ಮಕರ–ಕರ್ಕ ಎಂಬ ಮಹಿಳೆಯರ ನೆನಪಿಸುವ ಸಂಕ್ರಾಂತಿ; ಕರ್ನಾಟಕದಲ್ಲೂ ಮಕರ ಸಂಕ್ರಾಂತಿ ಆಚರಣೆಗಿದೆ ನಾನಾ ರೂಪ; ಅರುಣ್ ಜೋಳದ ಕೂಡ್ಲಿಗಿ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕರ–ಕರ್ಕ ಎಂಬ ಮಹಿಳೆಯರ ನೆನಪಿಸುವ ಸಂಕ್ರಾಂತಿ; ಕರ್ನಾಟಕದಲ್ಲೂ ಮಕರ ಸಂಕ್ರಾಂತಿ ಆಚರಣೆಗಿದೆ ನಾನಾ ರೂಪ; ಅರುಣ್ ಜೋಳದ ಕೂಡ್ಲಿಗಿ ಬರಹ

ಮಕರ–ಕರ್ಕ ಎಂಬ ಮಹಿಳೆಯರ ನೆನಪಿಸುವ ಸಂಕ್ರಾಂತಿ; ಕರ್ನಾಟಕದಲ್ಲೂ ಮಕರ ಸಂಕ್ರಾಂತಿ ಆಚರಣೆಗಿದೆ ನಾನಾ ರೂಪ; ಅರುಣ್ ಜೋಳದ ಕೂಡ್ಲಿಗಿ ಬರಹ

ಬ್ರಹ್ಮನಿಂದ ವರ ಪಡೆದ ತಿಲಾಸುರನೆಂಬ ರಾಕ್ಷಸ ಲೋಕಪೀಡಕನಾಗುತ್ತಾನೆ. ಆಗ ಮಕರ ಮತ್ತು ಕರ್ಕ ಎಂಬ ಮಹಿಳೆಯರ ಸಹಾಯದಿಂದ ಸೂರ್ಯ ಆತನನ್ನು ಸಂಹರಿಸುತ್ತಾನೆ. ಮಕರ ತಿಲಾಸುರನ ಹೊಟ್ಟೆ ಬಗೆದಾಗ ಭೂಮಿಗೆ ಎಳ್ಳಿನ ಪ್ರವೇಶವಾಗುತ್ತದೆ. ಆಗ ಮಕರಳ ಸಾಹಸ ಮೆಚ್ಚಿ ಸೂರ್ಯ ‘ನಿನ್ನನ್ನು, ನಿನ್ನಿಂದ ಭೂಮಿಗೆ ಬಂದ ಎಳ್ಳನ್ನು ಪೂಜಿಸಿದವರಿಗೆ ಒಳಿತಾಗಲಿ’ ಎಂದು ಹರಸುತ್ತಾನೆ.

ಮಕರ ಸಂಕ್ರಾಂತಿ ಆಚರಣೆ, ಇತಿಹಾಸ
ಮಕರ ಸಂಕ್ರಾಂತಿ ಆಚರಣೆ, ಇತಿಹಾಸ (PC: Canva)

ಸಂಕ್ರಾಂತಿಯು ರೈತರೊಂದಿಗೆ, ಬೆಳೆದ ಬೆಳೆಯೊಂದಿಗೆ, ತಮಗೆ ಹೆಗಲುಕೊಡುವ ಎತ್ತು, ದನ ಕರುಗಳೊಂದಿಗೆ, ಭೂಮಿಯೊಂದಿಗೆ, ನದಿ ಹೊಳೆಯೊಂದಿಗೆ ಬೆಸೆದುಕೊಂಡಿದೆ. ಈ ಎಲ್ಲವುಗಳೂ ಸೂರ್ಯ ಪಥ ಬದಲಿಸಿದಂತೆ, ತಾವೂ ಪಥ ಬದಲಿಸುತ್ತಿವೆ. ಈ ಬದಲುವಿಕೆ ಸಂಭ್ರಮಿಸುವಂತಿಲ್ಲದೆ, ನೋವ ಕೊಡುವಂತಿದೆ, ಸಂಕಟವ ಹೆಚ್ಚಿಸುವಂತಿದೆ. ಹಾಗಾಗಿ ಸಂಕ್ರಾಂತಿಯ ನೆನಪೆಂದರೆ, ಈಗದು ರೈತಪರಿವಾರದ ದುಸ್ಥಿತಿಯ ನೆನಪೂ ಕೂಡ.

