ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಿಂದ ದೇಶದ ಆರ್ಥಿಕತೆ ನಿಜವಾಗಲೂ ವೃದ್ಧಿಯಾಗುತ್ತಾ? ಮಧು ವೈಎನ್‌ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಿಂದ ದೇಶದ ಆರ್ಥಿಕತೆ ನಿಜವಾಗಲೂ ವೃದ್ಧಿಯಾಗುತ್ತಾ? ಮಧು ವೈಎನ್‌ ಬರಹ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಿಂದ ದೇಶದ ಆರ್ಥಿಕತೆ ನಿಜವಾಗಲೂ ವೃದ್ಧಿಯಾಗುತ್ತಾ? ಮಧು ವೈಎನ್‌ ಬರಹ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಈ ಬಾರಿ 40 ಕೋಟಿ ಗೂ ಹೆಚ್ಚು ಭಕ್ತರು ಬರುವ ಸಾಧ್ಯತೆ ಇದೆ. ಇದರಿಂದ ದೇಶದ ಆರ್ಥಿಕತೆ ವೃದ್ಧಿಯಾಗಲಿದೆ ಎಂದು ನಂಬಲಾಗಿದೆ. ಆದರೆ ಇದರಿಂದ ಯಾವುದೇ ಲಾಭವಿಲ್ಲ ಎಂದು ಲೇಖಕ ಮಧು ವೈಎನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಾಕುಂಭ ಮೇಳ, ದೇಶದ ಆರ್ಥಿಕ ವ್ಯವಸ್ಥೆ ಬಗ್ಗೆ ಲೇಖಕ ಮಧುಸೂಧನ್‌ ಬರಹ
ಮಹಾಕುಂಭ ಮೇಳ, ದೇಶದ ಆರ್ಥಿಕ ವ್ಯವಸ್ಥೆ ಬಗ್ಗೆ ಲೇಖಕ ಮಧುಸೂಧನ್‌ ಬರಹ (PC: @MahaKumbh_2025, Canva)

ಜನವರಿ 13 ರಿಂದ ಉತ್ತರ ಭಾರತದ ಪ್ರಯಾಗ್‌ ರಾಜ್‌ನಲ್ಲಿ ಮಹಾ ಕುಂಭಮೇಳ ಆರಂಭವಾಗಿದೆ. ಫ್ರೆಬ್ರವರಿ 16ವರೆಗೂ ಮಹಾಕುಂಭ ಮೇಳ ನಡೆಯುತ್ತದೆ. ಪ್ರತಿದಿನ ಲಕ್ಷಾಂತರ ಭಕ್ತರು, ಅಘೋರಿಗಳು, ನಾಗಾಸಾಧುಗಳು, ಸಂತರು ಕುಂಭಮೇಳಕ್ಕೆ ಬರುತ್ತಿದ್ದಾರೆ. ಜೊತೆಗೆ ವಿದೇಶಿಗರೂ ಆಗಮಿಸುತ್ತಿದ್ದಾರೆ. ಮಹಾಕುಂಭ ಮೇಳದಿಂದ ಭಾರತದ ಆರ್ಥಿಕವಾಗಿ ಅಭಿವೃದ್ಧಿಯಾಗಲಿದೆ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಕುಂಭಮೇಳವು ಭಾರತದ ಆರ್ಥಿಕತೆಯನ್ನು ಹೇಗೆ ಪ್ರಭಾವಿಸಬಹುದು ಎನ್ನುವ ವಿಚಾರವಾಗಿ ಲೇಖಕ ಮಧುಸೂಧನ್‌ ವೈ.ಎನ್. ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಎರಡು ಪೋಸ್ಟ್ ಪ್ರಕಟಿಸಿದ್ದಾರೆ. ಅವರ ಪೋಸ್ಟ್‌ ಅನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ. ಇಲ್ಲಿಂದಾಚೆಗೆ ಇರುವುದು ಮಧುಸೂದನ ಅವರ ಬರಹ.

ಕುಂಭಮೇಳ ಒಂದು ಧಾರ್ಮಿಕ ಸಂಭ್ರಮ. ಅದನ್ನು ದೇಶದ ಆರ್ಥಿಕತೆಗೆ ಥಳುಕು ಹಾಕುವುದು ಸಮಂಜಸವಲ್ಲ ಅನಿಸುತ್ತದೆ.

