ಭಾರತದ ಹಲವು ನಗರಗಳಿಗೆ ಮೇ 10ರವರೆಗೆ ವಿಮಾನ ಹಾರಾಟ ಸ್ಥಗಿತ; ದೆಹಲಿ ಏರ್‌ಪೋರ್ಟ್‌ನಲ್ಲಿ ಒಂದೇ ದಿನ 138 ವಿಮಾನ ಹಾರಾಟ ರದ್ದು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತದ ಹಲವು ನಗರಗಳಿಗೆ ಮೇ 10ರವರೆಗೆ ವಿಮಾನ ಹಾರಾಟ ಸ್ಥಗಿತ; ದೆಹಲಿ ಏರ್‌ಪೋರ್ಟ್‌ನಲ್ಲಿ ಒಂದೇ ದಿನ 138 ವಿಮಾನ ಹಾರಾಟ ರದ್ದು

ಭಾರತದ ಹಲವು ನಗರಗಳಿಗೆ ಮೇ 10ರವರೆಗೆ ವಿಮಾನ ಹಾರಾಟ ಸ್ಥಗಿತ; ದೆಹಲಿ ಏರ್‌ಪೋರ್ಟ್‌ನಲ್ಲಿ ಒಂದೇ ದಿನ 138 ವಿಮಾನ ಹಾರಾಟ ರದ್ದು

ಭಾರತ ಮತ್ತು ಪಾಕಿಸ್ತಾನ ಉದ್ವಿಗ್ನ ಪರಿಸ್ಥಿತಿ ನಡುವೆ ದೇಶದಲ್ಲಿ ವಿಮಾನ ಸಂಚಾರದಲ್ಲಿ ವ್ಯತ್ಯವಾಗಿದೆ. ಮೇ 10ರವರೆಗೆ ಹಲವು ವಿಮಾನಗಳ ಸಂಚಾರ ರದ್ದಾಗಿದೆ. ಹಲವು ಏರ್‌ಪೋರ್ಟ್‌ಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ತಪಾಸಣೆ ದೃಷ್ಟಿಯಿಂದ ಪ್ರಯಾಣಿಕರು 3 ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಬರಲು ತಿಳಿಸಲಾಗಿದೆ.

ಭಾರತದ ಹಲವು ನಗರಗಳಿಗೆ ಮೇ 10ರವರೆಗೆ ವಿಮಾನ ಹಾರಾಟ ಸ್ಥಗಿತ
ಭಾರತದ ಹಲವು ನಗರಗಳಿಗೆ ಮೇ 10ರವರೆಗೆ ವಿಮಾನ ಹಾರಾಟ ಸ್ಥಗಿತ ((Photo by Vipin Kumar/ Hindustan Times))

ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಹೊರಡುವ ಹಲವು ವಿಮಾನಗಳನ್ನು ರದ್ದುಪಡಿಸಲಾಗಿದೆ. ಇದೇ ವೇಳೆ ವಿಮಾನಯಾನ ಸಂಸ್ಥೆ ಇಂಡಿಗೋ, ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ, ಧರ್ಮಶಾಲಾ, ಬಿಕಾನೇರ್, ಜೋಧ್‌ಪುರ, ಕಿಶನ್‌ಗಢ ಮತ್ತು ರಾಜ್‌ಕೋಟ್‌ಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಮೇ 10ರ ಮಧ್ಯರಾತ್ರಿಯವರೆಗೆ ಇದು ಮುಂದುವರೆಯಲಿದೆ.

ವಿಮಾನಯಾನ ಸಂಸ್ಥೆಯು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ ಮಾಹಿತಿ ನೀಡಿದೆ. ಇದೇ ವೇಳೆ ಅಗತ್ಯವಿರುವ ಯಾವುದೇ ಪ್ರಯಾಣ ಮಾರ್ಪಾಡುಗಳಿಗೆ ಸಹಾಯ ಒದಗಿಸಲಾಗುವುದಾಗಿ ಹೇಳಿದೆ.

