ಕನ್ನಡ ಸುದ್ದಿ  /  Nation And-world  /  8 People Died In Strong Earthquake Again In Turkey 200 Injured

Turkey Earthquake: ಟರ್ಕಿಯಲ್ಲಿ ಮತ್ತೆ ಪ್ರಬಲ ಭೂಕಂಪನಕ್ಕೆ 8 ಮಂದಿ ಬಲಿ; 200 ಮಂದಿಗೆ ಗಾಯ; ಭಾರಿ ನಷ್ಟದ ಭೀತಿ

ಟರ್ಕಿಯಲ್ಲಿ ಮತ್ತೆರಡು ಭೂಕಂಪಗಳು ಸಂಭವಿಸಿವೆ. ಎರಡು ವಾರಗಳ ಹಿಂದೆ ಸಂಭವಿಸಿದ ಭೀಕರ ಭೂಕಂಪದಿಂದ ಅಪಾರ ನಷ್ಟ ಅನುಭವಿಸಿದ್ದ ಟರ್ಕಿ ಮತ್ತು ಸಿರಿಯಾಗೆ ಮತ್ತೊಂದು ಭೀತಿ ಶುರುವಾಗಿದೆ.

ಟರ್ಕಿಯಲ್ಲಿ ಪ್ರಬಲ ಭೂಕಂಪನಕ್ಕೆ ಧರೆಗುರುಳಿರುವ ಕಟ್ಟಡಗಳು (ಫೋಟೋ - AP)
ಟರ್ಕಿಯಲ್ಲಿ ಪ್ರಬಲ ಭೂಕಂಪನಕ್ಕೆ ಧರೆಗುರುಳಿರುವ ಕಟ್ಟಡಗಳು (ಫೋಟೋ - AP)

ಅಂಕಾರ(ಟರ್ಕಿ): ಎರಡು ವಾರಗಳ ಹಿಂದೆ ಪ್ರಬಲ ಭೂಕಂಪ ಸಂಭವಿಸಿದ ಟರ್ಕಿಯಲ್ಲಿ ಮತ್ತೆರಡು ಭೂಕಂಪಗಳು ಸಂಭವಿಸಿವೆ.

ಸೋಮವಾರ ಮಧ್ಯರಾತ್ರಿಯ ನಂತರ ಟರ್ಕಿ ಮತ್ತು ಸಿರಿಯಾ ಗಡಿಯಲ್ಲಿ ಈ ಭೂಕಂಪಗಳು ಸಂಭವಿಸಿವೆ. ಇದು ಈಗಾಗಲೇ ಎಲ್ಲವನ್ನು ಕಳೆದುಕೊಂಡಿರುವ ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.

ಫೆಬ್ರವರಿ 6 ರಂದು ಸಂಭವಿಸಿದ 7.8 ತೀವ್ರತೆಯ ಭೂಕಂಪದಿಂದಾಗಿ ಟರ್ಕಿ ಮತ್ತು ಸಿರಿಯಾದಲ್ಲಿ ಲಕ್ಷಾಂತರ ಮನೆಗಳು ಕುಸಿದಿವೆ. ಪರಿಹಾರ ಕಾರ್ಯಗಳು ಇನ್ನೂ ನಡೆಯುತ್ತಿವೆ.

ಈ ಮಹಾ ದುರಂತದಲ್ಲಿ ಈವರೆಗೆ ಸಾವಿನ ಸಂಖ್ಯೆ 47,000 ಮೀರಿದೆ. ಸಂಕಷ್ಟದ ಸಮಯದಲ್ಲಿ ಸೋಮವಾರ ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದೆ. ಇದಾದ ಸ್ವಲ್ಪ ಸಮಯದ ನಂತರ, 5.8 ರಷ್ಟು ತೀವ್ರತೆಯೊಂದಿಗೆ ಮತ್ತೊಂದು ಭೂಮಿ ಕಂಪಿಸಿದೆ.

ಟರ್ಕಿಯ ಆಂಟಿಯೋಕ್ ಬಳಿ ಸೋಮವಾರ 6.4 ತೀವ್ರತೆಯ ಭೂಕಂಪ ಸಂಭವಿಸಿದೆ. ಅದರ ನಂತರ, ದಕ್ಷಿಣದ ನಗರವಾದ ಸಮಂದಾಗ್‌ನಲ್ಲಿ 5.8 ರ ತೀವ್ರತೆಯ ಭೂಕಂಪವು ದಾಖಲಾಗಿದೆ.

ಈ ಭೂಕಂಪಗಳು ಸಿರಿಯಾ, ಈಜಿಪ್ಟ್ ಮತ್ತು ಲೆಬನಾನ್‌ನ ಮೇಲೂ ಪರಿಣಾಮ ಬೀರಿವೆ. ಇತ್ತೀಚಿನ ಭೂಕಂಪಗಳಿಂದ ಟರ್ಕಿಯಲ್ಲಿ ಕೆಲವು ಕಟ್ಟಡಗಳು ಕುಸಿದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

8 ಮಂದಿ ಬಲಿ, 200ಕ್ಕೂ ಅಧಿಕ ಜನರಿಗೆ ಗಾಯ

ಹೊಸದಾಗಿ ಸಂಭವಿಸಿರುವ ಭೂಕಂಪಗಳಿಂದ 8 ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿಶ್ ಸಚಿವ ಸುಲೇಮಾನ್ ಸೊಯ್ಲು ಮಾಹಿತಿ ಬಹಿರಂಗಪಡಿಸಿದ್ದಾರೆ. ಇನ್ನು ಕೆಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.

