ಅಮ್ಮಂದಿರ ದಿನಕ್ಕೆ ವಿಶೇಷ ಅಡುಗೆ ಮಾಡಿ ತಾಯಿಗೆ ಉಣಬಡಿಸಬೇಕು ಅಂತಿದ್ದೀರಾ, ಪನೀರ್ ದಮ್ ಬಿರಿಯಾನಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಅಮ್ಮಂದಿರ ದಿನಕ್ಕೆ ವಿಶೇಷ ಅಡುಗೆ ಮಾಡಿ ತಾಯಿಗೆ ಉಣಬಡಿಸಬೇಕು ಅಂತಿದ್ದೀರಾ, ಪನೀರ್ ದಮ್ ಬಿರಿಯಾನಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ಅಮ್ಮಂದಿರ ದಿನಕ್ಕೆ ವಿಶೇಷ ಅಡುಗೆ ಮಾಡಿ ತಾಯಿಗೆ ಉಣಬಡಿಸಬೇಕು ಅಂತಿದ್ದೀರಾ, ಪನೀರ್ ದಮ್ ಬಿರಿಯಾನಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ಅಮ್ಮಂದಿರ ದಿನಕ್ಕೆ ವಿಶೇಷವಾದ ಅಡುಗೆ ಮಾಡಬೇಕು, ಆದರೆ ಏನು ಮಾಡೋದು ಅಂತ ಯೋಚಿಸ್ತಾ ಇದ್ದೀರಾ. ಪನೀರ್ ದಮ್ ಬಿರಿಯಾನಿ ಟ್ರೈ ಮಾಡಿ. ಇದನ್ನು ಮಾಡೋದು ಸುಲಭ, ರುಚಿಯೂ ಸೂಪರ್‌, ಇಲ್ಲಿದೆ ರೆಸಿಪಿ.

 ಮದರ್ಸ್‌ ಡೇಗೆ ನಿಮ್ಮ ಅಮ್ಮನಿಗಾಗಿ ವಿಶೇಷ ಅಡುಗೆ ಪನೀರ್ ದಮ್ ಬಿರಿಯಾನಿ ಟ್ರೈ ಮಾಡಿ
ಮದರ್ಸ್‌ ಡೇಗೆ ನಿಮ್ಮ ಅಮ್ಮನಿಗಾಗಿ ವಿಶೇಷ ಅಡುಗೆ ಪನೀರ್ ದಮ್ ಬಿರಿಯಾನಿ ಟ್ರೈ ಮಾಡಿ

ಅಮ್ಮಂದಿರ ದಿನ ನಾಳೆಯೇ ಇದೆ. ನಿಮ್ಮ ಅಮ್ಮನಿಗೆ ವಿಶೇಷವಾದ ಅಡುಗೆ ಮಾಡಿ ಬಡಿಸಬೇಕು ಅಂತ ನೀವು ಅಂದುಕೊಳ್ಳುತ್ತಾ ಇರಬಹುದು. ಆದರೆ ಏನು ಮಾಡೋದು ಅನ್ನೋ ಗೊಂದಲ ನಿಮಗೂ ಇರಬಹುದು. ವೆಜ್ ಇರಲಿ, ನಾನ್ ವೆಜ್ ಇರಲಿ ಇಬ್ಬರಿಗೂ ಇಷ್ಟವಾಗುವ ರೆಸಿಪಿಯೊಂದನ್ನು ನಾವು ನಿಮಗೆ ಹೇಳುತ್ತೇವೆ.

ಅಮ್ಮಂದಿರ ದಿನದ ಸಲುವಾಗಿ ನೀವು ವಿಶೇಷವಾದ ಪನೀರ್ ಧಮ್ ಬಿರಿಯಾನಿ ಮಾಡಬಹುದು. ಇದು ಟೇಸ್ಟ್ ಅಂತೂ ಸೂಪರ್ ಆಗಿರುತ್ತೆ. ಈ ರೆಸಿಪಿ ನಿಮ್ಮ ತಾಯಿಯ ಹೊಟ್ಟೆ ತುಂಬಿಸುವುದು ಮಾತ್ರವಲ್ಲ, ಅವರ ಮನಸ್ಸಿಗೂ ಖುಷಿ ಕೊಡುತ್ತದೆ. ನಾಳೆ ಭಾನುವಾರವಾಗಿದ್ದು ಮನೆಯಲ್ಲಿ ಪನೀರ್ ದಮ್ ಬಿರಿಯಾನಿ ತಯಾರಿಸಿ, ಅಮ್ಮಂದಿರ ದಿನವನ್ನು ವಿಶೇಷವನ್ನಾಗಿಸಿ, ರೆಸಿಪಿ ಇಲ್ಲಿದೆ.

