ಸಾಫ್ಟ್‌ವೇರ್ ಕೆಲಸಕ್ಕೆ ಗುಡ್‌ಬೈ ಹೇಳಿ ಹೊಸ ಮಾದರಿಯ ತೆಂಗು ಕೃಷಿ ಆರಂಭಿಸಿದ ಎಂಜಿನಿಯರ್
ಕನ್ನಡ ಸುದ್ದಿ  /  ಜೀವನಶೈಲಿ  /  ಸಾಫ್ಟ್‌ವೇರ್ ಕೆಲಸಕ್ಕೆ ಗುಡ್‌ಬೈ ಹೇಳಿ ಹೊಸ ಮಾದರಿಯ ತೆಂಗು ಕೃಷಿ ಆರಂಭಿಸಿದ ಎಂಜಿನಿಯರ್

ಸಾಫ್ಟ್‌ವೇರ್ ಕೆಲಸಕ್ಕೆ ಗುಡ್‌ಬೈ ಹೇಳಿ ಹೊಸ ಮಾದರಿಯ ತೆಂಗು ಕೃಷಿ ಆರಂಭಿಸಿದ ಎಂಜಿನಿಯರ್

ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಮಧು ಕಾರಗುಂದ್ ಅವರು 8 ವರ್ಷಗಳ ಐಟಿ ಕೆಲಸಕ್ಕೆ ಗುಡ್ ಬೈ ಹೇಳಿ ಶೂನ್ಯ ತ್ಯಾಜ್ಯದ ತೆಂಗಿನ ಕೃಷಿಯಲ್ಲಿ ಸ್ವಾವಲಂಬಿಯಾಗಿದ್ದು, ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ತಮ್ಮ ಉತ್ಪನ್ನಗಳ ಬಗ್ಗೆ ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಜೊತೆ ಮಾತನಾಡಿದ್ದಾರೆ.

ಮಧು ಕಾರಗುಂದ್ ಅವರು ತೆಂಗಿನಲ್ಲಿ ಹತ್ತಾರು ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಕಾರ್ಪೊರೇಟ್ ಗಿಫ್ಟ್‌ಗಳು ತುಂಬಾ ಆಕರ್ಷಣೆಯಾಗಿವೆ.
ಮಧು ಕಾರಗುಂದ್ ಅವರು ತೆಂಗಿನಲ್ಲಿ ಹತ್ತಾರು ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಕಾರ್ಪೊರೇಟ್ ಗಿಫ್ಟ್‌ಗಳು ತುಂಬಾ ಆಕರ್ಷಣೆಯಾಗಿವೆ.

ಭಾರತದಲ್ಲಿ ತೆಂಗು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ತೆಂಗು ವರ್ಷಪೂರ್ತಿ ಫಸಲು ನೀಡುವ ವಾಣಿಜ್ಯ ಬೆಳೆ. ಅಡುಗೆ, ಔಷಧಗಳು, ಸೌಂದರ್ಯವರ್ಧಕಗಳು, ತಿಂಡಿ, ತಿನಿಸುಗಳು ಹಾಗೂ ಧಾರ್ಮಿಕ ಕಾರ್ಯಗಳಿಗೆ ತೆಂಗಿನ ಉತ್ಪನ್ನಗಳು ಇರಲೇಬೇಕು. ಹಲವಾರು ಪ್ರಯೋಜನೆಗಳನ್ನು ಹೊಂದಿರುವ ತೆಂಗಿನ ಎಣ್ಣೆ ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿದರೆ, ಕೂದಲಿನ ಆರೋಗ್ಯ ಕಾಪಾಡಲು ನೆರವಾಗುತ್ತದೆ. ಎಳೆ ನೀರು ಬಾಯಾರಿಕೆ ತಣಿಸುವುದರ ಜೊತೆಗೆ ರೋಗಗಳಿಗೆ ರಾಮಬಾಣ. ಕೊಬ್ಬರಿ ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ.

