Chanakya Niti: ಚಾಣಕ್ಯರ ಪ್ರಕಾರ ಈ 3 ಸಂಬಂಧಗಳಿಂದ ದೂರವಿದ್ದಷ್ಟೂ ಉತ್ತಮ, ಇಲ್ಲದಿದ್ದರೆ ಬದುಕಿನಲ್ಲಿ ಗೆಲುವು, ನೆಮ್ಮದಿ ಅಸಾಧ್ಯ
ಆಚಾರ್ಯ ಚಾಣಕ್ಯರು ಜಗತ್ತು ಕಂಡ ಮಹಾನ್ ವಿದ್ವಾಂಸ, ಬದುಕಿನಲ್ಲಿ ಯಶಸ್ಸು ಬಯಸುವವರು ಚಾಣಕ್ಯರ ಸೂತ್ರಗಳನ್ನು ಅನುಸರಿಸಬೇಕು. ಅವರ ನೀತಿಗಳನ್ನು ಅನುಸರಿಸಿದವರಿಗೆ ಎಂದಿಗೂ ಸೋಲಿಲ್ಲ ಎಂದು ಹೇಳಲಾಗುತ್ತದೆ. ಚಾಣಕ್ಯರ ಪ್ರಕಾರ ಇಂತಹ ಸಂಬಂಧಗಳನ್ನು ಕಡಿದುಕೊಂಡು ಮುಂದೆ ಸಾಗಬೇಕು. ಆಗ ಮಾತ್ರ ನಾವು ಜೀವನದಲ್ಲಿ ಖುಷಿ, ನೆಮ್ಮದಿಯಿಂದ ಇರಲು ಸಾಧ್ಯ.
ಆಚಾರ್ಯ ಚಾಣಕ್ಯರನ್ನು ಮಹಾನ್ ಬುದ್ಧಿವಂತ ಮತ್ತು ವಿದ್ವಾಂಸರಲ್ಲಿ ಒಬ್ಬರು ಎಂದು ಕರೆಯುತ್ತಾರೆ. ಅವರ ಜೀವಿತಾವಧಿಯಲ್ಲಿ, ಅವರು ಮನುಕುಲದ ಕಲ್ಯಾಣಕ್ಕಾಗಿ ಹಲವು ನೀತಿಗಳನ್ನು ರೂಪಿಸಿದ್ದರು. ಈ ನೀತಿಗಳು ನಂತರ ಚಾಣಕ್ಯ ನೀತಿಗಳು ಎಂದೇ ಖ್ಯಾತಿ ಪಡೆದವು. ಅವರ ನೀತಿಗಳು ಎಲ್ಲಾ ಕಾಲಕ್ಕೂ ಹೊಂದುವಂತಿದೆ. ಮನುಷ್ಯನ ಬದುಕಿಗೆ ಅವಶ್ಯವಿರುವ ಎಲ್ಲಾ ಮಾತುಗಳನ್ನು ಚಾಣಕ್ಯ ಹೇಳಿದ್ದಾರೆ.
ಜೀವನದಲ್ಲಿ ನಾವು ಯಶಸ್ಸು ಬಯಸಿದರೆ, ಸಮೃದ್ಧ ಜೀವನ ನಮ್ಮದಾಗಬೇಕು ಎಂದರೆ ಚಾಣಕ್ಯ ನೀತಿಯಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಅನುಸರಿಸಬೇಕು. ಇದರಿಂದ ನೆಮ್ಮದಿ, ಖುಷಿಯಿಂದ ಇರಲು ಸಾಧ್ಯವಾಗುತ್ತದೆ. ಚಾಣಕ್ಯರ ಪ್ರಕಾರ ಈ 3 ವ್ಯಕ್ತಿಗಳಿಂದ ನಾವು ದೂರ ಇರಬೇಕು. ಆಗ ಮಾತ್ರ ನಮ್ಮ ಬದುಕು ಸುಂದರವಾಗಿರಲು ಸಾಧ್ಯ. ನಾವು ನೆಮ್ಮದಿ ಕಾಣಲು ಸಾಧ್ಯ. ಅಂತಹ ವ್ಯಕ್ತಿಗಳು ಯಾರು ನೋಡಿ.
