ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿವೆ 5 ಆಯುರ್ವೇದ ಪರಿಹಾರ: ಶೀತ, ಕೆಮ್ಮು, ಜ್ವರಕ್ಕೆ ರಾಮಬಾಣ ಈ ದಿವ್ಯೌಷಧಿ
ಚಳಿಗಾಲದಲ್ಲಿ ಶೀತ ವಾತಾವರಣ ಇರುವುದರಿಂದ ಶೀತ,ಕೆಮ್ಮು ಮತ್ತು ಜ್ವರದಂತಹ ಕಾಯಿಲೆಗಳು ಬರುವುದು ಸಾಮಾನ್ಯ. ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಈ ಕಾಯಿಲೆಗಳು ದೇಹವನ್ನು ಪ್ರವೇಶಿಸುತ್ತವೆ. ಹೀಗಾಗಿ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವುದು ಬಹಳ ಮುಖ್ಯ. ರೋಗನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿವೆ ಆಯುರ್ವೇದ ಪರಿಹಾರಗಳು.
ಚಳಿಗಾಲದಲ್ಲಿ ತಾಪಮಾನವು ತುಂಬಾ ಕಡಿಮೆಯಾಗುವುದರಿಂದ, ಜನರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಶೀತ, ಕೆಮ್ಮು, ಜ್ವರ ಇವು ಚಳಿಗಾಲದಲ್ಲಿ ಕಾಡುವ ಸಾಮಾನ್ಯ ಕಾಯಿಲೆಗಳಾಗಿವೆ. ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಈ ರೋಗಗಳು ಬೇಗನೆ ಆವರಿಸಿಕೊಳ್ಳುತ್ತವೆ. ಬದಲಾಗುತ್ತಿರುವ ಋತುಮಾನಕ್ಕೆ ತಕ್ಕಂತೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದು ಬಹಳ ಮುಖ್ಯ.
ಎಚ್ಟಿ ಲೈಫ್ಸ್ಟೈಲ್ಗೆ ನೀಡಿದ ಸಂದರ್ಶನದಲ್ಲಿ, ಕೃಷ್ಣಾ ಹರ್ಬಲ್ ಮತ್ತು ಆಯುರ್ವೇದದ ಪ್ರೊಡಕ್ಷನ್ ಮುಖ್ಯಸ್ಥ ಡಾ. ಪ್ರದೀಪ್ ಶ್ರೀವಾಸ್ತವ ಅವರು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಚಳಿಗಾಲದ ಆಹಾರದಲ್ಲಿ ನೀವು ಸೇರಿಸಬೇಕಾದ ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅವು ಯಾವುವು ಎಂಬುದು ಇಲ್ಲಿದೆ.
1. ನೆಲಗಡಲೆ
ಕಡಲೆಕಾಯಿ ಅಥವಾ ಶೇಂಗಾ ಎಂದೂ ಕರೆಯಲ್ಪಡುವ ನೆಲಗಡಲೆಯು ಆರೋಗ್ಯಕರ ಕೊಬ್ಬು, ಪ್ರೋಟೀನ್ಗಳು ಮತ್ತು ಸೂಕ್ಷ್ಮ ಹಾಗೂ ಮ್ಯಾಕ್ರೋನ್ಯೂಟ್ರಿಯೆಂಟ್ಗಳಿಂದ ತುಂಬಿರುತ್ತದೆ. ಇದು ದೇಹವನ್ನು ಬೆಚ್ಚಗಾಗಿಸುತ್ತದೆ ಮತ್ತು ಅನೇಕ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
2. ಅಂಜೂರ ಮತ್ತು ಹಾಲು
ಅಂಜೂರ ತಿನ್ನುವುದರಿಂದ ದೇಹಕ್ಕೆ ಶಕ್ತಿಯನ್ನು ಹೆಚ್ಚಿಸುತ್ತದೆ. ತೂಕ ಇಳಿಕೆಯ ಪ್ರಯಾಣವನ್ನು ಇದು ವೇಗಗೊಳಿಸುತ್ತದೆ. ಹಾಗೆಯೇ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ದೇಹವನ್ನು ಬೇಸಿಗೆಯಲ್ಲಿ ತಂಪಾಗಿರಿಸಲು ಮತ್ತು ಚಳಿಗಾಲದಲ್ಲಿ ಬೆಚ್ಚಗಾಗಲು ಸಹಾಯ ಮಾಡುತ್ತದೆ. ಪ್ರತಿದಿನ ಅಂಜೂರದ ಹಣ್ಣುಗಳನ್ನು (ಎರಡರಿಂದ ಮೂರು) ಹಾಲಿನಲ್ಲಿ ಕುದಿಸಿ ಸೇವಿಸುವುದರಿಂದ ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.
3. ಬೆಲ್ಲ
ಬೆಲ್ಲವು ಕಬ್ಬಿಣ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಅದರಲ್ಲಿರುವ ಉಷ್ಣತೆಯ ಗುಣಲಕ್ಷಣಗಳಿಂದಾಗಿ ವಿಶೇಷವಾಗಿ ಚಳಿಗಾಲದಲ್ಲಿ ಬಳಕೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರ ನಿಯಮಿತ ಸೇವನೆಯು ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ಬೆಚ್ಚಗಿರಿಸುತ್ತದೆ. ಬೆಲ್ಲವನ್ನು ಪ್ರತಿದಿನವೂ ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.
4. ಆಮ್ಲಾ
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅವಶ್ಯಕವಾಗಿದೆ. ಇದು ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ ಮತ್ತು ಕೂದಲು ಉದುರುವಿಕೆಯನ್ನು ತಡೆಗಟ್ಟಲು, ಚರ್ಮದ ಕಲೆ, ಮೊಡವೆಗಳನ್ನು ಗುಣಪಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಪ್ರತಿದಿನ 1 ನೆಲ್ಲಿಕಾಯಿಯನ್ನು ಸೇವಿಸುವುದು ಆರೋಗ್ಯಕ್ಕೆ ವರದಾನವಾಗಲಿದೆ.
5. ಚ್ಯವನಪ್ರಾಶ
ಇದು 20 ರಿಂದ 40 ಆಯುರ್ವೇದ ಪದಾರ್ಥಗಳು ಮತ್ತು ಗಿಡಮೂಲಿಕೆಗಳ ಮಿಶ್ರಣವಾಗಿದ್ದು, ಅತ್ಯುತ್ತಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಚ್ಯವನಪ್ರಾಶ ಜೀರ್ಣಕ್ರಿಯೆಯನ್ನು ಸುಧಾರಿಸಲು, ರಕ್ತವನ್ನು ಶುದ್ಧೀಕರಿಸಲು, ಕಾಲೋಚಿತ ರೋಗಗಳನ್ನು ತಡೆಗಟ್ಟಲು, ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ ಊಟದ ನಂತರ ಒಂದು ಟೀ ಚಮಚ ಚ್ಯವನಪ್ರಾಶವನ್ನು ಸೇವಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.