Sunday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ, ಈ ಐಎಎಸ್ ಅಧಿಕಾರಿ ಎಲ್ಲರಿಗೂ ಮಾದರಿ
Sunday Motivation: ಸಮಸ್ಯೆಗಳು ಬಂದಾಗ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸುವ ಬಹಳ ಮಂದಿ ಇದ್ದಾರೆ. ಈ ಐಎಎಸ್ ಅಧಿಕಾರಿ ಬಗ್ಗೆ ಓದಿದರೆ ಸಾಯುವ ನಿರ್ಧಾರವೇ ಸತ್ತುಹೋಗುತ್ತೆ.
ಜಗತ್ತಿನ ಅರಿವೇ ಇಲ್ಲದ ವಯಸ್ಸಿನಲ್ಲಿ ಮದುವೆ, ಚಿಕ್ಕ ವಯಸ್ಸಿಗೆ ಇಬ್ಬರು ಮಕ್ಕಳು, ಚಿಕ್ಕಮ್ಮನಿಂದ ಕಿರುಕುಳ, ಗಂಡ ಹೊಡೆಯುವುದು. ಇದನ್ನೆಲ್ಲಾ ಸಹಿಸಿಕೊಂಡವರು ಸವಿತಾ ಪ್ರಧಾನ್. ವರ್ಷಗಳು ಕಳೆದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಗರ್ಭಿಣಿಯಾಗಿದ್ದಾಗ ಹೊಟ್ಟೆ ತುಂಬಾ ತಿನ್ನಲು ಅತ್ತೆ ಮತ್ತು ಪತಿ ಬಿಡಲೇ ಇಲ್ಲ. ಆದರೆ ಸವಿತಾ ಬದುಕಿನ ಮೇಲೆ ಭರವಸೆ ಇಟ್ಟುಕೊಂಡು ಬದುಕಿದ್ದಾರೆ. ದೊಡ್ಡ ಸಾಧಕಿಯಾಗಿದ್ದಾರೆ. ಸವಿತಾ ಪ್ರಧಾನ್ ಅವರು ಮಧ್ಯಪ್ರೇದಶದ ಮಂಡಿ ಗ್ರಾಮದ ಆದಿವಾಸಿ. 10ನೇ ತರಗತಿ ಮುಗಿಸಿದ್ದಳು. ಈಕೆ ಚಿಕ್ಕವಳಿದ್ದಾಗಲೇ ತನ್ನಗಿಂತ 11 ವರ್ಷ ದೊಡ್ಡವನ ಜೊತೆ ಮದುವೆಯಾಗುತ್ತೆ. ಗಂಡನ ಮನೆಯವರು ಈಕೆಯನ್ನ ಸೊಸೆಯಂತೆ ನೋಡುವ ಬದಲು ಸೇವಕಳಂತೆ ನಡೆಸಿಕೊಳ್ಳುತ್ತಾರೆ. ಮನೆಯಲ್ಲಿರುವ ಎಲ್ಲರೂ ತಿಂದ ನಂತರ ಉಳಿದರೆ ಮಾತ್ರ ಈಕೆ ಊಟ ಮಾಡಬೇಕಿತ್ತು. ಆದರೆ ಊಟ ಖಾಲಿ ಆಯ್ತು ಅಂತ ಮತ್ತೆ ಅಡುಗೆ ಮಾಡುವಂತಿರಲಿಲ್ಲ. ನಗುವಂತಿಲ್ಲ, ಟಿವಿ ನೋಡಬಾರದು, ನಾಲ್ಕು ಜನರೊಂದಿಗೆ ಮಾತನಾಡಬಾರದು. ಒಂದು ವೇಳೆ ಈ ರೂಲ್ಸ್ ಬ್ರೇಕ್ ಮಾಡಿದರೆ ಗಂಡನ ಕೈಯಲ್ಲಿ ರಕ್ತ ಬರುವಂತೆ ಹೊಡೆಸಿಕೊಳ್ಳುವ ಪರಿಸ್ಥಿತಿ. ಆದರೆ ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ ಸವಿತಾ ಪ್ರಧಾನ್.