ಸ್ವಾರ್ಥಿ ಬಂಧುಗಳಿಂದ ದೂರವಿರಿ
ಚಾಣಕ್ಯ ನೀತಿಯ ಪ್ರಕಾರ, ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಸ್ವಾರ್ಥಿಗಳಾಗಿದ್ದರೆ, ನೀವು ತಕ್ಷಣ ಅವರಿಂದ ದೂರವಿರಬೇಕು. ಯಾವಾಗಲೂ ಸ್ನೇಹಿತರು ಮತ್ತು ಸಂಬಂಧಿಕರು ನಮಗೆ ಬೆಂಬಲ ಹಾಗೂ ಸರಿಯಾದ ಮಾರ್ಗದರ್ಶನ ನೀಡುವವರಾಗಿರಬೇಕು. ಆದರೆ, ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರು ನಿಮಗೆ ಸರಿಯಾದ ಮಾರ್ಗ ತೋರಿಸುತ್ತಿಲ್ಲ, ನಿಮ್ಮನ್ನು ದಾರಿ ತಪ್ಪಿಸಲು ನೋಡುತ್ತಿದ್ದಾರೆ ಎಂದರೆ ತಕ್ಷಣ ಅವರಿಂದ ದೂರವಿರಿ. ಇಷ್ಟು ಮಾತ್ರವಲ್ಲದೆ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರು ಸ್ವಾರ್ಥಿಗಳಾಗಿದ್ದರೆ ಅವರಿಂದ ಅಂತರ ಕಾಯ್ದುಕೊಳ್ಳಿ ಎಂದು ಚಾಣಕ್ಯ ಹೇಳುತ್ತಾರೆ.
ಜಗಳವಾಡುವ ಹೆಂಡತಿಯೊಂದಿಗೆ ಹೀಗಿರಿ
ಆಚಾರ್ಯ ಚಾಣಕ್ಯರ ಪ್ರಕಾರ, ನಿಮ್ಮ ಹೆಂಡತಿ ತುಂಬಾ ಕೋಪಿಷ್ಠೆಯಾಗಿದ್ದರೆ, ಸದಾ ಜಗಳವಾಡುತ್ತಿದ್ದರೆ ಅಂತಹ ಸಂದರ್ಭಗಳಲ್ಲಿ ನೀವು ಅವಳಿಂದ ದೂರವಿರಬೇಕು. ಅವರು ನಿಮಗೆ ಮಾನಸಿಕ ಸಂತೋಷ ಅಥವಾ ಶಾಂತಿಯನ್ನು ಎಂದಿಗೂ ನೀಡಲಾರರು. ನಿಮ್ಮ ಹೆಂಡತಿ ಯಾವಾಗಲೂ ಜಗಳವಾಡುತ್ತಿದ್ದರೆ, ಅವಳು ನಿಮ್ಮ ಜೀವನದಲ್ಲಿ ತೊಂದರೆ ಮತ್ತು ಅಡೆತಡೆಗಳನ್ನು ಮಾತ್ರ ತರಬಹುದು. ಆಚಾರ್ಯ ಚಾಣಕ್ಯರ ಪ್ರಕಾರ, ಅಂತಹ ಮಹಿಳೆಯನ್ನು ನಿಮ್ಮ ಜೀವನದಿಂದ ಸಾಧ್ಯವಾದಷ್ಟು ಬೇಗ ದೂರವಾಗಿಸಬೇಕು. ಇಲ್ಲದಿದ್ದರೆ ನೆಮ್ಮದಿ ಕಂಡುಕೊಳ್ಳುವುದು ಅಸಾಧ್ಯವಾಗುತ್ತದೆ. ಹೆಂಡತಿಯನ್ನು ದೂರ ಮಾಡುವುದು ಕಷ್ಟ ಎಂದಾದರೆ ಅವಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು, ಅವಳಿಗೆ ಒಂದಿಷ್ಟು ಅವಕಾಶಗಳನ್ನು ನೀಡಬೇಕು. ನಂತರೂ ಸರಿಯಾಗಿಲ್ಲ ಎಂದರೆ ದೂರ ಮಾಡಿಕೊಳ್ಳದೇ ಬೇರೆ ದಾರಿ ಇಲ್ಲ.
ಅಜ್ಞಾನಿ ಗುರುವಿನ ಪರಿತ್ಯಾಗ
ಚಾಣಕ್ಯ ನೀತಿಯ ಪ್ರಕಾರ, ನೀವು ಜೀವನದಲ್ಲಿ ಯಶಸ್ವಿಯಾಗಬೇಕಾದರೆ, ನಿಮ್ಮ ಗುರುವನ್ನು ಬಹಳ ಎಚ್ಚರಿಕೆಯಿಂದ ಆರಿಸಬೇಕು. ನಿಮ್ಮ ಗುರುವಿಗೆ ಜ್ಞಾನ ಅಥವಾ ಶಿಕ್ಷಣದ ಕೊರತೆಯಿದ್ದರೆ, ಅವರು ನಿಮಗೆ ಯಾವುದೇ ಪ್ರಯೋಜನವಿಲ್ಲ. ನಿಮ್ಮ ಗುರುವು ಅಜ್ಞಾನಿಯಾಗಿರುವಾಗ, ಅವರು ನಿಮ್ಮ ಜೀವನದಲ್ಲಿ ಕತ್ತಲೆಯನ್ನು ಮಾತ್ರ ತರಬಹುದು. ನಿಮ್ಮನ್ನು ಬೆಳಕಿನ ದಾರಿಯಲ್ಲಿ ಅಥವಾ ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗುವ ಗುರುವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