ಪನೀರ್ ದಮ್ ಬಿರಿಯಾನಿಗೆ ಬೇಕಾಗುವ ಸಾಮಗ್ರಿಗಳು

ಬಾಸ್ಮತಿ ಅಕ್ಕಿ – 2 ಕಪ್‌, ನೀರು – ಅಗತ್ಯಕ್ಕೆ ತಕ್ಕಂತೆ, ಉಪ್ಪು – 1 ಚಮಚ, ಬಿರಿಯಾನಿ ಎಲೆ – 1, ಅನಾನಸ್ ಮೊಗ್ಗು – 3, ಚಕ್ಕೆ – 1 ಇಂಚು, ಲವಂಗ – 3, ಜಾಪತ್ರಿ – 1, ಏಲಕ್ಕಿ – 2, ನಿಂಬೆ ರಸ – ಸ್ವಲ್ಪ, ತುಪ್ಪ – 3 ಚಮಚ, ತಾಜಾ ಕೊತ್ತಂಬರಿ ಸೊಪ್ಪು – 2 ಚಮಚ, ತಾಜಾ ಪುದಿನ ಸೊಪ್ಪು – 2 ಚಮಚ, ಎಣ್ಣೆ – 1 ಚಮಚ, ಜೀರಿಗೆ – 1ಚಮಚ, ಈರುಳ್ಳಿ – 1 ಮಧ್ಯಮ ಗಾತ್ರದ್ದು, ಟೊಮೆಟೊ – 2, ಬೆಳ್ಳುಳ್ಳಿ – 6 ರಿಂದ 7 ಎಸಳು, ಶುಂಠಿ – 1 ಇಂಚು, ಕಾಶ್ಮೀರಿ ಒಣಮೆಣಸು – 4, ಗೋಡಂಬಿ – 10, ಖಾರದಪಡಿ – 1 ಚಮಚ, ಅರಸಿನ – ಅರ್ಧ ಟೀ ಚಮಚ, ಸಕ್ಕರೆ – 1 ಚಮಚ, ಗರಂ ಮಸಾಲ – 1 ಟೀ ಚಮಚ, ಮೊಸರು – ಅರ್ಧ ಕಪ್‌, ತಾಜಾ ಕ್ರೀಮ್ – 2 ಚಮಚ, ಕಸೂರಿ ಮೇಥಿ – 1ಚಮಚ, ಹುರಿದ ಈರುಳ್ಳಿ – 1 ಕಪ್‌, ಪನ್ನೀರ್ – 500 ಗ್ರಾಂ

ಪನೀರ್ ದಮ್ ಬಿರಿಯಾನಿ ತಯಾರಿಸುವ ವಿಧಾನ

ಮೊದಲು ಪನೀರ್ ತುಂಡುಗಳನ್ನು ಬೆಚ್ಚಗಿನ ನೀರಿನಲ್ಲಿ 10 ರಿಂದ 15 ನಿಮಿಷಗಳ ನೆನೆಸಿಡಿ. ಇದರಿಂದ ಪನ್ನೀರ್ ಮೃದುವಾಗುತ್ತದೆ. ನಂತರ ನೀರು ಸೋಸಿ ಪಕ್ಕಕ್ಕೆ ಇರಿಸಿ. ನಂತರ ಬಾಸ್ಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಈಗ ಬಾಣಲಿಯಲ್ಲಿ ತುಪ್ಪ ಹಾಗೂ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಹುರಿದಿಟ್ಟುಕೊಳ್ಳಿ. ಈಗ ಒಂದು ಅಗಲ ಹಾಗೂ ಆಳವಾದ ಪಾತ್ರೆ ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ ಕುದಿಯಲು ಬಿಡಿ. ನೀರು ಕುದಿಯುತ್ತಿರುವಾಗ ಉಪ್ಪು, ಅನಾನಸ್ ಮೊಗ್ಗು, ಬಿರಿಯಾನಿ ಎಲೆ, ಲವಂಗ, ಚಕ್ಕೆ, ಜಾಪತ್ರಿ, ಏಲಕ್ಕಿ, ನಿಂಬೆ ರಸ, ತುಪ್ಪ ಸೇರಿಸಿ. ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಹಾಗೂ ಪುದಿನಾ ಸೊಪ್ಪು ಸೇರಿಸಿ. ಈ ಎಲ್ಲವನ್ನು ಚೆನ್ನಾಗಿ ಕುದಿಸಿ. ಈಗ ಮತ್ತೊಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು ನೀರಿಗೆ ಅಕ್ಕಿ ಸೇರಿಸಿ ಶೇ 70ರಷ್ಟು ಬೇಯಿಸಿಕೊಳ್ಳಿ.

