ನನಗೆ ಬೇಕಾದ್ದು ಮಾತ್ರವೇ ಜಗತ್ತಿನಲ್ಲಿ ಕಾಣಿಸುತ್ತೆ, ಸಿಗುತ್ತೆ ಎನ್ನುವುದು ನಿಜವೇ? ಏನಿದು ಕನ್ಫರ್ಮೇಶನ್ ಬಯಾಸ್ -ಕಾಳಜಿ
ಕನ್ಫರ್ಮೇಶನ್ ಬಯಾಸ್ನಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ. ಇದರಿಂದ ಬಿಡಿಸಿಕೊಳ್ಳಲು ನಿಮ್ಮ ಆಲೋಚನೆಯನ್ನೇ ಪ್ರಶ್ನಿಸಿಕೊಳ್ಳುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು.ನಮಗೆ ಯಾವುದು ಬೇಕೋ ಅದನ್ನೇ ಮನಸ್ಸು ಅರಸುತ್ತದೆ; ನಮ್ಮ ಗಮನಕ್ಕೇ ಬಾರದಂತೆ. ಅದನ್ನು ನಿಯಂತ್ರಿಸುವುದು, ಅದರಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ.

ಅಂದು ಸಂಜೆ ತಾನೇ ನೀವು ನಿಮ್ಮ ಮನೆಯಲ್ಲಿ ಮಂತ್ರಾಲಯಕ್ಕೆ ಹೋಗುವ ಮಾತನಾಡಿರುತ್ತೀರಿ. ರಾತ್ರಿ ನಿಮ್ಮ ಫೇಸ್ಬುಕ್ ಫೀಡ್ನಲ್ಲಿ ರಾಯರ ಫೋಟೋ ಕಾಣಿಸುತ್ತದೆ. ಓಹ್ ಇದೇನು ಆಶ್ಚರ್ಯ ಎಂದುಕೊಂಡು ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿದರೆ ಮಂತ್ರಾಲಯದ ಬಗ್ಗೆ ಲೇಖನ. ಮಾರನೆಯ ದಿನ ಬಸ್ಸಿನಲ್ಲಿ ಯಾರೋ ರಾಘವೇಂದ್ರರ ಬಗ್ಗೆ ಮಾತನಾಡುತ್ತಿದ್ದಾರೆ. ನಿಮ್ಮ ಆಫೀಸಿನ ಕಲೀಗ್ ಕಂಪ್ಯೂಟರ್ನಲ್ಲೂ ರಾಯರ ಸ್ಕ್ರೀನ್ ಸೇವರ್. ಓಹೋ! ಏನಿದು ಎಲ್ಲೆಡೆ ರಾಯರೇ ಕಾಣ್ತಿದಾರೆ ಏನಪ್ಪ ರಾಯರ ಲೀಲೆ …
ಅಂದು ಬೆಳಿಗ್ಗೆ ಕೋಮುಗಲಭೆಯ ವರದಿಯೊಂದನ್ನು ಓದಿರುತ್ತೇವೆ. ನಂತರ ನಾವು ನೋಡುವ ಸೋಷಿಯಲ್ ಮೀಡಿಯಾ, ಪತ್ರಿಕೆಗಳಲ್ಲಿ ಅದೇ ತರಹದ ಬೇರೆಬೇರೆ ಸುದ್ದಿಗಳು. ದೇಶದಲ್ಲಿ ಕೋಮುಗಲಭೆಗಳು ಜಾಸ್ತಿಯಾಗುತ್ತಿವೆ ಅನ್ನಿಸುತ್ತಿದೆ. ನೀವು ಕೆಂಪುಬಣ್ಣದ ಸ್ವಿಫ್ಟ್ ಕಾರ್ ಕೊಳ್ಳುವ ಬಗ್ಗೆ ಯೋಚಿಸಿರುತ್ತೀರಿ ಅಂದುಕೊಳ್ಳೋಣ. ನಂತರ ರಸ್ತೆಯಲ್ಲಿ ನಿಮಗೆ ಕೆಂಪು ಬಣ್ಣದ ಕಾರ್ ಅಥವಾ ಸ್ವಿಫ್ಟ್ ಕಾರ್ ಹೆಚ್ಚೆಚ್ಚು ಕಾಣಿಸುತ್ತವೆ. ನೀವು ಬುಕ್ ಪಬ್ಲಿಷ್ ಮಾಡಬೇಕು ಅಂದುಕೊಂಡ ದಿನವೇ ನಿಮಗೆ ಎಷ್ಟೋ ಪುಸ್ತಕಗಳ ಬಿಡುಗಡೆಗೆ ಸಂಬಂಧಿಸಿದ ಸುದ್ದಿ, ಸಂವಾದಗಳು ಕಾಣಿಸುತ್ತವೆ.