ರೈತರು ಸಾಮಾನ್ಯವಾಗಿ ಎಳನೀರು ಇಲ್ಲವೇ ಬಲಿತ ತೆಂಗಿನ ಕಾಯಿಗಳನ್ನು ಮಾರಾಟ ಮಾಡಿ ಸುಮ್ಮನಾಗುತ್ತಾರೆ. ಆದರೆ ತೆಂಗಿನ ಮರದಲ್ಲಿ ಶೂನ್ಯ ತ್ಯಾಜ್ಯವನ್ನು ಮಾಡಬಹುದು ಎಂಬುದು ಬಹುತೇಕ ರೈತರಿಗೆ ಗೊತ್ತಿಲ್ಲ. ಅನ್ನದಾತರಿಗೆ ಇದರ ಬಗ್ಗೆ ಅರಿವು ಮೂಡಿಸಿ ಅವರ ಆದಾಯವನ್ನು ಹೆಚ್ಚಿಸುವ ಗುರಿಯೊಂದಿಗೆ ಹಾಸನ ಜಿಲ್ಲೆ ಅರಸೀಕೆರೆಯ ಮಧು ಕಾರಗುಂದ್ ಎಂಬ ಎಂಜಿನಿಯರ್ ತಮ್ಮ 8 ವರ್ಷಗಳ ಸಾಫ್ಟ್‌ವೇರ್ ಇಂಜಿನಿಯರ್ ವೃತ್ತಿಗೆ ಗುಡ್ ಬೈ ಹೇಳಿ ತೆಂಗಿನ ಕೃಷಿಯಲ್ಲಿ ತೊಡಗಿದ್ದು, ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಕೃಷಿ ಕುಟುಂಬದ ಹಿನ್ನೆಲೆಯ ಬಂದಿರುವ ಮಧು ಅವರು ಇಂಜಿನಿಯರ್ ವೃತ್ತಿಗೆ ವಿದಾಯ ಹೇಳಿ ಕೃಷಿ ಬದುಕಿನಲ್ಲಿ ಸ್ವಾಲಂಬಿಯಾಗಿದ್ದಾರೆ. ಮೊದಲು ಇವರು ‘ತೆಂಗಿನ್ ವರ್ಜಿನ್ ಕೊಕೊನೆಟ್ ಆಯಿಲ್’ ಎಂಬ ಸ್ಟಾರ್ಟಪ್ ಆರಂಭಿಸಿ ಶೂನ್ಯ ತ್ಯಾಜ್ಯದ ತೆಂಗಿನ ಕೃಷಿಯಲ್ಲಿ ದೇಶದ ಗಮನ ಸೆಳೆಯುತ್ತಿದ್ದಾರೆ. ಚಿಪ್ಪಿನಿಂದ ಹಿಡಿದು ಹೊಟ್ಟಿನವರೆಗೆ ಯಾವುದನ್ನೂ ವ್ಯರ್ಥ ಮಾಡುತ್ತಿಲ್ಲ. ಹಸಿ ಗರಿಗಳು, ಒಣ ಗರಿ ಯಾವುದೇ ಇರಲಿ ಬೇಡ ಎಂದು ಪಕ್ಕಕ್ಕೆ ಎಸೆಯದೆ 'ಪಿನ್ ಟು ಪ್ಲೇನ್' ಎನ್ನುವಂತೆ ತೆಂಗಿನ ಮರದಿಂದ ಹತ್ತಾರು ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.

ಮಧು ಕಾರಗುಂದ್ ಅವರು ತಮ್ಮ ಟೆಂಜಿನ್ ವರ್ಜಿನ್ ಕೊಕೊನೆಟ್ ಆಯಿಲ್ ಎಂಬ ಸ್ಟಾರ್ಟಪ್‌ನಲ್ಲಿ ಶುದ್ಧ ತೆಂಗಿನ ಎಣ್ಣೆ, ಬರ್ಫಿ, ಸಾಬೂನುಗಳು, ಮೇಣದ ಬತ್ತಿಗಳು, ಚಿಪ್ಸ್, ಪಾತ್ರೆ ತೊಳೆಯುವ ನಾರು ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ತಮ್ಮ ಸ್ಟಾರ್ಟಪ್ ಬಗ್ಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಪ್ರತಿನಿಧಿಯೊಂದಿಗೆ ಮಾತನಾಡಿದ ಮಧು ಕಾರಗುಂದ್ ಅವರ ವಿಚಾರಗಳಿಗೆ ಮುಂದಿನ ಸಾಲುಗಳಲ್ಲಿಅಕ್ಷರ ರೂಪ ನೀಡಲಾಗಿದೆ.

‘ಹಳ್ಳಿ ತೊರೆಯುವ ಯುವ ರೈತರನ್ನು ಉಳಿಸಬೇಕಿದೆ’

ನಾನು ಕೃಷಿ ಕುಟುಂಬದಲ್ಲೇ ಬೆಳೆದಿದ್ದೇನೆ. ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ಶಿಕ್ಷಣ ಮುಗಿದ ನಂತರ ಕೆಲ ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದೆ. ನೈಸರ್ಗಿಕ ಕೃಷಿ ಮಾಡಬೇಕು ಹಾಗೂ ರೈತರು ಕೃಷಿ ಮಾಡುವ ಅವರ ಕೌಶಲ್ಯನ್ನು ಹೆಚ್ಚಿಸಬೇಕೆಂದು ನಿರ್ಧಾರ ಮಾಡಿ ಸಾಫ್ಟ್‌ವೇರ್ ಕೆಲಸ ತೊರೆದು 2017-18 ರಲ್ಲಿ ತೆಂಗಿನ ಉತ್ಪನ್ನಗಳ ಸ್ಟಾರ್ಟಪ್ ಶುರು ಮಾಡಿದೆ' ಎಂದರು.

