ವಿಐಪಿಗಳು ಸಂಚಾರ ನಿಯಮಕ್ಕಿಂತ ಹೆಚ್ಚೇ; ಬೆಂಗಳೂರು ಟ್ರಾಫಿಕ್ ಆಯುಕ್ತರಿಗೆ ನಿಖಿಲ್ ಕಾಮತ್ ಪ್ರಶ್ನೆ, ಹೀಗಿತ್ತು ಉತ್ತರ
ಐಪಿಎಸ್ ಅಧಿಕಾರಿಗಳಾದ ಬಿ. ದಯಾನಂದ ಹಾಗೂ ಎಂ. ಎನ್. ಅನುಚೇತ್ ಅವರೊಂದಿಗಿನ ಜೆರೋಧಾ ಸಹ ಸಂಸ್ಥಾಪಕರಾದ ನಿಖಿಲ್ ಕಾಮತ್ ಅವರು ಮಾತನಾಡಿದ್ದಾರೆ. ಬೆಂಗಳೂರು ಟ್ರಾಫಿಕ್ನಲ್ಲಿ ರಾಜಕಾರಣಿಗಳು ಸೇರಿದಂತೆ ವಿಐಪಿ ಟ್ರೀಟ್ಮೆಂಟ್ ಕುರಿತು ಕಠಿಣ ಪ್ರಶ್ನೆಗಳನ್ನು ಕೇಳಿದ್ದಾರೆ.

ಬೆಂಗಳೂರು ನಗರದ ಕುರಿತು ಹೆಚ್ಚು ಚರ್ಚೆಯಾಗುವ ವಿಷಯವೆಂದರೆ, ಇಲ್ಲಿನ ಟ್ರಾಫಿಕ್. ಇತ್ತೀಚೆಗೆ, ಜೆರೋಧಾ ಸಹ ಸಂಸ್ಥಾಪಕರಾದ ನಿಖಿಲ್ ಕಾಮತ್ ಅವರು ಬೆಂಗಳೂರಿನ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಗರದ ಟ್ರಾಫಿಕ್ ಸಮಸ್ಯೆ ಕುರಿತು ಮುಕ್ತವಾಗಿ ಸಂವಾದ ನಡೆಸಿದರು. ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಮತ್ತು ಟ್ರಾಫಿಕ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರಲ್ಲಿ ನಗರದ ರಸ್ತೆಗಳಲ್ಲಿ ವಿಐಪಿ ಸಂಸ್ಕೃತಿಯ ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ಇಬ್ಬರು ಅಧಿಕಾರಿಗಳು ಸೂಕ್ತ ಉತ್ತರ ನೀಡಿದ್ದಾರೆ.
'ನಗರದ ಸಂಚಾರ ನಿಯಮಗಳಿಗಿಂತ ವಿಐಪಿಗಳು ಹೆಚ್ಚೇ' ಎಂದು ಕಾಮತ್ ಅವರಲ್ಲಿ ಪ್ರಶ್ನಿಸಿದ್ದಾರೆ. ಸಂವಾದದ ವೇಳೆ ನಿಖಿಲ್ ಕಾಮತ್ ಗಂಭೀರ ಪ್ರಶ್ನೆಯನ್ನು ತಮಾಷೆಯ ಧಾಟಿಯಲ್ಲಿ ಕೇಳಿದರು. "ರಾಜಕಾರಣಿಗಳು ಸಿಗ್ನಲ್ ಬ್ರೇಕ್ ಮಾಡಿದರೆ ಪೊಲೀಸರು ಅವರಿಗೆ ದಂಡ ವಿಧಿಸುತ್ತಾರೆಯೇ?" ಎಂದು ಹಿರಿಯ ಐಪಿಎಸ್ ಅಧಿಕಾರಿ ದಯಾನಂದ ಅವರಲ್ಲಿ ಕಾಮತ್ ಕೇಳಿದರು. ಇದಕ್ಕೆ ಉತ್ತರಿಸಿದ ದಯಾನಂದ, "ಇಲ್ಲ... ಸಾಮಾನ್ಯವಾಗಿ ವಿಐಪಿಗಳಿಗೆ ರಸ್ತೆಯಲ್ಲಿ ಗ್ರೀನ್ ಸಿಗ್ನಲ್ ನೀಡುತ್ತಾರೆ. ಅವರು ಸಿಗ್ನಲ್ ಜಂಪ್ ಮಾಡುವುದಿಲ್ಲ. ಅಂದರೆ ಸಾಮಾನ್ಯವಾಗಿ, ಅವರಿಗೆ ರಸ್ತೆಯಲ್ಲಿ ಗ್ರೀನ್ ಸಿಗ್ನಲ್ ಇರುತ್ತದೆ," ಎಂದು ಹೇಳಿದ್ದಾರೆ.