ರೈತ ಸಂಭ್ರಮಿಸುವ ಖುಷಿಯಲ್ಲಿಲ್ಲ. ತಾನು ಉತ್ತಿ ಬಿತ್ತುವ ನೆಲ ತನ್ನ ಕೈ ಹಿಡಿದೀತೆಂಬ ಭರವಸೆ ಕರಗುತ್ತಿದೆ. ನೆಲ ತನ್ನ ಕೈಬಿಡುವ ಆತಂಕ ಕೆಲವರದಾದರೆ, ತನ್ನ ನೆಲವ ಕದ್ದೊಯ್ಯುತ್ತಿರುವ ಹಗಲುಗಳ್ಳರ ಕನಸಾಗಿ ಬೆಚ್ಚುವ ಸ್ಥಿತಿ ಹಲವರದ್ದು. ಬಿತ್ತಿದ ಬೆಳೆ ಬದುಕ ನೀಗಿಸಲು ಸೋಲುತ್ತಿರುವುದೂ, ಬೆನ್ನಮೇಲಿನ ಸಾಲದ ಭಾರ ಕುಗ್ಗಿಸುತ್ತಿರುವುದೂ, ಕಣ್ಣೆದುರು ನೇಣು ಹಗ್ಗ ಅಣಕಿಸುತ್ತಿರುವುದೂ ಸದ್ಯದ ಬಹುಪಾಲು ರೈತರ ಅನುಭವ. ಹೀಗಿರಲು ಕೃಷಿ ಸಮೃದ್ಧಿಯೇ ಕನಸಾದಾಗ ಅದರ ಸಾಂಕೇತಿಕತೆಯ ಹಬ್ಬ ಯಾವ ತೆರನದ್ದು ಎನ್ನುವ ಪ್ರಶ್ನೆ ಎದುರಾಗುತ್ತದೆ. ಸದ್ಯದ ಸಂಕ್ರಮಣ ಯಾವ ಸಮೃದ್ಧಿಯ ಸಂಕೇತ? ಯಾರ ಸಮೃದ್ಧಿಯ ಸಂಕೇತ ಎನ್ನುವ ಪ್ರಶ್ನೆಗಳೂ ಕಾಡದಿರವು.

ನಿಸರ್ಗದಲ್ಲಾಗುವ ಬದಲಾವಣೆಗೆ ಜನಸಮುದಾಯ ತೋರುವ ಸ್ಪಂದನೆ ರೂಪದ ಹಲವು ಆಚರಣೆಗಳಲ್ಲಿ ಸಂಕ್ರಾಂತಿಯೂ ಒಂದು. ಸೂರ್ಯ ಒಂದು ರಾಶಿಯೊಳಗಿನ ಹೆಜ್ಜೆಯನ್ನು, ಮತ್ತೊಂದರಲ್ಲಿ ಇಡುವುದರ ಸಾಂಕೇತಿಕ ಸಂಭ್ರಮವಿದು. ಹನ್ನೆರಡು ರಾಶಿ, ಮಾಸಗಳ ಕಾರಣ ವರ್ಷಕ್ಕೆ ಹನ್ನೆರಡು ಸಂಕ್ರಾಂತಿಗಳೇ ಸಂಭವಿಸುತ್ತವೆ. ಇವುಗಳಲ್ಲಿ ಎರಡನ್ನು ಮಾತ್ರ ಮುಖ್ಯವೆಂದು ಭಾವಿಸಲಾಗುತ್ತದೆ. ಸೂರ್ಯ ಮಿಥುನದಿಂದ ಕರ್ಕಾಟಕಕ್ಕೆ ಪ್ರವೇಶಿಸುವುದು ಒಂದಾದರೆ, ಧನುವಿನಿಂದ ಮಕರಕ್ಕೆ ಸಂಕ್ರಮಿಸುವುದು ಮತ್ತೊಂದು. ಇವೆರಡೂ ಸೂರ್ಯನ ದಾರಿಯ ಮಾರ್ಗಸೂಚಿಗಳು. ಒಂದು ದಕ್ಷಿಣಾಯನವಾದರೆ, ಮತ್ತೊಂದು ಉತ್ತರಾಯಣ. ಈ ಬಗೆಗಿನ ಪುರಾಣ ಐತಿಹ್ಯಗಳು ಹಲ ಬಗೆಯ ಕಥನಗಳನ್ನು ಹುಟ್ಟಿಸಿವೆ.