ಸರಿಯಾಗಿ ಮಳೆಯಾಗುತ್ತಿಲ್ಲ, ಬೆಳೆಗಳಿಗೆ ಉತ್ತಮ ಬೆಲೆ ಸಿಗದಿರುವುದು ಸೇರಿದಂತೆ ಹಲವು ಕಾರಣಗಳಿಂದ ಯುವಕರು ಹಳ್ಳಿಗಳನ್ನು ತೊರೆದು ನಗರಗಳಿಗೆ ಹೋಗುತ್ತಿದ್ದಾರೆ. ಅಲ್ಲಿ ಆಟೊ, ಓಲಾ ಕಾರು ಚಾಲಕರಾಗಿ, ಸೆಕ್ಯೂರಿಟಿ ಗಾರ್ಡ್‌ ಇಲ್ಲವೇ ಸಣ್ಣ ಪುಟ್ಟ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ರೈತರಿಗೆ ಹೆಣ್ಣು ಕೊಡುವುದಿಲ್ಲ ಅನ್ನೋದು ಹೊಸದಾಗಿ ಸೇರ್ಪಡೆಯಾಗಿದೆ. ಇಂಥ ರೈತರನ್ನು ಉಳಿಸಬೇಕಿದೆ ಎಂದಿದ್ದಾರೆ.

ತೆಂಗಿನ ಎಣ್ಣೆ ತಯಾರಿಸಲು ನಮ್ಮಲ್ಲಿ ನಾಲ್ಕೈದು ಜನ ಇದ್ದಾರೆ. ಗೋವಾ ಮತ್ತು ಕೇರಳದಲ್ಲಿ ಸಿಗುವ ತೆಂಗಿನ ವಸ್ತುಗಳಿಂದ ಅಲ್ಲೇ ಉತ್ಪನ್ನಗಳನ್ನು ತಯಾರಿಸಲು ಒಂದಷ್ಟು ಮಂದಿಯನ್ನು ನೇಮಿಸಿಕೊಂಡಿದ್ದು, ಒಟ್ಟು 15 ಜನ ನಮ್ಮ ಕೆಲಸ ಮಾಡುತ್ತಿದ್ದಾರೆ. ಈವರೆಗೆ ಯಾವುದೇ ರೀತಿಯ ಸಾಲ-ಸೌಲಭ್ಯಗಳನ್ನು ಪಡೆದಿಲ್ಲ. ಮುಂದೆ ಇದರ ಬಗ್ಗೆ ಯೋಚಿಸುತ್ತೇನೆ.

‘ತೆಂಗಿನ ಎಣ್ಣೆ ತಾಯಿ ಎದೆ ಹಾಲಿನಷ್ಟೇ ಶ್ರೇಷ್ಠ’

ಮೇಳಗಳಲ್ಲಿ ಸ್ಟಾಲ್ ಹಾಕಿ ಉತ್ಪನ್ನಗಳ ಬಗ್ಗೆ ಮಾಹಿತಿ ಮತ್ತು ಮಾರಾಟ ಮಾಡುತ್ತಿದ್ದೇವೆ. ತಾಯಿಯ ಎದೆ ಹಾಲಿನಷ್ಟೇ ಶ್ರೇಷ್ಠ ತೆಂಗಿನ ಎಣ್ಣೆ. ಹಲವಾರು ಕಾಯಿಲೆಗಳನ್ನು ಇದು ನಿರ್ಮೂಲನೆ ಮಾಡುತ್ತದೆ. ಮುಖ್ಯವಾಗಿ ತೆಂಗಿನ ಕಾಯಿಯ ಉತ್ಪನ್ನಗಳು ಆರೋಗ್ಯಕ್ಕೆ ಎಷ್ಟು ಪರಿಣಾಮಕಾರಿ ಎಂಬುದನ್ನು ಗ್ರಾಹಕರಿಗೆ ತಿಳಿಸಬೇಕಿದೆ. ಲೋಕಲ್ ಫುಡ್ ಆಲ್‌ವೇಸ್ ಬೆಸ್ಟ್ ಎನ್ನುವ ಹಾಗೆ ಬೇರೆ ದೇಶಗಳ ಆಹಾರಕ್ಕಿಂತ ತೆಂಗಿನ ಕಾಯಿಯಿಂದ ತಯಾರಿಸಿದ ಪದಾರ್ಥಗಳನ್ನು ಜನರು ಸೇವಿಸಿದರೆ ರೈತರ ಆದಾಯ ಹೆಚ್ಚಾಗಿ ಅವರ ಜೀವನ ಮಟ್ಟವೂ ಸುಧಾರಿಸುತ್ತದೆ.