'ಬಂಗಾರದ ಮನುಷ್ಯ' ಚಿತ್ರದ ಬಗ್ಗೆಒಂದು ಪೋಸ್ಟ್ ಓದಿದ್ದ ದಿನದ ಸಂಜೆ ಅದೇ ಚಿತ್ರದ 'ಬಾಳ ಬಂಗಾರ ನೀನು' ಹಾಡು ರೇಡಿಯೋ ನಲ್ಲಿ ಬರುತ್ತದೆ. ಅದೇ ಚಿತ್ರದ ಸಂಭಾಷಣೆಯೊಂದನ್ನು ಯಾರೋ ತಮ್ಮ ವಾಟ್ಸಾಪ್ ಸ್ಟೇಟಸ್ ಮಾಡಿಕೊಂಡಿರುತ್ತಾರೆ. ಪದೇಪದೆ ಇಂಥ ಅನುಭವಗಳು ಆದಾಗ, ಏನಿದು ಕಾಕತಾಳೀಯ? ಹೇಗೆ ನಮ್ಮ ಮನಸಲ್ಲಿರುವುದೇ ಕಾಣಿಸತೊಡಗುತ್ತಿದೆ? ಪ್ರಕೃತಿ ನನಗೆ ಏನಾದರೂ ಹೇಳ ಬಯಸುತ್ತಿದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ.
ಮೇಲಿನ ಘಟನೆಗಳು ಅಥವಾ ಇದೇ ರೀತಿಯ ಹಲವು ಘಟನೆಗಳು ಬಹುಶಃ ಎಲ್ಲರ ಬದುಕಿನಲ್ಲೂ ನಡೆದಿರುತ್ತವೆ. ಕೆಲವರು ಇದನ್ನು ಪವಾಡ ಎಂದುಕೊಂಡರೆ, ಕೆಲವರು ನಿಜಕ್ಕೂ ಪರಿಸ್ಥಿತಿ ಹದಗೆಡುತ್ತಿದೆ ಎಂದು ಗಾಬರಿಗೊಳ್ಳುತ್ತಾರೆ. ಇನ್ನೂ ಕೆಲವರು ಇದನ್ನು ಕಾಕತಾಳೀಯ ಎಂದುಕೊಳ್ಳುತ್ತಾರೆ. ಅಸಲಿಗೆ ಇದ್ಯಾವುದೂ ನಿಜವಲ್ಲ. ಅಥವಾ ನೀವು ಎದುರುಗೊಂಡ ಯಾವ ಸುದ್ದಿ ಸನ್ನಿವೇಶಗಳೂ ಅಂದು ಮಾತ್ರ ಕಂಡದ್ದಲ್ಲ.
ಇದು ಕನ್ಫರ್ಮೇಶನ್ ಬಯಾಸ್ನ ಎಫೆಕ್ಟ್
ಕೇಂಬ್ರಿಡ್ಜ್ನ ಗಣಿತಜ್ಞ ಲಿಟಲ್ವುಡ್ ಹೇಳುವಂತೆ ಪ್ರತಿಯೊಬ್ಬನ ಜೀವನದಲ್ಲಿ ಒಂದು ಸೆಕೆಂಡ್ಗೆ ಒಂದು ಘಟನೆ ಎಂದುಕೊಂಡರೆ ತಿಂಗಳಿಗೆ 10 ಲಕ್ಷ ಘಟನೆಗಳು ಜರುಗುತ್ತವೆ. ಒಂದೆ ಘಟನೆ ಮತ್ತೆ ಜರುಗುವ ಸಂಭವನೀಯತೆ 10 ಲಕ್ಷದಲ್ಲಿಯೇ ಒಮ್ಮೆ ಮಾತ್ರ ಇದೆ.
ನೀವು ಪ್ರತಿನಿತ್ಯ ರಾಯರ ಫೋಟೋ ಅಥವಾ ಅವರ ಬಗ್ಗೆ ಪೋಸ್ಟ್ ನೋಡಿರುತ್ತೀರಿ. ಆದರೆ ಈ ಬಾರಿ ನೀವು ಮಂತ್ರಾಲಯಕ್ಕೆ ಹೋಗುವ ಮಾತನಾಡಿದ್ದರಿಂದ ಅದರ ಬಗ್ಗೆ ನಿಮ್ಮ ಮನಸಿನಲ್ಲಿ ವಿಶೇಷ ವಿಚಾರ ಮೂಡಿರುತ್ತದೆ. ಹಾಗಾಗಿ ನಿಮ್ಮ ಮನಸು ಬೇರೆಲ್ಲಾ ವಿಷಯಗಳಿಗಿಂತ ಮಂತ್ರಾಲಯಕ್ಕೆ ಸಂಬಂಧಿಸಿದ ವಿಷಯಗಳಿಗೆ ವಿಶೇಷ ಗಮನ ಕೊಡುತ್ತದೆ. ಅಂದರೆ ನಿಮ್ಮ ಮನಸಿಗೆ ಕಾಣಸಿಗುವುದು ಕೇವಲ ರಾಯರ ಬಗೆಗಿನ ವಿಷಯಗಳು ಮಾತ್ರ.
