ದೇಶದಲ್ಲಿ ಹೆಚ್ಚುತ್ತಿದೆ ಡಿವೋರ್ಸ್ ಪ್ರಕರಣ: ಇಲ್ಲಿವೆ ಹೊಸ ತಲೆಮಾರಿನ ವಿವಾಹ ವೈಫಲ್ಯದ ಹಿಂದಿನ ಅಸಲಿ ಕಾರಣಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ದೇಶದಲ್ಲಿ ಹೆಚ್ಚುತ್ತಿದೆ ಡಿವೋರ್ಸ್ ಪ್ರಕರಣ: ಇಲ್ಲಿವೆ ಹೊಸ ತಲೆಮಾರಿನ ವಿವಾಹ ವೈಫಲ್ಯದ ಹಿಂದಿನ ಅಸಲಿ ಕಾರಣಗಳು

ದೇಶದಲ್ಲಿ ಹೆಚ್ಚುತ್ತಿದೆ ಡಿವೋರ್ಸ್ ಪ್ರಕರಣ: ಇಲ್ಲಿವೆ ಹೊಸ ತಲೆಮಾರಿನ ವಿವಾಹ ವೈಫಲ್ಯದ ಹಿಂದಿನ ಅಸಲಿ ಕಾರಣಗಳು

ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎನ್ನುವ ಮಾತಿದೆ. ಆದರೆ ಈಗ ಆ ಮಾತನ್ನು ಅನ್ವಯಿಸುವುದು ತುಂಬಾ ಕಷ್ಟವಾಗುತ್ತಿದೆ. ಯಾಕೆಂದರೆ ಮದುವೆಯಾದ ಒಂದೆರಡು ತಿಂಗಳಿಗೇ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಅದಕ್ಕೆ ಪ್ರಮುಖ ಕಾರಣಗಳು ಯಾವುವು? ಇಲ್ಲಿದೆ ನೋಡಿ.

ಮದುವೆಯಾದ ಒಂದೆರಡು ತಿಂಗಳಿಗೇ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ
ಮದುವೆಯಾದ ಒಂದೆರಡು ತಿಂಗಳಿಗೇ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ (Pixabay)

ಮದುವೆ ಎಂಬುದು ಒಂದು ಅರ್ಥಪೂರ್ಣ ಬಾಂಧವ್ಯ ಎಂದು ಹಿಂದೆ ಪರಿಗಣಿಸಲಾಗುತ್ತಿತ್ತು. ಆದರೆ ಇಂದಿನ ತಲೆಮಾರಿನಲ್ಲಿ ಮದುವೆಯ ಅರ್ಥವೇ ಬದಲಾಗುತ್ತಿದೆ. ಪ್ರೀತಿ ಮತ್ತು ಸಂಗಾತಿಗೆ ಇನ್ನೂ ಮಹತ್ವ ಇದ್ದರೂ, ಇತ್ತೀಚಿನ ಯುವ ಜನತೆ ವೈವಾಹಿಕ ಜೀವನದಲ್ಲಿ ಹಲವು ಹೊಸ ವಿಚಿತ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪರಸ್ಪರ ಪ್ರೀತಿ, ಕಾಳಜಿ, ಆತ್ಮೀಯತೆ, ಸಲುಗೆ ಬದಲಾಗಿ ಬದಲಾಗುತ್ತಿರುವ ಜೀವನಶೈಲಿ, ಸಾಮಾಜಿಕ ಮೌಲ್ಯಗಳು, ತಂತ್ರಜ್ಞಾನ ಹಾಗೂ ಸ್ವತಂತ್ರದತ್ತ ಒಲವು ಹೆಚ್ಚಾಗುತ್ತಿದೆ. ವಿಚ್ಛೇದನದ ಮುಖ್ಯ ಕಾರಣಗಳು ಕೂಡ ಹೊಸ ರೀತಿಯಲ್ಲಿ ಹೊರಬರುತ್ತಿವೆ. ಇಲ್ಲಿ ಇಂದಿನ ತಲೆಮಾರಿನಲ್ಲಿ ವಿಚ್ಛೇದನಕ್ಕೆ ಕಾರಣವಾಗುವ ಪ್ರಮುಖ ಅಂಶಗಳನ್ನು ತಿಳಿಸಿದ್ದೇವೆ.