ಇಪತ್ತು ವರ್ಷ ತುಂಬುವ ಮುನ್ನವೇ ಎಲ್ಲ ಕಷ್ಟಗಳನ್ನು ಕಾಣುತ್ತಾರೆ. ಈಕೆ ಬದುಕುವ ಭರವಸೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗುತ್ತದೆ. ತನ್ನ ಅತ್ತೆ ಮತ್ತು ಪತಿಯೊಂದಿಗೆ ಇರಲು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ. ಆದರೆ ಮನೆಯಿಂದ ಹೊರ ಹೋಗುವ ನಿರ್ಧಾರವಲ್ಲ, ಬದಲಿಗೆ ಸಾವಿಗೆ ಶರಣಾಗುವ ನಿರ್ಧಾರವಾಗಿತ್ತು. ಒಂದು ದಿನ ತನ್ನ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ಇದನ್ನು ಕಿಟಕಿಯಿಂದ ನೋಡಿದ ಅತ್ತೆ ತಡೆಯುವ ಪ್ರಯತ್ನ ಮಾಡುವುದಿಲ್ಲ. ಕನಿಷ್ಠ ಪಕ್ಷ ಯಾಕೆ ಹೀಗೆ ಮಾಡಿಕೊಳ್ಳುತ್ತಿದ್ದೀಯಾ ಅಂತ ಕೇಳೂ ಇಲ್ಲ.
ಅಮಾನವೀಯ ವ್ಯಕ್ತಿಗಳ ಬಗ್ಗೆ ಯಾಕೆ ನನ್ನ ಪ್ರಾಣವನ್ನು ಕಳೆದುಕೊಳ್ಳಬೇಕು ಎಂದು ತಕ್ಷಣವೇ ಕುತ್ತಿಗೆಗೆ ಸುತ್ತಿಕೊಂಡಿದ್ದ ಸೀರೆಯನ್ನು ಪಕ್ಕಕ್ಕೆ ಎಸೆಯುತ್ತಾಳೆ. ಇಬ್ಬರು ಮಕ್ಕಳನ್ನು ಕರೆದುಕೊಂಡು ಪತಿಯ ಮನೆಯಿಂದ ಹೊರ ನಡೆಯುತ್ತಾಳೆ. ಆರಂಭದಲ್ಲಿ ಬ್ಯೂಟಿ ಪಾರ್ಲರ್ವೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದರ ಜೊತೆಗೆ ಮಕ್ಕಳಿಗೆ ಟ್ಯೂಷನ್ ಹೇಳುವುದು, ಅಡುಗೆ ಕೆಲಸ ಮಾಡುತ್ತಾರೆ. ಹೀಗೆ ಕೈಗೆ ಸಿಕ್ಕ ಸಿಕ್ಕ ಕೆಲಸವನ್ನು ಮಾಡುತ್ತಾ ಮಕ್ಕಳನ್ನು ಸಾಕುತ್ತಾರೆ. ಸ್ವತಂತ್ರವಾಗಿ ಬದಕಲು ಆರಂಭಿಸಿದ ಬಳಿಕ ಓದನ್ನು ಮುಂದುವರಿಸಬೇಕೆಂಬ ನಿರ್ಧಾರವನ್ನೂ ಮಾಡಿ ಬಿಎ ಮುಗಿಸುತ್ತಾರೆ.