ಅತ್ತ ಮುಂಬೈ ಹಾಗೂ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲೂ ಹೆಚ್ಚಿನ ಭದ್ರತಾ ಕ್ರಮಗಳಿಂದಾಗಿ ಸಂಭವನೀಯ ವಿಳಂಬ ತಡೆಯಲು ಸಲಹೆಯನ್ನು ನೀಡಿದೆ. ವಿಮಾನ ನಿಲ್ದಾಣಗಳು ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಭದ್ರತಾ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚುವರಿ ಸಮಯ ಬೇಕಾಗಬಹುದು ಎಂದು ಪ್ರಯಾಣಿಕರಿಗೆ ಸೂಚಿಸಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಕನಿಷ್ಠ 3 ಗಂಟೆ ಮುಂಚಿತವಾಗಿ ಬರುವಂತೆ ಸೂಚಿಸಲಾಗಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ 138 ವಿಮಾನಗಳು ರದ್ದು

ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಮೇ 9ರ ಶುಕ್ರವಾರದಂದು ದೇಶದ ಅತಿದೊಡ್ಡ ಮತ್ತು ಜನನಿಬಿಡ ವಿಮಾನ ನಿಲ್ದಾಣವಾಗಿರುವ ದೆಹಲಿ ವಿಮಾನ ನಿಲ್ದಾಣದಲ್ಲಿ ಒಟ್ಟು 138 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ವಿದೇಶದಿಂದ ಬರಬೇಕಿದ್ದ 4 ವಿಮಾನಗಳು, ವಿದೇಶಕ್ಕೆ ಹೊರಡಬೇಕಿದ್ದ 5 ಅಂತಾರಾಷ್ಟ್ರೀಯ ನಿರ್ಗಮನಗಳು, 63 ದೇಶೀಯ ಆಗಮನ ಹಾಗೂ ಮತ್ತು 66 ದೇಶೀಯ ನಿರ್ಗಮನ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಕಳೆದ 2 ದಿನಗಳಲ್ಲಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 228 ವಿಮಾನಗಳ ಹಾರಾಟ ರದ್ದುಗೊಂಡಿದೆ.

"ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ಸಾಮಾನ್ಯವಾಗಿದೆ. ಆದರೆ, ವಾಯುಪ್ರದೇಶದ ಪರಿಸ್ಥಿತಿಗಳು ಮತ್ತು ಹೆಚ್ಚಿದ ಭದ್ರತಾ ಕ್ರಮಗಳಿಂದಾಗಿ, ಕೆಲವು ವಿಮಾನ ವೇಳಾಪಟ್ಟಿಗಳು ಮತ್ತು ಭದ್ರತಾ ಪ್ರಕ್ರಿಯೆಯ ಸಮಯದ ಮೇಲೆ ಪರಿಣಾಮ ಬೀರಬಹುದು ಎಂದು ಡಿಐಎಎಲ್ (ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್) ಶುಕ್ರವಾರ ತಿಳಿಸಿದೆ.

ರೈಲು ಸಂಚಾರದಲ್ಲೂ ವ್ಯತ್ಯಯ

ರಾಜಸ್ಥಾನದಲ್ಲಿ 4 ರೈಲುಗಳು ರದ್ದಾಗಿವೆ. ಇದೇ ವೇಳೆ 5 ರೈಲುಗಳು ಹೊರಡುವ ಸಮಯವನ್ನು ಮರು ನಿಗದಿಪಡಿಸಲಾಗಿದೆ. ವಾಯುವ್ಯ ರೈಲ್ವೆ ಶುಕ್ರವಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ವಿಶೇಷವಾಗಿ ರಾಜಸ್ಥಾನದ ಗಡಿ ಪ್ರದೇಶಗಳಲ್ಲಿ ರೈಲು ರದ್ದುಗೊಂಡಿವೆ.

ರದ್ದುಗೊಂಡ ರೈಲುಗಳು

  • 14895 - ಜೋಧ್‌ಪುರ-ಬಾರ್ಮರ್ ಡೆಮು ಎಕ್ಸ್‌ಪ್ರೆಸ್
  • 14896 - ಬಾರ್ಮರ್-ಜೋಧ್‌ಪುರ ಡೆಮು ಎಕ್ಸ್‌ಪ್ರೆಸ್
  • 04880 - ಮುನಾಬಾವೊ ನಿಂದ ಬಾರ್ಮರ್
  • 54881 - ಬಾರ್ಮರ್‌ನಿಂದ ಮುನಾಬಾವೊ
  • ಗಡಿ ಗ್ರಾಮವಾದ ಮುನಾಬಾವೊಗೆ ಮತ್ತು ಅಲ್ಲಿಂದ ಹೊರಡುವ ರೈಲುಗಳು ಕೂಡಾ ರದ್ದಾಗಿವೆ.

ಜಮ್ಮು, ಪಂಜಾಬ್ ಮತ್ತು ರಾಜಸ್ಥಾನದ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ, ಮೇ 8ರ ಗುರುವಾರ ಸಂಜೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ. ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಕ್ಷಿಪಣಿ ದಾಳಿಯನ್ನು ಯಶಸ್ವಿಯಾಗಿ ತಡೆದಿದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.