ಮಕರ ಸಂಕ್ರಾಂತಿ ಇತಿಹಾಸ 

ಇದರಲ್ಲಿ ತಿಲಾಸುರನ ವಧೆಯ ಕಥೆ ಜನಪ್ರಿಯ. ಬ್ರಹ್ಮನಿಂದ ವರ ಪಡೆದ ತಿಲಾಸುರನೆಂಬ ರಾಕ್ಷಸ ಲೋಕಪೀಡಕನಾಗುತ್ತಾನೆ. ಆಗ ‘ಮಕರ’ ‘ಕರ್ಕ’ ಎಂಬ ಮಹಿಳೆಯರ ಸಹಾಯ ಪಡೆದು ಸೂರ್ಯ ಆತನನ್ನು ಸಂಹರಿಸುತ್ತಾನೆ. ಮಕರ ತಿಲಾಸುರನ ಹೊಟ್ಟೆ ಬಗೆದಾಗ ಭೂಮಿಗೆ ಎಳ್ಳಿನ ಪ್ರವೇಶವಾಗುತ್ತದೆ. ಆಗ ಮಕರನ ಸಾಹಸ ಮೆಚ್ಚಿ ಸೂರ್ಯ ‘ನಿನ್ನನ್ನು, ನಿನ್ನಿಂದ ಭೂಮಿಗೆ ಬಂದ ಎಳ್ಳನ್ನು ಪೂಜಿಸಿದವರಿಗೆ ಒಳಿತಾಗಲಿ’ ಎಂದು ಹರಸಿದನಂತೆ. ಹೀಗೆ ಎಳ್ಳು ಬೀರುವ ಆಚರಣೆ ಬಂದದ್ದಾಗಿಯೂ, ಮಕರ ಸಂಕ್ರಮಣ ಎಂಬ ಹೆಸರು ಜನರಲ್ಲಿ ಉಳಿದದ್ದಾಗಿಯೂ ಈ ಕಥೆ ಹೇಳುತ್ತದೆ.

ರಾತ್ರಿಯೇ ಹೆಚ್ಚಾಗಿ, ಹಗಲು ಕಡಿಮೆ ಇರುವ ಚಳಿಗಾಲಕ್ಕಿದು ಇಳಿಗಾಲ. ಹಗಲು ಹಿಗ್ಗಿಕೊಂಡು, ರಾತ್ರಿ ಕುಗ್ಗಿಕೊಳ್ಳುವ, ಶೀತವು ಶಾಖಕ್ಕೆ ಅಂಜಿ ಹಿಂದೆ ಸರಿಯುವ ಕಾಲಮಾನವಿದು. ಹೀಗಾಗಿಯೇ ಜನಪದರು ‘ಸಂಕ್ರಾಂತಿಗೆ ಚಳಿ ಕಡಿಮೆಯಾಗಿ, ಶಿವರಾತ್ರಿಗೆ ಶಿವ ಶಿವ ಅಂತ ಮಾಯವಾಯ್ತೆ’ ಎಂದಿದ್ದಿದೆ. ಹಾಗಾಗಿ ಚಳಿಯಲ್ಲಿ ಮುದುಡಿಕೊಂಡ ದೇಹ ಮನಸ್ಸುಗಳನ್ನು ಬಿಸಿಲಿಗೆ ಬೆಚ್ಚಗಾಗಿಸುವ, ಹೈದರಾಬಾದ್ ಕರ್ನಾಟಕದವರಿಗೆ ಬರಲಿರುವ ಬಿಸಿಲಿನ ತಾಪದ ನೆನಪಿಸಿ ಬೆವರಿಳಿಸುವ ಹಬ್ಬ ಈ ಸಂಕ್ರಮಣ.

ಹದವಾಗಿ ಹುರಿದ ಎಳ್ಳು, ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುಂಡು, ಬೆಲ್ಲದಚ್ಚು ಮುಂತಾದವುಗಳ ಮಿಶ್ರಣವನ್ನು ತಯಾರಿಸುವುದೂ, ಅದನ್ನು ಎಳ್ಳುಬೀರಿ ‘ಎಳ್ಳು ಬೆಲ್ಲ ಕೊಳ್ಳಿ, ಒಳ್ಳೊಳ್ಳೆ ಮಾತಾಡಿ’ ಎನ್ನುವುದು ಸಂಕ್ರಮಣದ ಸಂಭ್ರಮವನ್ನು ಹಂಚಿಕೊಳ್ಳುವ ವಿಧಾನ. ಇದು ಎಲ್ಲಾ ಕಡೆಗೂ ಸಾಮಾನ್ಯವಾಗಿದೆ. ಇದನ್ನೇ ವೈದ್ಯರು ‘ಚಳಿಗಾಲದಲ್ಲಿ ದೇಹದಲ್ಲಿರುವ ಎಣ್ಣೆ ಅಂಶ(ಪ್ಯಾಟ್) ದೇಹವನ್ನು ಬಿಸಿಯಾಗಿಡಲು ಹೆಚ್ಚು ಖರ್ಚಾಗಿ ಕಡಿಮೆಯಾಗುತ್ತದೆ. ಹಾಗಾಗಿ ಎಣ್ಣೆ ಅಂಶವಿರುವ ಎಳ್ಳು, ಒಣಕೊಬ್ಬರಿ, ನೆಲಗಡಲೆ ಜತೆ ಬೆಲ್ಲ ಸಕ್ಕರೆಯನ್ನು ತಿನ್ನುವುದು ಒಳ್ಳೆಯದು’ ಎನ್ನುವ ಅಭಿಪ್ರಾಯ ತಾಳುತ್ತಾರೆ.

