ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ; ಪತಿಯ ಕೃತ್ಯಕ್ಕೆ ಪಕ್ಷದಿಂದಲೇ ಮಂಜುಳಾ ಗೂಳಿ ಉಚ್ಚಾಟನೆ
ಯಾದಗಿರಿ: ರಾಜಕಾರಣದಲ್ಲಿ ಅಧಿಕಾರ ಬಹಳ ಮುಖ್ಯ. ಅದಿಲ್ಲದೇ ಹೋದರೆ ಹತಾಶೆ. ಅದನ್ನು ವ್ಯಕ್ತಪಡಿಸುವ ರೀತಿ ತಪ್ಪಾದರೆ ಸಂಕಷ್ಟವೂ ಖಚಿತ. ಅಂಥ ಒಂದು ಘಟನೆ ಇದು. ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ, ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಜುಳಾ ಗೂಳಿ ಪಕ್ಷದಿಂದಲೇ ಉಚ್ಚಾಟಿಸಲ್ಪಟ್ಟಿದ್ಧಾರೆ.

ಯಾದಗಿರಿ: ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಸ್ಥಾನ ಪತ್ನಿಯ ಕೈತಪ್ಪಿ ಹೋಯಿತು ಎಂದು ಆಕ್ರೋಶಗೊಂಡ ಪತಿ ಮತ್ತು ಆತನ ಸಹಚರರು ಶನಿವಾರ ಯಾದಗಿರಿ ನಗರದ ಕನಕ ವೃತ್ತದ ಸಮೀಪದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ ಹೆಚ್ಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಯಾದಗಿರಿ ಜಿಲ್ಲಾ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಜುಳಾ ಗೂಳಿ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ಕುರಿತು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮಂಜುಳಾ ಗೂಳಿ ಅವರ ಪತಿ ಉಪನ್ಯಾಸಕ ಶಂಕರ ಗೂಳಿಯನ್ನು ಪೊಲೀಸರು ಬಂಧಿಸಿದ್ದು, ಸಹಚರ ಬಾಬುಗೌಡ ಅಗತೀರ್ಥ ಎಂಬಾತನಿಗೆ ಶೋಧ ನಡೆಸಿದ್ದಾರೆ.
ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ
ಪತ್ನಿಗೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಸ್ಥಾನ ಕೈ ತಪ್ಪಿ ಹೋದ ಕಾರಣ, ಶಂಕರ ಗೂಳಿ ತೀವ್ರ ಆಕ್ರೋಶಗೊಂಡಿದ್ದರು. ಅಸಮಾಧಾನವನ್ನೂ ಹೊರಹಾಕಿದ್ದರು. ಈ ನಡುವೆ, ಶನಿವಾರ ಬೆಳಗಿನ ಜಾವ ಯಾದಗಿರಿ ನಗರದ ಕನಕ ವೃತ್ತದ ಸಮೀಪದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಂದ ಆಗಂತುಕರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಇದರಿಂದಾಗಿ ಕಚೇರಿಯ ಹವಾನಿಯಂತ್ರಣ ಉಪಕರಣ, ಸೋಫಾ, ಕುರ್ಚಿಗಳು ಸುಟ್ಟು ಹೋಗಿದ್ದವು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದರು. ಕಾಂಗ್ರೆಸ್ ಕಚೇರಿ ಎದುರಿಗಿನ ಅಂಗಡಿಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಶನಿವಾರ ಬೆಳಗಿನ ಜಾವ 1.30ರ ಸುಮಾರಿಗೆ ಇಬ್ಬರು ಬಿಳಿ ಬಣ್ಣದ ಬೈಕ್ ಮೇಲೆ ಕಚೇರಿಗೆ ಬಂದು ಕಿಟಕಿ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದು ಕಂಡು ಬಂದಿದೆ. ತನಿಖೆ ಬಳಿಕ ಈ ಕೃತ್ಯವೆಸಗಿರುವುದು ಶಂಕರಗೂಳಿ ಮತ್ತು ಆತನ ಸಹಚರ ಬಾಬುಗೌಡ ಅಗತೀರ್ಥ ಎಂಬ ವಿವರವೂ ಪೊಲೀಸರಿಗೆ ಸಿಕ್ಕಿತ್ತು.
ಬಳಿಕ, ಶಂಕರ ಗೂಳಿಯನ್ನು ವಶಕ್ಕೆ ಪಡೆದ ಪೊಲೀಸರು ಆತನನ್ಹು ವಿಚಾರಣೆಗೆ ಒಳಪಡಿಸಿದಾಗ ಪತ್ನಿಗೆ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನ ಕೈತಪ್ಪಿ ಹೋಗಿರುವುದಕ್ಕೆ ಈ ಕೃತ್ಯವೆಸಗಿರುವುದಾಗಿ ಹೇಳಿದ್ದಾರೆ. ಕಚೇರಿ ಆವರಣದಲ್ಲಿ 20 ಲೀಟರ್ ಪೆಟ್ರೋಲ್ ಕ್ಯಾನ್ ಲಭ್ಯವಾಗಿದ್ದು, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಸರೆಡ್ಡಿ ಅನಪುರ ನಗರ ಠಾಣೆಗೆ ದೂರು ನೀಡಿದ್ದರು. ದೂರು ಪ್ರಕಾರ ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸಿದ್ದರು. 4 - 5 ಲಕ್ಷ ರೂಪಾಯಿ ಹಾನಿ ಅಂದಾಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.