ಪ್ಯಾನ್ ಒಂದನ್ನು ತೆಗೆದುಕೊಂಡು ಅದನ್ನು ಒಲೆಯ ಮೇಲೆ ಇರಿಸಿ. 2 ಚಮಚ ಬೆಣ್ಣೆ ಮತ್ತು 1 ಚಮಚ ಎಣ್ಣೆ ಸೇರಿಸಿ. ಇದು ಸ್ವಲ್ಪ ಬಿಸಿಯಾದ ನಂತರ ಜೀರಿಗೆ ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ ಎಸಳು, ಶುಂಠಿ ತುಂಡು, ಒಣ ಮೆಣಸಿನಕಾಯಿ, ಗೋಡಂಬಿ, ಖಾರದಪುಡಿ, ಅರಿಸಿನ ಪುಡಿ, ಸಕ್ಕರೆ, ಉಪ್ಪು ಮತ್ತು ಗರಂ ಮಸಾಲೆ ಸೇರಿಸಿ. ಈ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ. ಇದನ್ನು 8 ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ. ನಂತರ ಸ್ಟೌ ಆಫ್ ಮಾಡಿ. ಈ ಮಿಶ್ರಣ ತಣ್ಣಗಾದ ಮೇಲೆ ಇದನ್ನು ಮಿಕ್ಸಿಗೆ ಸೇರಿಸಿ ನಯವಾದ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಅರ್ಧ ಕಪ್ ಮೊಸರು, ಎರಡು ಚಮಚ ತಾಜಾ ಕ್ರೀಮ್, 1 ಚಮಚ ಕಸೂರಿ ಮೇಥಿ, ಕಾಲು ಕಪ್ ಮೊದಲೇ ಹುರಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೆನೆಸಿದ ಪನೀರ್ ತುಂಡುಗಳನ್ನು ಸೇರಿಸಿ ಮಿಶ್ರಣ ಮಾಡಿ.

ಈಗ ಒಂದು ಅಗಲವಾದ ಪಾತ್ರೆಯನ್ನು ತೆಗೆದುಕೊಂಡು, ಒಳಭಾಗಕ್ಕೆ ತುಪ್ಪ ಸವರಿ. ಪನೀರ್ ತುಂಡುಗಳ ಮಿಶ್ರಣವನ್ನು ಒಂದೇ ಪದರದಲ್ಲಿ ಹರಡಿ. ಅದರ ಮೇಲೆ ಪುದೀನ, ಕೊತ್ತಂಬರಿ ಸೊಪ್ಪು ಮತ್ತು ಹುರಿದ ಈರುಳ್ಳಿಯಿಂದ ಅಲಂಕರಿಸಿ. ಈಗ ಮೊದಲೇ ಬೇಯಿಸಿಟ್ಟುಕೊಂಡು ಅನ್ನದಲ್ಲಿ ಅರ್ಧಕ್ಕಿಂತ ಹೆಚ್ಚು ತೆಗೆದುಕೊಂಡು ಅದನ್ನು ಪದರ ಮೇಲೆ ಹರಡಿ. ಉಳಿದ ಪನೀರ್ ಮಿಶ್ರಣವನ್ನು ಮೇಲೆ ಹಾಕಿ. ಮತ್ತೆ ಕೊತ್ತಂಬರಿ ಸೊಪ್ಪು, ಪುದೀನ ಮತ್ತು ಈರುಳ್ಳಿಯಿಂದ ಅಲಂಕರಿಸಿ. ಕೊನೆಗೆ, ಉಳಿದ ಅನ್ನವನ್ನು ಸೇರಿಸಿ, ಕೊತ್ತಂಬರಿ ಸೊಪ್ಪು, ಪುದೀನ ಮತ್ತು ಹುರಿದ ಈರುಳ್ಳಿಯಿಂದ ಅಲಂಕರಿಸಿ, ಒಂದು ಚಮಚ ತುಪ್ಪ ಸೇರಿಸಿ. ಈಗ ಬಟ್ಟಲನ್ನು ಮುಚ್ಚಳದಿಂದ ಮುಚ್ಚಿ, ಗಾಳಿ ಹೊರಗೆ ಹೋಗದಂತೆ ದಮ್ ಕಟ್ಟಿ. ಇದನ್ನು ಮಧ್ಯಮ ಉರಿಯಲ್ಲಿ ಹದಿನೈದರಿಂದ 20 ನಿಮಿಷ ಬೇಯಿಸಿ. ಈಗ ನಿಮ್ಮ ಮುಂದೆ ರುಚಿಯಾದ ಪನೀರ್ ದಮ್ ಬಿರಿಯಾನಿ ತಿನ್ನಲು ಸಿದ್ಧ. ಅಮ್ಮಂದಿರ ದಿನಕ್ಕೆ ಇದು ಖಂಡಿತ ಸ್ಪೆಷಲ್ ಎನ್ನಿಸುತ್ತೆ ಟ್ರೈ ಮಾಡಿ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.