ಸಂಪತ್ತು ವೃದ್ಧಿಸುವುದು ಮೂರು ರೀತಿ

1. ಮೂರ್ತ ಉತ್ಪಾದನೆಗಳು: ಕಾರು, ಬೈಕು, ಕಟ್ಟಡ, ದವಸ ಧಾನ್ಯ ಇತ್ಯಾದಿ.

2. ಅಮೂರ್ತ ಉತ್ಪಾದನೆಗಳು (ಸರ್ವೀಸ್): ಬ್ಯಾಂಕಿಂಗ್, ಹಾಸ್ಪಿಟಾಲಿಟಿ, ಸಾರಿಗೆ ಇತ್ಯಾದಿ

3. ಸಂಶೋಧನೆಗಳು: ಇಂಟಲೆಕ್ಚುವಲ್ ಪ್ರಾಪರ್ಟಿ, ವಿಜ್ಞಾನ ತಂತ್ರಜ್ಞಾನ ವಲಯದಲ್ಲಿ ಹೊಸತು ಕಂಡುಹಿಡಿಯುವುದು ಇತ್ಯಾದಿ.

ಹಾಗೇ ಮೂರ್ತ ಮತ್ತು ಅಮೂರ್ತ ಉತ್ಪಾದನೆ, ಆದಾಯ ಗಳಿಸುವುದರಿಂದ, ಖರ್ಚು ಮಾಡುವುದರಿಂದ ಜಿಡಿಪಿ ವೃದ್ಧಿಸುತ್ತದೆ.

ಈ ಗಾತ್ರದ ಕುಂಭಮೇಳ ಏರ್ಪಡಿಸಲು ತಗುಲುವ ಆದಾಯವಿಲ್ಲದ ವೆಚ್ಛಗಳು

1. ಲಾ ಅಂಡ್ ಆರ್ಡರ್: ಪೋಲೀಸ್‌, ಆರ್ಮಿ(ಇದು ದುಬಾರಿ), ಸಿಸಿಟಿವಿ, ಡ್ರೋನ್‌ ಇತ್ಯಾದಿ

2. ಇನ್‌ಫ್ರಾಸ್ಟ್ರಕ್ಚರ್: ರಸ್ತೆಗಳು, ಬ್ರಿಡ್ಜ್‌ಗಳು, ಟಾಯ್ಲೆಟ್‌ಗಳು ಇತ್ಯಾದಿ

3. ತುರ್ತು ಸೇವೆಗಳು: ಆಸ್ಪತ್ರೆ, ಆಂಬ್ಯುಲೆನ್ಸ್‌, ಅಗ್ನಿಶಾಮಕ ಹಾಗೂ ಇತ್ಯಾದಿ

4. ವೇಸ್ಟ್ ಮ್ಯಾನೇಜ್‌ಮೆಂಟ್‌: ಅಷ್ಟೂ ಜನರು ಉತ್ಪಾದಿಸುವ ಗಲೀಜನ್ನು ಮ್ಯಾನೇಜ್ ಮಾಡುವುದು. ಎಲ್ಲಾ ಮುಗಿದ ನಂತರ ಗಂಗಾ ನದಿಯನ್ನು ಶುಚಿ ಮಾಡುವುದು.

5. ಅಷ್ಟೂ ಜನರಿಗೆ ನೀರು ಮತ್ತು ವಿದ್ಯುತ್ ಒದಗಿಸುವುದು.

ಮಹಾ ಕುಂಭಮೇಳದಿಂದ ಬರುವ ಉತ್ಪಾದಕ ಆದಾಯ

1. ಮೂರ್ತ ಉತ್ಪಾದನೆ: ಸೊನ್ನೆ

2. ಅಮೂರ್ತ ಉತ್ಪಾದನೆ: ಹೋಟಲ್‌, ಟೆಂಟು, ಬಸ್ಸು, ರೈಲು, ವಿಮಾನ

ಕುಂಭಮೇಳದಿಂದ ಜಿಡಿಪಿ ವೃದ್ಧಿ

ಈ ಗಾತ್ರದ ಮೇಳ ಒಂದಷ್ಟು ಹಣ ಕೈಬದಲಿಗೆ ಕಾರಣವಾಗುತ್ತದೆ. ಅದು ಜಿಡಿಪಿಗೆ ಸೇರುತ್ತದಾದರೂ ಅದರಿಂದ ವ್ಯವಕಲನ ಮಾಡಬೇಕಿರುವ ಲೆಕ್ಕ ಕೆಳಕಂಡಂತಿದೆ.

