ಪ್ರತಿದಿನ ಸರಿಯಾಗಿ ಮಲವಿಸರ್ಜನೆ ಮಾಡಲು ಸಾಧ್ಯವಾಗ್ತಿಲ್ಲ ಅಂದ್ರೆ ಇಷ್ಟೆಲ್ಲಾ ತೊಂದರೆಗಳಾಗುತ್ತೆ, ಈ ವಿಚಾರಗಳನ್ನು ನಿರ್ಲಕ್ಷ್ಯ ಮಾಡದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರತಿದಿನ ಸರಿಯಾಗಿ ಮಲವಿಸರ್ಜನೆ ಮಾಡಲು ಸಾಧ್ಯವಾಗ್ತಿಲ್ಲ ಅಂದ್ರೆ ಇಷ್ಟೆಲ್ಲಾ ತೊಂದರೆಗಳಾಗುತ್ತೆ, ಈ ವಿಚಾರಗಳನ್ನು ನಿರ್ಲಕ್ಷ್ಯ ಮಾಡದಿರಿ

ಪ್ರತಿದಿನ ಸರಿಯಾಗಿ ಮಲವಿಸರ್ಜನೆ ಮಾಡಲು ಸಾಧ್ಯವಾಗ್ತಿಲ್ಲ ಅಂದ್ರೆ ಇಷ್ಟೆಲ್ಲಾ ತೊಂದರೆಗಳಾಗುತ್ತೆ, ಈ ವಿಚಾರಗಳನ್ನು ನಿರ್ಲಕ್ಷ್ಯ ಮಾಡದಿರಿ

ನಮ್ಮ ದೇಹಕ್ಕೆ ಆಹಾರ ಎಷ್ಟು ಮುಖ್ಯವೋ, ಮಲವಿಸರ್ಜನೆ ಕೂಡ ಅಷ್ಟೇ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಹಲವರು ವಿಸರ್ಜನೆ ವೇಳೆ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ತೀ‌ವ್ರವಾದ ನೋವು, ಮಲದಲ್ಲಿ ರಕ್ತ, ವಿವರಿಸಲಾಗದಷ್ಟು ತೂಕ ನಷ್ಟ ಈ ಲಕ್ಷಣಗಳು ನಿಮ್ಮಲ್ಲೂ ಇದು ಗಂಭೀರ ಸಮಸ್ಯೆಯನ್ನು ಸೂಚಿಸಬಹುದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಪ್ರತಿದಿನ ಸರಿಯಾಗಿ ಮಲವಿಸರ್ಜನೆ ಮಾಡಲು ಸಾಧ್ಯವಾಗ್ತಿಲ್ಲ ಅಂದ್ರೆ ಇಷ್ಟೆಲ್ಲಾ ತೊಂದರೆಯಾಗುತ್ತೆ (ಸಾಂಕೇತಿಕ ಚಿತ್ರ)
ಪ್ರತಿದಿನ ಸರಿಯಾಗಿ ಮಲವಿಸರ್ಜನೆ ಮಾಡಲು ಸಾಧ್ಯವಾಗ್ತಿಲ್ಲ ಅಂದ್ರೆ ಇಷ್ಟೆಲ್ಲಾ ತೊಂದರೆಯಾಗುತ್ತೆ (ಸಾಂಕೇತಿಕ ಚಿತ್ರ) (PC: Canva)

ಪ್ರತಿದಿನ ನಾವು ಆಹಾರಗಳನ್ನು ಸೇವಿಸುವ ಮೂಲಕ ದೇಹಕ್ಕೆ ಶಕ್ತಿ ಒದಗಿಸುತ್ತೇವೆ. ಆದರೆ ಆಹಾರವು ಜೀರ್ಣವಾದ ನಂತರ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಹೊರತು ಪಡಿಸಿ ಉಳಿದವು ದೊಡ್ಡ ಕರುಳಿನ ಮೂಲಕ ಮಲದ ರೂಪದಲ್ಲಿ ಹೊರ ಹೋಗುತ್ತದೆ. ಪ್ರತಿದಿನ ಆಹಾರ ಸೇವಿಸುವಷ್ಟೇ ಅಲ್ಲ, ಸರಿಯಾಗಿ ಮಲವಿಸರ್ಜನೆ ಮಾಡುವುದು ಅವಶ್ಯ.