ಬಿಎ ಮುಗಿಸಿದ ನಂತರ ಎಂಎ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಪೂರ್ಣಗೊಳಿಸುತ್ತಾರೆ. ಹೀಗೆ ಮುಂದೆ ಸಾಗುತ್ತಾ ಅಧ್ಯಯನದಲ್ಲಿ ತುಂಬಾ ಸಕ್ರಿಯವಾಗುತ್ತಾರೆ. ಪದವಿಯ ನಂತರ ಸಂಬಳದ ಕೆಲಸ ಹುಡುಕುತ್ತಿರುವಾಗ ಯುಪಿಎಸ್ಸಿ ಅಧಿಸೂಚನೆ ಕಣ್ಣಿಗೆ ಬೀಳುತ್ತದೆ. ಈ ಕೆಲಸ ಎಷ್ಟು ದೊಡ್ಡದು ಅಂತ ನೋಡಲಿಲ್ಲ. ಕೆಲಸದಿಂದ ಬರುವ ಸಂಬಳವನ್ನ ಮಾತ್ರ ನೋಡುತ್ತಾರೆ. ಇದರಿಂದ ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಸಾಕಬಹುದು ಎಂದುಕೊಳ್ಳುತ್ತಾರೆ. ಬಿಡುವಿನ ಸಮಯದಲ್ಲಿ ತನ್ನ ತಾಯಿಯ ಸಹಾಯ ಪಡೆದು ಹಗಲು ರಾತ್ರಿ ಓದುತ್ತಾರೆ. ಕೊನೆಗೆ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿಯಲ್ಲಿ ಒಳ್ಳೆ ರ್ಯಾಂಕ್ ಬರುತ್ತದೆ, ಐಎಎಸ್ ಅಧಿಕಾರಿಯೂ ಆಗುತ್ತಾರೆ. ಆಗ ಇವರಿಗೆ ಕೇವಲ 24 ವರ್ಷ.
ಐಎಎಸ್ ಅಧಿಕಾರಿಯಾದ ಬಳಿಕವೂ ಪತ್ನಿಯಿಂದ ಕಿರುಕುಳ, ವಿಚ್ಛೇದನದೊಂದಿಗೆ ಅಂತ್ಯ
ವಿಚಿತ್ರ ಎಂದರೆ ಇಷ್ಟು ದೊಡ್ಡ ಕೆಲಸ ಸಿಕ್ಕ ಬಳಿಕವೂ ಪತಿಯ ಕಿರುಕುಳ ಮುಂದುವರಿಯುತ್ತದೆ. ಇದನ್ನು ಸಹಿಸದ ಸವಿತಾ ಪ್ರಧಾನ್ ಪೊಲೀಸರಿಗೆ ದೂರು ನೀಡಿ ವಿಚ್ಛೇದನ ಪಡೆದಿದ್ದಾರೆ. ಅಲ್ಲದೆ ಉದ್ಯೋಗ ಸಿಕ್ಕ ಬಳಿಕ ತನ್ನ ಇಷ್ಟದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ತಮ್ಮ ಇಬ್ಬರು ಮಕ್ಕಳೊಂದಿಗೆ ಖುಷಿಯ ಜೀವನ ನಡೆಸುತ್ತಿದ್ದಾರೆ. ಒಂದು ವೇಳೆ ಆಕೆ ಅಂದೇ ಆತ್ಮಹತ್ಯೆ ಮಾಡಿಕೊಂಡಿದ್ದರೆ ಇಷ್ಟು ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದಲೇ ಸವಿತಾ ಪ್ರಧಾನ್ ಅವರಂತೆ ಯುವತಿಯರು ಧೈರ್ಯವಂತರಾಗಿ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸ್ವಲ್ಪ ಯೋಚಿಸಿ, ನೀವು ಯಾರಿಗಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರಿ ಎಂದು ಯೋಚಿಸಿ. ನಿಷ್ಪ್ರಯೋಜಕ ಜನರ ಮೇಲೆ ನಿಮ್ಮ ಜೀವನವನ್ನು ವ್ಯರ್ಥ ಮಾಡಬಾರದು. ನಿನಗಾಗಿ ನೀನು ಬದುಕಬೇಕು. ನಿನ್ನನ್ನು ಅವಲಂಬಿಸಿದವರಿಗಾಗಿ ಬದುಕಬೇಕು. ಏನನ್ನಾದರೂ ಸಾಧಿಸಿ ಪ್ರಯತ್ನಿಸಿ. ನಿಮ್ಮ ಬದುಕುಳಿಯುವ ಭರವಸೆ ಖಂಡಿತವಾಗಿಯೂ ಹುಟ್ಟುತ್ತದೆ.
ವಿಭಾಗ