1. ಇದರಲ್ಲಿ ದೇಶದ 45 ಕೋಟಿ ಜನರ ಕನಿಷ್ಠ ಮೂರು ದಿನಗಳ ಅಂದರೆ ಸುಮಾರು 120 ಜನರ (man days) ಉತ್ಪಾದಕಾ ಸಾಮರ್ಥ್ಯಕ್ಕೆ ಕೊಕ್ಕೆ ಬೀಳುತ್ತದೆ.

2. ಹಣದ ಕೈಬದಲಿ ಅಂದರೆ ಉಳಿದೆಲ್ಲಾ ರಾಜ್ಯಗಳ ಒಂದಷ್ಟು ಹಣ ಉತ್ತರಪ್ರದೇಶದ ಖಜಾನೆಗೆ ಸೇರುತ್ತದೆ. ದೇಶದ ಬೊಕ್ಕಸಕ್ಕೆ ಹೆಚ್ಚು ವ್ಯತ್ಯಾಸ ಉಂಟು ಮಾಡಲ್ಲ.

3. ಉತ್ತರಪ್ರದೇಶಕ್ಕೆ ಬರುವ ಹಣವೂ ಅದು ತೆರಬೇಕಾದ ಖರ್ಚಿಗೆ ಸಮನಾಗಿರಲ್ಲ ಅನಿಸುತ್ತದೆ. ಒಂದು ರಾಜ್ಯ ತನ್ನ ಬಹುತೇಕ ಸಾರ್ವಜನಿಕ ಸೇವಾ ಸಾಮರ್ಥ್ಯವನ್ನು ಇದಕ್ಕಾಗಿ ಉಚಿತವಾಗಿ ವ್ಯಯ ಮಾಡಬೇಕಿರುತ್ತದೆ.

4. ಅರ್ಧಕ್ಕರ್ಧ ಜನರು ಹೋಟೆಲ್‌, ಟೆಂಟು, ಬಸ್ಸು, ರೈಲು, ಪ್ಲೇನುಗಳಿಗೆ ಕಾಂಟ್ರಿಬ್ಯೂಟ್ ಮಾಡಲ್ಲ. ಪ್ರವಾಸಿಗರ ಲೆಕ್ಕದಲ್ಲಿ ಅಲ್ಲಿ ಇಲ್ಲಿ ವ್ಯವಸ್ಥೆ ಮಾಡಿಕೊಂಡು ಹೋಗಿ ಬರುತ್ತಾರೆ.

5. ಆಹಾರ ಮತ್ತು ಯಾವುದೆಲ್ಲಾ ಜನ ಮನೆಯಲ್ಲಿದ್ದರೂ ಅದೇ ಮಾಡುತ್ತಿದ್ದರೋ ಅಂತಹ ಆದಾಯ-ವ್ಯಯ ಲೆಕ್ಕಕ್ಕೆ ಬರುವುದಿಲ್ಲ. ಉದಾಹರಣೆಗೆ ಅಷ್ಟೂ ಜನ ಮನೆಯಲ್ಲಿದ್ದರೂ ಅಷ್ಟೂ ದಿವಸ ಊಟ ಮಾಡಿರುತ್ತಿದ್ದರು. ಮಿಡಿಯಾದವರು ಅದಲ್ಲದಿದ್ದರೆ ಇನ್ನೇನೊ ತೋರಿಸುತ್ತಿದ್ದರು, ಜನ ಇದಕ್ಕಿಂತ ಕಡಿಮೆ ಸಮಯವನ್ನು ಟಿವಿ ಎದುರು ವ್ಯಯ ಮಾಡುತ್ತಿದ್ದರು.