ಹೊಸ ತಲೆಮಾರಿನಲ್ಲಿ ವಿಚ್ಛೇದನಕ್ಕೆ ಪ್ರಮುಖ ಕಾರಣಗಳು

ಸಂವಹನದ ಕೊರತೆ

ಸರಿಯಾದ ಅಥವಾ ಸ್ಪಷ್ಟ ಸಂವಹನ ಇಲ್ಲದಿರುವುದು. ಭಾವನೆಗಳು ಮತ್ತು ಅಗತ್ಯತೆಗಳನ್ನು ಹಂಚಿಕೊಳ್ಳದಿರುವುದು. ಒಂದೇ ಮನೆಯಲ್ಲಿದ್ದರೂ ಅಪರಿಚಿತರಂತೆ ಬದುಕುತ್ತಿರುವುದು. ಇಷ್ಟ ಕಷ್ಟಗಳ ಬಗ್ಗೆ ಅರಿತುಕೊಳ್ಳುವ ಪ್ರಯತ್ನವನ್ನೇ ನಡೆಸದಿರುವುದು.

ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ನಿರ್ಲಕ್ಷ್ಯ

ಮಾನಸಿಕ ಒತ್ತಡ, ಖಿನ್ನತೆ, ಅಥವಾ ಆತಂಕದ ಪರಿಣಾಮ. ಭಾವನೆಗಳ ಗೌರವವಿಲ್ಲದೆ ಹತ್ತಿರವಿದ್ದೂ ದೂರವಿರುವ ಅನುಭವ. ಸಾಂಸಾರಿಕ ಅಥವಾ ಕೆಲಸದ ಒತ್ತಡದಿಂದ ಬಳಲುತ್ತಿದ್ದರೂ ಜೊತೆಗಿದ್ದು ಬೆಂಬಲ ನೀಡದೇ ಇರುವುದು. ನೋವನ್ನು ಶಮನ ಮಾಡುವ ಪ್ರಯತ್ನವನ್ನೇ ಪಡದಿರುವುದು.

ಸಾಮಾಜಿಕ ಮಾಧ್ಯಮದ ಪ್ರಭಾವ

ಇತರರ ಜೀವನವನ್ನು ಹೋಲಿಸುವ ಪ್ರವೃತ್ತಿ. ಡೈರೆಕ್ಟ್ ಮೆಸೇಜ್‌ಗಳು ಅಥವಾ ಆನ್‌ಲೈನ್ ಸಂಪರ್ಕದಿಂದ ಉದ್ಭವಿಸುವ ಅನುಮಾನಗಳು. ಬೇರೆಯವರಂತೆಯೇ ತಾವೂ ಇರಬೇಕು ಎನ್ನುವ ಅತಿಯಾದ ಆಸೆ. ಇದೇ ವಿಚಾರಕ್ಕೆ ಜಗಳ, ಒತ್ತಡ ಮತ್ತು ವೈಮನಸ್ಸು. ತಮ್ಮ ಸಂತೋಷದ ಜೀವನವನ್ನು ಮರೆತು ಇತರರ ಜೀವನವನ್ನು ಅನುಸರಿಸಲು ಆಸೆ ಮಾಡುವುದು. ನಿರಾಶೆಯನ್ನು ಕೋಪ ಜಗಳದ ಮೂಲಕ ತೋರಿಸುವುದು.

ನಿಷ್ಠೆಯ ಕೊರತೆ ಅಥವಾ ಭಾವನಾತ್ಮಕ ವಂಚನೆ

ದೈಹಿಕ ಅಥವಾ ಭಾವನಾತ್ಮಕ ಅನ್ಯೋನ್ಯತೆ. ಮದುವೆಯಲ್ಲಿ ಆತ್ಮತೃಪ್ತಿ ಇಲ್ಲದಿರುವುದರಿಂದ ಸಂಬಂಧದಿಂದ ದೂರವಿರುವುದು. ಪ್ರೀತಿಯನ್ನು ಹುಡುಕಿ ಬೇರೆ ಸಂಬಂಧಗಳನ್ನು ಪ್ರಾರಂಭಿಸುವುದು. ಮಾನಸಿಕ ಮತ್ತು ದೈಹಿಕವಾಗಿ ದೂರವಾಗುವುದು.