ಕೋಮು ಗಲಭೆಯ ಬಗ್ಗೆ ಓದಿದ ಮನಸ್ಸು ಕೆಂಪು ಕಾರು, ಬಂಗಾರದ ಮನುಷ್ಯ ಎಲ್ಲಾ ಉದಾಹರಣೆಗಳಲ್ಲೂ ಆಗುವುದು ಕನ್ಫಫರ್ಮಿಟಿ ಬಯಾಸ್ ಅಥವಾ ಒಮ್ಮೊಮ್ಮೆ ಸೆಲೆಕ್ಟೀವ್ ಅಟೆಂಷನ್ ಬಯಾಸ್.
ಫಿಲ್ಟರ್ ಮಾಡುವ ಮನಸ್ಸು
ನೀವು ಬಲ ಅಥವಾ ಎಡಪಂಥಿಯರಾಗಿದ್ದರೆ ನಿಮ್ಮ ಮನಸ್ಸು ಸದಾ ಬಲಪಂಥೀಯ ಅಥವಾ ಎಡಪಂಥಿಯ ಪರ ವಿಚಾರಗಳನ್ನು ಗಮನಿಸುವುದಲ್ಲದೆ ನಿಮ್ಮ ನಂಬಿಕೆಯನ್ನು ಹುಸಿಗೊಳಿಸುವ ವಿಚಾರಗಳನ್ನು ಬೇಕೆಂದೇ ಫಿಲ್ಟರ್ ಮಾಡುತ್ತದೆ. ಹಾಗಾಗಿ ಎರಡೂ ಪಂಥಗಳಲ್ಲಿ ಯಾವುದು ಸರಿ ಎಂಬುದಕ್ಕೆ ಎರೆಡೂ ಪಂಥದವರೂ ಎಷ್ಟು ಬೇಕಾದರೂ ಪುರಾವೆಗಳನ್ನು ಒದಗಿಸಬಲ್ಲರು.
ಸುದ್ದಿಯೊಂದನ್ನು ಸತ್ಯ ಎಂದು ಪ್ರತಿಪಾದಿಸಬಯಸುವ ಮಾಧ್ಯಮದವರು ಸತ್ಯ ಎಂದು ಹೇಳುವ ಸನ್ನಿವೇಶಗಳನ್ನೇ ನಮ್ಮ ಗಮನಕ್ಕೆ ತರಬಲ್ಲರು. ಅದೇ ಘಟನೆಯನ್ನು ಸುಳ್ಳು ಮಾಡಲೂ ಇದೇ ಟೆಕ್ನಿಕ್ ಬಳಸಿಯೇ ಸುಳ್ಳು ಮಾಡಬಲ್ಲರು.
ಸಿನಿಮಾದ ಹೀರೋ ಒಬ್ಬರು ನಿಮಗಿಷ್ಟವಿಲ್ಲದಿದ್ದರೆ ಅವರ ಬಗ್ಗೆ ನೆಗೆಟಿವ್ ವಿಷಯಗಳೇ ಗಮನ ಸೆಳೆಯುತ್ತವೆ. ಅದೇ ನೆಚ್ಚಿನ ಹೀರೋ ಆಗಿದ್ದರೆ ಅವರ ಬಗೆಗಿನ ಪಾಸಿಟೀವ್ ವಿಷಯಗಳೇ ನಿಮ್ಮನ್ನ ಸೆಳೆಯುತ್ತವೆ. ತೊಂದರೆಗಳನ್ನು ನಿವಾರಿಸುತ್ತೇವೆ ಎಂದು ಹೇಳಿಕೊಳ್ಳುವ ಮುಕ್ಕಾಲುಪಾಲು ದೇವಪುರುಷರು, ದೇವದೂತರು, ಕಪಟಿಗುರುಗಳ ವ್ಯಾಪಾರ ನಡೆಯುವುದೇ ಈ ಕನ್ಫರ್ಮಿಟಿ ಬಯಾಸ್ ಎಫೆಕ್ಟ್ ಮೇಲೆ.
