ಕನ್ನಡ ಸುದ್ದಿ  /  Nation And-world  /  61 Iit Iim Nit Students Have Died By Suicide Since 2018 Govt Tells Parliament

IIT-IIM-NIT students suicide: ಕಳೆದ ಐದು ವರ್ಷದಲ್ಲಿ 61 ಐಐಟಿ, ಐಐಎಂ, ಎನ್‌ಐಟಿ ವಿದ್ಯಾರ್ಥಿಗಳು ಆತ್ಮಹತ್ಯೆ..!

ಕಳೆದ ಐದು ವರ್ಷಗಳಲ್ಲಿ ಐಐಟಿ, ಐಐಎಂ, ಎನ್‌ಐಟಿ ಶಿಕ್ಷಣ ಸಂಸ್ಥೆಗಳ 61 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಈ ಪೈಕಿ ಐಐಟಿಯ 33 ವಿದ್ಯಾರ್ಥಿಗಳು, ಎನ್‌ಐಟಿ 24 ಹಾಗೂ ಐಐಎಂನ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಹೆಚ್ಚುತ್ತಿರುವ ಐಐಟಿ, ಐಐಎಂ, ಎನ್‌ಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ (File Photo)
ಹೆಚ್ಚುತ್ತಿರುವ ಐಐಟಿ, ಐಐಎಂ, ಎನ್‌ಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ (File Photo)

ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ನಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಓದುವುದು ಎಂದರೆ ವಿದ್ಯಾರ್ಥಿಗಳಿಗೆ ಹೆಮ್ಮೆ. ಇಲ್ಲಿ ಪ್ರವೇಶ ಪಡೆಯುವುದೂ ಅಷ್ಟು ಸುಲಭವಲ್ಲ. ಪೋಷಕರೂ ಸಹ ದೊಡ್ಡ ಮೊತ್ತದ ಶುಲ್ಕ ಕಟ್ಟಿ ತಮ್ಮ ಮಕ್ಕಳನ್ನು ಇಲ್ಲಿ ಓದಿಸುತ್ತಾರೆ. ಇಲ್ಲಿ ಓದಿದರೆ ಭವಿಷ್ಯ ಸುಭದ್ರವಾಗಿರುತ್ತದೆ ಎಂದು ಜನರು ನಂಬುತ್ತಾರೆ. ಆದರೆ ಇಂತಹ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ.

ಕಳೆದ ಐದು ವರ್ಷಗಳಲ್ಲಿ ಐಐಟಿ, ಐಐಎಂ, ಎನ್‌ಐಟಿ ಶಿಕ್ಷಣ ಸಂಸ್ಥೆಗಳ 61 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಈ ಪೈಕಿ ಐಐಟಿಯ 33 ವಿದ್ಯಾರ್ಥಿಗಳು, ಎನ್‌ಐಟಿ 24 ಹಾಗೂ ಐಐಎಂನ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 2018 ರಲ್ಲಿ 11, 2019 ರಲ್ಲಿ 16, 2020 ರಲ್ಲಿ 5 ಮತ್ತು 2021 ರಲ್ಲಿ 9 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಸೋಮವಾರ ಸಂಸತ್ತಿನಲ್ಲಿ ಡೇಟಾವನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಸದಸ್ಯರಾದ ಪ್ರದ್ಯುತ್ ಬೊರ್ಡೊಲೊಯ್, ಗೌರವ್ ಗೊಗೊಯ್, ಬೆನ್ನಿ ಬೆಹನನ್, ಕೆ ಮುರಳೀಧರನ್, ರಾಜಮೋಹನ್ ಉನ್ನಿಥಾನ್, ಟಿಎನ್ ಪ್ರತಾಪನ್ ಮತ್ತು ಡೀನ್ ಕುರಿಯಾಕೋಸ್ ಅವರು ಆತ್ಮಹತ್ಯೆಯ ಹಿಂದಿನ ಕಾರಣಗಳನ್ನು ಸರ್ಕಾರ ಗುರುತಿಸಿದೆಯೇ ಮತ್ತು ಅವುಗಳನ್ನು ನಿಭಾಯಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಸುಭಾಸ್ ಸರ್ಕಾರ್ ಉತ್ತರಿಸಿದರು.

"ಇಂತಹ ಸಮಸ್ಯೆಗಳ ಹಿಂದೆ ಗುರುತಿಸಲಾದ ಕಾರಣಗಳಲ್ಲಿ ಶೈಕ್ಷಣಿಕ ಒತ್ತಡ, ಕೌಟುಂಬಿಕ ಕಾರಣಗಳು, ವೈಯಕ್ತಿಕ ಕಾರಣಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು ಇತ್ಯಾದಿ ಸೇರಿವೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಶಿಕ್ಷಣ ಸಂಸ್ಥೆಗಳಲ್ಲಿ ಒತ್ತಡ ಮತ್ತು ಭಾವನಾತ್ಮಕ ಹೊಂದಾಣಿಕೆಗಳನ್ನು ನಿರ್ವಹಿಸಲು ಕೌನ್ಸೆಲಿಂಗ್ ವ್ಯವಸ್ಥೆಗಳಿಗೆ ನಿಬಂಧನೆಗಳನ್ನು ಹೊಂದಿದೆ" ಎಂದು ಸುಭಾಸ್ ಸರ್ಕಾರ್ ಹೇಳಿದರು.

"ವಿದ್ಯಾರ್ಥಿಗಳನ್ನು ಆತ್ಮಹತ್ಯೆಯಂತಹ ನಿರ್ಧಾರಗಳಿಂದ ತಡೆಯಲು ನ್ನತ ಶಿಕ್ಷಣ ಸಂಸ್ಥೆಗಳು ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳನ್ನು ನಡೆಸುತ್ತಿವೆ. ವಿದ್ಯಾರ್ಥಿಗಳು, ವಾರ್ಡನ್‌ಗಳು ಅಥವಾ ಅಧ್ಯಾಪಕರು ಯಾವುದೇ ವಿದ್ಯಾರ್ಥಿಗಳು ಖಿನ್ನತೆಯ ಲಕ್ಷಣಗಳನ್ನು ಹೊಂದಿದ್ದರೆ ಅದನ್ನು ಅಧಿಕಾರಿಗಳಿಗೆ ಗಮನಕ್ಕೆ ತರಬೇಕು. ಇದರಿಂದಾಗಿ ಸಮಯೋಚಿತ ಕ್ಲಿನಿಕಲ್ ಸಮಾಲೋಚನೆಯನ್ನು ಒದಗಿಸಬಹುದು" ಎಂದು ಸುಭಾಸ್ ಸರ್ಕಾರ್ ತಿಳಿಸಿದರು.

ಇತ್ತೀಚೆಗಷ್ಟೇ ಅಂದರೆ, ಮಾರ್ಚ್​ 14 ರಂದು ಐಐಟಿ ಮದ್ರಾಸ್‌ನಲ್ಲಿ ಬಿ.ಟೆಕ್ ವ್ಯಾಸಂಗ ನಡೆಸುತ್ತಿದ್ದ ಮೂರನೇ ವರ್ಷದ ವಿದ್ಯಾರ್ಥಿಯೊಬ್ಬ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಇದಕ್ಕೂ ಒಂದು ತಿಂಗಳ ಮುಂಚೆ ಇದೇ ಸಂಸ್ಥೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದನು.

IPL_Entry_Point

ವಿಭಾಗ