ಕರ್ನಾಟಕದಲ್ಲಿ ಹಲವು ರೂಪದಲ್ಲಿ ಸಂಕ್ರಾಂತಿ ಆಚರಣೆ 

ಸಂಕ್ರಾಂತಿಯ ಆಚರಣೆ ಕರ್ನಾಟಕದಾದ್ಯಂತ ಒಂದೇ ತೆರನಾಗಿಲ್ಲ. ಹಲವು ವೈವಿಧ್ಯಗಳೊಂದಿಗೆ ನಡೆಯುತ್ತಿದೆ. ಸಂಕ್ರಾಂತಿ ಕರ್ನಾಟಕ ಹಲವು ಕಡೆ ತನ್ನದೇ ಪ್ರಾದೇಶಿಕ ಪರಕುಗಳನ್ನು ಈಗಲೂ ಉಳಿಸಿಕೊಂಡಿದೆ. ಕರ್ನಾಟಕದ ಕೆಲ ಭಾಗಗಳಲ್ಲಿ ಸಂಕ್ರಾಂತಿಯ ಹೆಸರನ್ನೂ ಕೇಳದ ಹಳ್ಳಿಗಳಿವೆ. ಅಲ್ಲೆಲ್ಲಾ ರೈತ, ಹೊಲ, ಸುಗ್ಗಿಯನ್ನು ನೆನಪಿಸುವ ಬೇರೆ ಬೇರೆ ಆಚರಣೆಗಳಿವೆ. ಜಾನುವಾರುಗಳನ್ನು ಗೌರವಿಸುವ ಬಸವ ಜಯಂತಿಯಂತಹ ಹಬ್ಬಗಳೂ ಇವೆ. ಹಾಗಾಗಿ ಇಲ್ಲಿ ಒಂದು ಸಂಕ್ರಾಂತಿಗಿಂತ ಹಲವು ಸಂಕ್ರಾಂತಿಗಳಿವೆ.

ಸಂಕ್ರಾಂತಿಯಂದು ಹೋರಿಗಳನ್ನು ಕಿಚ್ಚಾಯಿಸುವ ಸಂಪ್ರದಾಯ ಹೆಚ್ಚಿದೆ. ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಭಾಗದಲ್ಲಿ ಇದರ ಸಂಭ್ರಮ ಹೆಚ್ಚು. ಎತ್ತು, ಆಕಳಗಳನ್ನು ಸಿಂಗರಿಸುವ ಪರಿ ನೋಡಲು ಮೋಹಕವಾಗಿರುತ್ತದೆ. ಎತ್ತುಗಳೂ ಚಳಿಯಿಂದ ಬಿಡಿಸಿಕೊಂಡು ಕಾವೇರಲಿ, ಎತ್ತಿನ ದೇಹದಲ್ಲಿನ ಕ್ರಿಮಿಗಳು ನಾಶವಾಗಲಿ, ಒಳ್ಳೆಯ ರಾಸುಗಳಿಗೆ ರಾವು ಬಡಿಯದಿರಲಿ ಎನ್ನುವ ಹಿನ್ನೆಲೆಯೂ ಈ ಆಚರಣೆಗೆ ಇದ್ದಂತಿದೆ. ಹೀಗೆ ಕಿಚ್ಚಾಯಿಸುವ ಸಂಪ್ರದಾಯಗಳೂ ಪ್ರಾದೇಶಿಕವಾಗಿ ಭಿನ್ನವಾಗಿವೆ. ಚಿಕ್ಕಬಳ್ಳಾಪುರ ಭಾಗದಲ್ಲಿ ಮನೆಗಾಗಿ ದುಡಿದು ತೀರಿದ ಎತ್ತುಗಳ ಸಮಾಧಿಗೆ ಪೂಜೆ ಮಾಡುವ ಆಚರಣೆಯಿದೆ. ಇಲ್ಲಿ ಎತ್ತುಗಳನ್ನು ದೇವರೆಂದು ಭಾವಿಸುತ್ತಾರೆ. ವಿಶೇಷವೆಂದರೆ ಹಬ್ಬಕ್ಕೆ ಮಾಡಿದ ಕಿಚಡಿಯನ್ನೇ ಆ ದಿನ ಎತ್ತುಗಳಿಗೆ ತಿನ್ನಿಸಲಾಗುತ್ತದೆ. ಅಂದು ಹಬ್ಬದಡುಗೆಯನ್ನು ಎತ್ತಿಗೂ ತಿನ್ನಿಸುವ ಮೂಲಕ ಎತ್ತನ್ನು ಮನೆ ಮಕ್ಕಳಂತೆ ನೋಡಿಕೊಳ್ಳುವ ಆಶಯ ವ್ಯಕ್ತವಾಗುತ್ತದೆ.

ಎತ್ತು, ದನ, ಕರು, ಹಸುಗಳಿಗೆ ಕಾಟ ಕೊಡುವ ಪ್ರಾಣಿಗಳನ್ನು ಹಿಡಿದು ಬೆದರಿಸಿ ಓಡಿಸುವ ಆಚರಣೆಗಳಿವೆ. ಇದು ಕಾಡುಪ್ರಾಣಿಗಳು ಜಾನುವಾರುಗಳ ಮೇಲೆ ಕಣ್ಣು ಹಾಕಬಾರದೆಂಬ ಬೆದರಿಕೆ ಹುಟ್ಟಿಸುವ ತೆರನದ್ದು. ಕರ್ನಾಟಕದಲ್ಲಿಯೇ ವಿಶಿಷ್ಟವಾದ ಆಚರಣೆಯೊಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕದಂಬಳ್ಳಿಯಲ್ಲಿತ್ತು. (ಕದಂಬರ ದೊರೆ ಈ ಊರಿಗೆ ಬಂದದ್ದರ ಕಾರಣ ಕದಂಬಳ್ಳಿ ಎಂಬ ಹೆಸರಿತ್ತು ಎಂದು ಕ.ರಾ.ಕೃ ಹೇಳುತ್ತಾರೆ) ಈ ಹಳ್ಳಿಯಲ್ಲಿ ಊರಿನವರು ಬೇಟೆಗೆ ಹೋಗಿ ಜೀವಂತ ನರಿಗಳನ್ನು ಹಿಡಿದು ತಂದು, ಅವುಗಳಿಗೆ ಪಟಾಕಿ ಹಚ್ಚಿ ಕಾಡಿಗೆ ಓಡಿಸುತ್ತಿದ್ದರು. ಈಚೆಗೆ ಮೂರ‍್ನಾಲ್ಕು ವರ್ಷದಿಂದ ಪ್ರಾಣಿದಯಾ ಸಂಘದವರ ದೂರಿನ ಮೇರೆಗೆ, ಈ ಆಚರಣೆಗೆ ಹೈಕೋರ್ಟ್‌ ನಿಷೇದಾಜ್ಞೆ ಹೊರಡಿಸಿದೆ. ಸಂಕ್ರಮಣದಲ್ಲೀಗ ಪೋಲಿಸರ ಕಾವಲಿರುತ್ತದೆ. ಈಗಲೂ ಬಲೆ ತೆಗೆದುಕೊಂಡು ಕಾಡಿಗೆ ಹೋಗುವ ಆಚರಣೆಯಿದೆ.

ಸಂಕ್ರಮಣವು ಕರ್ನಾಟಕದ ಆಹಾರ ವೈವಿಧ್ಯಗಳನ್ನು ಅದರೆಲ್ಲಾ ರುಚಿಗಳೊಂದಿಗೆ ಒಟ್ಟಿಗೆ ತರುತ್ತದೆ. ಆ ವರ್ಷ ಬೆಳೆದ ಬೆಳೆಗಳ ವೈವಿಧ್ಯಗಳನ್ನೆಲ್ಲಾ ಬಳಸಿಕೊಳ್ಳುವಷ್ಟು ವಿಭಿನ್ನವಾದ ಅಡುಗೆ ಮಾಡಲಾಗುತ್ತದೆ. ಅವರೆ ಕಾಳಿನ ಕಿಚಡಿ, ಗೆಣಸಿನ ಕಡುಬು, ಗೋಧಿ ಪಾಯಸ, ಉತ್ತರ ಕರ್ನಾಟಕದ ಭಾಗದಲ್ಲಿ ಎಳ್ಳಚ್ಚಿದ ಸಜ್ಜೆ, ಜೋಳದ ರೊಟ್ಟಿ, ಎಣ್ಣೆ ಬದನೆಕಾಯಿ, ಕಲಬೆರಕೆ ಸೊಪ್ಪುಸಾರು, ಹಾಗಲಕಾಯಿ ಪಲ್ಯ, ತಾರಾವರಿ ಉಪ್ಪಿನಕಾಯಿಗಳು, ಮೊಸರು ಬಾನ, ಗುರೆಳ್ಳು ಚೆಟ್ನಿ, ಸೌತೆ, ಮೂಲಂಗಿ, ಗಜ್ಜರಿಯ ಪಚಡಿ, ಮೆಂತೆಸೊಪ್ಪು ಈರುಳ್ಳಿಯ ಕಲಬೆರಕೆ ಎಲ್ಲಾ ತರಕಾರಿಗಳನ್ನು ಹಾಕಿ ಮಾಡುವ ಬರ್ತ, ಕುಂಬಳಕಾಯಿ ಬರ್ತ, ಕೆಂಪು ಮೆಣಸಿನಕಾಯಿ ಚಟ್ನಿ ಹೀಗೆ ಹೇಳುತ್ತಾ ಹೋದರೆ ಬಾಯಿಯಲ್ಲಿ ನೀರೂರುತ್ತದೆ. ಪ್ರಾದೇಶಿಕವಾಗಿ ಆಯಾ ಭಾಗದ ಬೆಳೆಗಳನ್ನು ಆಧರಿಸಿದ ವೈವಿಧ್ಯದ ರುಚಿಯನ್ನು ಸಂಕ್ರಮಣ ಒಂದುಗೂಡಿಸುತ್ತದೆ. ಈ ಎಲ್ಲಾ ಅಡುಗೆಯನ್ನು ಬುತ್ತಿಕಟ್ಟಿಕೊಂಡು ಹೊಳೆ ದಡಕ್ಕೋ, ನದಿ ತಟಕ್ಕೋ ಹೋಗಿ ಊಟ ಮಾಡುವುದೂ ಸಹ ರುಚಿಯನ್ನು ಹೆಚ್ಚಿಸುತ್ತದೆ.

ಮಾಗಡಿ ತಾಲೂಕಿನ ಭಾಗದಲ್ಲಿರುವ ಇಲ್ಲಿಗ ಸಮುದಾಯವು ಸಂಕ್ರಾಂತಿಯನ್ನು ಸಂಕುರಾತಿ ಎನ್ನುತ್ತಾರೆ. ಹಸಿ ಮಣ್ಣಿನಿಂದ ಸಂಕುರಾತಿ ಅಮ್ಮನ ಕೋಟೆ ಕಟ್ಟಿ, ನಾಲ್ಕು ಆರತಿ ಮಾಡಿ ಆರತಿಗೊಂದರಂತೆ ನಾಲ್ಕು ಕೋಳಿ ಬಲಿ ಕೊಟ್ಟು. ಹಸುವಿನ ಕೆಚ್ಚಲಿನಿಂದ ಉಣ್ಣೆ ತೆಗೆದು ಅನ್ನಕ್ಕೆ ಹಾಕಿ ಬೇಯಿಸುತ್ತಾರೆ. ಇದನ್ನು ಉನ್ನಿ ಅನ್ನ ಎಂದು ಕರೆಯುತ್ತಾರೆ. ಈ ಅನ್ನವನ್ನು ದನದ ಹಿಂಡಿನ ಮೇಲೆ ಚೆಲ್ಲುತ್ತಾರೆ. ತುಮಕೂರು ಮುಂತಾದ ಕಡೆ ಊರ ಹೊರಗೆ ಜೇಡಿ ಮಣ್ಣಿನಿಂದ ಪಿರಮಿಡ್ಡಿನಾಕಾರದಲ್ಲಿ ಗುಡಿ ಕಟ್ಟುತ್ತಾರೆ. ಅದನ್ನು ಕಾಟುಮ್ ರಾಯ್, ಕಾಟ್ ಮೆಟ್ರಾಯ್, ಸಂಕ್ರಾತೆಮ್ಮಾ ಅಂತೆಲ್ಲಾ ಕರೆಯುತ್ತಾರೆ. ಅದನ್ನು ಕಾರೆಗಿಡದ ರಂಬೆ ಸಿಕ್ಕಿಸಿ ,ಉಗುನಿ ಹೂ ಮುಡಿಸಿ ಸಿಂಗರಿಸಿ ದನಗಳನ್ನು ತಂದು ಪೂಜಿಸುತ್ತಾರೆ. ಇವೆಲ್ಲಾ ದನಗಾರ ಸಂಸ್ಕೃತಿಯ ನೆನಪುಗಳನ್ನು ತರುತ್ತವೆ.

ಸೂರ್ಯನು ಎಕ್ಕೆ ಗಿಡದಲ್ಲಿ ನೆಲೆಸಿದ್ದಾನೆಂಬ ನಂಬಿಕೆಯ ಕಾರಣ, ಕೆಲವೆಡೆ ಸಂಕ್ರಮಣಕ್ಕೆ ಎಕ್ಕೆ ಗಿಡದ ಎಲೆಗಳನ್ನು ತಲೆಮೇಲಿಟ್ಟುಕೊಂಡು ಸ್ನಾನ ಮಾಡುತ್ತಾರೆ. ಈ ಹಬ್ಬದಲ್ಲಿ ಕೆಲವೆಡೆ ಪ್ರಸಿದ್ಧ ಗೋವಿನ ಹಾಡು ಹೇಳುವ ಪರಂಪರೆ ಇದೆ. ಉತ್ತರ ಭಾರತದಿಂದ ಬಂದ ಈ ಆಚರಣೆ, ಹುಲಿ ಪುಣ್ಯಕೋಟಿ ಹಸುವನ್ನು ತಿನ್ನಲು ನಿರಾಕರಿಸಿ, ಬೆಟ್ಟದ ಮೇಲಿಂದ ಹಾರಿದ ದಿನದ ನೆನಪನ್ನು ತರುತ್ತದೆ. ಎಳ್ಳನ್ನು ಶನಿದೇವರೆಂದು ಭಾವಿಸುವುದೂ ಇದೆ. ಹಾಗಾಗಿ ದೇವರಿಗೆ ಎಳ್ಳಿನ ದೀಪ ಹಚ್ಚಿದರೆ ಶನಿ ದೂರಾಗಿ ನಿರಾಳವಾಗುವ ನಂಬಿಕೆಯೂ ಕೆಲ ಕಡೆ ಇದೆ.

ಆಂದ್ರಕ್ಕೆ ಹೊಂದಿಕೊಂಡ ಹಳ್ಳಿಗಳಲ್ಲಿ ರಾಮನು ರಾವಣನನ್ನು ಕೊಂದು ಸೀತೆಯನ್ನು ಪಡೆದ ದಿನವೆಂದು ನಂಬಿದ್ದಾರೆ. ಗತಿಸಿದ ಹಿರಿಯರು ಮನೆಗೆ ಮರಳುತ್ತಾರೆಂಬ ವಾಡಿಕೆಯೂ ಇದೆ. ಕೊಡಗಿನ ಮೇರರ ಸಮುದಾಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಕಾವೇರಿ ಸಂಕ್ರಮಣ ಮಾಡುವುದೂ ಇದೆ. ಉತ್ತರ ಕರ್ನಾಟಕದಲ್ಲಿ ಇದು ಸಸ್ಯಾಹಾರಿ ಹಬ್ಬವಾದರೆ, ದಕ್ಷಿಣ ಕರ್ನಾಟಕದಲ್ಲಿ ಸಂಕ್ರಮಣ ಮಾಂಸಾಹಾರಿ ಹಬ್ಬ. ಚಾಮರಾಜನಗರ ಮುಂತಾದ ಕಡೆ ಸೇಲಂ, ಕೊಯಮತ್ತೂರು ಭಾಗದ ಪ್ರಭಾವವಿದ್ದರೆ, ಬಾಗೇಪಲ್ಲಿ, ಶಿರುಗುಪ್ಪ ಮುಂತಾದ ಕಡೆ ಆಂದ್ರದ ಗಡಿ ಜಿಲ್ಲೆಗಳ ಪ್ರಭಾವವಿದೆ. ಚಾಮರಾಜನಗರದಲ್ಲಿ ಮಕ್ಕಳನ್ನು ಕೂರಿಸಿ ಎಳ್ಳೆರೆಯುವ ಆಚರಣೆ ಇದೆ. ಇದರಲ್ಲಿ ಹಸಿ ಉಪ್ಪುಕಡಲೆ, ಎಲಿಚಿ ಹಣ್ಣು (ಬೋರೆಹಣ್ಣು, ಸಂಕ್ರಾಂತಿ ಗಿಡ ಎಂತಲೂ ಕರೆಯುತ್ತಾರೆ) ನಾಣ್ಯಗಳನ್ನು ಬೆರೆಸಿ ತಲೆಮೇಲಿಂದ ಎರೆಯುತ್ತಾರೆ.

ನದಿ ದಡಗಳಿಗೆ, ಹೊಳೆ ದಂಡೆಗಳಿಗೆ, ಹಳ್ಳದ ಬದುಗಳಿಗೆ ಈ ಹಬ್ಬ ಜನರನ್ನು ಕರೆತರುತ್ತದೆ. ಎಳ್ಳೆಣ್ಣೆ ಹಚ್ಚಿ ಜನ ನೀರಿಗಿಳಿದು ಸ್ನಾನ ಮಾಡಿ ಸೂರ್ಯ ನಮಸ್ಕಾರ ಮಾಡುತ್ತಾರೆ. ಇದಕ್ಕೆ ಸಂಕ್ರಾಂತಿಯ ಕರಿ ಕಳೆಯುದು ಎನ್ನುವ ಹೆಸರಿದೆ. ಹೀಗೆ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡದಿದ್ದರೆ ಸಂಕ್ರಾಮಪ್ಪ ದೇವರು ಬಂದು ಮೈ ಮೂಸಿ ನೋಡಿ ಶಾಪ ಕೊಡುತ್ತಾನೆಂಬ ನಂಬಿಕೆ ಸಿರುಗುಪ್ಪ ಭಾಗದಲ್ಲಿದೆ. ಹೀಗಾಗಿ ಹೊಳೆ ದಂಡೆ, ನದಿ ದಡಗಳಿರದ ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬದ ತೀವ್ರತೆ ಕಡಿಮೆ.