ದೇಶಕ್ಕೆ ಆರ್ಥಿಕವಾಗಿ ಯಾವ ಲಾಭವೂ ಇಲ್ಲ

ಒಟ್ಟು ಮೊತ್ತ ನೋಡಿದರೆ ಇದರಲ್ಲಿ ದೈವಭಕ್ತರಿಗೆ ಒಂದಷ್ಟು ನೆಮ್ಮದಿ ಬಿಟ್ಟರೆ ಇಡೀ ದೇಶಕ್ಕೆ ಆರ್ಥಿಕವಾಗಿ ಲಾಭವೇನಿಲ್ಲ. man days ಲೆಕ್ಕ ಹಾಕಿದಾಗ ತುಸು ನಷ್ಟವೆಂದರೂ ಸರಿಯೇ.

ಸರಳವಾಗಿ- ಮನೆಯಲ್ಲಿ ಹಬ್ಬ ಮಾಡಿದಾಗ ಅಪ್ಪ-ಅಮ್ಮನ ಪರ್ಸಿಗೆ ಕೊಕ್ಕೆ ಬೀಳುತ್ತೆ. ಮಕ್ಕಳಿಗೆ ತುಸು ರಜೆ ಮತ್ತು ಅದರಿಂದಾಗಿ ಸ್ವಲ್ಪ ಸಂಭ್ರಮ ಇಷ್ಟು ಮಾತ್ರ.

ಈ 4 ಲಕ್ಷ ಕೋಟಿ ರೆವೆನ್ಯೂ, 25 ಸಾವಿರ ಕೋಟಿ ಟ್ಯಾಕ್ಸ್‌ ಮುಂತಾದ ಸಂಖ್ಯೆಗಳು ಹರಿದಾಡುತ್ತಿರುವುದರ ಮೂಲ ಉತ್ತರ ಪ್ರದೇಶದ ಮುಖ್ಯಮಂತ್ರಿಯವರು. 2019ರ ಜನವರಿ-ಫ್ರೆಬ್ರವರಿಯಲ್ಲಿ ನಡೆದ ಕುಂಭಮೇಳಕ್ಕೆ 24ಕೋಟಿ ಜನರು ಬಂದಿದ್ದರಂತೆ. ಅದು 1.2 ಲಕ್ಷ ಕೋಟಿಯನ್ನು ರಾಜ್ಯದ ಅರ್ಥ ವ್ಯವಸ್ಥೆಗೆ ಕೊಡುಗೆ ನೀಡಿತಂತೆ. ಆದ್ದರಿಂದ ಈ ಸಲ 45 ಕೋಟಿ ಜನ ಬಂದರೆ ಅದು 4 ಲಕ್ಷ ಕೋಟಿ ಆಗುತ್ತೆ ಎಂಬ ಅಂದಾಜಿನ ಲೆಕ್ಕ ಕೊಡಲಾಗಿದೆ.

ಉತ್ತರ ಪ್ರದೇಶದ ಜಿಎಸ್‌ಟಿ ಸಂಗ್ರಹ

ಇದು ನಿಜವಾ ಎಂದು ಒಂದಷ್ಟು ಹುಡುಕಾಡಿದಾಗ 2018-2022ರವರೆಗಿನ ಆ ರಾಜ್ಯದ ಜಿಎಸ್‌ಟಿ ಕಲೆಕ್ಷನ್ ಮಾಹಿತಿ ಸಿಕ್ಕಿತು. ಅದು ಹೀಗಿದೆ

2017 ರಲ್ಲಿ 22,803.33 ರೂ.

2018 ರಲ್ಲಿ 59,231.96 ರೂ.

2019 ರಲ್ಲಿ 64,658.12 ರೂ.

2020 ರಲ್ಲಿ58,342.06 ರೂ.

2021 ರಲ್ಲಿ71,888.38 ರೂ.

2022 ರಲ್ಲಿ 56,018.02 ರೂ.

