ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ? ಹೀಗೊಂದು ಅಭಿಯಾನ ಶುರುವಾಗಲಿ; ಅಜೋ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ? ಹೀಗೊಂದು ಅಭಿಯಾನ ಶುರುವಾಗಲಿ; ಅಜೋ ಬರಹ

ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ? ಹೀಗೊಂದು ಅಭಿಯಾನ ಶುರುವಾಗಲಿ; ಅಜೋ ಬರಹ

Bakrid 2024: ಮುಸ್ಲಿಮರ ಮನೆಗಳಲ್ಲಿ ಹಬ್ಬಕ್ಕೆ ಊಟ ಮಾಡುವುದನ್ನು ವಿಶೇಷವೆನ್ನಿಸುವಂತೆ ಬಿಂಬಿಸುವ ನಾವುಗಳು‌ ನಮ್ಮ ಮನೆಗಳಲ್ಲಿ ಮುಸ್ಲಿಮರ ಊಟವನ್ನು ಸಹಜವೆಂದು ಭಾವಿಸುತ್ತಿಲ್ಲ ಯಾಕೆ ಎಂದು ಲೇಖಕರು ಪ್ರಶ್ನಿಸಿದ್ದಾರೆ. ಬಕ್ರೀದ್‌ ಹಬ್ಬದಂದು ಲೇಖಕರು ಚಿಂತನಾರ್ಹ ಬರಹವನ್ನು ನಿಮ್ಮ ಮುಂದಿಟ್ಟಿದ್ದಾರೆ.

ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ?
ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ? (PTI)

ಇಂದು ದೇಶದೆಲ್ಲೆಡೆ ಮುಸ್ಲಿಂ ಬಾಂಧವರು ಬಕ್ರೀದ್ ಆಚರಿಸುತ್ತಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಹನ್ನೆರಡನೇ ತಿಂಗಳಾದ ಧುಲ್-ಹಿಜ್ಜಾ/ದುಲ್-ಹಿಜ್ಜಾದ ಹತ್ತನೇ ದಿನದಂದು ಈ ಈದ್-ಉಲ್-ಅಧಾವನ್ನು ಆಚರಿಸಲಾಗುತ್ತದೆ. ತ್ಯಾಗ-ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಸಮುದಾಯದ ಜನತೆ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ದಿನ ಪರಸ್ಪರ ಶುಭಾಶಯಗಳ ವಿನಿಮಯ ಹಾಗೂ ವಿಶೇಷ ಅಡುಗೆ ತಯಾರಿಸಿ ಸೇವಿಸುವುದು ಸಾಮಾನ್ಯ. ಇದೇ ದಿನದಂದು ಮುಸ್ಲಿಂ ಗೆಳೆಯ-ಗೆಳತಿಯರ ಮನೆಗೆ ತೆರಳುವ ಕೆಲವು ಹಿಂದೂ ಧರ್ಮೀಯರು ಕೂಡಾ, ಹಬ್ಬದೂಟ ಸವಿಯುತ್ತಾರೆ. ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಲೇಖಕ ಹಾಗೂ ಅಂಕಣಕಾರ ಅರುಣ್‌ ಜೋಳದಕೂಡ್ಲಿಗಿ (ಅಜೋ) ಹಂಚಿಕೊಂಡಿದ್ದಾರೆ. ಮುಂದಿರುವುದು ಅರುಣ್‌ ಅವರ ಬರಹ.

ಬಕ್ರೀದ್ ಗೆ ಮುಸ್ಲಿಂ ಬಾಂಧವರು ಊಟಕ್ಕೆ ಕರೆಯಲಿಲ್ಲವೆಂದು ಪ್ರೀತಿಯಿಂದ ಆರೋಪಿಸೋದು ಒಂದ್ಕಡೆಯಾದ್ರೆ, ಮುಸ್ಲಿಂ ಭಾಂಧವರ ಮನೆಗಳಲ್ಲಿ ಬಕ್ರೀದ್ ಹಬ್ಬಕ್ಕೆ ಹೋಗಿ ಊಟ ಮಾಡಿದ್ದರ ಚಿತ್ರ ಹಾಕೊಂಡು ಖುಷಿ ಪಡೋದು ಮತ್ತೊಂದ್ಕಡೆ. ಆದ್ರೆ ಇಷ್ಟು ವರ್ಷ ಯುಗಾದಿ, ದೀಪಾವಳಿ, ನಾಗರಪಂಚಮಿ, ಊರಮ್ಮನ ಜಾತ್ರೆ ಮೊದಲಾದ ಇಂತಹ ಸಾಲು ಸಾಲು ಹಿಂದುಗಳ ಹಬ್ಬಗಳಲ್ಲಿ ನಮ್ಮನ್ಯಾಕೆ ಕರೀಲಿಲ್ಲ ಎನ್ನುವ ಪ್ರೀತಿಯ ಆರೋಪವನ್ನೂ ಮುಸ್ಲಿಂ‌ ಭಾಂಧವರು‌ ಮಾಡಿದ್ದನ್ನು ನಾನು ನೋಡಲಿಲ್ಲ. ಅಂತೆಯೇ ನಾನು ಈ ಹಬ್ಬಗಳಲ್ಲಿ ಇಂತಿತವರ ಮನೆಯಲ್ಲಿ ಹಬ್ಬದೂಟ ಮಾಡಿದೆ ಎಂದು ಫೋಟೋ ಹಾಕಿಕೊಂಡಿದ್ದನ್ನೂ ನಾ ಕಾಣೆ. ಇದ್ದರೆ ಬೆರಳೆಣಿಕೆಯ ಉದಾಹರಣೆ ಸಿಗಬಹುದು.

