ಕನ್ನಡ ರಾಜ್ಯೋತ್ಸವ ಹಾಡುಗಳು: ಕನ್ನಡವೇ ನಮ್ಮಮ್ಮ, ರೋಮಾಂಚನವೀ ಕನ್ನಡ... ಇಲ್ಲಿದೆ ಸುಂದರ ಸುಮಧುರ ಹಾಡುಗಳ ಪಟ್ಟಿ
2024ರ ಕನ್ನಡ ರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಕನ್ನಡ ರಾಜ್ಯೋತ್ಸವ ಎಂದರೆ ಕನ್ನಡಿಗರ ಮನದಲ್ಲಿ ಅಭಿಮಾನ ಉಕ್ಕುತ್ತದೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕೇಳಲೇಬೇಕಾದ ಕನ್ನಡಾಭಿಮಾನ ಹೆಚ್ಚಿಸುವ ಹಾಡುಗಳಿವು, ಈ ಹಾಡುಗಳನ್ನು ಕೇಳುವ ಮೂಲಕ, ಹಲೋ ಟ್ಯೂನ್ ಹಾಕಿಕೊಳ್ಳುವ ಮೂಲಕ, ರಿಂಗ್ ಟೋನ್ ಇರಿಸಿಕೊಳ್ಳುವ ಮೂಲಕ ಕನ್ನಡಾಭಿಮಾನ ಮೆರೆಯಬಹುದು ನೋಡಿ.

ಕರ್ನಾಟಕ ರಾಜ್ಯೋತ್ಸವ ಬಂತೆಂದರೆ ಕನ್ನಡಿಗರ ಮನದಲ್ಲಿ ಅದೇನೋ ಖುಷಿ, ಸಂಭ್ರಮ. ಕನ್ನಡ ಭಾಷಿಗರು ನೆಲೆಯಾದ ಈ ನಾಡು ಕರ್ನಾಟಕವಾಗಿ ಏಕೀಕರಣವಾದ ದಿನವನ್ನು ಕನ್ನಡ ರಾಜ್ಯೋತ್ಸವ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು ಕನ್ನಡಾಂಬೆಗೆ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ಕನ್ನಡಾಭಿಮಾನ ಹೆಚ್ಚಿಸುವ ಈ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆಗಳನ್ನೂ ಆಯೋಜಿಸಲಾಗುತ್ತದೆ.
ಈ ಸಂದರ್ಭದಲ್ಲಿ ಎಲ್ಲೆಲ್ಲೂ ಕನ್ನಡಾಭಿಮಾನ ಉಕ್ಕಿಸುವಂತಹ ಹಾಡುಗಳೇ ಕಿವಿ ಬೀಳುತ್ತವೆ. ಕೆಲವರು ರಿಂಗ್ ಟೋನ್, ಹಲೋ ಟ್ಯೂನ್ಗಳಲ್ಲಿ ಕನ್ನಡ ಹಾಡುಗಳನ್ನು ಹಾಕಿಸಿರುತ್ತಾರೆ. ಬಸ್ಗಳಲ್ಲಿ, ಲಾರಿಯಂತಹ ವಾಹನಗಳಲ್ಲಿ, ಕಚೇರಿಗಳಲ್ಲಿ ಹೋಟೆಲ್ಗಳಲ್ಲಿ ಕನ್ನಡ ಹಾಡುಗಳೇ ಕಿವಿಗೆ ಬೀಳುತ್ತವೆ. ಇನ್ನೇನು ಕನ್ನಡ ರಾಜ್ಯೋತ್ಸವ ಹತ್ತಿರದಲ್ಲೇ ಇದ್ದು ರಾಜ್ಯೋತ್ಸವ ಸಂದರ್ಭ ಕೇಳಬೇಕಾದ ಕೆಲವು ಕನ್ನಡ ಕನ್ನಡಾಭಿಮಾನ ಹೆಚ್ಚಿಸುವ ಈ ಹಾಡುಗಳನ್ನು ನೀವೂ ಒಮ್ಮೆ ಕೇಳಿ
ಕನ್ನಡವೇ ನಮ್ಮಮ್ಮ
ವಿಷ್ಣುವರ್ದನ್ ನಟನೆಯ ಮೋಜುಗಾರ ಸೊಗಸುಗಾರ ಸಿನಿಮಾದ ಹಾಡು ಇದು. ಹಂಸಲೇಖ ಸಾಹಿತ್ಯ ರಚಿಸಿ ಸಂಗೀತ ನಿರ್ದೇಶ ಮಾಡಿರುವ ಈ ಹಾಡು ಇಂದಿಗೂ ಕನ್ನಡಗರ ಬಾಯಲ್ಲಿ ಮನದಲ್ಲಿ ಹಸಿರಾಗಿದೆ.
ಕನ್ನಡದ ಸಿದ್ದ
ಹಾಡೋದಕ್ಕೆ ಎದ್ದ
ಕನ್ನಡಕೆ ಇವನು
ಸಾಯೋದಕ್ಕು ಸಿದ್ದ
ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ.. ದೇವರಿವಳು
ನಮ್ಮ ಕಾಪಾಡೋ.. ಗುರು ಇವಳು
ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ.. ನೀರಿವಳು
ನಾ ಉಸಿರಾಡೋ.. ಕಾಡಿವಳು
ಈ ಹಾಡಿನ ಪಲ್ಲವಿ ಕೇಳಿದ್ರೆ ಯಾರಿಗಾದಾರೂ ಕನ್ನಡಾಭಿಮಾನ ಉಕ್ಕುತ್ತದೆ. ಕನ್ನಡಾಂಬೆಗೆ ಗೌರವ ಸಲ್ಲಿಸುವ ಹಾಡು ಇದಾಗಿದೆ.
ಕನ್ನಡ ರೋಮಾಂಚನವೀ ಕನ್ನಡ
ಅಂಬರೀಷ್ ನಟನೆಯ ‘ಸೋಲಿಲ್ಲದ ಸರದಾರ‘ ಚಿತ್ರದ ಈ ಹಾಡು ಕೇಳಿದಾಗ ಮೈಯೆಲ್ಲಾ ರೋಮಾಂಚನವಾಗೋದು ಖಂಡಿತ. ಈ ಹಾಡಿಗೂ ಹಂಸಲೇಖ ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡ ನಾಡು, ನುಡಿಯ ಬಗ್ಗೆ ಇರುವ ಈ ಹಾಡು ಕನ್ನಡಾಭಿಮಾನ ಮೆರೆಯುವಂತಿದೆ.
ಕನ್ನಡ
ರೋಮಾಂಚನವೀ ಕನ್ನಡ
ಕಸ್ತೂರಿ ನುಡಿಯಿದು,
ಕರುಣಾಳು ಮಣ್ಣಿದು
ಚಿಂತಿಸು, ವಂದಿಸು,
ಪೂಜಿಸು, ಪೂಜಿಸು
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಹಾಡು 90 ಕಿಡ್ಸ್ಗಳ ಫೇವರಿಟ್ ಆಗಿದ್ದು, ನೀವು ಶಾಲೆಗಳಲ್ಲಿ ಈ ಹಾಡಿಗೆ ಡಾನ್ಸ್ ಕೂಡ ಮಾಡಿರಬಹುದು. ಈ ಹಾಡನ್ನು ರಾಜ್ಯೋತ್ಸವದ ಸಂದರ್ಭ ನೀವು ಹಲೋ ಟ್ಯೂನ್ ಆಗಿ ಮಾಡಿಕೊಳ್ಳಬಹುದು.
ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು
ಡಾ. ರಾಜ್ಕುಮಾರ್ ಅಭಿನಯದ ಆಕಸ್ಮಿಕ ಚಿತ್ರದ ಈ ಹಾಡು ಕನ್ನಡದ ನಾಡಿಗೀತೆಯಷ್ಟೇ ಫೇಮಸ್ ಆಗಿರುವುದು ಸುಳ್ಳಲ್ಲ. ಯಾವುದೇ ಕನ್ನಡದ ಕಾರ್ಯಕ್ರಮವಿದ್ದರೂ ಈ ಹಾಡು ಇಲ್ಲ ಎಂದರೆ ಕಾರ್ಯಕ್ರಮ ಸಂಪೂರ್ಣವಾಗುವುದಿಲ್ಲ. ವಿದೇಶಗಳಲ್ಲೂ ಈ ಹಾಡು ಫೇಮಸ್. ಅಷ್ಟರ ಮಟ್ಟಿಗೆ ಕನ್ನಡಾಭಿಮಾನ ಹುಟ್ಟು ಹಾಕಿದ ಈ ಹಾಡಿಗೂ ಸಾಹಿತ್ಯ, ಸಂಗೀತ ನಿರ್ದೇಶನ ಹಂಸಲೇಖ ಅವರದ್ದು, ಈ ಹಾಡನ್ನು ಹಾಡಿದ್ದು ಡಾ. ರಾಜ್ಕುಮಾರ್.
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕ ಬಂಡಿ,
ಇದು ವಿಧಿ ಓಡಿಸುವ ಬಂಡಿ
ಬದುಕಿದು ಜಟಕ ಬಂಡಿ
ವಿಧಿ ಅಲೆದಾಡಿಸುವ ಬಂಡಿ
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಕನ್ನಡ ನಾಡಿನಲ್ಲಿ ಹುಟ್ಟಿದವರು ಎಷ್ಟು ಪುಣ್ಯವಂತರು ಈ ನಾಡಿನಲ್ಲಿರುವ ವಿಶೇಷಗಳೇನು ಎಂಬುದನ್ನು ಸಾರುವ ಹಾಡು ಇದಾಗಿದೆ.
ಕರುನಾಡ ತಾಯಿ ಸದಾ ಚಿನ್ಮಯಿ
ರವಿಚಂದ್ರನ್ ಅಭಿನಯದ ನಾನು ನನ್ನ ಹೆಂಡ್ತಿ ಸಿನಿಮಾದ ಹಾಡಿದು. ಈ ಹಾಡಿಗೂ ಸಾಹಿತ್ಯ ರಚಿಸಿದ್ದು ಹಂಸಲೇಖ ಅವರೇ, ಶಂಕರ್ ಗುರು ಸಂಗೀತ ನಿರ್ದೇಶನ ಮಾಡಿರುವ ಈ ಹಾಡಿಗೆ ಎಸ್ಪಿ ಬಾಲಸುಬ್ರಹ್ಮಣಂ ಧ್ವನಿ ನೀಡಿದ್ದಾರೆ. ಈ ಹಾಡು ಕೂಡ ಸದಾ ನಿಮ್ಮ ಕಿವಿಯಲ್ಲಿ ಗುನುಗುತ್ತಿರಬಹುದು. ಈ ಹಾಡಿಗೆ ನೀವು ಶಾಲಾ ದಿನಗಳಲ್ಲಿ ನೃತ್ಯ ಕೂಡ ಮಾಡಿರಬಹುದು.
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ
ನಮ್ಮ ದೇವಾಲಯ
ಪ್ರೇಮಾಲಯ
ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ನಮ್ಮ ನಾಡು ನುಡಿಯ ಪರಿಚಯ ಮಾಡುವ ಈ ಹಾಡು ಖಂಡಿತ ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳುತಲೇ ಇರಬೇಕು ಎನ್ನುವಷ್ಟು ಚೆನ್ನಾಗಿದೆ.
ಕರುನಾಡೆ ಕೈ ಚಾಚಿದೆ ನೋಡೇ
ರವಿಚಂದ್ರನ್ ನಟನೆಯ ಮಲ್ಲ ಸಿನಿಮಾದ ಈ ಹಾಡು ಕೂಡ ಕನ್ನಡ ನಾಡಿನ ಅಂದವನ್ನು ಹಾಡಿ ಹೊಗಳುವ ಸಾಹಿತ್ಯವನ್ನು ಹೊಂದಿದೆ. ರವಿಚಂದ್ರನ ಸಾಹಿತ್ಯ ಬರೆದು, ಸಂಗೀತ ನಿರ್ದೇಶನ ಮಾಡಿರುವ ಈ ಹಾಡನ್ನು ಎಲ್.ಎಲ್. ಶಾಸ್ತ್ರಿ ಹಾಡಿದ್ದಾರೆ.
ಕರುನಾಡೇ
ಕೈ ಚಾಚಿದೆ ನೋಡೆ
ಹಸಿರುಗಳೇ
ಆ ತೋರಣಗಳೇ
ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ
ಕರುನಾಡೇ
ಎದೆ ಹಾಸಿದೆ ನೋಡೆ
ಹೂವುಗಳೇ
ಶುಭ ಕೋರಿವೆ ನೋಡೆ
ಕನ್ನಡದ ಗಾಳಿ, ಹೂ, ಹಣ್ಣು, ಇಲ್ಲಿನ ಪರಿಸರವನ್ನು ಸುಂದರವಾಗಿ ಕಟ್ಟಿಕೊಟ್ಟ ಹಾಡು ಇದಾಗಿದೆ. ಈ ಹಾಡನ್ನೂ ನೀವು ರಾಜ್ಯೋತ್ಸವ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು.
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ
ದಿವಂಗತ್ ನಟ ಸುನಿಲ್ ಹಾಗೂ ಶೃತಿ ನಟನೆಯ ಬೆಳ್ಳಿ ಕಾಲುಂಗುರ ಸಿನಿಮಾದ ಹಾಡು ಇದಾಗಿದೆ. ದೊಡ್ಡ ರಂಗೇಗೌಡ ಸಾಹಿತ್ಯದ ಈ ಹಾಡನ್ನು ಕೆಎಸ್ ಚೈತ್ರಾ ಹಾಗೂ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ.
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ, ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ, ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ, ಕೇಳು ನೀನು..
ಭೂರಮೆಯೆ ಆಧಾರ ಈ ಕಲೆಯೆ ಸಿಂಗಾರ
ಬಂಗಾರ ತೇರೇರಿ ಮೂಡಣವೆ ಸಿಂಧೂರ
ದಿನ ದಿನ ದಿನ ಹೊಸದಾಗಿದೆ
ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ
ಸ್ವರ ಸ್ವರದಲಿ ಏರಿಳಿತ ತುಂಗೆಯಲಿ ಶ್ರಿಮಂತ
ಕಣ ಕಣ ಕಣ ಕರೆ ನೀಡಿದೆ
ಕನ್ನಡ ನಾಡಿನ ಸೊಗಬನ್ನು ವಿವರಿಸುವ ಹಾಡು ಇದಾಗಿದ್ದು ಇದನ್ನು ಕೂಡ ರಾಜ್ಯೋತ್ಸವದ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ಇಷ್ಟೇ ಅಲ್ಲದೇ ಇನ್ನೂ ಹಲವು ಹಾಡುಗಳು ಕನ್ನಡ ನಾಡಿನ ಸೊಬಗನ್ನು ವಿವರಿಸಿ ಕನ್ನಡಾಭಿಮಾನ ಉಕ್ಕಿಸುತ್ತವೆ. ಈ ಹಾಡುಗಳನ್ನು ರಾಜ್ಯೋತ್ಸವದ ಸಂದರ್ಭ ನೆನೆಪಿಸಿಕೊಳ್ಳಬಹುದು. ಕರ್ನಾಟಕದ ಇತಿಹಾಸದಲಿ, ಕನ್ನಡದ ಮಾತು ಚೆನ್ನ, ಕನ್ನಡ ನಾಡಿನ ಜೀವನದಿ ಈ ಕಾವೇರಿ, ಕಲ್ಲಾದರೆ ನಾನು, ನಾನು ಕನ್ನಡದ ಕಂದಾ ಈ ಹಾಡುಗಳನ್ನು ಕೂಡ ನೀವು ರಾಜ್ಯೋತ್ಸವ ಸಂದರ್ಭ ಕಣ್ತುಂಬಿಕೊಳ್ಳಬಹುದು.