2017ರಲ್ಲಿ ಉತ್ತರ ಪ್ರದೇಶದಲ್ಲಿ ಜಿಎಸ್‌ಟಿ ಕಾಯ್ದೆ ಜಾರಿಗೆ ತಂದಿದ್ದರಿಂದ ಸುಮಾರು 16 ಲಕ್ಷ ಜನ ಜಿಎಸ್‌ಟಿಗೆ ನೋಂದಾಯಿಸಿಕೊಂಡಿದ್ದರಿಂದ 2018ಕ್ಕೆ ಜಿಎಸ್‌ಟಿ ಮೊತ್ತ ಸುಮಾರು 40 ಸಾವಿರ ಕೋಟಿ ವೃದ್ಧಿಸಿದೆ. 2018ರಿಂದ 2019ಕ್ಕೆ ಕೇವಲ 4 ಸಾವಿರ ಕೋಟಿ ಜಿಎಸ್‌ಟಿ ವೃದ್ಧಿಸಿದೆ. ಇದು ಕುಂಭಮೇಳ ನಡೆದ ಕಾಲಮಾನ. 2019 ರಿಂದ 2020ಕ್ಕೆ ಅದು 6 ಸಾವಿರ ಕೋಟಿ ಕಡಿಮೆಯಾಗಿದೆ. ಇದು ಕೋವಿಡ್ ಕಾಲ. 2020 ರಿಂದ 2021 ಕ್ಕೆ ಮತ್ತೆ 13 ಸಾವಿರ ಕೋಟಿ ವೃದ್ಧಿಸಿದೆ. ಇದು ಕೋವಿಡ್ ನಂತರದ ಪ್ರಗತಿಯ ಕಾಲ. ಮುಖ್ಯಮಂತ್ರಿಗಳ ಪ್ರಕಾರ 2019ರಲ್ಲಿ 1.2ಲಕ್ಷ ಕೋಟಿ ಹೆಚ್ಚುವರಿ ಹಣ ಒಳ ಬಂದಿದ್ದರೆ ಅದರಲ್ಲಿ ಅರ್ಧ ಮಟ್ಟಿಗೆ ಅನ್ ಆರ್ಗನೈಸಡ್ ಸೆಕ್ಟರ್‌ಗೆ ತೆಗೆದಿಟ್ಟರೂ ಇನ್ನರ್ಧದಲ್ಲಿ 18% ಬೇಡ, 12% ಎಂದುಕೊಂಡರೂ 6 ಸಾವಿರ ಕೋಟಿ ಜಿಎಸ್‌ಟಿ ಕಲೆಕ್ಷನ್ ಆಗಬೇಕು. ಯಾವುದೇ ಮೇಳವಿಲ್ಲದ 2020-21ರ ನಡುವೆ 13 ಸಾವಿರ ಕೋಟಿ ವೃದ್ಧಿಸಿದೆ ಎಂದಾದರೆ 2019ರ 4 ಸಾವಿರ ಕೋಟಿ ಅದು ವೃದ್ಧಿಯಲ್ಲ ಇಳಿಕೆ ಎಂದಾಯ್ತು. 2019ರಲ್ಲಿ ಸಹಜವಾಗಿ ಆಗಬೇಕಿದ್ದ ವರ್ಷದಿಂದ ವರ್ಷದ ಪ್ರಗತಿಯ ವ್ಯತ್ಯಾಸವೇ ಕಂಡಿಲ್ಲ ಇನ್ನು ಮೇಳದ ಒಳಹರಿವು ಎಲ್ಲಿ?

ಜಗತ್ತಿನಾದ್ಯಂತ ಇರುವ ಒಟ್ಟು ಹಿಂದೂಗಳ ಸಂಖ್ಯೆ 120 ಕೋಟಿ. ಇದರಲ್ಲಿ 45 ಕೋಟಿ ಜನ ಮೇಳದಲ್ಲಿ ಭಾಗಿಯಾಗಬೇಕಂದರೆ ನಮ್ಮ ನಿಮ್ಮ ಸುತ್ತಮುತ್ತಲ ಪ್ರತಿ ಮೂವರಲ್ಲಿ ಒಬ್ಬರು ಹೋಗಿ ಬಂದಿರಬೇಕು. ನೀವೇ ಸುತ್ತ ತಿರುಗಿ ನೋಡಿ. ಇದು ನಿಜವಿದ್ದಬಹುದಾ? ಉತ್ತರ ಪ್ರದೇಶದ ಕಳೆದ ವರ್ಷದ ಜಿಎಸ್‌ಟಿ ಎಷ್ಟಿತ್ತು ಈ ವರ್ಷ ಎಷ್ಟು ದಾಖಲಾಗುತ್ತದೆ ಎಂಬುದನ್ನು ಯಾರಾದರೂ ನೆನಪಿಟ್ಟುಕೊಂಡು ಮುಂದಿನ ವರ್ಷ ತಾಳೆಹಾಕಿ ನನಗೂ ತಿಳಿಸಿ. ಧರ್ಮ ಆಧ್ಯಾತ್ಮ ಭಕ್ತಿ- ಇವೆಲ್ಲವೂ ಮನುಷ್ಯ ಸಬಲನಾಗಿದ್ದಾಗ ಸಂಭ್ರಮ, ದುರ್ಬಲನಾಗಿದ್ದಾಗ ಸಾಂತ್ವನ ನೀಡುತ್ತವೆ. ನಾಗರಿಕ ಸಮಾಜದಲ್ಲಿ ಅದೇ ಅವುಗಳ ಪಾತ್ರ.