ವೃತ್ತಿ ಮತ್ತು ವೈಯಕ್ತಿಕ ಉದ್ದೇಶಗಳ

ಕೆಲಸದ ಗುರಿಗಳು ಮತ್ತು ಕುಟುಂಬ ಜೀವನದ ನಡುವೆ ಅಸಮತೋಲನ. ಸಮಯದ ಕೊರತೆಯಿಂದ ಹತ್ತಿರವಿದ್ದೂ ದೂರವಿರುವುದು. ಜೊತೆಯಾಗಿ ಸಮಯ ಕಳೆಯಲಾಗದೆ ಕೊನೆಗೆ ತಮ್ಮ ತಮ್ಮ ದಾರಿ ನೋಡಿಕೊಳ್ಳುವುದು.

ಹೊಂದಾಣಿಕೆಯ ಕೊರತೆ

ಸರಿಯಾಗಿ ಪರಿಚಯವಾಗದೇ ಮದುವೆಯಾಗುವುದು. ಮೌಲ್ಯಗಳಲ್ಲಿ, ಆಸಕ್ತಿಗಳಲ್ಲಿ ಅಥವಾ ಗುರಿಗಳಲ್ಲಿ ವ್ಯತ್ಯಾಸ. ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಒದ್ದಾಡುವುದು. ತಪ್ಪು ನಿರ್ಧಾರದಿಂದ ಹೊರ ಬರಲೂ ಆಗದೆ ಅಲ್ಲಿಯೇ ಇರಲು ಆಗದೆ ವೈಮನಸ್ಸು ಹೆಚ್ಚಾಗುವುದು. ಕೊನೆಗೆ ಪರಸ್ಪರರಲ್ಲಿ ಆಸಕ್ತಿ ಕಡಿಮೆಯಾಗುವುದು.

ಕುಟುಂಬದ ಹಸ್ತಕ್ಷೇಪ

ಅತ್ತೆ-ಮಾವಂದಿರ ಹಸ್ತಕ್ಷೇಪ ಅಥವಾ ಆಂತರಿಕ ಒತ್ತಡ. ಮಿತಿಗಳನ್ನು ಕಾಪಾಡಲು ವಿಫಲವಾಗುವುದು. ಜೊತೆಯಾಗಿ ಇರಲು ನಿರಾಕರಿಸುವುದು. ಇದೆ ವಿಚಾರಕ್ಕೆ ಪರಸ್ಪರ ಜಗಳ ಹೆಚ್ಚಾಗುವುದು. ಕೊನೆಗೆ ತಾಳ್ಮೆ ಮಿತಿ ಮೀರಿ ವಿಚ್ಛೇದನಕ್ಕೆ ಹೋಗುವುದು.

ಸ್ವಾಭಿಮಾನ ಮತ್ತು ಸ್ವತಂತ್ರ ಮನಸ್ಥಿತಿ

ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ವತಂತ್ರ ಚಿಂತನೆ. ಅಸಮ ಅಥವಾ ವಿಷಪೂರಿತ ಸಂಬಂಧಗಳನ್ನು ತಾಳುವ ಮನಸ್ಥಿತಿ ಇಲ್ಲದಿರುವುದು. ಒಬ್ಬರೇ ಬದುಕಬಲ್ಲೆ ಎನ್ನುವ ಆತ್ಮವಿಶ್ವಾಸ. ತ್ವರಿತ ಕೋಪ, ಹೊಂದಿಕೊಂಡು ಹೋಗಲಾಗದ ಮನಸ್ಥಿತಿ. ಮನೆ ಮತ್ತು ಕೆಲಸ ಎರಡನ್ನೂ ಸಂಭಾಳಿಸಲು ಆಗದ ಸ್ಥಿತಿ.