ಯಾಕೆ ಹೀಗೆ?

ಮುಸ್ಲಿಮರ ಮನೆಗಳಲ್ಲಿ ಊಟ ಮಾಡುವುದನ್ನು ವಿಶೇಷವೆನ್ನಿಸುವಂತೆ ಬಿಂಬಿಸುವ ನಾವುಗಳು‌ ನಮ್ಮ ಮನೆಗಳಲ್ಲಿ ಮುಸ್ಲಿಮರ ಊಟವನ್ನು ಸಹಜವೆಂದು ಭಾವಿಸುತ್ತೇವೆಯೆ? ಅಥವಾ ಭಾವಿಸುತ್ತಿಲ್ಲ ಯಾಕೆ? ಅಥವಾ ನಮ್ಮ ಹಬ್ಬಗಳಿಗೆ ಮುಸ್ಲಿಮರನ್ನು ಆಹ್ವಾನಿಸಿದರೆ ಅದನ್ನೂ ಸೌಹಾರ್ಧತೆಯ ಭಾಗವಾಗಿ ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಕಡಿಮೆ.

ಹೀಗೆ ಮಾಡುವ ಮೂಲಕ ಅನುಕಂಪ ತೋರುವುದು, ವಿಶೇಷವೆಂಬಂತೆ ತೋರಿಸುತ್ತಲೇ ಮುಸ್ಲಿಂ ಬಾಂಧವರನ್ನು ಎಂಥದೋ‌ 'ಅವರು' ಎಂಬ ಪ್ರತ್ಯೇಕತೆಯ ಸಾಂಕೇತಿಕತೆಯನ್ನು ಬಲಗೊಳಿಸುತ್ತೇವೆಯಾ? ಎನ್ನುವ ಅನುಮಾನ. ಇದು ಹೊಸ ತಲೆಮಾರಿನ ಮಕ್ಕಳಲ್ಲಿ ಹೀಗೆಯೇ ಪರಿಣಾಮ ಬೀರಿದಂತೆ ಕಾಣುತ್ತದೆ.

ಉತ್ತರ ಕರ್ನಾಟಕ-ಕಲ್ಯಾಣ ಕರ್ನಾಟಕದ ಹಳ್ಳಿಗಳಲ್ಲಿ ಹಿಂದೂ-ಮುಸ್ಲಿಮರು ಮದುವೆ ಮುಂಜಿಗಳಲ್ಲಿ ಬೆರೆಯುವುದು, ಮೊಹರಂ ಹಬ್ಬದಲ್ಲಿ ತಾತ್ಕಾಲಿಕವಾಗಿ ಧರ್ಮದ ಗಡಿಗೆರೆ ಅಳಿಸಿ ಒಂದಾಗುವುದು, ಅಳಿಯ ಮಾವ, ಅಣ್ಣ ತಮ್ಮ, ದೊಡ್ಡಮ್ಮ ಚಿಕ್ಕಮ್ಮ ಮೊದಲಾದ ಸಂಬಂಧ ವಾಚಕಗಳಲ್ಲಿ ಆತ್ಮೀಯತೆ ತೋರುವುದು ಸಹಜವೆಂಬಂತೆ ಕಾಣುತ್ತವೆ.

ಇಂತಹ ಸಹಜ ಹೊಂದಾಣಿಕೆ ಕೊಡುಕೊಳೆ ಇಂದು ಮುಖ್ಯ ಅನ್ನಿಸುತ್ತೆ. ಪ್ರತ್ಯೇಕವೆಂಬಂತೆ ತೋರುವ ಯಾವ ಚಟುವಟಿಕೆಗಳೂ ಧರ್ಮದ ಗಡಿಗೆರೆಗಳನ್ನು ತಾತ್ಕಾಲಿಕವಾಗಿಯೂ ಅಳಿಸಿದಂತೆ ಕಾಣುವುದಿಲ್ಲ.

ಅಂಬೇಡ್ಕರ್ ಜಾತಿ ವಿನಾಶಕ್ಕಾಗಿ ಹೇಳುವ ಸಹಭೋಜನದ ಪರಿಣಾಮ ತೀರಾ ಕಡಿಮೆಯೇನಲ್ಲ. ದಲಿತರು ಮಾಡುವ ಗ್ರಾಮದೇವತೆಯ ಬೇಟೆ ಹಬ್ಬಗಳಲ್ಲಿ ಊರಿನ ಅನೇಕ ಮೇಲ್ಜಾತಿ ಜನರು ಉಂಡು ಬರುತ್ತಾರೆ. ಈ ಊಟವನ್ನು ಸಾರ್ವಜನಿಕಗೊಳಿಸುವುದಿಲ್ಲ. ಅಪರೂಪಕ್ಕೆ ದಲಿತ ಮೇಲ್ಮಧ್ಯಮ ವರ್ಗದ ಯುವಕ-ಯುವತಿಯರು ಮೇಲ್ಮಧ್ಯಮ ಜಾತಿ ಜನರ ಮನೆಗಳಲ್ಲೂ ಊಟ ಮಾಡಬಹುದು. ಅದನ್ನೂ ಸಾರ್ವಜನಿಕಗೊಳಿಸುವುದು ಕಡಿಮೆ. ಅಂದರೆ ಜಾತಿಗಳ ಬೆರೆಯುವಿಕೆ ಸಾರ್ವಜನಿಕ ಸುದ್ದಿಯಾಗದು. ಧರ್ಮಗಳ ಬೆರೆಯುವಿಕೆ ಸಾರ್ವಜನಿಕ ಸುದ್ದಿಯಾಗುವುದರ ಹಿಂದಣ ಇರುವ ಆಶಯವೇನು?

ದಲಿತ ಮೇಲ್ಜಾತಿಗಳ ಬೆರೆಯುವಿಕೆಯ ಗೌಪ್ಯತೆ ಕಾಪಾಡುವುದರ ಹಿಂದೆ ಜಾತೀಯತೆಯನ್ನು ಹಾಗೇ ಉಳಿಸುವ ಮನಸ್ಥಿತಿ ಕೆಲಸ ಮಾಡುತ್ತದೆ.

ಅಭಿಯಾನ ಶುರುವಾಗಲಿ

ಇನ್ನಾದರೂ ಸಾಮಾಜಿಕ‌‌ ಜಾಲತಾಣಗಳಲ್ಲಿ ಮೇಲುಜಾತಿಗಳು ದಲಿತರ‌ ಮನೆಗಳಲ್ಲಿ ಊಟ ಮಾಡಿದ್ದನ್ನು, ತಮ್ಮ ಮನೆಗಳಲ್ಲಿ ದಲಿತರು ಊಟ ಮಾಡಿದ್ದರ ಚಿತ್ರಗಳನ್ನು ಹೀಗೆ ಸಾರ್ವಜನಿಕವಾಗಿ ಹಂಚಿಕೊಳ್ಳುವ ಅಭಿಯಾನವೂ ಶುರುವಾಗಲಿ.

ಭಾರತದ ಸಂವಿಧಾನದ ಪ್ರಸ್ತಾವನೆ 'ಭಾರತದ ಜನೆತೆಯಾದ ನಾವು' ಎಂದು ಶುರುವಾಗುತ್ತದೆ. ಈ ಜನತೆಯಾದ 'ನಾವು' ಗಳಲ್ಲಿ ಮುಸ್ಲಿಮರೂ ಇದ್ದಾರೆ. ಸೂಕ್ಷ್ಮವಾಗಿ ಗಮನಿಸಿ ಪ್ರಜ್ಞಾವಂತರೂ ಮುಸ್ಲಿಮರನ್ನು 'ಅವರು' ಎಂದು ಸಂಭೋದಿಸಲು ಶುರು ಮಾಡಿದ್ದಾರೆ. ಒಂದು ಊರಿನ ಮೇಲ್ಜಾತಿಗಳೂ ದಲಿತರನ್ನೂ 'ಅವರು' ಎಂದೇ ಗುರುತಿಸಿತ್ತಿದ್ದರು. ಗಂಡಸರೆಲ್ಲಾ ಒಟ್ಟಾದಾಗ ಗಂಡುಕುಲದ ಬಗ್ಗೆ ಮಾತನಾಡುವಾಗ ಮಹಿಳೆಯರನ್ನೂ ಹೀಗೆ 'ಅವರು' ಎಂದೇ ಗುರುತಿಸುತ್ತಾರೆ.

ಈ 'ಅವರು' 'ನಾವು' ಎನ್ನುವ ಗಡಿಯನ್ನು ಸಂವಿಧಾನ ಹೊಡೆದು ಹಾಕಿಯೇ 'ಜನತೆಯಾದ ನಾವುಗಳು' ಎಂದಿದೆ. ಹಾಗಾಗಿ ನಮ್ಮಲ್ಲಿಯ ಕೆಲವರು ಅವರಾಗುವುದು ಬೇಡ. 'ನಾವು' ನಾವಾಗಿರಲು ಪ್ರಯತ್ನಿಸೋಣ.

ಬರಹ: ಅರುಣ್‌ ಜೋಳದಕೂಡ್ಲಿಗಿ

ಜೀವನಶೈಲಿ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | Bakrid 2024: ಮುಸಲ್ಮಾನರ ಪವಿತ್ರ ಹಬ್ಬ ಬಕ್ರೀದ್‌ ಆಚರಣೆಯ ಮಹತ್ವವೇನು? ಈ ಬಾರಿ ಹಜ್‌ ಯಾತ್ರೆ ಯಾವಾಗ ಆರಂಭ?