ಇಡೀ ದೊಡ್ಡದೊಡ್ಡ ಇಂಡಸ್ಟ್ರಿಯವರೂ ಉದಾಹರಣೆಗಳ ರೂಪದಲ್ಲಿ ಕೊಡುವ ಹೇಳಿಕೆಗಳೂ ಕೂಡ ಸೆಲೆಕ್ಟೀವ್ ಅಟೆನ್ಶನ್ ಪ್ರಭಾವವೇ ಆಗಿರುತ್ತದೆ. ಲಕ್ಷಾಂತರ ಸೇಲ್ಸ್ಗಳಲ್ಲಿ ಒಂದೆರಡು ಪಾಸಿಟೀವ್ ಉದಾಹರಣೆಗಳನ್ನು ಮಾತ್ರವೇ ಕೊಡುತ್ತಾ ಇನ್ನುಳಿದವರ ಗತಿ ಏನಾಯಿತು ಎಂಬುದನ್ನು ಬೇಕೆಂದೇ ಫಿಲ್ಟರ್ ಮಾಡುತ್ತಾರೆ.
ಗಲಭೆ ಸೃಷ್ಟಿಸಬೇಕೆಂದರೆ ಮಾಧ್ಯಮದವರು ಎಲ್ಲೋ ಒಂದೆರೆಡು ಕಡೆ ನಡೆದ ಗಲಭೆಯನ್ನೇ ಮತ್ತೆಮತ್ತೆ ತೋರಿಸುತ್ತಾ ಎಲ್ಲೆಡೆ ಪ್ರಚಂಡ ಹೋರಾಟ ಎಂದು ನಮ್ಮನ್ನು ಪ್ರಚೋದಿಸಬಹುದು. ಎಲ್ಲವೂ ಈ ಕನ್ಫೃರ್ಮಿಟಿ ಎಫೆಕ್ಟ್. ಮತ್ತು ನಾವೆಲ್ಲ ಅಂದರೆ ಸಾಮಾನ್ಯ ಜನರು ದಾಳಗಳು. ಹಾಗಿದ್ದರೆ ನಾವುಗಳು ಈ ಎಫೆಕ್ಟ್ ಗೆ ಸಿಲುಕಬಾರದು ಅಂದರೆ ಏನು ಮಾಡಬೇಕು.
ಕನ್ಫರ್ಮಿಟಿ ಬಯಾಸ್ಗೆ ಸಿಲುಕದಿರಲು ಏನು ಮಾಡಬೇಕು?
ಕನ್ಫರ್ಮಿಟಿ ಬಯಾಸ್ನಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ. ಇದರಿಂದ ಬಿಡಿಸಿಕೊಳ್ಳಲು ನಿಮ್ಮ ಆಲೋಚನೆಯನ್ನೇ ಪ್ರಶ್ನಿಸಿಕೊಳ್ಳುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು.
ಉದಾ: ಇಂದು ಬೆಳಗಿನಿಂದ ನಾನು ನೋಡಿದ ಕೇಳಿದ ಎಲ್ಲಾ ಘಟನೆಗಳೂ ನಿಜಕ್ಕೂ ನಾನು ಮಾತನಾಡಿದ ಘಟನೆಯ ಬಗ್ಗೆಯೇ ಇವೆಯೇ? ಟಿವಿಯಲ್ಲಿ, ಸಾಮಾಜಿಕ ತಾಣದಲ್ಲಿ ಬರುತ್ತಿರುವ ಅತಿರೇಕದ ಸುದ್ದಿ ನಿಜಕ್ಕೂ ಎಲ್ಲೆಡೆ ಇದೆಯೇ? ಸಾಕ್ಷಿ ಏನಿದೆ? ಹೀಗೆ ಹಲವು ರೀತಿಯ ಪ್ರಶ್ನೆಗಳನ್ನು ನಮಗೆ ನಾವು ಕೇಳಿಕೊಳ್ಳಬೇಕು. ಸತ್ಯಕ್ಕೆ ಹತ್ತಿರವಾಗಬೇಕೆಂದರೆ ಪ್ರಶ್ನೆಯ ಆಸರೆ ಬೇಕು. ಸುಳ್ಳಾದರೂ ಸರಿ ಭರವಸೆ ಬೇಕೆಂದರೆ ನಂಬಿಕೆಯ ಆಸರೆ ಬೇಕು.
ನಮಗೆ ಯಾವುದು ಬೇಕೋ ಅದನ್ನೇ ಮನಸ್ಸು ಅರಸುತ್ತದೆ; ನಮ್ಮ ಗಮನಕ್ಕೇ ಬಾರದಂತೆ. ಅದನ್ನು ನಿಯಂತ್ರಿಸುವುದು, ಅದರಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ.