ವ್ಯಕ್ತಿಯ ಬಾಹ್ಯ ಸೌಂದರ್ಯದಿಂದ ಅವನ ಜ್ಞಾನ ಅಳೆಯಲು ಸಾಧ್ಯವಿಲ್ಲ –ಚಾಣಕ್ಯರು ಚಂದ್ರಗುಪ್ತ ಮೌರ್ಯನಿಗೆ ಹೇಳಿದ ನೀತಿ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ವ್ಯಕ್ತಿಯ ಬಾಹ್ಯ ಸೌಂದರ್ಯದಿಂದ ಅವನ ಜ್ಞಾನ ಅಳೆಯಲು ಸಾಧ್ಯವಿಲ್ಲ –ಚಾಣಕ್ಯರು ಚಂದ್ರಗುಪ್ತ ಮೌರ್ಯನಿಗೆ ಹೇಳಿದ ನೀತಿ ತಿಳಿಯಿರಿ

ವ್ಯಕ್ತಿಯ ಬಾಹ್ಯ ಸೌಂದರ್ಯದಿಂದ ಅವನ ಜ್ಞಾನ ಅಳೆಯಲು ಸಾಧ್ಯವಿಲ್ಲ –ಚಾಣಕ್ಯರು ಚಂದ್ರಗುಪ್ತ ಮೌರ್ಯನಿಗೆ ಹೇಳಿದ ನೀತಿ ತಿಳಿಯಿರಿ

ಆಚಾರ್ಯ ಚಾಣಕ್ಯರು ತಮ್ಮ ನೀತಿಯ ಮೂಲಕ ಅನೇಕ ಜನರಿಗೆ ತಪ್ಪು ತಿಳುವಳಿಕೆಗಳನ್ನು ತಿದ್ದಿ ಹೇಳಿದ್ದಾರೆ. ಮನುಷ್ಯನಿಗೆ ಬಾಹ್ಯ ಸೌಂದರ್ಯ ಹೇಗೆ ಮುಖ್ಯವಲ್ಲ ಎಂಬುದನ್ನು ಚಂದ್ರಗುಪ್ತ ಮೌರ್ಯನಿಗೆ ಕಲಿಸಿದ ನೀತಿಯಿಂದ ತಿಳಿದುಕೊಳ್ಳಿ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು ಮಾನವನ ಜೀವನದ ಕಲ್ಯಾಣಕ್ಕಾಗಿ ಹಾಗೂ ಸಮಾಜದ ಒಳಿತಿಗಾಗಿ ನೀತಿ ಶಾಸ್ತ್ರದ ಮೂಲಕ ಮಾರ್ಗದರ್ಶನ ನೀಡಿದ್ದಾರೆ. ಅವರು ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮನಾಗಿ ಜೀವನವನ್ನು ನಡೆಸಬೇಕು ಎಂದು ನೀತಿಗಳನ್ನು ರೂಪಿಸಿದ್ದಾರೆ. ಅದು ಸಾಮಾಜಿಕವಾಗಿರಲಿ, ಆರ್ಥಿಕವಾಗಿರಲಿ ಅಥವಾ ರಾಜಕೀಯವಾಗಿರಲಿ ಪ್ರತಿಯೊಂದು ಕ್ಷೇತ್ರದಲ್ಲೂ ಅವರ ನೀತಿಗಳು ಜನರಿಗೆ ಮಾರ್ಗದರ್ಶಿಯಾಗಿವೆ ಎಂದು ಸಾಬೀತಾಗಿದೆ. ಚಾಣಕ್ಯರು ನೀತಿ ಹಾಗೂ ನಿದರ್ಶನಗಳ ಮೂಲಕ ಅನೇಕ ತಪ್ಪು ತಿಳುವಳಿಕೆಗಳನ್ನು ದೂರಮಾಡಿದ್ದಾರೆ.

ಮನುಷ್ಯನಿಗೆ ಯಾವುದರ ಬಗ್ಗೆ ಹೆಮ್ಮೆಯಿರಬೇಕು ಎಂಬುದನ್ನು ಸಹ ಚಾಣಕ್ಯರು ಹೇಳಿದ್ದಾರೆ. ಬಾಹ್ಯ ಸೌಂದರ್ಯವೊಂದಿದ್ದರೆ ವ್ಯಕ್ತಿಯ ಜ್ಞಾನ ವೃದ್ಧಿಯಾಗುವುದಿಲ್ಲ. ಜೊತೆಗೆ ಅವನನ್ನು ವಿದ್ವಾಂಸನನ್ನಾಗಿಯೂ ಮಾಡುವುದಿಲ್ಲ. ಆಚಾರ್ಯ ಚಾಣಕ್ಯ ಹಾಗೂ ಸಾಮ್ರಾಟ ಚಂದ್ರಗುಪ್ತರ ನಡುವೆ ನಡೆದ ಘಟನೆಯಿಂದ ಇದನ್ನು ಸರಿಯಾಗಿ ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಆ ಘಟನೆ ಏನು ಇಲ್ಲಿದೆ ಓದಿ.

ಸಾಮ್ರಾಟ ಚಂದ್ರಗುಪ್ತನು ನೋಡಲು ಬಹಳ ಸುಂದರವಾಗಿಯೂ, ಬಿಳಿಯಾದ ಬಣ್ಣವನ್ನು ಹೊಂದಿದ್ದನು. ಅದೇ ಆಚಾರ್ಯ ಚಾಣಕ್ಯರು ಅತ್ಯಂತ ಕಠೋರಿಗಳು ಹಾಗೂ ಕಪ್ಪು ಬಣ್ಣವನ್ನು ಹೊಂದಿದ್ದರು. ಒಮ್ಮೆ ಇಬ್ಬರೂ ನೀತಿಯ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಚಾಣಕ್ಯರ ಯಾವುದೇ ಪ್ರಶ್ನೆಗಳಿಗೆ ಚಂದ್ರಗುಪ್ತನಿಗೆ ಸರಿಯಾದ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಚಂದ್ರಗುಪ್ತನು ಮಾತನ್ನು ಬದಲಿಸುತ್ತಾ ಹೀಗೆ ಹೇಳಿದನು, ರಾಜ್ಯದ ಎಲ್ಲರೂ ನಿಮ್ಮ ವಿದ್ವತ್ ಹಾಗೂ ಬುದ್ಧಿವಂತಿಕೆಯನ್ನು ಮೆಚ್ಚುತ್ತಾರೆ. ಆದರೆ ದೇವರು ನಿಮಗೆ ಸೌಂದರ್ಯವನ್ನು ಕೊಟ್ಟಿದ್ದರೆ ವಿಶ್ವದಲ್ಲಿ ನಿಮಗೆ ಬೇರೆ ಆಯ್ಕೆಯೇ ಇರುತ್ತಿರಲಿಲ್ಲ ಎಂದು ಚಂದ್ರಗುಪ್ತನು ತನ್ನ ಸೌಂದರ್ಯದ ಬಗ್ಗೆ ಹೆಚ್ಚು ಹೆಮ್ಮೆಯಿಂದ ಹೇಳಿದನು. ಇದು ಚಾಣಕ್ಯರಿಗೆ ಅರ್ಥವಾಯಿತು. ಅದಕ್ಕೆ ಚಾಣಕ್ಯರು, ಸೌಂದರ್ಯದ ಬಗ್ಗೆ ಚಂದ್ರಗುಪ್ತನಿಗೆ ನೀತಿ ಪಾಠ ಹೇಳಲು ನಿರ್ಧರಿಸಿದರು.

ಚಂದ್ರಗುಪ್ತನು ಯಾವಾಗಲೂ ನೀರನ್ನು ಚಿನ್ನದ ಪಾತ್ರೆಯಲ್ಲಿ ನೀಡುತ್ತಿದ್ದರು. ಇದನ್ನು ಅರಿತಿದ್ದ ಚಾಣಕ್ಯರು, ಒಬ್ಬ ಸೇವಕನಿಗೆ ಮಣ್ಣಿನ ಪಾತ್ರೆ ಹಾಗೂ ಚಿನ್ನದ ಪಾತ್ರೆ ಎರಡರಲ್ಲೂ ಪ್ರತ್ಯೇಕವಾಗಿ ನೀರು ತುಂಬಿಸಿ ಮೇಜಿನ ಮೇಲೆ ಇಡಲು ಹೇಳಿದರು. ಸ್ವಲ್ಪ ಸಮಯದ ನಂತರ ಚಂದ್ರಗುಪ್ತನಿಗೆ ಬಾಯಾರಿಕೆಯಾಯಿತು. ಚಾಣಕ್ಯರು ಅವನಿಗೆ ಮಣ್ಣಿನ ಪಾತ್ರೆಯಲ್ಲಿದ್ದ ನೀರನ್ನು ಕುಡಿಯಲು ಕೊಟ್ಟರು. ನೀರು ಕುಡಿದ ನಂತರ ಚಂದ್ರಗುಪ್ತನು ಕೇಳಿದನು, ಇಂದು ನೀರಿನ ರುಚಿ ಬದಲಾಗಿದೆ ಯಾಕೆ ಎಂದು ಪ್ರಶ್ನಿಸಿದನು. ಆಗ ಚಾಣಕ್ಯರು ಕ್ಷಮಿಸಿ ನಿಮಗೆ ತಪ್ಪಾಗಿ ಮಣ್ಣಿನ ಪಾತ್ರೆಯಿಂದ ನೀರನ್ನು ನೀಡಲಾಯಿತು ಎಂದರು. ತಕ್ಷಣ ಚಿನ್ನದ ಪಾತ್ರೆಯಿಂದ ನೀರನ್ನು ಕುಡಿಯಲು ಕೊಟ್ಟರು. ಚಂದ್ರಗುಪ್ತನು ಅದನ್ನೂ ಕುಡಿದನು. ಚಾಣಕ್ಯರು ಕೇಳಿದರು, ರಾಜ ಈ ಎರಡು ಪಾತ್ರೆಗಳಲ್ಲಿ ಯಾವ ಪಾತ್ರೆಯಲ್ಲಿನ ನೀರು ಉತ್ತಮವಾಗಿತ್ತು? ಎಂದು ಪ್ರಶ್ನಿಸಿದರು. ಅದಕ್ಕೆ ಚಂದ್ರಗುಪ್ತನು ಮಣ್ಣಿನ ಪಾತ್ರೆಯಲ್ಲಿನ ನೀರು ತುಂಬಾ ಸಿಹಿಯಾಗಿತ್ತು ಹಾಗೂ ತಂಪಾಗಿತ್ತು ಎಂದನು. ಇನ್ನು ಮುಂದೆ ನನಗೆ ಅದೇ ನೀರನ್ನು ಕೊಡಿ ಎಂದು ಹೇಳಿದನು.

ನಂತರ ಚಾಣಕ್ಯರು ಮುಗುಳ್ನಗುತ್ತಾ ಹೇಳಿದರು, ರಾಜ, ಪಾತ್ರೆಯ ಸೌಂದರ್ಯವು ನೀರನ್ನು ತಂಪಾಗಿ ಹಾಗೂ ಸಿಹಿಯಾಗಿ ಮಾಡುವುದಿಲ್ಲ. ಅದೇ ರೀತಿ ದೇಹದ ಸೌಂದರ್ಯವು ವ್ಯಕ್ತಿಯನ್ನು ಜ್ಞಾನಿ ಮತ್ತು ವಿದ್ವಾಂಸನನ್ನಾಗಿ ಮಾಡುವುದಿಲ್ಲ. ಬಾಹ್ಯ ಸೌಂದರ್ಯದಿಂದ ವ್ಯಕ್ತಿಯೊಬ್ಬನ ಜ್ಞಾನವನ್ನು ನಿರ್ಣಯಿಸುವುದು ಸೂಕ್ತವಲ್ಲ ಎಂದರು. ಚಂದ್ರಗುಪ್ತನಿಗೆ ಚಾಣಕ್ಯರ ಮಾತಿನ ಅರ್ಥವಾಯಿತು. ಅವನು ಚಾಣಕ್ಯರಲ್ಲಿ ಕ್ಷಮೆಯಾಚಿಸಿದನು.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

HT Kannada Desk