ಆದರೆ ಇತ್ತೀಚಿನ ದಿನಗಳಲ್ಲಿ ಮಲ ವಿಸರ್ಜನೆ ವಿಚಾರದಲ್ಲಿ ಹಲವರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮಲ ವಿಸರ್ಜನೆ ಸರಿಯಾಗಿ ಆಗಿಲ್ಲ ಅಂದರೆ, ನಿರಂತರವಾಗಿಲ್ಲ ಎಂದರೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ನಾವು ಅಲ್ಲಗೆಳೆಯವಂತಿಲ್ಲ. ‘ಪ್ರತಿದಿನ ಸರಿಯಾಗಿ ಮಲ ವಿಸರ್ಜನೆಯಾಗಿಲ್ಲ ಎಂದರೆ ಕರುಳು ಸ್ವಚ್ಛಗೊಳ್ಳುವುದಿಲ್ಲ. ಇದರಿಂದ ದೊಡ್ಡ ಕರುಳಿನಲ್ಲಿ ತ್ಯಾಜ್ಯ ಸಂಗ್ರಹವಾಗಲು ಕಾರಣವಾಗಬಹುದು. ಇದು ಹೊಟ್ಟೆಯುಬ್ಬರ, ಹೊಟ್ಟೆ ಭಾರವಾಗುವುದು, ಹೊಟ್ಟೆನೋವು ಮುಂತಾದ ಸಮಸ್ಯೆಗಳನ್ನು ಉಂಟು ಮಾಡಬಹುದು‘ ಎನ್ನುತ್ತಾರೆ ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಸಲಹೆಗಾರ ಡಾ. ವಿಕಾಸ್ ಜಿಂದಾಲ್.

ದೀರ್ಘಕಾಲದ ಮಲಬದ್ಧತೆಯು ಕಾಲಾನಂತರದಲ್ಲಿ ಗುದನಾಳ ಮತ್ತು ಶ್ರೋಣಿಯ ಸ್ನಾಯುಗಳ ಮೇಲೆ ಒತ್ತಡವನ್ನುಂಟುಮಾಡಬಹುದು. ಇದು ಮೂಲವ್ಯಾಧಿ ಮತ್ತು ಗುದದ ಬಿರುಕುಗಳ ಅಪಾಯವನ್ನು ಹೆಚ್ಚಿಸುತ್ತದೆ.ದೀರ್ಘಕಾಲದವರೆಗೆ ಮಲವಿಸರ್ಜನೆ ಮಾಡದೇ ಇರುವುದು ಸಾಕಷ್ಟು ತೊಂದರೆಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಗಳಿಗೆ ವೈದ್ಯರ ಸಲಹೆ ಪಡೆದು, ಅದನ್ನು ಪರಿಹರಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ.

ಪ್ರತಿದಿನ ಸರಿಯಾಗಿ ಮಲವಿಸರ್ಜನೆ ಮಾಡಿಲ್ಲ ಅಂದ್ರೆ ಏನಾಗುತ್ತೆ?

ಹೈದರಾಬಾದ್‌ ಬಂಜಾರ ಹಿಲ್ಸ್‌ನ ಕೇರ್ ಆಸ್ಪತ್ರೆಗಳ ಗ್ಯಾಸ್ಟ್ರೋಎಂಟರಾಲಜಿ ಸಲಹೆಗಾರರಾದ ಡಾ. ರಾಹುಲ್ ದುಬ್ಬಕಾ ಅವರ ಪ್ರಕಾರ ಪ್ರತಿದಿನ ಸರಿಯಾಗಿ ಮಲವಿಸರ್ಜನೆ ಮಾಡಿಲ್ಲ ಎಂದರೆ ನಂತರದ ದಿನಗಳಲ್ಲಿ ಇದರಿಂದ ನಿರ್ಜಲೀಕರಣ, ದೈಹಿಕ ಚಟುವಟಿಕೆಯ ಕೊರತೆ, ಔಷಧಿಗಳ ಸೇವನೆ, ವಿವಿಧ ರೀತಿಯ ಕರುಳಿನ ಸಮಸ್ಯೆಗಳು ಹಾಗೂ ಮಧುಮೇಹದಂತಹ ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಲವು ತುಂಬಾ ನಿಧಾನವಾಗಿ ಚಲಿಸಿದಾಗ, ಅದು ಗಟ್ಟಿಯಾಗಿ ಮತ್ತು ಹಾದುಹೋಗಲು ಕಷ್ಟವಾಗಬಹುದು, ಇದರಿಂದಾಗಿ ಕೂಡ ಸಮಸ್ಯೆಗಳು ಎದುರಾಗಬಹುದು.

