಪ್ಪ ನೇತೃತ್ವದಲ್ಲಿ ಈ ನಂದಿ ಧ್ವಜ ಕುಣಿತ ನಡೆಯುತ್ತದೆ. ವಿಜಯ ದಶಮಿಯಂದು ಶಿವನ‌ ಲಾಂಛನ ಎಂದು ಕರೆಯಲ್ಪಡುವ ನಂದಿ ಧ್ವಜಕ್ಕೆ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸಿದ ಬಳಿಕ ಜಂಬೂ ಸವಾರಿಗೆ ಚಾಲನೆ‌ ನೀಡುತ್ತಾರೆ.

ರಾಜರ ಕಾಲದಲ್ಲಿಯೂ ನಂದಿ ಧ್ವಜ ತಂಡವನ್ನು ಓಲಗ, ಬಿರುದಾವಳಿ, ಗೌರವಾದರಗಳೊಡನೆ ಅರಮನೆಗೆ ಕರೆದೊಯ್ದು, ಅಂಬಾ ವಿಲಾಸ ಅರಮನೆಯಲ್ಲಿ ಸತ್ಕರಿಸಿ ಬಳಿಕ ತಂಡವನ್ನು ಅರಮನೆಯ ಬಲರಾಮ ದ್ವಾರದ ಬಳಿಗೆ ಕರೆದೊಯ್ಯುತ್ತಾರೆ. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ‌ ನೀಡಲಾಗುತ್ತಿತ್ತು. ಈಗಲೂ ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ಚಾಲನೆ ವೇಳೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ನಂದಿ ಧ್ವಜವನ್ನು ಗಟ್ಟಿಮುಟ್ಟಾದ ಉದ್ದನೆಯ ಬಿದಿರಿನ ಬೊಂಬಿಗೆ ಬೆಳ್ಳಿ ಕಟ್ಟನ್ನು (ಬಳೆ) ಒಂದರ ಮೇಲೊಂದರಂತೆ ಜೋಡಿಸಿರುತ್ತಾರೆ. ಅಂತೆಯೇ ನಂದಿ ಧ್ವಜ ಹೊತ್ತು ಕುಣಿಯುವಾಗ ಶಬ್ದ ಬರುವಂತೆ ಮಾಡಲು ಈ ಬಳೆಗಳ ಟೊಳ್ಳಿನೊಳಗೆ ಚಿಕ್ಕ ಕಲ್ಲು ಅಥವಾ ಹುಣಸೆ ಬೀಜ ತುಂಬಲಾಗುತ್ತದೆ. ಕಂಬದಲ್ಲಿನ ಪೀಠದಲ್ಲಿ ನಂದಿ ವಿಗ್ರಹವಿದ್ದು, ಪೀಠದ ಮೇಲೆಯೇ ಇರುವ ಈ ಬಳೆಗಳಿಗೆ ಗಗ್ಗರ, ಹರಡೆ, ಗಗ್ಗ ಎಂಬ ಹೆಸರಿದೆ.

ಸಂಜೆ 5.7ರಿಂದ 5.18ರ ನಡುವಿನ ಮೀನ ಲಗ್ನದಲ್ಲಿ ಜಂಬೂಸವಾರಿ ಮೆರವಣಿಗೆಗೆ ಸಿಎಂ ಬೊಮ್ಮಾಯಿ, ಕರ್ನಾಟಕ ರಾಜ್ಯ ಹೈಕೋರ್ಟ್‌ನ ಮುಖ್ಯನ್ಯಾಯಮೂತ್ತಿ ಸೇರಿದಂತೆ ಎಂಟು ಮಂದಿ ಗಣ್ಯರು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

750 ಕೆ.ಜಿ. ತೂಕದ ಅಂಬಾರಿ, ಗಾದಿ ಇತ್ಯಾದಿಗಳು ಸೇರಿ 200 ಕೆ.ಜಿ. ಸೇರಿದಂತೆ ಒಟ್ಟು 950 ಕೆ.ಜಿ. ತೂಕವನ್ನು ಅಭಿಮನ್ಯು ಹೊರಲಿದ್ದಾನೆ. ಅಭಿಮನ್ಯವಿನ ಜತೆಗೆ ಹದಿಮೂರು ಆನೆಗಳು, ಅಶ್ವಪಡೆಗಳು, 43 ಸ್ತಬ್ಧಚಿತ್ರಗಳು, ಜಾನಪದ ತಂಡಗಳು ಇರಲಿವೆ.

ವಿಜಯಯಾತ್ರೆ ಮುಗಿದ ನಂತರ ಅರಮನೆಗೆ ವಾಪಸ್ ಆಗಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತಾರೆ. ಆ ಮೂಲಕ ವಿಜಯದಶಮಿಗೆ ಸಾಂಪ್ರದಾಯಿಕವಾಗಿ ಕೊನೆಗೊಳ್ಳುತ್ತದೆ.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಲಿದ್ದು ಅಭಿಮನ್ಯು ಅಂಬಾರಿ ಹೊತ್ತು ರಾಜಗಾಂಭೀರ್ಯದ ಹೆಜ್ಜೆ ಹಾಕಲು ಸಜ್ಜಾಗಿದೆ. ಈ ಸುಂದರ ಕ್ಷಣಗಳನ್ನು ಕಣ್ತುಂಕೊಳ್ಳಲು ಕೋಟ್ಯಂತರ ಕಂಗಳು ಕಾಯುತ್ತಿವೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

IPL_Entry_Point