ಟರ್ಕಿಯಲ್ಲಿ 42 ಸಾವಿರಕ್ಕೂ ಹೆಚ್ಚು ಸಾವು

ಫೆಬ್ರವರಿ 6 ರಂದು ಟರ್ಕಿಯ ಮಧ್ಯಭಾಗದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ತೀವ್ರ ಭೂಕಂಪದಿಂದಾಗಿ ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿರಾರು ಕಟ್ಟಡಗಳು ನೆಲಸಮವಾಗಿವೆ. ಟರ್ಕಿಯಲ್ಲಿ ಮಾತ್ರ ಸಾವಿನ ಸಂಖ್ಯೆ 42,000ಕ್ಕೂ ಅಧಿಕ ಎಂದು ಹೇಳಲಾಗಿದೆ.

ಸಿರಿಯಾದಲ್ಲಿ ಸುಮಾರು 5 ಸಾವಿರ ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡರು. ಪರಿಹಾರ ಕಾರ್ಯಗಳು ಇನ್ನೂ ನಡೆಯುತ್ತಿವೆ. ಎರಡು ವಾರಗಳ ನಂತರ, ಇನ್ನೂ ಕೆಲವು ಅವಶೇಷಗಳಡಿಯಲ್ಲಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಪುನರ್ವಸತಿ ಕೇಂದ್ರಗಳಲ್ಲಿ 16 ಲಕ್ಷ ಜನ

ಟರ್ಕಿಯ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳಲ್ಲಿ ಸುಮಾರು 16 ಲಕ್ಷ ಜನರಿಗೆ ಆಶ್ರಯ ನೀಡಲಾಗಿದೆ. ಭೂಕಂಪದಿಂದಾಗಿ ಇವರ ಮನೆಗಳು ಕುಸಿದಿದ್ದು, ಪುನರ್ವಸತಿ ಕೇಂದ್ರಗಳಲ್ಲಿ ನೆಲೆಸಿದ್ದಾರೆ. ಟರ್ಕಿ ಸರ್ಕಾರವು ದೇಶದಲ್ಲಿ ಸುಮಾರು 2 ಲಕ್ಷ ಮನೆಗಳನ್ನು ನಿರ್ಮಿಸಲು ಯೋಜಿಸಿದೆ.

ಭಾರತಕ ಕೂಡ ಟರ್ಕಿಗೆ ನೆರವಿನ ಹಸ್ತ ಚಾಚಿತ್ತು. ಎನ್ ಡಿಆರ್ ಎಸ್ ತಂಡಗಳು, ವೈದ್ಯಕೀಯ ಉಪಕರಣಗಳು, ಮೆಡಿಸಿನ್ ಗಳ ನೆರವು ನೀಡಿತ್ತು. ಆಪರೇಷನ್ ದೋಸ್ತ್ ಹೆಸರಿನಲ್ಲಿ ಪರಿಹಾರ ಕಾರ್ಯಾಚರಣೆ ಮುಗಿಸಿ ಎನ್ ಡಿಆರ್ ಎಫ್ ನ ಕೊನೆಯ ತಂಡ ಭಾರತಕ್ಕೆ ವಾಪಸ್ ಆಗಿದೆ.

ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF)ಯ ಕೊನೆ ತಂಡ ಭಾನುವಾರ ಸ್ವದೇಶಕ್ಕೆ ಮರಳಿದೆ. ಟರ್ಕಿ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರೆಸಿಡೆನ್ಸಿ(AFAD) ರಕ್ಷಣಾ ಕಾರ್ಯಾಚರಣೆ ಅಂತ್ಯಗೊಳಿಸುವುದಾಗಿ ಘೋಷಿಸಿದ ನಂತರ ಆಪರೇಷನ್ ದೋಸ್ತ್ ಅಡಿಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಲು ತೆರಳಿದ್ದ ಎನ್ ಡಿಆರ್ ಆಫ್ ತಂಡ ಇಂದು ಭಾರತಕ್ಕೆ ಮರಳಿದೆ.

ಭಾರತಕ್ಕೆ ವಾಪಸ್ ಆಗಿರುವ ಈ ತಂಡಗಳನ್ನು ನಿನ್ನೆ ರಾತ್ರಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಪರಿಹಾರ ಕಾರ್ಯಾಚರಣೆ ನಡೆಸಿದ ಬಗ್ಗೆ ಮಾಹಿತಿ ಹಂಚಿಕೊಂಡಿವೆ.

IPL_Entry_Point

ವಿಭಾಗ