ಅಜ್ಞಾನವನ್ನೇ ಅಮೃತದಂತೆ ಸೇವಿಸುತ್ತಿರುವ ಜನರು

ಹಣ ಕೈ ಬದಲಾಗುವುದು ಒಂದು ಸಣ್ಣ ಪ್ರಮಾಣದ ಸೋನೆ ಮಳೆ. ಅದು ಅಷ್ಟೇ ಇರಬೇಕು. ಧರ್ಮದ ಆಚರಣೆಯಲ್ಲಿ ಲಕ್ಷಾಂತರ ಕೋಟಿ ಹಣ ನೋಡಲು ಹೋದಾಗ ಅದು ನಿಸ್ಸಂಶಯವಾಗಿ ಧರ್ಮಕ್ಕೆ ಕಳಂಕ ತರುತ್ತದೆ. ಧಾರ್ಮಿಕ ಭಾವನೆ ಎದೆಯಲ್ಲಿ ನೆಮ್ಮದಿ, ಶಾಂತಿ, ಭಕ್ತಿ, ಪ್ರೇಮರಸಗಳನ್ನು ಸ್ಫುರಿಸಬೇಕು. ಅದು ನಿಮ್ಮಲ್ಲಿ ಎದೆಯೊತ್ತಡ, ಅಶಾಂತಿ, ಉದ್ವೇಗ, ಕ್ಷೋಭೆ, ಸಿಟ್ಟು, ದ್ವೇಷ, ಹಿಸ್ಟೀರಿಯಾ, ಮೌಢ್ಯ ಇವೇ ಮೊದಲಾದವನ್ನು ಉಂಟು ಮಾಡಿದರೆ ನೀವು ಧರ್ಮ ಬಿಟ್ಟು ಅಧರ್ಮಕ್ಕೆ ಇಳಿದ್ದೀರ ಎಂದು ಅರ್ಥ. ಮೇಲ್ಕಂಡ ನನ್ನ ಆರ್ಥಿಕತೆಯ ಗ್ರಹಿಕೆಯಲ್ಲಿ ತಪ್ಪಿರಬಹುದು. ಯಾರಾದರೂ ಅದು ಹೀಗಲ್ಲ ಹೀಗೆ ಎಂದು ಸದುದ್ದೇಶದಿಂದ ಅರ್ಥ ಮಾಡಿಸಿದರೆ ಒಪ್ಪಿಕೊಳ್ಳುವ ಗುಣ ನನ್ನಲ್ಲಿದೆ.

ಹಿಂದೂ, ಬೌದ್ಧ, ಜೈನ, ಭಕ್ತಿ, ಶರಣ ಇಂಥಾ ಅನೇಕಾನೇಕ ತತ್ವ ವಿಚಾರಗಳನ್ನು ಕೊಡುಗೆಯಾಗಿ ನೀಡಿದ ಭವ್ಯ ಭಾರತದಲ್ಲಿ ಇಂದು ಅಮಾಯಕ ಜನರು ಅಜ್ಞಾನವನ್ನೇ ಅಮೃತದಂತೆ ಸೇವಿಸುವುದು ನೋವು ತರಿಸುತ್ತದೆ. ಆದ್ದರಿಂದ ಕೆಲವೊಮ್ಮೆ ಗಟ್ಟಿಯಾಗಿ ‍್ದುತಿ ಹಾಗಲ್ಲ ಹೀಗೆ ಎಂದು ಹೇಳಬೇಕು ಅನಿಸುತ್ತದೆ. ಧನ್ಯವಾದಗಳು.

(ಗಮನಿಸಿ: ಇದು ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ)

Whats_app_banner