ಆಹಾರ ಪದಾರ್ಥಗಳಷ್ಟೇ ಅಲ್ಲದೆ, ತೆಂಗಿನ ಕಚ್ಚಾವಸ್ತುವಿನಿಂದ ಕಾರ್ಪೊರೇಟ್ ಗಿಫ್ಟ್‌ಗಳನ್ನು ಮಾಡುತ್ತಿದ್ದೇವೆ. ಏಷ್ಯಾ-ಪೆಸಿಫಿಕ್ ಪ್ರದೇಶಲ್ಲಿ ಸೆಪ್ಟೆಂಬರ್ 2 ರಂದು ಪ್ರತಿ ವರ್ಷ ವಿಶ್ವ ತೆಂಗು ದಿನವನ್ನು ಆಚರಿಸಲಾಗುತ್ತದೆ. ತೆಂಗಿನ ಕಾಯಿ ಮತ್ತು ಎಳೆ ನೀರಿನ ಪ್ರಯೋಜನೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಸರ್ಕಾರಗಳು ಕೂಡ ಈ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸುವ ಜೊತೆಗೆ ಅಗತ್ಯ ಆರ್ಥಿಕ ನೆರವು ನೀಡಬೇಕಿದೆ ಎಂದು ಮಧು ಅವರು ತಮ್ಮ ಮಾತು ಮುಗಿಸಿದರು.

ಮಾದರಿ ಕೃಷಿಕ ಮಧು

ಕಾರ್ಪೊರೇಟ್ ಜಗತ್ತಿನ ಐಟಿ ಕಂಪನಿಗಳಲ್ಲಿ ಉತ್ತಮ ಸಂಬಳದೊಂದಿಗೆ ಎಸಿ ಆಫೀಸ್‌ನಲ್ಲಿ ಕುಳಿತು ಕೆಲಸ ಮಾಡಿಕೊಂಡು ಇರಬೇಕಾಗಿದ್ದ ಮಧು ಅವರು ಕೃಷಿಯಲ್ಲಿ ತನ್ನ ತಂದೆಯ ಕೆಲಸಕ್ಕೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಅಲ್ಲದೆ, ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆಯನ್ನೂ ಮಾಡುವ ಮೂಲಕ ಇತರರಿಗೆ ಮಾದರಿ ಎನಿಸಿದ್ದಾರೆ. ಇವರ ಶೂನ್ಯ ತ್ಯಾಜ್ಯ ಕೃಷಿ ಮತ್ತು ಉತ್ಪನ್ನಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕಾದರೆ ಮಧು ಅವರ ಮೊಬೈಲ್ ಸಂಖ್ಯೆಗೆ (97403 30316) ಕರೆ ಮಾಡಬಹುದು. ಮಧು ಅವರ ಇನ್‌ಸ್ಟಾಗ್ರಾಮ್ ಪೇಜ್: instagram.com/tengin_coconut_oil

ನೀವೂ ಸಲಹೆ ಕೊಡಿ

ಹಳ್ಳಿ ಬದುಕು ವಿಶೇಷ ಅಂಕಣದಲ್ಲಿ ಮುಂದಿನ ವಾರ ಮತ್ತೊಂದು ಹೊಸ ವಿಷಯದೊಂದಿಗೆ ಸಿಗೋಣ. ನಿಮ್ಮ ಹಳ್ಳಿಯಲ್ಲಿ ನೀವು ಗಮನಿಸಿದ ಅಪರೂಪದ ವಿದ್ಯಮಾನ, ವಿಶೇಷ ಎನಿಸುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಕರ್ನಾಟಕದ ಗ್ರಾಮೀಣ ಬದುಕು ಪರಿಚಯಿಸುವ ಈ ಅಂಕಣ ಬೆಳೆಸಲು ನೀವೂ ನೆರವಾಗಬಹುದು. ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳಿಗೂ ಸ್ವಾಗತ. ಇಮೇಲ್: raghavendra.y@htdigital.in, ht.kannada@htdigital.in

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