“ಸಾಮಾನ್ಯವಾಗಿ, ಮುಖ್ಯಮಂತ್ರಿಯಾಗಲಿ ಅಥವಾ ರಾಜ್ಯಪಾಲರಾಗಲಿ, ವಿವಿಐಪಿ ಬೆಂಗಾವಲು ವಾಹನ ಚಲಿಸುವಾಗ ರಸ್ತೆಯನ್ನು ಅವರ ಸಂಚಾರಕ್ಕೆ ಮುಕ್ತವಾಗಿರಿಸುವುದನ್ನು ನಾವು ಖಚಿತಪಡಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ವಿಐಪಿಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಸರಿಯೇ ಎಂದು ಕೇಳಿದಾಗ, ದಯಾನಂದ ಅವರು “ಅವರು ಈ ಆದ್ಯತೆಯ ಪ್ರಯೋಜನವನ್ನು ಆನಂದಿಸಬೇಕಲ್ಲವೇ” ಎಂದು ಮರುಪ್ರಶ್ನೆ ಹಾಕಿದರು. ಮುಖ್ಯಮಂತ್ರಿ, ರಾಜ್ಯಪಾಲರು ಅಥವಾ ಪ್ರಧಾನಿ ಸ್ಥಾನವನ್ನು ಹೊಂದಿರುವ ವ್ಯಕ್ತಿಗೆ ಇದು ಹೆಚ್ಚು ಅಗತ್ಯವಾಗುತ್ತದೆ" ಎಂದು ಹೇಳಿದರು.
ಪೋಡ್ಕಾಸ್ಟ್ ವಿಡಿಯೋ
“ಇದು ಒಂದು ರೀತಿಯ ಜಂಭ ತೋರಿಸಿಕೊಳ್ಳುವ ವಿಷಯವಲ್ಲ. ಆದರೆ ಇದು ಅಗತ್ಯ ಅಂಶ. ಅವರು ಮುಂದೆ ಹೋಗಬೇಕಾದರೆ ಭದ್ರತಾ ಕಾಳಜಿ ಅತ್ಯಗತ್ಯ. ವಿವಿಐಪಿಗಳಿಗೆ ಸಾಮಾನ್ಯವಾಗಿ ಭದ್ರತಾ ಬೆದರಿಕೆಗಳು ಇರುತ್ತವೆ. ಆ ದೃಷ್ಟಿಕೋನದಿಂದಲೂ ಅವರಿಗೆ ಮುಕ್ತ ಪ್ರಯಾಣದ ಅವಕಾಶ ಸಿಗುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ದಾರಿ ಮಧ್ಯೆ ಏನಾದರೂ ಸಂಭವಿಸಬಹುದು,” ಎಂದು ಅವರು ಹೇಳಿದ್ದಾರೆ.
ಎಲ್ಲರಿಗೂ ಇಂಥಾ ಆದ್ಯತೆ ಇದೆಯೇ?
ಗ್ರೀನ್ ಸಿಗ್ನಲ್ ಎಲ್ಲರಿಗೂ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಎಂ.ಎನ್.ಅನುಚೇತ್, 'ಇಲ್ಲ, ಅದು ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಮಾತ್ರ. ಮೂಲಭೂತವಾಗಿ, ಭದ್ರತಾ ವ್ಯವಸ್ಥೆಗಳು ಅಥವಾ ಯೋಜನೆಗಳನ್ನು ವ್ಯಕ್ತಿಯ ಸ್ಥಾನಕ್ಕೆ ಅನುಗುಣವಾಗಿ ನೀಡಲಾಗುತ್ತದೆ. ಹೀಗಾಗಿ ಬೆಂಗಳೂರಿನಲ್ಲಿಯೂ ಸಹ ಎಲ್ಲರಿಗೂ ಆ ಆದ್ಯತೆ ಸಿಗುವುದಿಲ್ಲ. ನಮ್ಮ ಸರ್ಕಾರದಲ್ಲಿ ಆ ರೀತಿಯ ಭದ್ರತಾ ಕಾಳಜಿ ಅಗತ್ಯವಿರುವ ಅನೇಕ ಸ್ಥಾನಗಳಿವೆ. ಅವರಿಗೆ ಆದ್ಯತೆಯ ಮೇರೆಗೆ ಸಿಗ್ನಲಿಂಗ್ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.