ಉತ್ತರ ಕನ್ನಡದ ಕೆಲವೆಡೆ ಹುಲುಸಾಗಿ ಬೆಳೆ ಬಂದ ಗದ್ದೆಗೆ ದೃಷ್ಟಿಯಾಗದಿರಲೆಂದು ಸಂಕ್ರಮಣದಲ್ಲಿ ಸಂದರ್ಭದಲ್ಲಿ ಬೆಚ್ಚನ್ನು ನಿಲ್ಲಿಸುವುದಿದೆ. ಇದನ್ನು ಬೆಚನ್ ಸಂಕ್ರಾಂತಿ ಎನ್ನುತ್ತಾರೆ . ಕೊಡಗಿನ ಅಂಚಿನ ಭಾಗದ ಕೆಲವೆಡೆ ಎತ್ತುಗಳಿಗೆ ನೊಗ ಕಟ್ಟಿ ಬೇಸಾಯ ಆರಂಭಿಸುವ ಅನುಕರಣೆ ಮಾಡುವ ಪದ್ಧತಿಯೂ ಇದೆ. ಇದನ್ನವರು ಬಿಸು ಸಂಕ್ರಾಂತಿ ಎನ್ನುತ್ತಾರೆ. ಸಂಕ್ರಾಂತಿ ಮೂಲತಃ ಸೂರ್ಯನ ಆರಾಧನೆಯ ಹಬ್ಬವಾದರೂ, ಸೂರ್ಯನನ್ನು ಹೆಣ್ಣು ದೇವತೆಯೆಂದು ಆರಾಧಿಸುವಿಕೆ ಕೆಲವೆಡೆ ಕಾಣುತ್ತದೆ. ಸಂಕ್ರಾಂತಿಯನ್ನೆ ಸಂಕ್ರಾತಮ್ಮನ ಪೂಜೆ, ಸಂಕ್ರಾತಮ್ಮನ ತಿದ್ದುದು ಅಂತೆಲ್ಲಾ ಮಂಡ್ಯ, ತುಮಕೂರು ಭಾಗದಲ್ಲಿ ಕರೆಯುತ್ತಾರೆ. ಹಾಗಾಗಿ ಗಂಗೆಯಲ್ಲಿ ಮೀಯುವುದೂ ಕೂಡ ಇದರ ಪ್ರಭಾವವೇ ಇರಬೇಕು. ಇನ್ನು ಇದರ ಸಾಂಕೇತಿಕವಾಗಿ ಸಂಕ್ರಾಂತಿಗೆ ಕೆಲವೆಡೆಗಳಲ್ಲಿ ಹೆಣ್ಣುದೇವಿಯ ಜಾತ್ರೆಗಳೂ ನಡೆಯುತ್ತವೆ.

ಇಂದು ಮಾರುಕಟ್ಟೆ ರೂಪಿತ ಏಕರೂಪಿ ಸಂಕ್ರಾಂತಿಯ ಆಕಾರವನ್ನು ನಗರ ಕೇಂದ್ರಗಳಲ್ಲಿ ಜನಪ್ರಿಯಗೊಳಿಸುತ್ತಿದೆ. ಹಾಗಾಗಿ ಮನೆಯಲ್ಲಿ ಎಳ್ಳು ಬೆಲ್ಲದ ಮಿಶ್ರಣಕ್ಕಿರುವ ತರಾವರಿ ರುಚಿಗಳು ಇಲ್ಲವಾಗಿ, ಅಂಗಡಿಗಳಲ್ಲಿ ಸಿಗುವ ಎಳ್ಳುಬೆಲ್ಲದ ಮಿಶ್ರಣವೇ ಎಲ್ಲ ಕಡೆ ಹರಿದಾಡುತ್ತದೆ. ಈಗ ಗ್ರಾಮೀಣ ಪ್ರದೇಶದಲ್ಲಿ ಸಾಗುವಳಿ ಭೂಮಿಯ ಪ್ರಮಾಣ ಕಡಿಮೆಯಾಗುತ್ತಿದೆ. ತುಂಡು ಹಿಡುವಳಿಗಳು ಹೆಚ್ಚಾಗುತ್ತಿವೆ. ಈ ಕಾರಣಕ್ಕೆ ಎತ್ತುಗಳನ್ನು ಹೊಂದುವಿಕೆಯ ಪ್ರಮಾಣದಲ್ಲೂ ಇಳಿಮುಖವಾಗುತ್ತಿದೆ. ಬೆಳೆಗಳಲ್ಲಿನ ವೈವಿಧ್ಯಗಳು ನಾಶವಾಗಿ ಏಕ ಮಾದರಿಯ ವಾಣಿಜ್ಯ ಬೆಳೆಗಳು ಹೆಚ್ಚಿವೆ. ಹಾಗಾಗಿ ಹಸು ಕರು ಎತ್ತುಗಳಿಗೆ ಬೇಕಾಗುವ ಮೇವಿನ ಬೆಳೆಗಳು ಇಲ್ಲವಾಗುತ್ತಿವೆ. ದನ ಕರುಗಳು ತಿರುಗಾಡಿ ಮೇಯಲು ಗೋಮಾಳಗಳು ಸೈಟುಗಳಾಗುತ್ತಿವೆ, ಈ ಕಾರಣಗಳಿಂದಾಗಿ ಜಾನುವಾರುಗಳ ಸಾಕುವಿಕೆಯೆ ಕಷ್ಟವಾಗಿ ಅವುಗಳ ಪ್ರಮಾಣ ಇಳಿಯುತ್ತಿದೆ. ಇಂತಹ ಬದಲಾವಣೆ ಸಂಕ್ರಾಂತಿ ಹಬ್ಬದ ಆಚರಣೆಯಲ್ಲೂ ಸಹಜವಾಗಿ ಬದಲುಗೊಳಿಸಿದೆ.

ಬರಹ: ಅರುಣ್ ಜೋಳದ ಕೂಡ್ಲಿಗಿ

Whats_app_banner