ಆರ್ಥಿಕ ಒತ್ತಡ

ಹಣದ ನಿರ್ವಹಣೆ ಅಥವಾ ಖರ್ಚು ವೆಚ್ಚಗಳ ಬಗ್ಗೆ ಜಗಳ. ಸಮಾನವಾಗಿ ಖರ್ಚು ನಿಭಾಯಿಸದೇ ಇರುವುದು. ಒಬ್ಬರು ಕೂಡಿಟ್ಟರೆ ಇನ್ನೊಬ್ಬರು ಅನಾವಶ್ಯಕ ಖರ್ಚು ಮಾಡುವುದು. ತಂದೆ ತಾಯಿಗಳಿಗಾಗಿ ಖರ್ಚು ಮಾಡಲು ಬಿಡದೇ ಇರುವುದು. ಅತಿಯಾದ ದುಂದು ವೆಚ್ಚ. ಇದು ಕೂಡ ಹೆಚ್ಚಿನ ಮನೆಗಳಲ್ಲಿ ಮನಸ್ತಾಪಕ್ಕೆ ಕಾರಣವಾಗಿದೆ.

ಆತ್ಮೀಯತೆ ಮತ್ತು ಪ್ರೀತಿಯ ಕೊರತೆ

ಭಾವನಾತ್ಮಕ ಅಥವಾ ದೈಹಿಕ ಅಂತರ. ಮನೆಯಲ್ಲಿ ಗುಣಮಟ್ಟದ ಸಮಯವನ್ನು ಕಳೆಯದೆ ಇರುವುದು. ಪರಸ್ಪರ ಕೆಲಸಗಳಲ್ಲಿ ಸಹಾಯ ಮಾಡದೇ ಇರುವುದು. ಮೊಬೈಲ್ ಟಿವಿಯಲ್ಲಿ ಹೆಚ್ಚಿನ ಸಮಯ ಕಳೆಯುವುದು. ಜೊತೆಯಾಗಿ ತಿರುಗಾಡಲು, ಊಟ ಮಾಡಲು, ಸಮಯ ಕಳೆಯಲು ನಿರಾಸಕ್ತಿ.

ಇಂದಿನ ತಲೆಮಾರಿಗೆ ವಿಚ್ಛೇದನ ಎಂದರೆ ಯಾವಾಗಲೂ ತೊಂದರೆ ಅಥವಾ ಸೋಲು ಅಲ್ಲ. ಇದೊಂಥರ ತಮ್ಮ ಆಂತರಿಕ ಶಾಂತಿಯನ್ನು ಆರಿಸಿಕೊಳ್ಳುವ ಧೈರ್ಯದ ಸಂಕೇತ. ಪ್ರತಿ ಸಂಬಂಧವೂ ಯಶಸ್ವಿಯಾಗಬೇಕೆಂಬುದಿಲ್ಲ. ಕೆಲವೊಮ್ಮೆ ಒಂದು ಬಾಂಧವ್ಯ ಮುಗಿಯುವುದು ಹೊಸ ಜೀವನದ ಆರಂಭವಾಗಬಹುದು. ಆದರೂ ಬರುವ ಎಲ್ಲಾ ಸಮಸ್ಯೆಗಳನ್ನು ಅರಿತು ಹೊಂದಿಕೊಂಡು ಹೋಗುವುದು, ಪರಸ್ಪರರ ನಡುವೆ ಸಂಬಂಧವನ್ನು ಇನ್ನಷ್ಟು ಬಲಪಡಿಸಬಹುದು. ಪ್ರೀತಿ ಯಾವಾಗಲೂ ಆಗಬಹುದು ಆದರೆ ಅದಕ್ಕೆ ಪರಸ್ಪರ ಪ್ರೀತಿ, ಸಂವಹನ, ಗೌರವ, ಆರೈಕೆ ಮತ್ತು ಭಾವನಾತ್ಮಕ ಕಾಳಜಿ ಅಗತ್ಯ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in