ಮಲವಿಸರ್ಜನೆ ಸರಿಯಾಗಿ ಆಗಲು ಏನು ಮಾಡಬೇಕು?

ಪ್ರತಿದಿನ ಸರಿಯಾಗಿ ಮಲವಿಸರ್ಜನೆ ಆಗಬೇಕು ಎಂದರೆ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಫೈಬರ್ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಸಾಕಷ್ಟು ನೀರು ಕುಡಿಯುವ ಮೂಲಕ ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಬೇಕು. ಏಕೆಂದರೆ ಇದು ಮಲವನ್ನ ಮೃದುವಾಗುವಂತೆ ಮಾಡುತ್ತದೆ ಎನ್ನುತ್ತಾರೆ ಡಾ. ವಿಕಾಸ್ ಜಿಂದಾಲ್. ನಿಯಮಿತ ದೈಹಿಕ ಚಟುವಟಿಕೆಯು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳುತ್ತಾರೆ. ‌

ಮಲವಿರ್ಸಜನೆಯು ನಾವು ಸೇವಿಸುವ ಆಹಾರಗಳ ಮೇಲೆ ಅವಲಂಬಿತವಾಗಿದೆ. ಪ್ರತಿದಿನ ಸರಿಯಾಗಿ ಮಲವಿಸರ್ಜನೆ ಆಗಬೇಕು ಎಂದರೆ ದೇಹಕ್ಕೆ ಹೊಂದಿಕೆಯಾಗದ, ಜೀರ್ಣಕ್ರಿಯೆ ಸಾಧ್ಯವಾಗದಂತಹ ಆಹಾರಗಳ ಸೇವನೆಯನ್ನು ಮಿತಿಗೊಳಿಸಿ. ಏಕೆಂದರೆ ಅವು ಕಾಲಾನಂತರದಲ್ಲಿ ಕರುಳಿನ ಸ್ನಾಯುಗಳನ್ನು ದುರ್ಬಲಗೊಳಿಸಬಹುದು.

ಮಲವಿಸರ್ಜನೆ ವಿಚಾರದಲ್ಲಿ ಗಮನಿಸಬೇಕಾದ ಅಂಶಗಳೇನು?

ಜೀವನಶೈಲಿಯ ಬದಲಾವಣೆಗಳ ಹೊರತಾಗಿಯೂ ಸರಿಯಾಗಿ ಮಲವಿಸರ್ಜನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ ಕೆರಳಿಸುವ ಕರುಳಿನ ಸಹಲಕ್ಷಣಗಳು (IBS), ಹೈಪೋಥೈರಾಯ್ಡಿಸಮ್ ಅಥವಾ ಆಹಾರದ ಅಸಮತೋಲನದಂತಹ ಮೂಲ ಸಮಸ್ಯೆಗಳನ್ನು ಸೂಚಿಸುತ್ತದೆ. ತೀವ್ರವಾದ ನೋವು, ಮಲದಲ್ಲಿ ರಕ್ತ ಅಥವಾ ವಿವರಿಸಲಾಗದ ತೂಕ ನಷ್ಟದಂತಹ ರೋಗಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರ ಬಳಿ ತೋರಿಸಿ ಸಲಹೆ ಪಡೆಯಿರಿ, ಏಕೆಂದರೆ ಇದು ಗಂಭೀರ ಸಮಸ್ಯೆಗಳನ್ನು ಸೂಚಿಸಬಹುದು ಎಂದು ಡಾ. ಜಿಂದಾಲ್ ಹೇಳುತ್ತಾರೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)